ಸಿಂಗಪುರದಲ್ಲಿ ನಾಡಪ್ರಭು ಕೆಂಪೇಗೌಡರ 2ನೇ ಅಂತಾರಾಷ್ಟ್ರೀಯ ಉತ್ಸವ
ಇಂದು ನಮ್ಮ ಬೆಂಗಳೂರಿನ ಹೆಸರು ವಿಶ್ವದಾದ್ಯಂತ ಪ್ರಸಿದ್ಧವಾಗಿದೆ. ಭಾರತ ದೇಶದ ಸಿಲಿಕಾನ್ ವ್ಯಾಲಿ ಎಂದು ಹೆಸರು ಪಡೆದ ಬೆಂಗಳೂರು ಇಂದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರುವಾಸಿಯಾದ ಅನೇಕ ಬಹುರಾಷ್ಟ್ರೀಯ ಕಂಪನಿಗಳ ತವರಾಗಿದೆ. ಇಂತಹ ಈ ಬೆಂಗಳೂರಿನ ಸಂಸ್ಥಾಪಕ ಕೆಂಪೇಗೌಡರು. ನಾಡಪ್ರಭು ಕೆಂಪೇಗೌಡರ ಹೆಸರು ಕೇಳದ ಕನ್ನಡಿಗರೇ ಇಲ್ಲ ಎನ್ನಬಹುದು. 16ನೇ ಶತಮಾನದಲ್ಲಿಯೇ ಸುಮಾರು 64 ಪೇಟೆಗಳುಳ್ಳ ಸುಸಜ್ಜಿತ ನಗರವನ್ನು ನಿರ್ಮಿಸಿದ ಕೆಂಪೇಗೌಡರ ದೂರದೃಷ್ಟಿಯ ಫಲವಾಗಿ ಇಂದು ವಿಶ್ವದ ಭೂಪಟದಲ್ಲಿ ವಿಶಿಷ್ಟ ಸ್ಥಾನಪಡೆದಿದೆ ನಮ್ಮ ಬೆಂಗಳೂರು.
500 ವರ್ಷಗಳಷ್ಟು ಹಿಂದೆಯೇ ವ್ಯಾಪಾರಿಗಳನ್ನು ಕರೆತಂದು ಅಗತ್ಯ ಸೌಲಭ್ಯಗಳನ್ನು ಕಲ್ಪಿಸಿಕೊಟ್ಟು ಅವರವರ ವೃತ್ತಿಗೆ ಅನುಸಾರವಾಗಿ ಪೇಟೆಗಳನ್ನು ನಿರ್ಮಿಸಿಕೊಟ್ಟು ನಗರವನ್ನು ಬೆಳೆಯಲು ಅನುವುಮಾಡಿಕೊಟ್ಟ ಕೀರ್ತಿ ಕೆಂಪೇಗೌಡರಿಗೆ ಸಲ್ಲುತ್ತದೆ. ಅಷ್ಟೇ ಅಲ್ಲದೇ ಬೆಂಗಳೂರು ನಗರದಾದ್ಯಂತ ಅನೇಕ ಕೆರೆಗಳನ್ನು ಉದ್ಯಾನವನಗನ್ನು ನಿರ್ಮಿಸಿದರು. ಇಂದು ಉದ್ಯಾನ ನಗರಿ ಎಂದು ಹೆಸರು ಪಡೆಯಲು, ಕೆಂಪೇಗೌಡರಿಗೆ ಕೃಷಿಯಲ್ಲಿರುವ ಆಸಕ್ತಿ ಮತ್ತು ಪರಿಸರ ಪ್ರೇಮವೇ ಕಾರಣ. ನಾಡಿನ ಇತಿಹಾಸದಲ್ಲಿ ಯಾವುದೇ ಸ್ವತಂತ್ರ ರಾಜರೂ ಸಹ ತಮ್ಮ ಅವಧಿಯಲ್ಲಿ ಇಷ್ಟು ಕೆರೆ ಮತ್ತು ಉದ್ಯಾನ್ಗಳನ್ನು ಕಟ್ಟಿಸಿರುವುದು ಕಂಡುಬರುವುದಿಲ್ಲ.
