ಕುವೈತ್ ಕನ್ನಡ ಕೂಟದ ವರ್ಷಾರಂಭ ಕಾರ್ಯಕ್ರಮ ದಾಸೋತ್ಸವ “ಭಕ್ತಿಸಂಚಯ”
ಕುವೈತ್ ಕನ್ನಡ ಕೂಟ ತನ್ನ ವರ್ಷಾರಂಭ ಕಾರ್ಯಕ್ರಮ ದಾಸೋತ್ಸವ- "ಭಕ್ತಿಸಂಚಯ"ವನ್ನು ಕುವೈತಿನ ಖೈತಾನ್ ಕಾರ್ಮೆಲ್ ಸ್ಕೂಲ್ ನಲ್ಲಿ ಇತ್ತೀಚೆಗೆ ಜರುಗಿತು. ಈ ವರ್ಷದ ಸಾರ್ವಜನಿಕ ಸಂಪರ್ಕ ಮತ್ತು ಮಾಧ್ಯಮ ಸಮಿತಿಯ ಸಂಚಾಲಕಿ ಶ್ರೀಮತಿ ಜಯಲಕ್ಷ್ಮಿ ಕಾರ್ಕಳರ ನೇತೃತ್ವದ ಆಕರ್ಷಕ ಆಹ್ವಾನ ಮತ್ತು ಸ್ವಾಗತ ಕಟ್ಟೆಯಲ್ಲಿ ಸಮಿತಿಯ ಸದಸ್ಯರಿಂದಲೇ ನಿರ್ಮಾಣಗೊಂಡ ಗುಹಾಂತರ ಶಿವ ದೇವಾಲಯದ ಮಾದರಿ ಎಲ್ಲರ ಮನಸೂರೆಗೊಂಡಿತು.
ಸಾಂಸ್ಕೃತಿಕ ಸಮಿತಿಯ ಸಂಚಾಲಕಿಯಾದ ಶ್ರೀಮತಿ ಸಂಗೀತಾ ಅನಂತ್ ಮಂಗಲಗಿ ಇವರ ನೇತೃತ್ವದಲ್ಲಿ "ಭಕ್ತಿ ಸಂಚಯ" ಎಂಬ ಕಾರ್ಯಕ್ರಮವು, ಕೂಟದ ಕಾರ್ಯಕಾರಿ ಸಮಿತಿಯಿಂದ ಬೆಳಿಗ್ಗೆ ವಿದ್ಯುಕ್ತವಾಗಿ ಉದ್ಘಾಟನೆಗೊಂಡಿತು. ದೀಪ ಬೆಳಗಿಸಿ ಕೂಟದ ಸದಸ್ಯರನ್ನು ಉದ್ದೇಶಿಸಿ ಮಾತನಾಡಿದ ಕುವೈತ್ ಕನ್ನಡ ಕೂಟದ ಅಧ್ಯಕ್ಷರಾದ ಡಾ. ಶಶಿಕಿರಣ್ ಪ್ರಭು ಅವರು ಪ್ರಸಕ್ತ ವರ್ಷದಲ್ಲಿ ಕನ್ನಡ ಕೂಟವು ಹಮ್ಮಿಕೊಂಡ ವಿವಿಧ ಕಾರ್ಯಕ್ರಮಗಳ ಬಗ್ಗೆ ವಿವರಿಸಿದರು.
