ನಮ್ಮ ಬರಹಗಾರರು : ಹತ್ತು ಕೃತಿಗಳ ಪರಿಚಯ
'ನಮ್ಮ ಬರಹಗಾರರು' - ಇದು ಕನ್ನಡ ಸಾಹಿತ್ಯ ರಂಗವು ಪ್ರತಿವರ್ಷವೂ ಸಂಪ್ರದಾಯದಂತೆ ನಡೆಸಿಕೊಂಡು ಬಂದಿರುವ ಸಮ್ಮೇಳನದ ಒಂದು ಮುಖ್ಯ ಕಾರ್ಯಕ್ರಮ. ಅಮೆರಿಕದಲ್ಲಿ ಸಾಹಿತ್ಯವನ್ನು ಪಸರಿಸಬೇಕೆನ್ನುವ ಕನ್ನಡ ಸಾಹಿತ್ಯ ರಂಗದ ಉದ್ದೇಶಕ್ಕೆ ಪೂರಕವಾದ ಕಾರ್ಯಕ್ರಮವಿದು. ಈ ಕಾರ್ಯಕ್ರಮದಲ್ಲಿ ಇತ್ತೀಚೆಗೆ ಬಿಡುಗಡೆಯಾದ ಪುಸ್ತಕ ಮತ್ತು ಅದರ ಲೇಖಕರನ್ನು ಕಿರಿದಾಗಿ ಪರಿಚಯಿಸಲಾಗುತ್ತದೆ.
ಈ ಬಾರಿಯೂ 2014-2015ರಲ್ಲಿ ಪ್ರಕಟವಾದ ಒಟ್ಟು ಹತ್ತು ಕೃತಿಗಳನ್ನು ಪರಿಚಯಿಸಲಾಯಿತು. 'ಧ್ಯಾನಕ್ಕೆ ತಾರೀಖಿನ ಹಂಗಿಲ್ಲ' (ಕಾವ್ಯಾ ಕಡಮೆ), ಸಿರಿಗನ್ನಡ ರಾಮಾಯಣ (ಎಂ.ಎಸ್.ನಟರಾಜ), ದೇವರ ರಜ (ಗುರುಪ್ರಸಾದ್ ಕಾಗಿನೆಲೆ), ಅಮೆರಿಕನ್ನಡಿಗ ಬರಹಗಾರರು-ಸಂಕ್ಷಿಪ್ರ ಮಾಹಿತಿಕೋಶ (ಸಂ: ನಾಗ ಐತಾಳ, ಜ್ಯೋತಿ ಮಹಾದೇವ), ಅಮೂರ್ತ ಚಿತ್ತ (ಪ್ರಕಾಶ್ ನಾಯಕ್), ಭಾವ ಸಿಂಚನ (ನಾಗಭೂಷಣ ಮೂಲ್ಕಿ), ಬೇಂದ್ರೆ ಅಂದ್ರೆ (ಸಂ: ನಾಗ ಐತಾಳ, ನಳಿನಿ ಮೈಯ), My Gift and Other Stories (ದಿ| ಅಶ್ವತ್ಥ ರಾವ್), ಕುಕ್ಕೆ ಸುಬ್ರಹ್ಮಣ್ಯ ಶಾಸ್ತ್ರಿಗಳ ಜೀವನ ಚರಿತ್ರೆ (ಸಂ: ನಳಿನಿ ಮತ್ತು ಗೋಪಾಲ್ ಕುಕ್ಕೆ), ಸೃಷ್ಠಿ (ಎಚ್.ವೈ.ರಾಜಗೋಪಾಲ್)- ಇವು ಈ ಬಾರಿ ಪರಿಚಯಗೊಂಡ ಕೃತಿಗಳು.
ಲೇಖಕರ ಪುಸ್ತಕ ಪರಿಚಯ ನಡೆಯುತ್ತಿರುವಾಗ ಹಿಂದಿದ್ದ ತೆರೆಯ ಮೇಲೆ ಲೇಖಕರ ಚಿತ್ರದೊಂದಿಗೆ ಅವರ ಕಿರು ಪರಿಚಯವೂ ಪ್ರದರ್ಶನಗೊಳ್ಳುತ್ತಿದ್ದು ಸಭಿಕರಿಗೆ ಬರಹಗಾರರ ಬಗ್ಗೆ ಹೆಚ್ಚಿನ ಮಾಹಿತಿ ದೊರೆಯಲು ಸಹಾಯಕವಾಗಿತ್ತು. ಈ ಕಾರ್ಯಕ್ರಮವನ್ನು ನಡೆಸಿಕೊಟ್ಟವರು ತ್ರಿವೇಣಿ ಶ್ರೀನಿವಾಸರಾವ್ ಮತ್ತು ಮೀರಾ. ಪಿ.ಆರ್. ಈ ಕಾರ್ಯಕ್ರಮದ ನಂತರ ಸಭಾಂಗಣದ ಹೊರಗಿದ್ದ ಪುಸ್ತಕ ಮಳಿಗೆಯಲ್ಲಿ, ಪರಿಚಯಗೊಂಡ ಪುಸ್ತಕಗಳು ಬಿಸಿ ದೋಸೆಗಳಂತೆ ಮಾರಾಟವಾಗುತ್ತಿದ್ದುದು ಈ ಕಾರ್ಯಕ್ರಮದ ಸಾರ್ಥಕ್ಯವನ್ನು ಸೂಚಿಸುವಂತಿತ್ತು!
