ಅದ್ದೂರಿ ಗಣೇಶೋತ್ಸವ ಮತ್ತು ಸಾಹಿತ್ಯ ಬೃಂದಾವನ
ಅಮೆರಿಕಾ ನ್ಯೂ ಜೆರ್ಸಿಯ ಪ್ರತಿಷ್ಠಿತ ಕನ್ನಡ ಸಂಘ ಬೃಂದಾವನ ಕನ್ನಡ ಕೂಟದ, ಅಭಿಮಾನಿ ತಂಡದಿಂದ 'ಗಣೇಶೋತ್ಸವ ಮತ್ತು ಸಾಹಿತ್ಯ ಬೃಂದಾವನ' ಕಾರ್ಯಕ್ರಮವನ್ನು ಸೆಪ್ಟೆಂಬರ್ 23, ಶನಿವಾರದಂದು ಅತ್ಯಂತ ಸುಸಜ್ಜಿತವಾದ ಹೈಟ್ಸ್ ಟೌನ್ ಹೈ ಸ್ಕೊಲ್ ಸಭಾಂಗಣದಲ್ಲಿ ಅದ್ದೂರಿಯಾಗಿ ಆಯೋಜಿಸಲಾಗಿತ್ತು.
ಮಧ್ಯಾಹ್ನದ 1.30ರಿಂದ ರಾತ್ರಿ 9 ಘಂಟೆಯವರೆಗೆ ಅತ್ಯಂತ ಅಚ್ಚುಕಟ್ಟಾಗಿ ಮತ್ತು ವಿಜೃಂಭಣೆಯಿಂದ, ತುಂಬ ಅರ್ಥಗರ್ಭಿತವಾಗಿ ಈ ಕಾರ್ಯಕ್ರಮಗಳನ್ನು ಪ್ರಸ್ತುತಪಡಿಸಲಾಯಿತು. ತಬಲಾ ನಾಣಿಯವರ ಹಾಸ್ಯ ಕಾರ್ಯಕ್ರಮ, ಸುಧಾ ಬರಗೂರ್ ಅವರು ಮಾತಿನ ಓಘ ಅಮೋಘವಾಗಿದ್ದವು.
ಬಹ್ರೇನ್ ಕನ್ನಡಿಗರಿಂದ ನಾರಾಯಣ ಗುರು ಜಯಂತಿ
ಎಲ್ಲಕ್ಕಿಂತ ಮೊದಲು ಡಾ। ಎಂ. ಜಿ ಪ್ರಸಾದ್ ಮತ್ತು ಡಾ। ಬಸವರಾಜ್ ಹಿರೇಮಠ್ ರವರ ನೇತೃತ್ವದಲ್ಲಿ ಮಕ್ಕಳ ಕೈಯಲ್ಲೇ ಗಜಾನನ ಮುದ್ದಾದ ಮೂರ್ತಿಗಳನ್ನು ಮಾಡಿಸಿ, ಗಣೇಶ ಹಬ್ಬದ ವೈಶಿಷ್ಟ್ಯತೆ, ಆಚರಣೆ ಮತ್ತು ಹಿನ್ನಲೆ ವಿವರಿಸಿ ಮಕ್ಕಳಿಂದಲೇ ಪೂಜೆ ಮಾಡಿಸಲಾಯಿತು. ಮಕ್ಕಳು ಕೂಡ ಅಷ್ಟೇ ಶ್ರದ್ಧೆಯಿಂದ ಭಾಗಿಯಾದರು.
ಅಮೆರಿಕದಲ್ಲಿ ಕಣ್ಣಿಗೆ ಹಬ್ಬ ತಂದ ನವರಾತ್ರಿ ಬೊಂಬೆ
ಜೊತೆಗೆ ಬದುಕು ಜಟಕಾ ಬಂಡಿ ಎಂಬ ಅನುಭವಗಳ ಕಥನವಿರುವ ಪುಸ್ತಕದ ಬಿಡುಗಡೆ, ತರಂಗ ತಂಡದಿಂದ ಫ್ಯೂಷನ್ ವಾದ್ಯಗೋಷ್ಠಿ, ಅಮೆರಿಕಕ್ಕೆ ಭಾರೀ ನಷ್ಟ ತಂದ ಚಂಡಮಾರುತ ಸಂತ್ರಸ್ತರಿಗಾಗಿ ದೇಣಿಗೆ ಸಂಗ್ರಹ ಇಡೀ ದಿನದ ಕಾರ್ಯಕ್ರಮಕ್ಕೆ ಸಾರ್ಥಕ ಭಾವ ಮೂಡಿಸಿದವು.
ರಂಗ ವರ್ತುಲದಿಂದ 'ವೇಷ' ನಾಟಕ ಪ್ರದರ್ಶನ
ರಂಗ ವರ್ತುಲ ತಂಡದಿಂದ ಪ್ರಶಸ್ತಿ ವಿಜೇತ ನಾಟಕ 'ವೇಷ'ವನ್ನು ಪ್ರದರ್ಶಿಸಲಾಯಿತು. ಇದೊಂದು ಭಿನ್ನ ಪ್ರಯೋಗ, ಕೇವಲ ಎರಡು ಪಾತ್ರಗಳನ್ನೊಂಡ ಈ ನಾಟಕ, ನಿತೀಶ್ ಮತ್ತು ದೀಪ್ತಿ ಅವರ ಪ್ರೌಢ ಅಭಿನಯದೊಂದಿಗೆ ಒಂದು ಘಂಟೆಗೂ ಹೆಚ್ಚು ಕಾಲ ಪ್ರೇಕ್ಷಕರನ್ನು ಹಿಡಿದಿಟ್ಟುಕೊಳ್ಳುವಲ್ಲಿ ಯಶಸ್ವಿಯಾಯಿತು. ಯಕ್ಷರಂಗದ ವೇಷ ಧರಿಸುವ, ಕಳಚುವ ಪಾತ್ರದಾರಿ, ಅವನ ಆಂತರಿಕ ಸಂಘರ್ಷ, ಜಿಜ್ಞಾಸೆ ಮತ್ತು ದ್ವಂದ್ವ, ಮನುಷ್ಯನ ನಿಜಜೀವನ ಮನಸ್ಥಿತಿಗೆ ಹಿಡಿದ ಕನ್ನಡಿಯಂತಿತ್ತು.
