ಏಳನೆಯ ವಸಂತ ಸಾಹಿತ್ಯೋತ್ಸವ, ಒಂದು ವರದಿ
ಸೈಂಟ್ ಲೂಯಿಸ್ ನಗರದ ಕನ್ನಡ ಸಂಸ್ಥೆ "ಸಂಗಮ"ದ ಆಶ್ರಯದಲ್ಲಿ ಹಾಗು ಮಧ್ಯಪಶ್ಚಿಮ ವಲಯದ ಇತರ ಕನ್ನಡ ಸಂಘಗಳ ಸಹಕಾರದೊಂದಿಗೆ ಕನ್ನಡ ಸಾಹಿತ್ಯ ರಂಗದ ಏಳನೆಯ ವಸಂತ ಸಾಹಿತ್ಯೋತ್ಸವ ಮೇ 30, 31, 2015 ರಂದು ಅತ್ಯಂತ ಅರ್ಥಪೂರ್ಣವಾಗಿ ಆಚರಿಸಲ್ಪಟ್ಟಿತು.
ಈ ಬಾರಿ ರಂಗ "ಅನುವಾದ ಸಾಹಿತ್ಯ"ವನ್ನು ಚರ್ಚೆಯ ಮುಖ್ಯ ವಿಷಯವಾಗಿ ಆಯ್ದುಕೊಂಡು, ಕರ್ನಾಟಕದ ಪ್ರಸಿದ್ಧ ಭಾಷಾಂತರಕಾರರಲ್ಲೊಬ್ಬರಾದ ಪ್ರೊ. ಪ್ರಧಾನ್ ಗುರುದತ್ತರನ್ನು ಮುಖ್ಯ ಅತಿಥಿಗಳಾಗಿ ಬರಮಾಡಿಕೊಂಡಿತ್ತು. ಅವರೊಡನೆ, ಅಮೆರಿಕದವರೇ ಆದ ಪ್ರೊ.ಎಸ್.ಎನ್. ಶ್ರೀಧರ್ ಮತ್ತು ಪ್ರೊ. ನಾರಾಯಣ ಹೆಗ್ಡೆ ಅವರುಗಳು ವಿಶೇಷ ಅತಿಥಿಗಳಾಗಿ ಬಂದಿದ್ದರು.
ಕಾರ್ಯಕ್ರಮದ ಆರಂಭದ ವೇಳೆಗೆ ಸಭಾಂಗಣ ತಳಿರು ತೋರಣಗಳಿಂದ ಕಂಗೊಳಿಸುತ್ತಿತ್ತು. ಬೇರೆ ಬೇರೆ ಊರುಗಳಿಂದ ಬಂದು ಸೇರಿದ್ದ ಸಾಹಿತ್ಯಾಸಕ್ತರು ಒಂದು ಕಡೆ ನೋಂದಣಿ ಮಾಡಿಕೊಳ್ಳುತ್ತ ಪರಸ್ಪರ ಕುಶಲವನ್ನು ವಿಚಾರಿಸುತ್ತಿದ್ದರೆ, ಮತ್ತೆ ಬೇರೆಡೆಯಲ್ಲಿ ಸುಂದರವಾದ ಸೀರೆಗಳನ್ನುಟ್ಟು ನಗುಮೊಗದೊಂದಿಗೆ ಓಡಾಡುತ್ತಿದ್ದ ಸಂಗಮದ ಕಾರ್ಯಕರ್ತೆಯರು ಇಡೀ ಒಳಾಂಗಣಕ್ಕೆ ಹಬ್ಬದ ವಾತಾವರಣವನ್ನುಂಟು ಮಾಡಿದ್ದರು!
ಮಧ್ಯಾಹ್ನ ಒಂದು ಗಂಟೆಗೆ ಸರಿಯಾಗಿ ಅತಿಥಿಗಳು ದೀಪ ಬೆಳಗುವ ಮೂಲಕ ಸಮ್ಮೇಳನದ ಉದ್ಘಾಟನೆ ಮಾಡಿದರು. ಸಂಗಮ' ತಂಡದ ಗಾಯಕರ ಸುಶ್ರಾವ್ಯ ಸ್ವಾಗತ ಗೀತೆಯೊಂದಿಗೆ ಎರಡು ದಿನಗಳ ಸಾಹಿತ್ಯೋತ್ಸವ ಆರಂಭವಾಯಿತು. ಸಾಹಿತ್ಯ ರಂಗದ ಆಡಳಿತ ಮಂಡಲಿಯ ಅಧ್ಯಕ್ಷರಾದ ನಾಗ ಐತಾಳ ಮತ್ತು ಕಾರ್ಯಕಾರೀ ಸಮಿತಿಯ ಅಧ್ಯಕ್ಷ ಮೈ.ಶ್ರೀ. ನಟರಾಜ ಅವರು ಎಲ್ಲರನ್ನೂ ಸ್ವಾಗತಿಸಿ ಸಮ್ಮೇಳನಕ್ಕೆ ಚಾಲನೆ ಕೊಟ್ಟರು. ನಂತರ ಕಾವ್ಯಾ ಕಡಮೆ, ಮಾನಸಾ ವೆಂಕಟ ಸುಬ್ಬಯ್ಯ ಮತ್ತು ಸುಮತಿ ಮುದ್ದೇನಹಳ್ಳಿ ಅವರುಗಳು ಅತಿಥಿಗಳನ್ನು ಕ್ರಮವಾಗಿ, ಚಿಕ್ಕದಾಗಿ ಚೊಕ್ಕವಾಗಿ ಸಭೆಗೆ ಪರಿಚಯಿಸಿದರು.