ಸಮ್ಮೇಳನದ ಯಶಸ್ಸಿಗೆ ಕಾರಣವಾದ ಸ್ವಯಂ ಸೇವಕ ತಂಡ
ಕೊನೆಯದಾಗಿ ಆದರೆ ಅತಿ ಮುಖ್ಯವಾಗಿ, ಸುಮಾರು ಒಂದು ವರ್ಷದಿಂದಲೂ ರೂಪುಗೊಳ್ಳುತ್ತಲಿದ್ದ ಈ ಸಾಹಿತ್ಯೋತ್ಸವವನ್ನು ಎರಡು ದಿನಗಳ ಕಾಲ ಕಾರ್ಯರೂಪಕ್ಕಿಳಿಸಲು ದುಡಿದ ಸಂಗಮದ ಹಾಗು ಕನ್ನಡ ಸಾಹಿತ್ಯ ರಂಗದ ಸ್ವಯಂಸೇವಕರನ್ನು ಸಭೆಗೆ ಪರಿಚಯಿಸಲಾಯಿತು.
ಇಂಥ ಒಂದು ಸಮ್ಮೇಳನವನ್ನು ನಡೆಸುವುದು ಸುಲಭದ ಮಾತಲ್ಲ, ಇದಕ್ಕೆ ಹಣ ಅದನ್ನು ಕೊಡುವ ಉದಾರ ದಾನಿಗಳು, ತೆರೆಯ ಹಿಂದಿದ್ದು ಮುಂದೆ ಬರುವ ಪ್ರತಿಯೊಂದು ಹೆಜ್ಜೆಯ ವಿವರಗಳನ್ನೂ ಮುಂದಾಲೋಚಿಸಿ ಕಾರ್ಯಕ್ರಮಗಳನ್ನು ಯೋಜಿಸುವ ಸಂಚಾಲಕರಿರಬೇಕು. ಸಾಹಿತ್ಯ ರಂಗದ ಸದಸ್ಯರು ದೇಶದ ವಿವಿಧ ಮೂಲೆಗಳಲ್ಲಿ ಹಂಚಿಹೋಗಿರುವುದರಿಂದ ಅವರ ಆಶಯಗಳನ್ನು ಕಾರ್ಯರೂಪಕ್ಕಿಳಿಸುವ ರೂವಾರಿಗಳಿರಬೇಕು.
ಸಂಗಮದ 2014ನೆಯ ಸಾಲಿನ ಅಧ್ಯಕ್ಷೆ ಜ್ಯೋತಿ ಅನಂತ್ ಮತ್ತು 2015 ಅವಧಿಯ ಅಧ್ಯಕ್ಷೆ ಶುಭಾ ಭಾಸ್ಕರ್ ಮತ್ತು ಅವರ ಕುಟುಂಬದವರಿಗೆ ಸಾಹಿತ್ಯ ರಂಗದ ಮನಃಪೂರ್ವಕ ನಮನಗಳು. ಅವರ ಹಿಂದೆ ನಿಂತು ಸಹಕರಿಸಿದವರ ಹೆಸರುಗಳನ್ನು ಪಟ್ಟಿಮಾಡಿದರೆ ತುಂಬಾ ಉದ್ದವಾಗುತ್ತದೆ, ಆದರೆ ಅವರೆಲ್ಲರೂ ನಮ್ಮ ಮನಸ್ಸಿನಲ್ಲಿ ಸದಾ ಇರುತ್ತಾರೆ ಮತ್ತು ನಮ್ಮ ಮೆಚ್ಚುಗೆಗೆ ಪಾತ್ರರಾಗುತ್ತಾರೆ. ಕಸಾರಂ ನಡೆಸುವ ಕಾರ್ಯಕ್ರಮಗಳು ಕಾಲಕ್ಕೆ ಸರಿಯಾಗಿ ಪ್ರಾರಂಭವಾಗಿ ಶಿಸ್ತಿನಿಂದ ನಡೆಯುತ್ತವೆ.
ಈ ಬಾರಿ ಸಮಯಪಾಲನೆಯ ನಿರ್ವಹಣೆ ಶ್ರೀವತ್ಸ ಜೋಶಿ ಮತ್ತು ಭಾಸ್ಕರ ಸುಬ್ಬರಾವ್ ಅವರ ನೇತೃತ್ವದಲ್ಲಿ ಅತ್ಯಂತ ಸಮರ್ಪಕವಾಗಿ ನಡೆಯಿತು. ಸಭಾಸದರೆಲ್ಲರೂ ಚಿಕಾಗೋ ಕನ್ನಡ ಕೂಟದ ಹಾಡುಗಾರರ ನಾಯಕತ್ವದಲ್ಲಿ ನಾಡಗೀತೆಯನ್ನು ಹಾಡುವುದರ ಮೂಲಕ ಏಳನೆಯ ಕನ್ನಡ ಸಾಹಿತ್ಯೋತ್ಸವಕ್ಕೆ ಮಂಗಳ ಹಾಡಲಾಯಿತು. ಎಂಟನೆಯ ಉತ್ಸವಕ್ಕೆ ಇನ್ನೂ ಎರಡು ವರ್ಷ ಕಾಯಬೇಕು!
ಸಮ್ಮೇಳನದ ಎಲ್ಲಾ ಚಿತ್ರಗಳನ್ನು ಕನ್ನಡ ಸಾಹಿತ್ಯ ರಂಗದ ಫೇಸ್ ಬುಕ್ ಪುಟದಲ್ಲಿ ನೋಡಬಹುದು.