ನಾವಿಕದಿಂದ ಬೆಂಗಳೂರಿನಲ್ಲಿ 'ನಮ್ಮ ವಿಶ್ವ ಕನ್ನಡ' ಉತ್ಸವ
ಬೆಂಗಳೂರು, ಜನವರಿ 04 : ನಾರ್ಥ್ ಅಮೆರಿಕ ವಿಶ್ವ ಕನ್ನಡ ಅಸೋಸಿಯೇಷನ್ (ನಾವಿಕ) ಸಂಘಟನೆಯು ನಮ್ಮ ವಿಶ್ವ ಕನ್ನಡ ಉತ್ಸವ ಹೆಸರಲ್ಲಿ ಬೆಂಗಳೂರಿನಲ್ಲಿ 2016ರ ಜುಲೈ ತಿಂಗಳಲ್ಲಿ ನಾವಿಕೋತ್ಸವ ಹಮ್ಮಿಕೊಳ್ಳಲಿದೆ.
ನಾವಿಕದ ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಅಮೆರಿಕದ ಫ್ಲಾರಿಡಾದ ಖ್ಯಾತ ಪ್ರಸೂತಿ ತಜ್ಞೆ ಡಾ.ರೇಣುಕಾ ರಾಮಪ್ಪ ಅವರಿಗೆ ಭಾನುವಾರ ಸನ್ಮಾನ ಸಮಾರಂಭ ಏರ್ಪಡಿಸಿದ್ದ ವೇಳೆ ಈ ವಿಷಯ ಪ್ರಕಟಿಸಿದರು.
ಇದೊಂದು ಬಹುದೊಡ್ಡ ಸಮಾವೇಶವಾಗಿರಲಿದ್ದು, ರಾಜ್ಯ ಸರ್ಕಾರ, ವಿವಿಧ ಸರ್ಕಾರಿ ಸಂಸ್ಥೆಗಳು, ಕನ್ನಡ ಸಂಘಟನೆಗಳು, ಸಾಹಿತಿಗಳ ಸಹಿತ ಹಲವರೊಂದಿಗೆ ಚರ್ಚಿಸಿ ದಿನಾಂಕ ಮತ್ತು ಸ್ಥಳವನ್ನು ಅಂತಿಮಗೊಳಿಸಲಾಗುವುದು ಎಂದು ಡಾ.ರೇಣುಕಾ ರಾಮಪ್ಪ ಹೇಳಿದರು. ['ನಾವಿಕ' ಸಮ್ಮೇಳನ ಹೈಲೈಟ್ಸ್ ಮತ್ತು ಸೈಡ್ ಲೈಟ್ಸ್]
ಅಮೆರಿಕದಲ್ಲಿ ಈ ಮೊದಲು ನಾವಿಕದ ವತಿಯಿಂದ ಹಲವಾರು ಕನ್ನಡ ಸಂಬಂಧಿತ ಸಮಾವೇಶಗಳು, ಕಾರ್ಯಕ್ರಮಗಳು ನಡೆದಿವೆ. ಇದೀಗ ನಾವಿಕವು ಬೆಂಗಳೂರು ನಗರದಲ್ಲಿ ಕನ್ನಡಿಗರ ವಿಶ್ವ ಸಮಾವೇಶ ಹಮ್ಮಿಕೊಳ್ಳುತ್ತಿದೆ ಎಂದು ಅವರು ಹೇಳಿದರು.
ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ.ಎಲ್.ಹನುಮಂತಯ್ಯ ಅವರು ಡಾ.ರೇಣುಕಾ ರಾಮಪ್ಪ ಅವರನ್ನು ಸನ್ಮಾನಿಸಿದರು. ಉದ್ದೇಶಿತ ವಿಶ್ವ ಕನ್ನಡ ಸಮಾವೇಶಕ್ಕೆ ಎಲ್ಲ ನೆರವು ನೀಡುವುದಾಗಿ ಹನುಮಂತಯ್ಯ ಅವರು ಭರವಸೆ ನೀಡಿದರು. ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಮುಖ್ಯಮಂತ್ರಿ ಚಂದ್ರು, ರಂಗಕರ್ಮಿ ಬಿ.ವಿ.ರಾಜಾರಾಂ, ನಟ, ನಿರ್ದೇಶಕ ಯಶವಂತ ಸರ್ದೇಶಪಾಂಡೆ ಇತರರು ಇದ್ದರು.
ಮನವಿ : ಈ ಸಮಾವೇಶದಲ್ಲಿ ಭಾಗವಹಿಸುವ ಆಸಕ್ತಿ ಹೊಂದಿರುವ ಕನ್ನಡ ಸಂಘಟನೆಗಳು, ಸಾಹಿತಿಗಳು, ಬರಹಗಾರರು, ಕಲಾವಿದರು ತಮ್ಮನ್ನು ತಕ್ಷಣ ಸಂಪರ್ಕಿಸುವಂತೆ ಯಶವಂತ ಸರ್ದೇಶಪಾಂಡೆ ಅವರು ಮನವಿ ಮಾಡಿದ್ದಾರೆ. ಮಾಹಿತಿಗೆ [email protected] ಅಥವಾ 9845217869 ಸಂಪರ್ಕಿಸಬಹುದು.