ದುಬೈನ 'ಧ್ವನಿ' ರಂಗಸಿರಿ ಉತ್ಸವದಲ್ಲಿ 'ಮೃಚ್ಛಕಟಿಕ' ನಾಟಕ
ಇಂತಹ ಮಹಾನ್ ವ್ಯಕ್ತಿ, ಕೆಂಪೇಗೌಡರ ಸ್ಮರಣಾರ್ಥವಾಗಿ ಕಳೆದ ವರ್ಷದಿಂದ ನಾಡಪ್ರಭು ಕೆಂಪೇಗೌಡರ ಅಂತಾರಾಷ್ಟ್ರೀಯ ಉತ್ಸವವನ್ನು ಆಚರಿಸಲಾಗುತ್ತಿದೆ. ಈ ವರ್ಷ ಈ ಪ್ರತಿಷ್ಠಿತ ಅಂತಾರಾಷ್ಟ್ರೀಯ ಉತ್ಸವವನ್ನು ಹಮ್ಮಿಕೊಳ್ಳುವ ಸೌಭಾಗ್ಯ ನಮ್ಮ ಸಿಂಗಪುರ ನಗರಕ್ಕೆ ಒಲಿದು ಬಂದಿದೆ. ವಿಶ್ವ ಒಕ್ಕಲಿಗರ ಮಹಾ ವೇದಿಕೆ, ಒಕ್ಕಲಿಗರ ಸಮುದಾಯ ಸಿಂಗಪುರ ಹಾಗೂ ಕನ್ನಡ ಸಂಘ (ಸಿಂಗಪುರ)ದ ಸಹಯೋಗದೊಂದಿಗೆ, ಇದೇ ಶನಿವಾರ, 23 ಫೆಬ್ರವರಿ 2019ರಂದು ಸಿಂಗಪುರದ ಕಲ್ಲಂಗ್ ಥಿಯೇಟರ್ ನಲ್ಲಿ ಈ ಅಂತಾರಾಷ್ಟ್ರೀಯ ಉತ್ಸವ ದಿನವಿಡೀ ವಿಜೃಂಭಣೆಯಿಂದ ಜರುಗಲಿದೆ. ಈ ಉತ್ಸವಕ್ಕೆ ಪೂರ್ವಸಿದ್ಧತೆಗಳು ಭರದಿಂದ ಸಾಗಿವೆ.
ಈ ಉತ್ಸವವು ಪದ್ಮಭೂಷಣ, ಪರಮ ಪೂಜ್ಯ ಶ್ರೀ ಶ್ರೀ ಶ್ರೀ ಡಾ|| ಬಾಲಗಂಗಾಧರನಾಥ ಸ್ವಾಮೀಜಿಗಳ ಆಶೀರ್ವಾದದೊಂದಿಗೆ, ಶ್ರೀಮನ್ನಿರಂಜನ, ಪ್ರಣವಸ್ವರೂಪಿ ಶ್ರೀ ಶ್ರೀ ಶ್ರೀ ಡಾ|| ನಿರ್ಮಲಾನಂದನಾಥ ಸ್ವಾಮೀಜಿ, ಪರಮಪೂಜ್ಯ ಶ್ರೀ ಶ್ರೀ ಶ್ರೀ ನಂಜಾವಧೂತ ಮಹಾಸ್ವಾಮೀಜಿ ಹಾಗೂ ಪರಮಪೂಜ್ಯ ಶ್ರೀ ಶ್ರೀ ಶ್ರೀ ಕುಮಾರ ಚಂದ್ರಶೇಖರನಾಥ ಮಹಾಸ್ವಾಮೀಜಿ ಅವರ ದಿವ್ಯ ಸನ್ನಿಧಿಯಲ್ಲಿ ಜರುಗುವುದು ನಮ್ಮೆಲ್ಲರ ಭಾಗ್ಯ. ನಾಡಿನ ಸಂತರ ದಿವ್ಯ ದರ್ಶನ ಪಡೆಯುವ ಮತ್ತು ಅವರ ಅಮೃತವಾಣಿಯನ್ನು ಕೇಳುವ ಸದವಕಾಶ ನಮ್ಮೆಲ್ಲರಿಗೂ ಒದಗಲಿದೆ.
ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಸನ್ಮಾನ್ಯ ಮಾಜಿ ಪ್ರಧಾನ ಮಂತ್ರಿಗಳಾದ ಎಚ್.ಡಿ. ದೇವೇಗೌಡರು, ಮುಖ್ಯಮಂತ್ರಿಗಳಾದ ಎಚ್.ಡಿ ಕುಮಾರಸ್ವಾಮಿ, ಉಪಮುಖ್ಯಮಂತ್ರಿಗಳಾದ ಜಿ. ಪರಮೇಶ್ವರ್ ಮತ್ತು ಮಾನ್ಯ ಕೇಂದ್ರ ಸಚಿವರಾದ ಸದಾನಂದ ಗೌಡರಲ್ಲದೆ ಅನೇಕ ಪ್ರಮುಖ ರಾಜಕಾರಣಿಗಳು ಆಗಮಿಸಲಿದ್ದಾರೆ. ಕಲಾವಿದರಾದ ಸುಮಲತಾ ಅಂಬರೀಷ್, ಯಶ್, ಅಭಿಷೇಕ್ ಅಂಬರೀಶ್ ಮತ್ತು ಅಮೂಲ್ಯ ಮತ್ತಿತರರು ಆಗಮಿಸಿ ಉತ್ಸವಕ್ಕೆ ಮೆರುಗು ತರಲಿದ್ದಾರೆ. ನಾಡಿನ ಹಿರಿಯ ಸಾಹಿತಿಗಳಾದ ಡಾ.ದೊಡ್ಡರಂಗೇಗೌಡರು, ಜಾನಪದ ವಿದ್ವಾಂಸರಾದ ಪ್ರೊ.|ಕೃಷ್ಣೇಗೌಡರು, ಮೈಸೂರು ವಿಶ್ವವಿದ್ಯಾಲಯದ ನಿಕಟಪೂರ್ವ ಉಪಕುಲಪತಿಗಳಾದ ಡಾ. ರಂಗಪ್ಪನವರು ಮತ್ತು ಕವಿ, ಚಿಂತಕ ಹಾಗೂ ಪತ್ರಕರ್ತರಾದ ನಾಗತಿಹಳ್ಳಿ ರಮೇಶ್ ಅವರು ಈ ಉತ್ಸವದಲ್ಲಿ ಪಾಲ್ಗೊಳ್ಳುವುದು ನಮ್ಮೆಲ್ಲರ ಸಂತೋಷವನ್ನು ದ್ವಿಗುಣಗೊಳಿಸಲಿದೆ.
ಒಮಾನ್ ಸ್ಪಂದನ ಸಂಸ್ಥೆಯಿಂದ ಕನ್ನಡ ಪತ್ರಕರ್ತರ ಸನ್ಮಾನ
ಈ ಉತ್ಸವದ ಅಂಗವಾಗಿ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ನಾಡಪ್ರಭು ಕೆಂಪೇಗೌಡರ ಇತಿಹಾಸವನ್ನು ಮೆಲುಕು ಹಾಕುವ ವಿಶೇಷ ಕಾರ್ಯಕ್ರಮವನ್ನು ಏರ್ಪಾಟು ಮಾಡಲಾಗಿದೆ. ಸಾಂಸ್ಕೃತಿಕ ಪಥಸಂಚಲನ ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ. ಚಲನಚಿತ್ರ ಹಿನ್ನೆಲೆ ಗಾಯಕರು ಮತ್ತು ಸಂಗೀತ ನಿರ್ದೇಶಕರ ತಂಡದಿಂಡ "ಅಂಬಿ ಅಮರ" ಎಂಬ ಗೀತನಮನ ಕಾರ್ಯಕ್ರಮವನ್ನು ಅಂಬರೀಷ್ ಅವರ ನೆನಪಿನಲ್ಲಿ ಹಮ್ಮಿಕೊಳ್ಳಲಾಗಿದೆ. ಅದೇ ರೀತಿಯಾಗಿ ಅಕ್ಷರ ನಮನ, ರಂಗ ನಮನ ಮತ್ತು ದೃಶ್ಯ ನಮನಗಳಂತಹ ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿದೆ. ವಿಶೇಷವಾದ ವಿಚಾರ ಮಂಥನ ನಡೆಯಲಿದೆ. ನಾಡಪ್ರಭು ಕೆಂಪೇಗೌಡ, ವಿಶ್ವ ಮಾನವ ಕುವೆಂಪು, ಅಂಬರೀಷ್ ಅವರ ಕುರಿತಾದ ಕಿರುಚಿತ್ರ ಪ್ರದರ್ಶನಗಳನ್ನು ಕೂಡ ಹಮ್ಮಿಕೊಳ್ಳಲಾಗಿದೆ.
