ಕುವೈತಿನಲ್ಲಿ ಬಂಟರ ಸಂಘದಿಂದ ದೀಪಾವಳಿ ಸಂಭ್ರಮ
ದೀಪಾವಳಿಯ ದೀಪಗಳ ಉತ್ಸವವು ಭಾರತದಲ್ಲಿ ಸಡಗರದಿಂದ ಆಚರಿಸಿದ ಸಂದರ್ಭದಲ್ಲೆ, ಬಂಟರ ಸಂಘ ಕುವೈಟ್ ತನ್ನ ಸಂಘದ ವತಿಯಿಂದ ದೀಪಾವಳಿ ಹಬ್ಬದ ಆಚರಣೆ ಭಾರತೀಯ ಸಮುದಾಯ ಶಾಲೆ ಸಾಲ್ಮಿಯಾದಲ್ಲಿ, ಅಧ್ಯಕ್ಷ ಯದುನಾಥ್ ಆಳ್ವ ಆದ್ಯಪಾಡಿ ಅವರ ನೇತೃತ್ವದಲ್ಲಿ ಶುಕ್ರವಾರ, ಅಕ್ಟೋಬರ್ 20ರಂದು ವಿಜೃಂಭಣೆಯಿಂದ ನಡೆಯಿತು.
ರಾಜ್ಯೋತ್ಸವ ವಿಶೇಷ: ಸ್ವಾಗತಿಸಿ ಕುವೈತ್ ಕನ್ನಡ ಸಂಘ
ಸುಮಾರು 250ಕ್ಕೂ ಮಿಕ್ಕಿ ಕರ್ನಾಟಕ ಕರಾವಳಿ ಮೂಲದ ಬಂಟ ಸದಸ್ಯರು ಕಾರ್ಯಕ್ರಮದಲ್ಲಿ ಉತ್ಸಾಹದಿಂದ ಪಾಲ್ಗೊಂಡರು ಮತ್ತು ಸಾಂಸ್ಕೃತಿಕ ಕಾರ್ಯದರ್ಶಿ ಜಯಶೀಲಾ ಶೆಟ್ಟಿ ಹೊರ್ಲಾಳಿ ಅವರು ವಿವಿಧ ಸ್ಪರ್ಧೆಗಳನ್ನು ಮತ್ತು ಸಾಂಸ್ಕೃತಿಕ ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ಆಯೋಜಿಸಿದರು.
ಈ ವರ್ಷದ ದೀಪಾವಳಿ ಹಬ್ಬದ ಆಯೋಜನೆಯು ಬಹಳ ಆಕರ್ಷಕವಾಗಿತ್ತು. ಬೆಳಗಿನ ಕಾರ್ಯಕ್ರಮವು ಬಾಳೆ ಎಲೆಯಲ್ಲಿ ತವರೂರಿನ ಸೊಗಡಿನ ದೀಪಾವಳಿಯಲ್ಲಿ ತಯಾರಿಸುವ ತಿಂಡಿ ತಯಾರಿಕೆ, ತಿಂಡಿ ತಿನಿಸುಗಳ ಅಲಂಕಾರ ಸ್ಪರ್ಧೆ ಮತ್ತು ಹೂವಿನಿಂದ ರಚಿಸುವ ರಂಗೋಲಿ ಸ್ಪರ್ಧೆಯಿಂದ ಆರಂಭಗೊಂಡಿತ್ತು.
ಕುವೈತ್ ಕನ್ನಡ ಸಂಘದಿಂದ ರಾಜ್ಯೋತ್ಸವಕ್ಕೆ ವಿಡಿಯೋ ಆಹ್ವಾನ
ಮಂದವಾದ ಗಾಳಿ ಮತ್ತು ಪ್ರಕಾಶಮಾನ ಬೆಳಕಿನಿಂದ ಕೂಡಿದ್ದ ಸಭಾಂಗಣದಲ್ಲಿ ಸಾರ್ವಜನಿಕ ಸಂಪರ್ಕ ತಂಡದ ಸದಸ್ಯರಿಂದ ಮಾಡಲ್ಪಟ್ಟ ಸುಂದರವಾದ ಸ್ಥಳ ಅಲಂಕಾರಗಳು, ದೀಪಾವಳಿ ಹಬ್ಬದ ಸಡಗರ ಮತ್ತು ಉತ್ಸವದ ವಾತಾವರಣವನ್ನು ಸೃಷ್ಟಿಸಿತು.
