ಮಲೇಷ್ಯಾದಲ್ಲಿಯೂ ಕನ್ನಡಿಗರನ್ನು ರಂಜಿಸಿದ 'ಮುಖ್ಯಮಂತ್ರಿ'
ಬೆಂಗಳೂರಿನ ಕಲಾಗಂಗೋತ್ರಿ ತಂಡದ ಸುಪ್ರಸಿದ್ಧ 'ಮುಖ್ಯಮಂತ್ರಿ' ನಾಟಕದ 610ನೆಯ ಯಶಸ್ವೀ ಪ್ರದರ್ಶನಕ್ಕೆ ಮಲೇಷ್ಯಾದ ಕನ್ನಡಿಗರು ಸಾಕ್ಷಿಯಾದರು. ನ್ಯೂಜಿಲ್ಯಾಂಡ್, ಆಸ್ಟ್ರೇಲಿಯಾ, ಹಾಗು ಸಿಂಗಪುರದಲ್ಲಿ ಯಶಸ್ವಿ ಪ್ರದರ್ಶನಗಳನ್ನು ಪೂರೈಸಿದ ಈ ತಂಡ, ಮೇ 21ರಂದು ಮಲೇಷ್ಯಾದ ಕೌಲಾಲಂಪುರ್ ನಲ್ಲಿ ನಾಟಕವನ್ನು ಪ್ರದರ್ಶಿಸಿದರು.
ಈ ಕಾರ್ಯಕ್ರಮವನ್ನು ಮಲೇಷ್ಯಾ ಕನ್ನಡ ಸಂಘ (ಮ.ಕ.ಸ)ದ ವತಿಯಿಂದ ಏರ್ಪಡಿಸಲಾಗಿತ್ತು. ಮೇ 21ರಂದು ಭಾನುವಾರ ಸಂಜೆ ಕೌಲಾಲಂಪುರದ "ಕಲಾಮಂಡಪಂ, ಬ್ರಿಕ್ಫೀಲ್ಡ್ಸ್" ಸಭಾಂಗಣದಲ್ಲಿ ಈ ನಾಟಕವನ್ನು ಪ್ರದರ್ಶಿಸಲಾಯಿತು. ನೆಚ್ಚಿನ 'ಮುಖಮಂತ್ರಿ'ಯನ್ನು ನೋಡಲು ಜನ ಸಭಾಂಗಣದಲ್ಲಿ ವೀಕ್ಷಕರು ಕಿಕ್ಕಿರಿದು ತುಂಬಿದ್ದರು.[ಸರ್ವಕಾಲಕ್ಕೂ ಸಲ್ಲುವ 'ಮುಖ್ಯಮಂತ್ರಿ'ಗೊಂದು ಸಲಾಂ!]
ಕಾರ್ಯಕ್ರಮದ ನಿರೂಪಣೆಯನ್ನು ಹೊತ್ತ ಚಂದ್ರಶೇಕರ್ ಬೀರಣ್ಣ ಅವರು ಕಲ್ಪನಾ ಅವರನ್ನು ಸ್ವಾಗತ ಭಾಷಣಕ್ಕೆ ಆಮಂತ್ರಿಸಿದರು. ಕಲ್ಪನಾ ಅವರು ತಮ್ಮ ಸ್ವಾಗತ ಭಾಷಣದಲ್ಲಿ ಎಲ್ಲಾ ಕಲಾವಿದರು, ಸಭಿಕರನ್ನು ಸ್ವಾಗತಿಸಿದರು.
ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಕನ್ನಡ ಚಿತ್ರರಂಗದ ಯುವ ನಿರ್ದೇಶಕ ಪನ್ನಗ ಭರಣ ದಂಪತಿ, ಡಾ. 'ಮುಖ್ಯಮಂತ್ರಿ' ಚಂದ್ರು ದಂಪತಿ, ಡಾ. ಬಿ ವಿ ರಾಜಾರಾಮ್ ಹಾಗು ಕನ್ನಡ ಸಂಘ ಸಿಂಗಪುರದ ಅಧ್ಯಕ್ಷರಾದ ವಿಜಯರಂಗ ಪ್ರಸಾದ್ ಅವರು ದೀಪ ಬೆಳಗಿ ಕಾರ್ಯಕ್ರಮವನ್ನು ಉದ್ಘಾಟಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಈ ನಾಟಕದಲ್ಲಿ 9 ಪಾತ್ರಗಳನ್ನು ಸ್ಥಳೀಯ ಕಲಾವಿದರು ಸಮರ್ಥವಾಗಿ ನಿರ್ವಹಿಸಿ ಎಲ್ಲರ ಮೆಚ್ಚುಗೆಗೆ ಪಾತ್ರರಾದರು. ಮುಖ್ಯಮಂತ್ರಿ ಪುತ್ರ ಮಾತುಲ್ ಪ್ರಸಾದ್ ಪಾತ್ರಧಾರಿ ಹರಿಪ್ರಸಾದ್, ಶೀತಲ್ ಪ್ರಸಾದ್ ಪಾತ್ರಧಾರಿ ಅರವಿಂದ್ ಹಾಗು ಸೂರ್ಯ ಪ್ರಸಾದ್ ಪಾತ್ರಧಾರಿ ನಂದೀಶ್ ಹಿರೇಮಠ, ಶಿಕ್ಷಣ ಮಂತ್ರಿ ಪ್ರಜಾಪತಿ ಶಿವಡೆ ಪಾತ್ರಧಾರಿ ಮಂಜುನಾಥ್ ಸಾವಕಾರ್, ಗೃಹಮಂತ್ರಿ ಮಹೇಂದ್ರ ವಾಜಪೇಯಿಯಾಗಿ ವಿಶ್ವನಾಥ್ ಕಲ್ಲಿಮನಿ, ಸರಕಾರಿ ಕಾರ್ಯದರ್ಶಿ ಪಾತ್ರಧಾರಿಯಾದ ಗುರುಪ್ರಸಾದ್ ಹಾಗು ವರದಿಗಾರ್ತಿಯಾಗಿ ರಾಜೇಶ್ವರಿ, ದೀಪ್ತಿ ತರುಣ್ ಹಾಗು ಸುಮಂತ್ ಕುಲಕರ್ಣಿ ಮಲೇಷ್ಯಾ ಕನ್ನಡ ಸಂಘದ ಹೆಮ್ಮೆಯ ಸ್ಥಳೀಯ ಕಲಾವಿದರು ತಮ್ಮ ಪಾತ್ರಗಳನ್ನು ಅಚ್ಚುಕಟ್ಟಾಗಿ ನಿಭಾಯಿಸಿದರು.[ಸಿಂಗನ್ನಡಿಗರೂ ಬಣ್ಣ ಹಚ್ಚುವಂತೆ ಮಾಡಿದ 'ಮುಖ್ಯಮಂತ್ರಿ']
ಈ ನಾಟಕವನ್ನು ಮಲೇಷ್ಯಾ ಕನ್ನಡಿಗರಿಗೆ ತಲುಪಿಸಲು ಸಹಾಯ ನೀಡಿ ಕಾರ್ಯಕ್ರಮವನ್ನು ಪ್ರಾಯೋಜಿಸಿದವರು ಬೆಂಗಳೂರಿನ ಪ್ರತಿಷ್ಠಿತ ಪರಿಸರ ಸ್ನೇಹಿ ನಿರ್ಮಾಣ ಸಂಸ್ಥೆಯಾದ "ಐಕಾನ್ ಹೋಮ್ಸ್" ಇವರ ಪ್ರತಿನಿಧಿಯಾಗಿ ಸ್ಮಿತಾ, ಬಿ.ಎಫ್.ಸಿ ಎಕ್ಸ್ಚೇಂಜ್ ಮಲೇಷ್ಯಾದ ಪ್ರತಿನಿಧಿ, ಕರ್ನಾಟಕದ ಪ್ರತಿಷ್ಠಿತ ಉಪಹಾರ ಗೃಹ ಮಾವಳ್ಳಿ ಟಿಫನ್ ರೂಂ(ಎಂ.ಟಿ.