'ವ್ಯಾಪಾರಿ ಕೇಂದ್ರವಾಗಿದ್ದ ಬೆಂಗಳೂರು, ಅಸಾಧ್ಯ ಬುದ್ಧಿವಂತ ಕೆಂಪೇಗೌಡ'
ಅಲ್ಲದೇ ಕರ್ನಾಟಕದ ಕಲಾವಿದರು, ಸಿಂಗಪುರದ ಕಲಾವಿದರು ಮತ್ತು ಮಲೇಷಿಯಾದ ಕಲಾವಿದರು ಸಿಂಗನ್ನಡಿಗರಿಗಾಗಿ ಮತ್ತು ವಿಶ್ವದ ವಿವಿಧ ದೇಶಗಳಿಂದ ಬಂದ ಕನ್ನಡಿಗರಿಗಾಗಿ ವಿವಿಧ ಮನರಂಜನೆಯ ಕಾರ್ಯಕ್ರಮಗಳನ್ನು ನಡೆಸಿಕೊಡಲಿದ್ದಾರೆ. ವಿವಿಧ ಕ್ಷೇತ್ರಗಳಲ್ಲಿ ಸಾಧನೆಯನ್ನು ಮಾಡಿದ ವಿಶ್ವದ ಆನೇಕ ಕನ್ನಡಿಗರಿಗೆ ನಾಡಪ್ರಭು ಕೆಂಪೇಗೌಡ ಅಂತಾರಾಷ್ಟ್ರೀಯ ಪುರಸ್ಕಾರ, ವಿಶ್ವ ಕನ್ನಡ ರತ್ನ ಮತ್ತು ವಿಶ್ವಮಾನ್ಯ ಒಕ್ಕಲಿಗ ಪ್ರಶಸ್ತಿಗಳನ್ನು ನೀಡಿ ಸತ್ಕರಿಸಲಾಗುವುದು.
ವಿಶ್ವ ಒಕ್ಕಲಿಗರ ಮಹಾವೇದಿಕೆಯ ಅಧ್ಯಕ್ಷರಾದ ವೈ ಡಿ ರವಿಶಂಕರ್ ಮತ್ತು ಕಾರ್ಯದರ್ಶಿಗಳಾದ ಕನ್ನಡವೇ ಸತ್ಯ ರಂಗಣ್ಣ ಅವರ ಮಾರ್ಗದರ್ಶನದಲ್ಲಿ ಮತ್ತು ಕೆಂಪೇಗೌಡ ಅಂತಾರಾಷ್ಟ್ರೀಯ ಉತ್ಸವದ ಸ್ವಾಗತ ಸಮಿತಿಯ ಅಧ್ಯಕ್ಷರಾದ ಸಿಂಗನ್ನಡಿಗ ವೆಂಕಟೇಶ ಮೂರ್ತಿ ಅವರ ನೇತೃತ್ವದಲ್ಲಿ ಈ ಐತಿಹಾಸಿಕ, ಸಂಸ್ಕೃತಿಕ ಮತ್ತು ಮನೊರಂಜಕ ಕಾರ್ಯಕ್ರಮ ಮುಂಜಾನೆ ಹತ್ತರಿಂದ ದಿನವಿಡೀ ನಡೆಯಲಿದೆ. ಕರ್ನಾಟಕದಿಂದ, ವಿಶ್ವದೆಲ್ಲೆಡೆಯಿಂದ ಬರಲಿರುವ ಕನ್ನಡಿಗರಿಗೆ ಸಿಂಗನ್ನಡಿಗರಾದ ನಾವು ಆದರದಿಂದ ಸ್ವಾಗತಿಸಿ, ಸತ್ಕರಿಸಿ, ಪ್ರೀತಿಯಿಂದ ನೋಡಿಕೊಂಡು ನಮ್ಮತನವನ್ನು ಮೆರೆಯೋಣ.
ಅಚ್ಚಕನ್ನಡಿಗರ ನೆಚ್ಚಿನ ನಾಡಪ್ರಭು ಕೆಂಪೇಗೌಡರ ಸವಿನೆನಪಿನಲ್ಲಿ ನಡೆಯಲಿರುವ ಈ ಉಚ್ಚಶ್ರೇಣಿಯ ಉತ್ಸವಕ್ಕೆ ಸಿಂಗನ್ನಡಿಗರೆಲ್ಲರೂ ಆಗಮಿಸಿ ಉತ್ಸವಕ್ಕೆ ಹೆಚ್ಚಿನ ರಂಗನ್ನು ನೀಡಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ನಾಡಪ್ರಭು ಕೆಂಪೇಗೌಡರ ಎರಡನೇ ಅಂತಾರಾಷ್ಟ್ರೀಯ ಉತ್ಸವದ ಸ್ವಾಗತ ಸಮಿತಿ ತಮ್ಮೆಲ್ಲರಿಗೂ ಆದರದಿಂದ ಕೋರಿಕೊಳ್ಳುತ್ತದೆ.