ಅತಿಥಿಗಳೊಂದಿಗೆ ಸಂವಾದ:
ಕನ್ನಡ ಸಾಹಿತ್ಯರಂಗದ ಏಳನೆಯ ವಸಂತೋತ್ಸವ ಸಂದರ್ಭದಲ್ಲಿ ಮುಖ್ಯ ಅತಿಥಿಗಳಾದ ಪ್ರಧಾನ ಗುರುದತ್ತ, ನಾರಾಯಣ ಹೆಗಡೆ ಮತ್ತು ಎಸ್.ಎನ್. ಶ್ರೀಧರ್ ಅವರೊಂದಿಗೆ 'ಸಂವಾದ' ಕಾರ್ಯಕ್ರಮವನ್ನು ಇಟ್ಟುಕೊಂಡಿದ್ದೆವು. ಈ ಸಂವಾದವನ್ನು ನಡೆಸಿಕೊಟ್ಟವರು ಗುರುಪ್ರಸಾದ ಕಾಗಿನೆಲೆ ಮತ್ತು ಸುಮತಿ ಮುದ್ದೇನಹಳ್ಳಿ ಅವರು.
ಅನುವಾದದ ಮೂಲಕೃತಿಯ ಆಯ್ಕೆ ಹೇಗೆ? ಅನುವಾದದಲ್ಲಿ ಮೂಲದ ಸೊಗಡನ್ನು ಎಷ್ಟರಮಟ್ಟಿಗೆ ಉಳಿಸಿಕೊಳ್ಳಲು ಸಾಧ್ಯ? ಕವನದ ಅನುವಾದ ಸಾಧ್ಯವೇ? ಕವನದಲ್ಲಿ ಚಿಹ್ನೆಗಳನ್ನು ಉಳಿಸಿಕೊಳ್ಳಬೇಕೆ? ಸಾಂಸ್ಕೃತಿಕ ಅನುವಾದದ ಸಾಧ್ಯತೆಗಳು-ಇತರೆ ಸೂಕ್ಷ್ಮಗಳನ್ನು ಚರ್ಚಿಸಲಾಯಿತು. ಸಭೆಯಲ್ಲಿ ಸೇರಿದ್ದ ಸಭಿಕರೆಲ್ಲರೂ ಬಹಳ ಉತ್ಸಾಹದಿಂದ ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಕಾರ್ಯಕ್ರಮವನ್ನು ಯಶಸ್ವಿ ಮಾಡಿಕೊಟ್ಟರು.
ಮಕ್ಕಳ ಕಾರ್ಯಕ್ರಮ : ರಂಗ ಆಚರಿಸುವ ಪ್ರತಿ ಸಮ್ಮೇಳನದಲ್ಲೂ ಕೊನೆಯ ಕಾರ್ಯಕ್ರಮ ಮಕ್ಕಳದ್ದೇ ಆಗಿರಬೇಕೆಂಬ ಒಂದು ಅಲಿಖಿತ ನಿಯಮವನ್ನು ಪಾಲಿಸುತ್ತಾ ಬಂದಿದ್ದೇವೆ. ಅಮೆರಿಕದಲ್ಲಿ ಈಗ ಕನ್ನಡ ಕಲಿಯುತ್ತಿರುವವರ ಮಕ್ಕಳ ಸಂಖ್ಯೆ ವರ್ಷೇವರ್ಷೇ ಏರುತ್ತಿದೆ. ಮಧ್ಯಪಶ್ಚಿಮ ವಲಯದ ಹಲವು ಕನ್ನಡಕೂಟದ ಮಕ್ಕಳು ಉತ್ಸಾಹದಿಂದ ಬಂದು ತಮ್ಮ ಪ್ರತಿಭೆಯನ್ನು ಪ್ರದರ್ಶಿಸಿದ್ದು ತಂದೆತಾಯಿಗಳಿಗೇ ಅಲ್ಲದೇ ಎಲ್ಲ ಸಭಾಸದರಿಗೂ ಸಂತಸತರುವಂತಿತ್ತು.
ಅದರಲ್ಲೂ ಚಿಕಾಗೋ ನಗರದ ಪೋರನೊಬ್ಬ ಏಕಲವ್ಯನಾಗಿ ಮಾಡಿದ ಏಕಪಾತ್ರಾಭಿನಯ, ಅವನ ನಿರರ್ಗಳ ಶುದ್ಧ ಕನ್ನಡವನ್ನು ಕೇಳಿದವರಿಗೆ ಮೈನವಿರೆದ್ದಿದ್ದರಲ್ಲಿ ಅಚ್ಚರಿಯೇನಿಲ್ಲ. ಕಾರ್ಯಕ್ರಮದಲ್ಲಿ ಭಾಗವಹಿಸಿದ ಚಿಣ್ಣರಿಗೆಲ್ಲ ಸೂಕ್ತ ಬಹುಮಾನಗಳು ಮತ್ತು ಅದೇ ತಾನೆ ಲೋಕಾರ್ಪಣೆಯಾದ "ಚಿಲಿ-ಪಿಲಿ, ಕನ್ನಡ ಕಲಿ" ಧ್ವನಿ ಸಂಪುಟ ಸಹ ವಿತರಣೆಯಾಯಿತು.