ಅರ್)ನ ನಿರ್ದೇಶಕರಾದ ಅರವಿಂದ್, ಮಲಬಾರ್ ಗೋಲ್ಡ್ ಅಂಡ್ ಡೈಮಂಡ್ಸ್ ನ ಪ್ರತಿನಿಧಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಕಾರ್ಯಕ್ರಮ ಕೊನೆಗೊಳ್ಳುವ ಮೊದಲು "ಕಲಾಗಂಗೋತ್ರಿ" ತಂಡವು ಸ್ಥಳೀಯ ಕಲಾವಿದರಿಗೆ ಪ್ರಶಂಸಾಪತ್ರ ಹಾಗು ನೆನಪಿನ ಕಾಣಿಕೆಗಳನ್ನು ನೀಡಿ ಗೌರವಿಸಿತು. ಅಂತೆಯೇ ಕಾರ್ಯಕಾರಿ ಮಂಡಳಿಯ ಸದಸ್ಯರನ್ನು ವೇದಿಕೆಯ ಮೇಲೆ ಆಹ್ವಾನಿಸಿ ನೆನಪಿನ ಕಾಣಿಕೆಗಳನ್ನು ನೀಡಿ, ಅವರ ಕನ್ನಡ ಸೇವೆಯನ್ನು ಶ್ಲಾಘಿಸಿ ಗೌರವಿಸಿತು. ಮಲೇಷ್ಯಾ ಕನ್ನಡ ಸಂಘದ ವತಿಯಿಂದ ಎಲ್ಲಾ ಕಲಾವಿದರಿಗೆ ನೆನಪಿನ ಕಾಣಿಕೆಗಳನ್ನು ಕೊಟ್ಟು ಗೌರವಿಸಲಾಯಿತು.[ಕನ್ನಡ ಸಂಘ (ಸಿಂಗಪುರ)ದ 'ಸಿಂಗಾರ' ಪತ್ರಿಕೆಯ ಬಿಡುಗಡೆ]
ಕೊನೆಯಲ್ಲಿ ಮ.ಕ.ಸ.ದ ಸಮಿತಿ ಸದಸ್ಯರಾದ ನಾಗೇಂದ್ರ ಲೋಲಿ ಅವರು, ವಿಜಯ್ ರಂಗ ಪ್ರಸಾದ್, ಪನ್ನಾಗ ಭರಣ, ಕಲಾಗಂಗೋತ್ರಿಯ ತಂಡದ 14 ನುರಿತ ಕಲಾವಿದರು ಹಾಗು ಈ ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ಶ್ರಮಪಟ್ಟ ಎಲ್ಲಾ ಸಮಿತಿ ಸದಸ್ಯರು ಹಾಗು ಸ್ವಯಂಸೇವಕರು ಹಾಗು ದೊಡ್ಡ ಸಂಖ್ಯೆಯಲ್ಲಿ ಬಂದು ನಾಟಕವನ್ನು ನೋಡಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ಸಹಕರಿಸಿದ ಎಲ್ಲಾ ಮಲೇಷ್ಯಾ ಕನ್ನಡಿಗರಿಗೆ ಮ.ಕ.ಸದ ಪರವಾಗಿ ಧನ್ಯವಾದ ಹೇಳುವ ಮೂಲಕ ಕಾರ್ಯಕ್ರಮಕ್ಕೆ ತೆರೆ ಎಳೆದರು.
ಮುಖ್ಯಮಂತ್ರಿ ನಾಟಕದ 610ನೇ ಪ್ರದರ್ಶನ ಕಾರ್ಯಕ್ರಮವು ಮಲೇಷ್ಯಾ ಕನ್ನಡ ಸಂಘವು ಇತ್ತೀಚಿನ ದಿನಗಳಲ್ಲಿ ಆಯೋಜಿಸಿದ್ದ ಅತ್ಯಂತ ದೊಡ್ಡ ಕಾರ್ಯಕ್ರಮ. ಹೆಚ್ಚು ಯುವ ಜನಗಳಿಂದ ಕೂಡಿರುವ ಮಲೇಷ್ಯಾ ಕನ್ನಡ ಸಂಘವು ಈ ಕಾರ್ಯಕ್ರಮದ ಯಸಸ್ಸಿನ ಹಿನ್ನೆಲೆಯಲ್ಲಿ ಮುಂಬರುವ ದಿನಗಳಲ್ಲಿ ಈ ರೀತಿಯ ದೊಡ್ಡ ಕಾರ್ಯಕ್ರಮಗಳನ್ನು ಕೈಗೊಳ್ಳುವ ಉತ್ಸಾಹದಲ್ಲಿದೆ.
ಈ ಕಾರ್ಯಕ್ರಮವನ್ನು ಆಯೋಜಿಸಲು ಮೊದಲಿಂದಲೂ ಪ್ರೇರೇಪಿಸಿದ ಹಾಗು ಎಲ್ಲಾ ತರಹದ ಸಹಕಾರ ನೀಡಿದ ಕನ್ನಡ ಸಂಘ ಸಿಂಗಪುರದ ಅಧ್ಯಕ್ಷರಾದ ವಿಜಯರಂಗ ಪ್ರಸಾದ್ ಅವರಿಗೆ ಎಲ್ಲಾ ಮಲೇಷ್ಯಾ ಕನ್ನಡಿಗರ ಪರವಾಗಿ ತುಂಬು ಹೃದಯದ ಧನ್ಯವಾದಗಳನ್ನು ತಿಳಿಸಲು ಮಲೇಷ್ಯಾ ಕನ್ನಡ ಸಂಘ ಇಚ್ಛಿಸುತ್ತದೆ.