ಕನ್ನಡ ಕೂಟದ ಉಪಾಧ್ಯಕ್ಷರಾದ ಶ್ರೀಪ್ರಭು ಆಚಾರ್ ಅವರು ಪುಲ್ವಾಮಾದಲ್ಲಿ ಇತ್ತೀಚೆಗೆ ನಡೆದ ಭಯೋತ್ಪಾದಕರ ದಾಳಿಯಲ್ಲಿ ಹುತಾತ್ಮರಾದ ಸೈನಿಕರಿಗೆ ಗೌರವಸೂಚಕವಾಗಿ ಒಂದು ನಿಮಿಷದ ಮೌನಾಚರಣೆಗೆ ಕರೆಯಿತ್ತರು, ಹುತಾತ್ಮ ಸೈನಿಕರ ಕುಟುಂಬಕ್ಕೆ ಧನ ಸಹಾಯ ಮಾಡುವ ಪ್ರಯುಕ್ತ ನಿಧಿ ಸಂಗ್ರಹಣೆಯ ಪೆಟ್ಟಿಗೆಯನ್ನು ಸ್ಥಾಪಿಸಿದ ಬಗ್ಗೆ ಕೂಟದ ಸದಸ್ಯರಿಗೆ ತಿಳಿಸಿದರು.
ಇದಾದ ನಂತರ ಮಕ್ಕಳಿಗಾಗಿ ನಾಲ್ಕು ವಿಭಾಗಗಳಲ್ಲಿ ಛದ್ಮವೇಷ ಮತ್ತು ಏಕಪಾತ್ರಾಭಿನಯ ಸ್ಪರ್ಧೆ ನಡೆಯಿತು. ಸುಮಾರು ನಲವತ್ತುಕ್ಕೂ ಅಧಿಕ ಮಕ್ಕಳು ಭಾಗವಹಿಸಿದ ಈ ಸ್ಪರ್ಧೆಗಳಲ್ಲಿ ಮಕ್ಕಳು ತಮ್ಮ ಅಭಿನಯ, ವೇಷಭೂಷಣ, ಪೌರಾಣಿಕ ಮತ್ತು ಐತಿಹಾಸಿಕ ಪಾತ್ರಗಳಿಗೆ ಕನ್ನಡದಲ್ಲಿ ಸಂಭಾಷಣೆಗಳ ಮೂಲಕ ತೀರ್ಪುಗಾರರ ಗಮನ ಸೆಳೆದರು.
ಈ ಸ್ಪರ್ಧೆಗಳ ತೀರ್ಪುಗಾರರಾಗಿ ಡಾ. ಸುದೀಪ್, ಶ್ರೀಮತಿ ಉಷಾ ಪ್ರಸಾದ್ ಮತ್ತು ಶ್ರೀಮತಿ ಸುಜಾತಾ ರಾಮಚಂದ್ರನ್ ಅವರು ಕಾರ್ಯನಿರ್ವಹಿಸಿದರು.
2018ರ ಕನ್ನಡಕೂಟದ ಕಾರ್ಯಕಾರಿ ಸಮಿತಿಯನ್ನು ನೆನಪಿನ ಕಾಣಿಕೆಯಿತ್ತು ಸನ್ಮಾನಿಸಿದ ಕಾರ್ಯಕಾರಿ ಸಮಿತಿಯು, ಕಳೆದ ಶೈಕ್ಷಣಿಕ ವರ್ಷದಲ್ಲಿ ಹತ್ತು ಮತ್ತು ಹನ್ನೆರಡನೇ ತರಗತಿಗಳಲ್ಲಿ ಉತ್ತೀರ್ಣರಾದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ನೆನಪಿನ ಕಾಣಿಕೆಯನ್ನಿತ್ತು ಗೌರವಿಸಿ ಇನ್ನೂ ಹೆಚ್ಚಿನ ಸಾಧನೆ ಮಾಡುವಂತೆ ಪ್ರೋತ್ಸಾಹಿಸಿದರು.
