ಅನುವಾದದ ಆಗು-ಹೋಗು : ವಿದ್ವತ್ಪೂರ್ಣ ಭಾಷಣ
ಸುಮಾರು ಒಂದು ಗಂಟೆಗೂ ಮೀರಿದ "ಅನುವಾದದ ಆಗು-ಹೋಗುಗಳು" ಎಂಬ ವಿಷಯವನ್ನು ಕುರಿತು ಪ್ರಧಾನ್ ಗುರುದತ್ತರು ವಿದ್ವತ್ಪೂರ್ಣವಾದ ಪ್ರಾಸ್ತಾವಿಕ ಭಾಷಣವನ್ನು ಮಾಡಿ ಸಭಾಸದರಿಗೆ ಅನುವಾದದ ಒಳನೋಟವನ್ನು ಕಾಣಿಸಿ, ರಸದೌತಣವನ್ನೇ ಬಡಿಸಿದರು. ಅಷ್ಟೇ ಅಲ್ಲ, ರಂಗ ಈವರೆಗೆ ಪ್ರಕಟಿಸಿದ ಮತ್ತು ಅಮೆರಿಕದಲ್ಲಿರುವ ಹಲವಾರು ಲೇಖಕರು ಪ್ರಕಟಿಸುತ್ತಾ ಬಂದಿರುವ ಅನೇಕ ಪುಸ್ತಕಗಳ ಬಗ್ಗೆ ಸಹ ಮೆಚ್ಚುಗೆಯ ಮಾತುಗಳನ್ನಾಡಿದರು.
ಭಾಷಣ ವಿದ್ವತ್ಪೂರ್ಣವಾಗಿರುವುದರ ಜೊತೆಗೆ ವಿನೋದಪೂರ್ಣವೂ ಅಗಿದ್ದುದರಿಂದ ಸಭಾಸದರೆಲ್ಲರೂ ಏಕರೀತಿಯಲ್ಲಿ ಆಸ್ವಾದಿಸಿ ಸಂತಸಪಟ್ಟರು. ಮುಖ್ಯ ಅತಿಥಿಗಳ ಹುಟ್ಟುಹಬ್ಬ ಅಂದೇ ಎಂದು ತಿಳಿದು ಪ್ರಾಸ್ತಾವಿಕ ಭಾಷಣ ಮುಗಿದ ಕೂಡಲೇ ಅವರಿಗೆ "ಹ್ಯಾಪ್ಪಿ ಬರ್ತ್ ಡೇ" ಹಾಡುವುದರ ಜೊತೆ ಅವರಿಗೂ ಮತ್ತು ರಂಗದ ಆಡಳಿತ ಮಂಡಲಿ ಅಧ್ಯಕ್ಷ ನಾಗ ಐತಾಳರ 55ನೇ ಮದುವೆಯ ವಾರ್ಷಿಕೋತ್ಸವದ ಸಲುವಾಗಿಯೂ ಎರಡು ವಿಭಿನ್ನ ರುಚಿಕರವಾದ ಕೇಕ್ ಗಳನ್ನು ಕತ್ತರಿಸಿದ್ದು ಅಂದಿನ ಕಾರ್ಯಕ್ರಮಕ್ಕೆ ವಿಶೇಷ ಕಳೆಯನ್ನು ಕೊಟ್ಟಿತು.
ಸಾಹಿತ್ಯ ಗೋಷ್ಠಿ : ಮಧ್ಯಾಹ್ನ ನಡೆದ ಸಾಹಿತ್ಯ ಗೋಷ್ಠಿ ಸುಮಾರು ಒಂದೂವರೆ ಗಂಟೆಗಳ ಕಾಲ ನೆರೆದವರಿಗೆಲ್ಲ ರಸದೌತಣವನ್ನು ಉಣಬಡಿಸಿತು. ನಿರೀಕ್ಷೆಗೂ ಮೀರಿ ಅಭ್ಯರ್ಥಿಗಳ ಪಟ್ಟಿ ಬೆಳೆದಿದ್ದರಿಂದ ಹಲವಾರು ಪದಾಧಿಕಾರಿಗಳು ಮತ್ತು ಇತರರು ತಾವು ಮಾಡಬೇಕೆಂದಿದ್ದ ಪ್ರಸ್ತುತಿಯನ್ನು ಹಿಂದೆಗೆದುಕೊಂಡರು- ಹೊಸ ಪ್ರತಿಭೆಗಳಿಗೆ ಅವಕಾಶ ನೀಡುವ ಸಲುವಾಗಿ. ಒಟ್ಟು ಹದಿನಾಲ್ಕು ಜನರು ಭಾಗವಹಿಸಿದ್ದರು.
ಅನಿಲ್ ದೇಶಪಾಂಡೆ, ಲತಾ, ವಿಶ್ವನಾಥ್, ಕಾವ್ಯಾ ಕಡಮೆ ನಾಗರಕಟ್ಟೆ, ಶ್ರೀನಿವಾಸ ರಾವ್ ಮತ್ತು ಮೈ ಶ್ರೀ ನಟರಾಜ ಅವರು ಮೂಲ ಕೃತಿ ಮತ್ತು ಅದರ ಅನುವಾದವನ್ನು ಪ್ರಸ್ತುತ ಪಡಿಸಿದರು. ಶಂಕರ ಶಾಸ್ತ್ರಿ ಮತ್ತು ತ್ರಿವೇಣಿ ಶ್ರೀನಿವಾಸ ರಾವ್ ತಮ್ಮ ತಿಳಿ ಹಾಸ್ಯಭರಿತ ಪ್ರಬಂಧವನ್ನು ಓದಿದರು. ನಾಗಭೂಷಣ ಮೂಲ್ಕಿ, ಪಿ ಎಸ್ ಮೈಯ, ಸವಿತಾ ರವಿಶಂಕರ್ ಮತ್ತು ಶಂಕರ ಹೆಗ್ಡೆ ಅವರು ಕವನಗಳನ್ನು ವಾಚಿಸಿದರು. ಸಾಹಿತ್ಯ ಗೋಷ್ಠಿಯನ್ನು ನಿರ್ವಹಿಸಿದ ನಳಿನಿ ಮೈಯ ಮತ್ತು ವೈಶಾಲಿ ಹೆಗಡೆ ಅವರನ್ನು ಹಲವಾರು ಜನರು ನಂತರ ಭೇಟಿಯಾಗಿ ಅಭಿನಂದನೆಗಳ ಸುರಿಮಳೆಯನ್ನೇ ಸುರಿಸಿದರು.