ಸಿಂಗಪುರದಲ್ಲಿ ಶ್ರೀ ಸುಗುಣೇಂದ್ರ ತೀರ್ಥರೊಂದಿಗೆ ಸಂವಾದ
ಸೀಮೋಲ್ಲಂಘನ ಮಾಡಿರುವ ಏಕೈಕ ದ್ವೈತ ಸಿದ್ಧಾಂತ ಮಠಾಧಿಪತಿಗಳೆಂದು ಹೆಸರುವಾಸಿಯಾಗಿರುವ ಪುತ್ತಿಗೆ ಶ್ರೀಗಳಾದ ಸುಗುಣೇಂದ್ರ ತೀರ್ಥ ಸ್ವಾಮೀಜಿಯೊಂದಿಗೆ ಸಂವಾದ ಕಾರ್ಯಕ್ರಮವನ್ನು ಕನ್ನಡ ಸಂಘ (ಸಿಂಗಪುರ) ಅಕ್ಟೋಬರ್ 28, ಶನಿವಾರ ಹಮ್ಮಿಕೊಂಡಿದೆ.
'ಇಂದಿನ ಯುವ ಪೀಳಿಗೆಗೆ ಸಾಂಪ್ರದಾಯಿಕ ಮೌಲ್ಯಗಳ ಪ್ರಸ್ತುತತೆ' ಎಂಬ ವಿಷಯ ಕುರಿತು ಶ್ರೀ ಸುಗುಣೇಂದ್ರ ತೀರ್ಥ ಸ್ವಾಮೀಜಿಯೊಂದಿಗೆ ಸಂವಾದ ನಡೆಯಲಿದೆ. ಸಿಂಗಪುರದ ಬೀಟಿ ರಸ್ತೆಯಲ್ಲಿರುವ ಎಸ್ಐಎನ್ಡಿಎ ಸಭಾಂಗಣದಲ್ಲಿ ಈ ಸಂವಾದವನ್ನು ಸಂಜೆ 5 ಗಂಟೆಗೆ ಆಯೋಜಿಸಲಾಗಿದೆ.
ಇದರಲ್ಲಿ ಭಾಗವಹಿಸಲಿಚ್ಛಿಸುವವರು ಉಚಿತವಾಗಿ ನೋಂದಾಯಿಸಿಕೊಳ್ಳಬಹುದಾಗಿದೆ. ಜೊತೆಗೆ ಶ್ರೀ ಸುಗುಣೇಂದ್ರ ತೀರ್ಥರಿಂದ ಆಶೀರ್ವಚನ ಮತ್ತು ಆಶೀರ್ವಾದವನ್ನು ಕೂಡ ಪಡೆಯುವ ಭಾಗ್ಯ ಭಾಗವಹಿಸುವವರಿಗೆ ಲಭಿಸಲಿದೆ. ಯುವ ಪೀಳಿಗೆಗಾಗಿಯೇ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.
ಇನ್ನೊಂದು ಭರ್ಜರಿ ಕಾರ್ಯಕ್ರಮ ಸಿಂಗಪುರದಲ್ಲಿ ಸಿಂಗನ್ನಡಿಗರಿಗಾಗಿ ಕಾದು ಕುಳಿತಿದೆ. ಅದು, ಕನ್ನಡ ಚಲನಚಿತ್ರ ರಂಗದ ಖ್ಯಾತ ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಅವರ ಲೈವ್ ರಸಸಂಜೆ ಕಾರ್ಯಕ್ರಮ. ಇದು ನವೆಂಬರ್ 7, ಭಾನುವಾರದಂದು ಸಿಂಗಪುರ ಪಾಲಿಟೆಕ್ನಿಕ್ ಕನ್ವೆನ್ಷನ್ ಹಾಲ್ ನಲ್ಲಿ ಆಯೋಜಿಸಲಾಗಿದೆ. ಈ ಕಾರ್ಯಕ್ರಮಕ್ಕೆ ಮುಂಗಡವಾಗಿ ಟಿಕೆಟ್ ಖರೀದಿಸಬೇಕಾಗುತ್ತದೆ.
ಇವುಗಳ ಜೊತೆಗೆ, ಕನ್ನಡ ಸಂಘ (ಸಿಂಗಪುರ) 6ನೇ ಸಿಂಚನ ಕನ್ನಡ ಸಾಹಿತ್ಯ ಸ್ಪರ್ಧೆಯನ್ನು ಹಮ್ಮಿಕೊಂಡಿದ್ದು, ಸೃಜನಶೀಲ ಕನ್ನಡಿಗರಿಂದ ಕಥೆ, ಕವನಗಳನ್ನು ಆಹ್ವಾನಿಸಿದೆ. ಆಸಕ್ತರು ಅಕ್ಟೋಬರ್ 25ರೊಳಗೆ ತಮ್ಮ ಕಥೆ ಅಥವಾ ಕವನವನ್ನು ಕಳಿಸಬಹುದಾಗಿದೆ.
ಕಳೆದ ವರ್ಷ ಅಕ್ಟೋಬರ್ 28ರಂದು ದೀಪಾವಳಿಯ ದಿನ ಕನ್ನಡ ಸಂಘ ಸಿಂಗಪುರ ತನ್ನ 20ನೇ ವಾರ್ಷಿಕೋತ್ಸವ 'ಸಿಂಗಾರ ಸಾಂಸ್ಕೃತಿಕ ಸಮ್ಮೇಳನ'ವನ್ನು ಅದ್ದೂರಿಯಾಗಿ ಆಚರಿಸಿತ್ತು. ಎರಡು ದಿನಗಳ ಕಾಲ ನಡೆದಿದ್ದ ಸಮ್ಮೇಳನದಲ್ಲಿ ಕಾದಂಬರಿಕಾರ ಎಸ್ಎಲ್ ಭೈರಪ್ಪ, ಸ್ಟಾಂಡಪ್ ಕಾಮಿಡಿಯನ್ ಪ್ರೊ. ಕೃಷ್ಣೇಗೌಡ ಮುಂತಾದವರು ಭಾಗವಹಿಸಿದ್ದರು.