ನಂತರ ದಿನದ ಭಕ್ತಿ ಸಂಚಯದ ಮುಖ್ಯ ಸಾಂಸ್ಕೃತಿಕ ಕಾರ್ಯಕ್ರಮ ವಾದ "ಶಿವಶಕ್ತಿ" ಸ್ವರೂಪವೆಂಬ ನೃತ್ಯರೂಪಕವನ್ನು ಬೆಳಕು, ಧ್ವನಿ, ನೃತ್ಯ, ವೇಷಭೂಷಣ, ರಂಗಸಜ್ಜಿಕೆ, ಹಿನ್ನೆಲೆ ಧ್ವನಿ, ಹಾಡು, ನಿರೂಪಣೆ ಮತ್ತು ಸಾಹಿತ್ಯದ ಸಮಬೆರಕೆಯೊಂದಿಗೆ ಪ್ರಸ್ತುತಪಡಿಸಲಾಯಿತು. ದಕ್ಷಾಯಣಿಯ ಕಥೆಯನ್ನೊಳಗೊಂಡ ಈ ನೃತ್ಯರೂಪಕವನ್ನು ಕೂಟದ ಮಕ್ಕಳು ಸಮರ್ಥವಾಗಿ ವೇದಿಕೆಯ ಮೇಲೆ ಅನಾವರಣಗೊಳಿಸಿ ಸಭಿಕರ ಮನಸೂರೆಗೊಂಡರು.
ಶ್ರೀಮತಿ ಸಂಗೀತಾ ಅನಂತ ಮಂಗಲಗಿಯವರ ಪರಿಕಲ್ಪನೆಯ ಈ ನೃತ್ಯರೂಪಕಕ್ಕೆ ಶ್ರೀ ಪ್ರವೀಣ ಕುಮಾರ ಶೆಟ್ಟಿ ನಿರೂರೂಪಣಾ ಸಾಹಿತ್ಯ ಒದಗಿಸಿದರೆ ಶ್ರೀಮತಿ ಅಲಕಾ ಜಿತೇಂದ್ರ ನಿರ್ದೇಶಿಸಿದರು. ಶ್ರೀಮತಿ ಭಾರ್ಗವಿ ಬೃಹ್ಮ, ಶ್ರೀಮತಿ ರಶ್ಮಿ ಶಿರಮಗೊಂಡ್, ಶ್ರೀಮತಿ ಮಾಧುರಿ ಕಟ್ಟಿ, ಶ್ರೀಮತಿ ಲಾವಣ್ಯ ಲೋಕೇಶ್ ಮತ್ತು ಶ್ರೀ ಗೋವಿಂದ್ ಬೆಲ್ಚಡರವರು ನಿರೂಪಣೆಯಲ್ಲಿ ಜೊತೆಯಾದರು. ಶ್ರೀ ಕಿರಣ್ ಭಟ್ ರ ಮುಂದಾಳತ್ವದ ಕನ್ನಡ ಕೂಟದ ತಾಂತ್ರಿಕ ಸಮಿತಿಯು ಅಭೂತಪೂರ್ವ ಸಂಗೀತ ಮತ್ತು ದೃಶ್ಯ ಸಂಯೋಜನೆಯನ್ನು ಮಾಡಿತ್ತು.
ಕಾರ್ಯಕಾರಿ ಸಮಿತಿಯ ಮೂಲಕ ಬಿಡುಗಡೆಯಾದ ಕುವೈತ್ ಕನ್ನಡ ಕೂಟದ ವಿಶೇಷ ಸಂಚಿಕೆ ಮರಳ ಮಲ್ಲಿಗೆಯನ್ನು ಈ ವರ್ಷದ ಮರಳ ಮಲ್ಲಿಗೆ ಸಮಿತಿ ಸಂಚಾಲಕಿಯಾದ ಶ್ರೀಮತಿ ಸುಗುಣ ಮಹೇಶ್ ರವರ ನೇತೃತ್ವದಲ್ಲಿ ಅಣಿಗೊಳಿಸಿತ್ತು. ಸಮಿತಿಯಿಂದಲೇ ಸಂಪೂರ್ಣವಾಗಿ ಸಂಕಲನಗೊಂಡ ಮತ್ತು ಸುಂದರ ಮುಖಪುಟದೊಂದಿಗಿನ ಸಂಚಿಕೆಯು ಕೂಟದ ಸದಸ್ಯರ ವಿವಿಧ ಲೇಖನಗಳನ್ನು ಹೊತ್ತು ತಂದಿತ್ತು.