ಸಭಾಂಗಣದಲ್ಲಿ ಸಾಲಾಗಿ ಹಚ್ಚಿದ್ದ ಹಣತೆಗಳು ಮತ್ತು ಗೂಡುದೀಪಗಳು ಕಾರ್ಯಕ್ರಮಕ್ಕೆ ರೋಮಾಂಚಕ ಮತ್ತು ವರ್ಣರಂಜಿತ ಅನುಭವವನ್ನು ಕೊಟ್ಟಿತು. ಸ್ಪರ್ಧಿಗಳ ಕೌಶಲ್ಯದಿಂದ ತಯಾರಿಸಲ್ಪಟ್ಟ ರಂಗೋಲಿ ಮತ್ತು ತಿನಿಸುಗಳ ಪ್ರದರ್ಶನವು ಮಾಂತ್ರಿಕವಾಗಿ ಕಾಣುವಂತೆ ಮಾಡಿ, ಪ್ರೇಕ್ಷಕರನ್ನು ಮಂತ್ರಮುಗ್ಧಗೊಳಿಸಿತು.
ಸಂಘದ ಹಿರಿಯ ಸದಸ್ಯರು ಮತ್ತು ಆಡಳಿತ ಮಂಡಳಿಯವರ ಸಮ್ಮುಖದಲ್ಲಿ ದೇವರ ಪ್ರಾರ್ಥನೆ ಮತ್ತು ಸಾಂಪ್ರದಾಯಿಕ ದೀಪ ಬೆಳಗುವುದರೊಂದಿಗೆ ಆರಂಭವಾದ ಸಭಾಕಾರ್ಯಕ್ರಮದಲ್ಲಿ, ಸಂಘದ ಅಧ್ಯಕ್ಷ ಯದುನಾಥ್ ಅಳ್ವ ಅವರು ಸಂಘದ ಸದಸ್ಯರು ಮತ್ತು ಆಮಂತ್ರಿತರನ್ನು ಆತ್ಮೀಯವಾಗಿ ಸ್ವಾಗತಿಸಿದರು. ಸಂಘದ ಸದಸ್ಯರ ಸಂಪೂರ್ಣ ಭಾಗವಹಿಸುವಿಕೆಗೆ ಮೆಚ್ಚುಗೆ ಸೂಚಿಸಿದರು.
ವಿದೇಶದಲ್ಲಿ ನೆಲೆಸಿದ ಸದಸ್ಯರಿಗೆ ಮತ್ತು ಯುವ ಪೀಳಿಗೆಗೆ ಭಾರತೀಯ ಸಂಸ್ಕೃತಿಯನ್ನು ಪರಿಚಯಿಸುವ ಸಲುವಾಗಿ ನಡೆಸಿಕೊಂಡು ಬರುತ್ತಿರುವ ಇಂತಹ ಕಾರ್ಯಕ್ರಮಗಳಿಗೆ ಬೆಂಬಲ ನೀಡಿದ ಸರ್ವರನ್ನು ಅವರು ಶ್ಲಾಘಿಸಿದರು.
ಇದಾದ ನಂತರ ಸುಮಾರು ಎರಡು ಗಂಟೆಗಳ ಕಾಲ ನಡೆದ ಕಾರ್ಯಕ್ರಮದಲ್ಲಿ ನೃತ್ಯ, ಹಾಡು ಮತ್ತು ಇತರ ಸಾಂಸ್ಕೃತಿಕ ಕಾರ್ಯಕ್ರಮಗಳ ಮೇಳೈಸಿದವು. ಸಂಪೂರ್ಣ ಸಭಾ ಕಾರ್ಯಕ್ರಮವನ್ನು ದೇವಿಪ್ರಸಾದ್ ರೈ ಮತ್ತು ರಶ್ಮಿತಾ ಪ್ರವೀಣ್ ಶೆಟ್ಟಿ ಅವರು ಸುಂದರವಾಗಿ ತುಳು ಮತ್ತು ಕನ್ನಡ ಭಾಷೆಯಲ್ಲಿ ಜಂಟಿಯಾಗಿ ನಿರೂಪಿಸಿದರು.
