ವಿದುರನೀತಿ ಕುರಿತು ಬನ್ನಂಜೆ ಗೋವಿಂದಾಚಾರ್ಯರ ರಸವತ್ತಾದ ಪ್ರವಚನ
ಉಡುಪಿ ಪುತ್ತಿಗೆ ಮಠಾಧೀಶರಾದ ಶ್ರೀ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದಂಗಳವರ ಅನುಗ್ರಹದಿಂದ, ಜೂನ್ 27ರಂದು, ಅಮೆರಿಕಾದ ಅರಿಜೋನಾ ರಾಜ್ಯದ ಟೆಂಪಿ(ಟೆಂಪೆ)ಯ ಶ್ರೀ ವೆಂಕಟಕೃಷ್ಣ ಕ್ಷೇತ್ರದಲ್ಲಿ ಪದ್ಮಶ್ರೀ, ವಿದ್ಯಾವಾಚಸ್ಪತಿ ಡಾ. ಬನ್ನಂಜೆ ಗೋವಿಂದಾಚಾರ್ಯರ ಪ್ರವಚನ ಏರ್ಪಡಿಸಲಾಗಿತ್ತು.
ಮನ್ಮಥನಾಮ ಸಂವತ್ಸರದ ಪವಿತ್ರವಾದ ಅಧಿಕ ಆಷಾಡ ಮಾಸದಲ್ಲಿ ಡಾ ಗೋವಿಂದಾಚಾರ್ಯರು ಮಹಾಭಾರತದ "ವಿದುರನೀತಿ"ಯ ಬಗ್ಗೆ ಮಾತನಾಡಿದರು. ಗುರೂಜಿ ಗೋವಿಂದಾಚಾರ್ಯರು ಉತ್ತಮ ವಾಗ್ಗೇಯಕಾರರೂ ಹಾಗೂ ಲೇಖಕರು. ಕನ್ನಡದಲ್ಲಿ ಅಲ್ಲದೇ ಸಂಸ್ಕೃತದಲ್ಲೂ ಅಷ್ಟೇ ಸುಲಲಿತವಾಗಿ ಪ್ರವಚನ ಮಾಡುವ ಅವರ ವೈಖರಿ ಕೇಳುಗರಿಗೆ ರಸದೌತಣವೇ ಸರಿ. [ಈ ಜೀವನವೇ ಒಂದು ಯುದ್ಧ : ಭಗವದ್ ಗೀತೆ]
ಸಂಜೆಯ ಕಾರ್ಯಕ್ರಮ ಡಾ. ಅನಂತರಾಮ್ ಕಲ್ಯ ಅವರ ಸ್ವಾಗತ ಭಾಷಣದೊಂದಿಗೆ ಪ್ರಾರಂಭವಾಯಿತು. ಗುರೂಜಿ ಬನ್ನಂಜೆಯವರು "ವಿದುರ ನೀತಿ"ಯಲ್ಲಿ ಮುಖ್ಯವಾದ ಅಂಶಗಳನ್ನು ವಿಮರ್ಶೆ ಮಾಡಿದರು. ಆ ಮುಖ್ಯವಾದ ಅಂಶಗಳು ಕೆಳಗಿನಂತಿವೆ.
* ಪರಮಾತ್ಮ ಶ್ರೀ ಕೃಷ್ಣ ಧೃತರಾಷ್ಟ್ರನಿಗೆ ಯುದ್ಧ ಸಂಧಾನ ಮಾಡಲು ಬಂದಾಗ, ಪುತ್ರಮೋಹದಿಂದ ಅಂಧನಾಗಿದ್ದ ರಾಜನು ಸಂಧಾನಕ್ಕೆ ಒಪ್ಪಿಗೆ ಕೊಡಲಿಲ್ಲ. ಮೋಹದ ಬಂಧನವು ಕುರುವಂಶದ ಪತನಕ್ಕೇ ಕಾರಣವಾದುದು.
* ರಾಜಭಾರಿಯಾಗಿ ಬಂದಿದ್ದ ಶ್ರೀ ಕೃಷ್ಣ ಲೋಕಕ್ಕೆ ರಾಜನೀತಿಯನ್ನು ಪಾಲಿಸಿ ತೋರಿಸಿದ. ಪಾಂಡವರ ರಾಯಭಾರಿಯಾದ ಶ್ರೀಕೃಷ್ಣ, ಭೀಷ್ಮ, ದ್ರೋಣ, ಧುರ್ಯೊಧನಾದಿಗಳ ಆತಿಥ್ಯ ಸ್ವೀಕರಿಸಲ್ಲಿಲ್ಲ. ಸಭೆಯೊಳಗೆ ದ್ರೌಪದಿಯ ಮಾನಭಂಗ ಮಾಡುವಾಗ ಭೀಷ್ಮ, ದ್ರೋಣರು ಮೌನದಿಂದ ಕುಳಿತಿದ್ದರು. ಇದು ನಡೆಯುತ್ತಿದ್ದ ಕ್ರೌರ್ಯಕ್ಕೆ ಸಮ್ಮತಿ ನೀಡಿದಂತೆ.
