ಕಾವ್ಯಾನುವಾದ : ಇಫ್ ಐ ವರ್ ದ ಲಾರ್ಡ್ ಆಫ್ ಟಾರ್ಟರಿ
ಕವಿ ವಾಲ್ಟರ್ ಡಿಲಮೇರ್ ನ ಪದ್ಯ 'ಇಫ್ ಐ ವರ್ ದ ಲಾರ್ಡ್ ಆಫ್ ಟಾರ್ಟರಿ'ವನ್ನು ಐದು ಜನ ಕವಿಗಳು ಕನ್ನಡಕ್ಕೆ ಅನುವಾದ ಮಾಡಿ ವಾಚಿಸಿದರು. ಎಮ್ ಎಸ್ ನಟರಾಜರ ಅನುವಾದದಲ್ಲಿ ಟಾರ್ಟರಿ ಎಂಬ ಪ್ರಾಂತ್ಯ 'ನನ್ನ ಕನಸಿನ ರಾಜ್ಯ'ವಾದರೆ, ಪ್ರಕಾಶ ನಾಯಕರಿಗೆ 'ಅಖಂಡ ಭೂಮಂಡಲ'ವಾಯಿತು. ನಳಿನಿಯವರಿಗೆ ಅದನ್ನು 'ಟಾರ್ಟರಿ'ಯಾಗಿಯೇ ಉಳಿಸಿಕೊಳ್ಳುವ ಆಸೆ. ವೈಶಾಲಿ ಹೆಗಡೆಗೆ ಟಾರ್ಟರಿ ಸ್ವರ್ಗಪುರಿಯಾಯಿತು. ಮೀರಾ ರಾಜಗೋಪಾಲರವರಿಗೆ 'ಟಾರ್ಟರಿಯ ಲಾರ್ಡ್' ಹತ್ತೂರ ಒಡೆಯನಾಗಿ ರೂಪಾಂತರಗೊಂಡಿದ್ದ.
ನಟರಾಜರವರು ರಾಗವಾಗಿ ಮಕ್ಕಳಿಗೆ ಕವನ ಕಲಿಸುವ ರೀತಿಯಲ್ಲಿ ತಮ್ಮ ಕವನವನ್ನು ಹಾಡಿದ್ದು, ಪ್ರಕಾಶ ನಾಯಕರ ಅನುವಾದದಲ್ಲಿ ಟಾರ್ಟರಿ ಎಂಬ ಇದ್ದಿರಬಹುದಾದ ಒಂದು ಸಣ್ಣ ಪ್ರಾಂತ್ಯದ ಪಾಳಯಗಾರನಂತ ನಾಯಕ ಅಖಂಡ ಭೂಮಂಡಲಕ್ಕೆ ಒಡೆಯನಾದುದು, ನಳಿನಿ ಮಯ್ಯರವರು 'ಕುಣಿದಾವು ನವಿಲುಗಳು, ಸುಳಿದಾವು ಹುಲಿಗಳು' ಎಂದು ಭಾವಗೀತೆಯ ಆಪ್ತತೆಯನ್ನು ತಂದದ್ದು, ವೈಶಾಲಿಯವರು 'ಜಾಂಬಳಿ ಕಣಿವೆಯ ಜಂಬದ ಸಾಮ್ರಾಜ್ಯ' ಎಂಬ ಸಾಲನ್ನು ಓದಿದ್ದು, ಮೀರಾರವರು 'ಎಲ್ಲಾನು ನಂದೇಯ, ಎಲ್ಲಾವೂ ನಮ್ದೇಯ' ಎಂದು ಕವನವನ್ನು ಕನ್ನಡದ ಜನಪದ ಗೀತೆಯನ್ನಾಗಿ ರೂಪಾಂತರಗೊಳಿಸಿದ್ದು- ಅನುವಾದಕ್ಕಿರುವ ವಿವಿಧ ಆಯಾಮಗಳು ಮತ್ತು ಐದೂ ಬಗೆಯ ಅನುವಾದದ ಸಾಧ್ಯತೆಗಳನ್ನು ಸಾಕಾರಗೊಳಿಸುವ ನಮ್ಮ ಭಾಷೆಯ ಕಸುವು ಇಲ್ಲಿ ಪರಿಚಯವಾಯಿತು.