ಪ್ರೇಕ್ಷಕರು ವೇದಿಕೆಯಲ್ಲಿ ನಡೆದ ಪ್ರತಿ ಪ್ರದರ್ಶನವನ್ನೂ ಶ್ಲಾಘಿಸಿದರು. ಆವಂತಿ ಪ್ಯಾಲೇಸ್ ರೆಸ್ಟೋರೆಂಟ್ ಒದಗಿಸಿದ ಕರಾವಳಿಯ ಸಾಂಪ್ರದಾಯಿಕ ಭೋಜನವು ದೀಪಾವಳಿ ಆಚರಣೆಗೆ ತವರೂರ ನೆನಪು ಮಾಡಿಸಿತು.
ಭೋಜನದ ನಂತರ ನಡೆದ "ಚೆನ್ನು ಚೆನ್ನು ಮಗು" ಸ್ಪರ್ಧೆ, ಚಿತ್ರಕ್ಕೆ ಬಣ್ಣ ಹಾಕುವ ಸ್ಪರ್ಧೆ, ಛದ್ಮವೇಶ ಸ್ಪರ್ಧೆ, ಪೇಟಾ ಕಟ್ಟುವ ಸ್ಪರ್ಧೆ ಮತ್ತು ಪ್ರತಿಭಾ ಪ್ರದರ್ಶನ ಸ್ಪರ್ಧೆಗಳಂತ ಹಲವು ಸ್ಪರ್ಧೆಗಳು ನಿರಂತರವಾಗಿ ನಡೆದವು ಮತ್ತು ಸದಸ್ಯರು ಅತೀ ಉತ್ಸಾಹದಿಂದ ಪಾಲ್ಗೊಂಡರು. ಇದೇ ಸಮಯದಲ್ಲಿ, ಸ್ಥಳೀಯ ತಂಡವು ಚಿಕ್ಕದಾದ ಮತ್ತು ಸುಂದರವಾದ ರಸಮಂಜರಿ ಕಾರ್ಯಕ್ರಮವನ್ನು ಕೂಡ ನಡೆಸಿಕೊಟ್ಟಿತು.
ನಾರಿಯರ ವರ್ಣರಂಜಿತ ಸೀರೆಗಳು, ಯುವಕರ ಸಾಂಪ್ರದಾಯಿಕ ಉಡುಗೆಗಳು, ಸಭೆಯಲ್ಲಿ ಸಂಗೀತ ಮತ್ತು ದೀಪಾವಳಿಯ ವಾತಾವರಣವು ಪ್ರೇಕ್ಷಕರನ್ನು ಹರ್ಷಚಿತ್ತವಾಗಿಸಿತು. ಸಮಾರಂಭದ ಅಂತ್ಯದಲ್ಲಿ, ಪ್ರಧಾನ ಕಾರ್ಯದರ್ಶಿ ಪ್ರವೀಣ್ ಕುಮಾರ್ ಶೆಟ್ಟಿ ಅವರು ಕಾರ್ಯಕ್ರಮದಲ್ಲಿ ಭಾಗವಹಿಸಿದ ಸದಸ್ಯರು, ಕಾರ್ಯಕ್ರಮದ ಯಶಸ್ಸಿಗೆ ದುಡಿದ ಎಲ್ಲಾ ಸಮಿತಿಗಳ ಸದಸ್ಯರು ಮತ್ತು ಕಾರ್ಯಕ್ರಮದ ಯಶಸ್ಸಿಗಾಗಿ ಕೆಲಸ ಮಾಡಿದ ಸ್ವಯಂಸೇವಕರಿಗೆ ಧನ್ಯವಾದಗಳನ್ನು ಅರ್ಪಿಸಿದರು. ಭಾರತದ ರಾಷ್ಟ್ರಗೀತೆಯನ್ನು ಹಾಡುವುದರೊಂದಿಗೆ ದಿನದ ಕಾರ್ಯಕ್ರಮಕ್ಕೆ ವಿಧ್ಯುಕ್ತವಾದ ತೆರೆಯೆಳೆಯಲಾಯಿತು.