ಧ್ವನಿ 'ಶ್ರೀರಂಗ' ರಂಗ ಪ್ರಶಸ್ತಿಗೆ ಗಿರಿಜಾ ಲೋಕೇಶ್ ಆಯ್ಕೆ
ಧ್ವನಿ ಪ್ರತಿಷ್ಠಾನ ಕನ್ನಡ ರಂಗಭೂಮಿಯಲ್ಲಿ ಸೇವೆಗೈಯುವವರನ್ನು ಗುರುತಿಸಿ ಕಳೆದ ಒಂದು ದಶಕ ಗಳಿಂದ ನೀಡುತ್ತಾ ಬರುತ್ತಿರುವ "ಧ್ವನಿ ಶ್ರೀರಂಗ" ಅಂತಾರಾಷ್ಟ್ರೀಯ ರಂಗ ಪ್ರಶಸ್ತಿಗೆ ಖ್ಯಾತ ಕನ್ನಡ ಚಲನಚಿತ್ರ ನಟಿ, ರಂಗಕರ್ಮಿ ಗಿರಿಜಾ ಲೋಕೇಶ್ ಅವರು ಅಯ್ಕೆಯಾಗಿದ್ದಾರೆ.
ಆದ್ಯ ರಂಗಾಚಾರ್ಯರ ನೆನಪಿನಲ್ಲಿ ಅಂತಾರಾಷ್ಟ್ರೀಯ ನೆಲೆಯಲ್ಲಿ ಕೊಡಮಾಡುವ ರಂಗ ಪ್ರಶಸ್ತಿಗೆ ಈ ತನಕ ಬಿ.ಜಯಶ್ರೀ, ಟಿ.ಎಸ್.ನಾಗಭರಣ, ಶ್ರೀನಿವಾಸ ಕಪ್ಪಣ್ಣ, ಮುಖ್ಯಮಂತ್ರಿ ಚಂದ್ರು, ಡಾ. ಎಚ್.ಎಸ್. ಶಿವಪ್ರಕಾಶ್, ಉಮಾಶ್ರೀ, ಡಾ. ನಾ.ದಾ.ಶೆಟ್ಟಿ ಮುಂತಾದವರು ಭಾಜನರಾಗಿದ್ದಾರೆ.
ಪ್ರಶಸ್ತಿಯನ್ನು ದುಬೈನ ಏಮೇರೆಟ್ಸ್ ಥಿಯೇಟರ್ ನಲ್ಲಿ 2017ರ ಅಕ್ಟೋಬರ್ 6ರ ಶುಕ್ರವಾರ ಸಂಜೆ ಪ್ರದಾನ ಮಾಡಲಾಗುವುದು. ಇದೇ ಸಂದರ್ಭದಲ್ಲಿ ಕೀರ್ತಿನಾಥ ಕುರ್ತಕೋಟಿ ಅವರ "ಸ್ವಪ್ನವಾಸವದತ್ತೆ" ನಾಟಕವನ್ನು ಕವಿ, ನಾಟಕ ರಚನೆಕಾರ ಪ್ರಕಾಶ್ ರಾವ್ ಪಯ್ಯಾರ್ ಅವರ ನಿರ್ದೇಶನದಲ್ಲಿ ಪ್ರದರ್ಶಿಸಲಾಗುತ್ತಿದೆ.
ಪ್ರಭಾಕರ ಕಾಮತ್, ವಿದುಷಿ ಸ್ವಪ್ನ ಕಿರಣ್, ಆರತಿ ಅಡಿಗ ಮುಖ್ಯ ಭೂಮಿಕೆಯಲ್ಲಿರುವ ಈ ನಾಟಕದಲ್ಲಿ ಸುಮಾರು ಮೂವತ್ತಕ್ಕೂ ಹೆಚ್ಚು ಕಲಾವಿದರು ಬಣ್ಣ ಹಚ್ಚಲಿದ್ದಾರೆ. ನಾಟಕಕ್ಕೆ ಪ್ರವೇಶ ಉಚಿತವಾಗಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಕನ್ನಡಿಗರು ಅಗಮಿಸಬೇಕಾಗಿ ಆಯೋಜಕರು ವಿನಂತಿಸಿಕೊಂಡಿದ್ದಾರೆ.