ಶಿವಪ್ರಕಾಶ್ ಅವರಿಗೆ 'ಧ್ವನಿ ಶ್ರೀರಂಗ' ಪ್ರಶಸ್ತಿ ಪ್ರದಾನ
ದುಬೈ, ಅ. 6 : ಧ್ವನಿ ಪ್ರತಿಷ್ಠಾನದ 29ನೇ ವಾರ್ಷಿಕೋತ್ಸವದ ಸಂದರ್ಭದಲ್ಲಿ ಏಳನೇ ವರ್ಷದ "ಧ್ವನಿ ಶ್ರೀರಂಗ" ಅಂತಾರಾಷ್ಟ್ರೀಯ ರಂಗ ಪ್ರಶಸ್ತಿಯನ್ನು ಪ್ರಖ್ಯಾತ ನಾಟಕಗಾರ ಹಾಗೂ ಸಾಹಿತಿ ಪ್ರೊ. ಎಚ್.ಎಸ್. ಶಿವಪ್ರಕಾಶ್ ಅವರಿಗೆ ಪ್ರದಾನ ಮಾಡಲಾಯಿತು.
ಮುಖ್ಯ ಅತಿಥಿ- ಯುವ ಉದ್ಯಮಿ ಸತೀಶ್ ವೆಂಕಟರಮಣ ಮತ್ತು ಪ್ರತಿಷ್ಠಾನದ ಅಧ್ಯಕ್ಷ ಪ್ರಕಾಶ್ ರಾವ್ ಪಯ್ಯಾರ್ ಅವರು ಇತರ ಗಣ್ಯರ ಉಪಸ್ಥಿತಿಯಲ್ಲಿ ಪ್ರಶಸ್ತಿ ಪ್ರದಾನ ಗೈದರು. ಪ್ರಶಸ್ತಿಯು ಸ್ಮರಣಿಕೆ, ಪ್ರಶಸ್ತಿ ಫಲಕ, ಇಪ್ಪತೈದು ಸಾವಿರ ನಗದು ರು. ಮತ್ತು ದುಬೈಯ ಪ್ರಯಾಣ ವೆಚ್ಚವನ್ನು ಒಳಗೊಂಡಿದೆ.
ಪ್ರಶಸ್ತಿ ಸ್ವೀಕರಿಸಿದ ಶಿವಪ್ರಕಾಶ್ ಅವರು, ವಿದೇಶಿ ನೆಲದಲ್ಲಿ ಸತತವಾಗಿ ಕನ್ನಡ ಚಟುವಟಿಕೆ ನಡೆಸುತ್ತಾ ಬಂದಿರುವ ಧ್ವನಿ ಪ್ರತಿಷ್ಠಾನ ಕಳೆದ ಏಳು ವರ್ಷಗಳಿಂದ ಕನ್ನಡ ರಂಗಕರ್ಮಿಗಳನ್ನು ಗುರುತಿಸಿ ದುಬೈಗೆ ಆಹ್ವಾನಿಸಿ ಪ್ರಶಸ್ತಿ ನೀಡಿ ಗೌರವಿಸುವ ಕಾರ್ಯವನ್ನು ಶ್ಲಾಘಿಸಿದರು.
ಅತಿಥಿಗಳು ದೀಪ ಬೆಳಗುವುದರೊಂದಿಗೆ ಕಾರ್ಯಕ್ರಮವು ಪ್ರಾರಂಭಗೊಂಡಿತು. ವೇದಿಕೆಯಲ್ಲಿ ಗೌರವ ಅತಿಥಿಗಳಾದ ಹರೀಶ್ ಶೇರಿಗಾರ್ (ಅಕ್ಮೆ ಬಿಲ್ಡಿಂಗ್ ಮೆಟಿರಿಯಲ್ಸ್), ರಾಮಚಂದ್ರ ಹೆಗ್ಡೆ (ಸ್ಪ್ರೇಟೆಕ್), ಶೇಕರ್ ಬಿ.ಶೆಟ್ಟಿ (ಅರಬ್ ಉಡುಪಿ), ಸರ್ವೋತ್ತಮ ಶೆಟ್ಟಿ (ಅಧ್ಯಕ್ಷ ಅಬುಧಾಬಿ ಕರ್ನಾಟಕ ಸಂಘ), ಗಣೇಶ್ ರೈ, ವರ್ಣ ಕಲಾವಿಧ ಮಧುಸೂದನ್ ಕುಮಾರ್, ಪದ್ಮರಾಜ್ ಎಕ್ಕಾರ್ ಅವರು ಉಪಸ್ಥಿತರಿದ್ದರು.
ಮುರ್ಗೆಶ್ ಗಾಜರೆ ಅತಿಥಿಗಳನ್ನು ಪರಿಚಯಿಸಿದರು, ಸುದರ್ಶನ್ ಹೆಗ್ಡೆ ಕಾರ್ಯಕ್ರಮ ನಿರ್ವಹಣೆ ಮಾಡಿದ್ದು ಜಯಂತ್ ಶೆಟ್ಟಿ ವಂದಿಸಿದರು. ಇದೆ ಸಂದರ್ಭದಲ್ಲಿ ಜಯಂತ್ ಕಾಯ್ಕಿಣಿ ಅವರ 'ಇತಿ ನಿನ್ನ ಅಮೃತಾ' ನಾಟಕವನ್ನು ಪ್ರಕಾಶ್ ರಾವ್ ಪಯ್ಯಾರ್ ಅವರ ನಿರ್ದೇಶನದಲ್ಲಿ ಯಶಸ್ವಿಯಾಗಿ ರಂಗವೇರಿಸಲಾಯಿತು. ಗೋಪಿಕಾ ಮಯ್ಯ ಮತ್ತು ಪ್ರಭಾಕರ್ ಕಾಮತ್ ತಮ್ಮ ಪ್ರೌಢ ಅಭಿನಯನದಿಂದ ಪ್ರೇಕ್ಷಕರ ಮನ ಸೆಳೆದರು.