ಅನಂತ್ ನಾಗ್ ಗೆ ಕತಾರ್ ಕನ್ನಡಿಗರಿಂದ 'ಕಲಾಭಿನವ ರತ್ನ' ಬಿರುದು
ದೋಹಾ ಕತಾರ್ ನ ಸಾಂಸ್ಕೃತಿಕ ಸಂಘಗಳಲ್ಲಿ ಒಂದಾದ ಕರ್ನಾಟಕ ಸಂಘ ಕತಾರ್, ಈ ಬಾರಿಯ ವಸಂತೋತ್ಸವ ಕಾರ್ಯಕ್ರಮವನ್ನು ಏಪ್ರಿಲ್ 27ರಂದು ಅದ್ದೂರಿಯಾಗಿ ಡಿಪಿಎಸ್ ಶಾಲೆಯ ಸಭಾಂಗಣದಲ್ಲಿ ಹಮ್ಮಿಕೊಂಡಿತ್ತು.
ಈ ಬಾರಿಯ ಕಾರ್ಯಕ್ರಮಕ್ಕೆ ಮುಖ್ಯ ಅಥಿತಿಗಳಾಗಿ ಕತಾರ್ ನ ಭಾರತೀಯ ರಾಯಭಾರಿ ಕಚೇರಿಯಲ್ಲಿ ಮೂರನೇ ವಾಣಿಜ್ಯ ಕಾರ್ಯದರ್ಶಿ ಆಗಿ ಕಾರ್ಯ ನಿರ್ವಹಿಸುತ್ತಿರುವ ಶೃತಿ ಪುರುಷೋತ್ತಮ್ ಅವರು ಆಗಮಿಸಿದ್ದರು.
ಗಿರಿಜಾ ಲೋಕೇಶ್ ಅವರಿಗೆ ಪ್ರತಿಷ್ಠಿತ 'ಧ್ವನಿ' ಪ್ರಶಸ್ತಿ
ಕಾರ್ಯಕ್ರಮಕ್ಕೆ ಮೆರಗು ನೀಡಲು, ಗೌರವಾನ್ವಿತ ಅತಿಥಿಗಳಾಗಿ ಕರ್ನಾಟಕ ಹಾಗೂ ಭಾರತೀಯ ಚಿತ್ರರಂಗ ಖ್ಯಾತಿಯ ಸಪ್ತ ಭಾಷಾ ತಾರೆ, ತಮ್ಮ ಸರಳತೆ ಹಾಗೂ ನಟನೆಗೆ ಹೆಸರುವಾಸಿಯಾಗಿರುವ, ಕರ್ನಾಟಕ ರಾಜ್ಯ ಸರ್ಕಾರದಲ್ಲಿ ಮಾಜಿ ಮಂತ್ರಿ ಆಗಿದ್ದ ಅನಂತ್ ನಾಗ್ ಹಾಗೂ ಖ್ಯಾತ ನಟಿ, ಅವರ ಧರ್ಮಪತ್ನಿ ಗಾಯತ್ರಿ ಅನಂತ್ ನಾಗ್ ಅವರು ಪಾಲ್ಗೊಂಡಿದ್ದರು.
ತಮ್ಮ ಭಾಷಣದ ವೇಳೆ ಅನಂತ್ ನಾಗ್ ಅವರು ಕತಾರ್ ಬಗ್ಗೆ ಅವರಿಗೆ ಇದ್ದ ಮಾಹಿತಿ, ಸಂಘದ ಕನ್ನಡ ಶಾಲೆಗೆ ಭೇಟಿ ಹಾಗೂ ಮೆಚ್ಚುಗೆ, ಅವರ ಕನ್ನಡ ಬಗೆಗಿನ ಅಭಿಮಾನ, ತಾವು ಚಿತ್ರರಂಗದಲ್ಲಿ ನಡೆದು ಬಂದ ದಾರಿ ಹಾಗೂ ಅವರ ಮುಂಬರುವ ಚಿತ್ರಗಳ ಬಗ್ಗೆ, ಹಾಗೂ ಕನ್ನಡ ಬಗ್ಗೆ ಬೇಕಾಗಿರುವ ಜಾಗೃತಿ, ಇವೆಲ್ಲವುಗಳ ಬಗ್ಗೆ ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು. ಅವರ ಚಿತ್ರರಂಗ, ನಾಟಕರಂಗ ಹಾಗೂ ಕನ್ನಡ ಸೇವೆಯನ್ನು ಗೌರವಿಸಿ, ಕರ್ನಾಟಕ ಸಂಘ ಕತಾರ್ ಅವರಿಗೆ "ಕಾಲಾಭಿನವ ರತ್ನ" ಬಿರುದನ್ನು ನೀಡಿ ಗೌರವಿಸಿತು.