ಮುಂದಿನ ಭಾಗದಲ್ಲಿ ಎಸ್ ಎನ್ ಶ್ರೀಧರ್ ಮತ್ತು ನಾರಾಯಣ ಹೆಗಡೆಯವರು ಅನುವಾದದ ಸೂಕ್ಷ್ಮಗಳನ್ನು ತಮ್ಮದೇ ಅನುವಾದಗಳ ಪರಿಚಯ ಮಾಡಿಕೊಡುತ್ತಾ ವಿವರಿಸಿದರು. ನಾರಾಯಣ ಹೆಗಡೆಯವರು ಅನಂತಮೂರ್ತಿಯವರ 'ಸೂರ್ಯನ ಕುದುರೆ' ಕಥಾ ಸಂಕಲನವನ್ನು 'ಸ್ಟ್ಯಾಲಿಯನ್ ಆಫ್ ದ ಸನ್' ಎಂಬ ಹೆಸರಿನಲ್ಲಿ ಅನುವಾದ ಮಾಡಿದ್ದಾರಲ್ಲದೆ ಲಂಕೇಶ್, ತೇಜಸ್ವಿ, ಎ. ಕೆ, ರಾಮಾನುಜನ್ ಇನ್ನೂ ಇತರ ಕನ್ನಡದ ಸಾಹಿತಿಗಳ ಕತೆಗಳನ್ನು ಅಂಗ್ಲಭಾಷೆಗೆ ಮಾಡಿರುವ ಅನುವಾದಗಳು ಬಹಳ ಮಹತ್ವದ್ದಾಗಿವೆ.
ಶ್ರೀಧರ್ ರವರು ಅನುವಾದ ಕಮ್ಮಟದಲ್ಲಿ ತಮ್ಮ ಮಹತ್ವಾಕಾಂಕ್ಷಿ ಯೋಜನೆ ಕುಮಾರವ್ಯಾಸನ 'ಕರ್ನಾಟಕ ಕಥಾ ಮಂಜರಿ'ಯ ಇಂಗ್ಲಿಷ್ ಅನುವಾದದ ಬಗ್ಗೆ ಮಾತನಾಡಿದರು. ಇದೊಂದು ಭಾರತ, ಅಮೆರಿಕ ಮತ್ತು ಜರ್ಮನಿ ದೇಶಗಳ ವಿದ್ವಾಂಸರ ಹಾಗೂ ಅನುವಾದಗಳನ್ನೊಳಗೊಂಡ ಜಾಗತಿಕ ಯೋಜನೆ. ಕುಮಾರವ್ಯಾಸನ ಭಾರತವು ಹೋಮರನ 'ಒಡಿಸ್ಸಿ'ಯಂತೆ ಜಗತ್ತಿನ ಎಲ್ಲ ಓದುಗರಿಗೂ ಅದರ ಎಲ್ಲ ಕನ್ನಡ ಸೊಗಡಿನೊಂದಿಗೆ ಓದಲು ಸಿಗಬೇಕು ಎನ್ನುವುದು ಈ ತಂಡದ ಉದ್ದೇಶ. ಆ ಯೋಜನೆಯೆ ಬಗೆ ಸ್ಥೂಲವಾಗಿ ಮಾತಾಡಿದ ಶ್ರೀಧರ್ ರವರು ಅನುವಾದ ಕಮ್ಮಟದಲ್ಲಿ ಭಾಷಾಂತರಮಾಡಿದ ಐದೂ ಜನರ ಕವಿತೆಗಳ ವೈಶಿಷ್ಟ್ಯದ ಬಗ್ಗೆಯೂ ತಮ್ಮ ಅಭಿಪ್ರಾಯವನ್ನು ಕೊಟ್ಟರು.
ಒಟ್ಟಾರೆ ಒಂದೂವರೆ ಗಂಟೆ ನೆರೆದ ಸಭಿಕರ ಗಮನ, ಲಕ್ಷ್ಯವನ್ನು ಸೆಳೆಯಿತಲ್ಲದೇ ಮನರಂಜನೀಯವಾಗಿಯೂ ಇದ್ದದ್ದು ಈ ಕಾರ್ಯಕ್ರಮದ ಹೆಚ್ಚಳ.