* ಧೃತರಾಷ್ಟ್ರನಿಗೆ ವಿದುರನು ರಾಜನೀತಿಯ ಏಳು ಮುಖ್ಯ ರಹಸ್ಯಗಳನ್ನು ವಿವರಿಸಿದುದು. [ಬಿತ್ತಿದ ಕರ್ಮಕ್ಕೆ ತಕ್ಕ ಬೆಳೆ, ಪಾಪ ಕರ್ಮವ ತೊಳೆ]
ಗುರೂಜಿ ಬನ್ನಂಜೆಯವರು ಪ್ರವಚನದಲ್ಲಿ ಮಹಾಭಾರತದ ಮಹಾನ್ ಮಹಿಳೆಯರಾದ ದ್ರೌಪದಿ ಹಾಗೂ ಗಾಂಧಾರಿಯ ಪಾತ್ರದ ಚಿತ್ರಣ ಮನಮುಟ್ಟುವಂತೆ ತಿಳಿಸಿದರು. ಮಹಾರಾಣಿಯರಾದರೂ ದ್ರೌಪದಿ, ಗಾಂಧಾರಿಯರ ದುಃಖ ದುಮ್ಮಾನಗಳು ಕೇಳುಗರ ಮನಃ ಪಟಲದಲ್ಲಿ ಚಿರವಾಗಿ ನಿಲ್ಲುವಂತೆ ವಿವರಿಸಿದರು.
"ವಿದುರ ನೀತಿ" ಪ್ರವಚನದ ಮುಂಚಿತವಾಗಿ ಡಾ. ಗೋವಿಂದಾಚಾರ್ಯರ ಜೊತೆಯಲ್ಲಿ ಪ್ರಶ್ನೋತ್ತರ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಅವಕಾಶ ಏರ್ಪಡಿಸಲಾಗಿತ್ತು. ಮಧ್ವಶಾಸ್ತ್ರ ಹಾಗೂ ಇತರ ಶಾಸ್ತ್ರಗಳು; ಭಗವದ್ಗೀತೆಯಲ್ಲಿ ಶ್ರೀ ಕೃಷ್ಣನ ಸಂದೇಶ; ಕರ್ಮ ಮಾಡುವಲ್ಲಿ ದೇವರಲ್ಲಿ ಅಚಲವಾದ ನಂಬಿಕೆ, ಕರ್ಮ ಮಾಡುವ ಯೋಗ್ಯತೆ ಹಾಗೂ ಜ್ಞಾನದಿಂದ ಪರಮಾತ್ಮನನ್ನು ಹೊಂದುವ ಬಗೆ; ಜೀವನು ಅಸ್ವತಂತ್ರನೆಂದು ಕರ್ಮಭ್ರಷ್ಟರಾಗದಿರುವ ರೀತಿ, ಮುಂತಾದ ಭಕ್ತರ ಪ್ರಶ್ನೆಗಳಿಗೆ ಗುರೂಜಿಯವರು ಸಮಂಜಸವಾಗಿ ಉತ್ತರನೀಡಿದರು.
ಕಾರ್ಯಕ್ರಮದ ಮುಕ್ತಾಯದಲ್ಲಿ ಶ್ರೀಮಠದ ದಿವಾನರಾದ ಪ್ರಸನ್ನ ಆಚಾರ್ಯರ ಉಪಸ್ಥಿತಿಯಲ್ಲಿ ಶ್ರೀ ವೆಂಕಟಕೃಷ್ಣ ಕ್ಷೇತ್ರದ ಅರ್ಚಕರಾದ ಕಿರಣ್ ಕುಮಾರ್ ಅವರು, ಉಡುಪಿ ಪುತ್ತಿಗೆ ಮಠಾಧಿಪತಿಗಳಾದ ಸುಗುಣೇಂದ್ರತೀರ್ಥ ಶ್ರೀಪಾದಂಗಳವರ ಪರವಾಗಿ ಹಾಗೂ ಸೇರಿದ್ದ ಭಕ್ತವೃಂದದ ಪರವಾಗಿ ಬನ್ನಂಜೆ ಗೋವಿಂದಾಚಾರ್ಯರಿಗೆ ಶಾಲು ಹೊದಿಸಿ ಸನ್ಮಾನಿಸಿದರು. ಭಕ್ತಾದಿಗಳು ಅರ್ಥವತ್ತಾದ, ರೋಚನೀಯವಾದ ಪ್ರವಚನದ ಸದುಪಯೋಗ ಪಡೆದರು.