ಕುವೈತ್ ನಲ್ಲಿ ಬಿಡುಗಡೆಯಾದ ಮೇಷ್ಟ್ರ ಪ್ರವಾಸ ಕಥನ
ಕಾರ್ಯಕ್ರಮದ ರಸ ಸಂಜೆಗೆ ಮೆರಗು ನೀಡಲು, ಕರ್ನಾಟಕದ ಖ್ಯಾತ ಹಿನ್ನೆಲೆ ಗಾಯಕಿ, ಬಹು ಭಾಷಾ ನಟಿ, ಫಿಲ್ಮ್ ಫೇರ್ ಪ್ರಶಸ್ತಿ ವಿಜೇತೆ ಅನನ್ಯ ಭಟ್ ಅವರಿಂದ ಸಂಗೀತ ಕಾರ್ಯಕ್ರಮ ಆಯೋಜಿಸಲಾಗಿತ್ತು. ಅದರ ಜೊತೆಗೆ, ಅಂತಾರಾಷ್ಟ್ರೀಯ ಖ್ಯಾತಿಯ ಕಲಾ ತಂಡ ಗಣೇಶ್ ಗೋವಿಂದಸ್ವಾಮಿ ಸಾರಥ್ಯದ "ಬೀಟ್ ಗುರುಸ್" ಅವರು ಭಾರತೀಯ, ಆಫ್ರಿಕಾ ಹಾಗೂ ವಿವಿಧ ದೇಶಗಳ ವಿಶಿಷ್ಟ ವಾದ್ಯ ಗೋಷ್ಠಿ ನಡೆಸಿ ಸಭಾಂಗಣದಲ್ಲಿ ನೆರೆದಿದ್ದ ಕನ್ನಡ ಅಭಿಮಾನಿಗಳನ್ನು ರಂಜಿಸಿದರು. ಇವೆಲ್ಲದರ ಜೊತೆಗೆ ಸಂಘದ ಸದಸ್ಯರು ಅನಂತ್ ನಾಗ್ ಅವರ ಚಲನಚಿತ್ರದ ಹಾಡುಗಳನ್ನು ಪೋಣಿಸಿ ನೃತ್ಯದ ಮೂಲಕ ಅವರಿಗೆ ಗೌರವ ಸಲ್ಲಿಸಿದರು.
ಕರ್ನಾಟಕ ಸಂಘ ಕತಾರ್ ನ ಅಧ್ಯಕ್ಷರಾದ ವೆಂಕಟ ರಾವ್ ಅವರು ಸ್ವಾಗತ ಭಾಷಣದ ಮೂಲಕ ಸಭೆಯಲ್ಲಿ ನೆರೆದಿದ್ದ ಎಲ್ಲರಿಗೂ ಸ್ವಾಗತ ಕೋರಿದರು. ಕಾರ್ಯಕ್ರಮಕ್ಕೆ ಮುಖ್ಯ ನಿರೂಪಕರಾಗಿ ಭಾರತದ ಕಡಲ ತೀರಿದ ನಗರಿ ಉಳ್ಳಾಲ್ ದಿಂದ ಆಗಮಿಸಿದ ಅರುಣ್ ಉಳ್ಳಾಲ್ ಅವರು ತಮ್ಮ ಕನ್ನಡ ನಿರೂಪಣೆಗೆ ಪ್ರೇಕ್ಷಕರಿಂದ ಮೆಚ್ಚುಗೆ ಪಡೆದರು.
ಕಾರ್ಯಕ್ರಮದಲ್ಲಿ ಕತಾರ್ ನ ಹಲವಾರು ಸಂಘ ಸಂಸ್ಥೆಗಳ ಅಧ್ಯಕ್ಷರು ಹಾಗೂ ಕಾರ್ಯದರ್ಶಿಗಳು ಪಾಲ್ಗೊಂಡಿದ್ದು ವಿಶೇಷ. ಇದೆ ರೀತಿ ಮುಂಬರುವ ದಿನಗಳಲ್ಲಿ ಇನ್ನೂ ಹೆಚ್ಚು ಕಾರ್ಯಕ್ರಮಗಳನ್ನು ಆಯೋಜಿಸಲು ಕರ್ನಾಟಕ ಸಂಘ ಯೋಚಿಸುತ್ತಿದೆ ಎಂದು ಸಂಘದ ಅಧ್ಯಕ್ಷರು ತಿಳಿಸಿದ್ದಾರೆ.