ಕುವೈತ್ ಕನ್ನಡ ಕೂಟದ ಮಾಜಿ ಅಧ್ಯಕ್ಷರುಗಳು ಮತ್ತು ಅವರ ಸಹಧರ್ಮಿಣಿಯರಿಂದ ನಗರ ಭಜನೆ ಕಾರ್ಯಕ್ರಮವು ಶ್ರೀಗೋವಿಂದ್ ಬೆಲ್ಚಡ ಇವರ ನಿರ್ದೇಶನದಲ್ಲಿ ಯಶಸ್ವಿಯಾಗಿ ನಡೆಯಿತು. ತರುವಾಯ ಶ್ರೀಮತಿ ಮಾಧವಿ ನೇತೃತ್ವದ ಸಾಲ್ಮಿಯ ಮತ್ತು ಶ್ರೀಮತಿ ವಸಂತಾ ಅಶೋಕ್ ನೇತೃತ್ವದ ಅಭುಹಲೀಫಾ ಮಹಿಳಾ ಭಜನಾ ತಂಡಗಳು ತಮ್ಮ ಸುಮಧುರ ಕಂಠದಿಂದ ಭಕ್ತಿಭಾವದ ಹೊಳೆಯನ್ನೇ ಹರಸಿದರು. ಶ್ರೀ ಸುರೇಶ್ ಸಾಲಿಯಾನ್ ನೇತೃತ್ವದಲ್ಲಿ ಪುರುಷರ ಭಜನೆಯ ತಂಡವು ದಾಸರ ಭಜನೆಗಳ ಮೂಲಕ ಭಕ್ತಿಸಾಗರದ ಬೋರ್ಗೆರತವನ್ನೇ ವೇದಿಕೆಗೆ ಎಳೆತಂದರು.
ಕುವೈತ್ ಕನ್ನಡ ಕೂಟದ ವೆಲ್ಫೇರ್ ಆಸೋಸಿಯೇಷನ್ ಅಧ್ಯಕ್ಷರಾದ ಶ್ರೀ ವಾಸುಕಿಯವರು ಮಾತನಾಡಿ ತಮ್ಮ ಕೂಟದ ಕೆಲವೊಂದು ಕಾರ್ಯಚಟುವಟಿಕೆಯ ಬಗ್ಗೆ ಸದಸ್ಯರ ಗಮನ ಸೆಳೆದರು. ಶ್ರೀರಾಜೀವ್ ಕುಲಕರ್ಣಿ ವಿದ್ಯಾರ್ಥಿವೇತನದ ಬಗ್ಗೆ ವಿವರಿಸಿದರು. ಆ ದಿನದಂದು ನೆಡೆದ ವಿವಿಧ ಸ್ಪರ್ಧೆಯ ವಿಜೇತರಿಗೆ ಬಹುಮಾನ ವಿತರಣೆಯ ನಂತರ ಕೂಟದ ಕಾರ್ಯದರ್ಶಿ ಶ್ರೀ ರವಿಕಿರಣ್ ಪ್ರಭಾಕರ್ ಅವರಿಂದ ಪ್ರಮುಖ ಪ್ರಾಯೋಜಕರಿಗೆ ಮತ್ತು ಸಭಾಂಗಣ ನೀಡಿದ ಶಾಲೆಗೆ ವಂದನಾರ್ಪಣೆ ನಡೆಯಿತು. ಸಾತ್ವಿಕ ಬೋಜನದ ನಂತರ ವಿಜೃಂಭಣೆಯ "ಭಕ್ತಿಸಂಚಯ"ವೆಂಬ ದಾಸೋತ್ಸವ ಕಾರ್ಯಕ್ರಮವು ಸಂಪನ್ನಗೊಂಡಿತು.