ನಕ್ಕು ನಗಿಸಿದ ತಬಲಾ ನಾಣಿ ಮತ್ತು ತಂಡ
ತಬಲಾ ನಾಣಿ ಹಾಗು ತಂಡದಿಂದ ನಕ್ಕು ನಗಿಸುವ ಹಾಸ್ಯ ಕಾರ್ಯಕ್ರಮ 'ಹಾಸ್ಯ ರಂಜನಿ' ಅಮೋಘವಾಗಿತ್ತು. ಅವರ ಸರಳ ವ್ಯಕ್ತಿತ್ವ ಅವರ ಕಾರ್ಯಕ್ರಮದಷ್ಟೇ ಅದ್ಭುತವಾಗಿತ್ತು. ಹಾಗೆಯೇ ತಬಲಾ ನಾಣಿಯವರ ಸುಪುತ್ರಿ ಕುಮಾರಿ ಕನ್ನಡದ ಸುಮಧುರ ಚಿತ್ರಗೀತೆಗಳನ್ನು ಸುಶ್ರಾವ್ಯವಾಗಿ ಹಾಡಿ ಕೇಳುಗರನ್ನು ಮಂತ್ರಮುಗ್ಧಗೊಳಿಸಿದರು.
ಹೆಮ್ಮೆಯ ಪುಸ್ತಕ ಬದುಕು ಜಟಕಾ ಬಂಡಿ
'ಬದುಕು ಜಟಕಾ ಬಂಡಿ' ಪುಸ್ತಕ ಬೃಂದಾವನದ ಹೆಮ್ಮೆಯ ಪ್ರಕಾಶನ. ಸುಪ್ರಸಿದ್ದ ಕವಿ, ದಾರ್ಶನಿಕ ಡಿ.ವಿ.ಜಿ.ಯವರ ನುಡಿಯಂತೆ ಇದು ಜೀವನದ ಅನುಭವಗಳ ಸರಮಾಲೆ. ನಲವತ್ತಕ್ಕೂ ಹೆಚ್ಚು ಅನಿವಾಸಿ ಲೇಖಕರ ಅನುಭವಗಳನ್ನೊಳಗೊಂಡ ಸಂಕಲನ. ಈ ಪುಸ್ತಕಕ್ಕೆ ಕನ್ನಡದ ಸಹೃದಯಿ, ನಿತ್ಯೋತ್ಸವ ಕವಿ ಡಾ|| ನಿಸ್ಸಾರ್ ಅಹ್ಮದ್ ಪ್ರೋತ್ಸಾಹದ ಮಾತುಗಳೊಂದಿಗೆ ಮುನ್ನುಡಿ ಬರೆದಿದ್ದಾರೆ. ಈ ಸುಸಂದರ್ಭದಲ್ಲಿ ಎಲ್ಲಾ ಲೇಖಕರನ್ನು ವೇದಿಕೆಯ ಮೇಲೆ ಬರಮಾಡಿಕೊಂಡು ಸುಧಾ ಬರಗೂರ್ ಪುಸ್ತಕ ಬಿಡುಗಡೆ ಮಾಡಿದರು.
ಸುಧಾ ಬರಗೂರ್ ಹಾಸ್ಯದ ಹೊನಲು
ಕನ್ನಡದ ಸುಪ್ರಸಿದ್ದ ಹಾಸ್ಯಗಾರ್ತಿ ಸುಧಾ ಬರಗೂರ್ ಸತತವಾಗಿ 2 ಘಂಟೆಗಳ ಕಾಲ ನಿರರ್ಗಳವಾಗಿ ಮಾತನಾಡಿ, ನಗೆಯ ಕಡಲನ್ನೇ ಹರಿಸಿದರು. ಅವರ ಮಾತಿಗೆ ಹೊಟ್ಟೆ ಹುಣ್ಣಾಗುವಂತೆ ನಕ್ಕ ಸಭಿಕರು ಕೊನೆಯಲ್ಲಿ ನಿಂತು ಗೌರವವನ್ನು (Standing Ovation) ಸೂಚಿಸಿದರು.
ಹಬ್ಬದೂಟ, ಮಕ್ಕಳ ಉಪಚಾರ
ನಕ್ಕುನಕ್ಕು ಹೊಟ್ಟೆ ಹುಣ್ಣಾಗಿಸಿಕೊಂಡ, ಹುಚ್ಚೆದ್ದು ಕುಣಿದ ಸಭಿಕರಿಗೆ ಸಂಜೆಯ ಹೊತ್ತಿಗೆ ಭರ್ಜರಿ ಹಸಿವು. ಹಬ್ಬದ ರುಚಿ ರುಚಿಯಾದ ಭೂರಿ ಭೋಜನ ಸೊಗಸಾಗಿತ್ತು. ವ್ಯವಸ್ಥೆ ತುಂಬಾ ಅಚ್ಚುಕಟ್ಟಾಗಿತ್ತು. ವಿಶೇಷವೆಂದರೆ, ಪುಟಾಣಿ ಮಕ್ಕಳು ಬಡಿಸಿ ಸಭಿಕರನ್ನು, ಅತಿಥಿಗಳನ್ನು ಉಪಚರಿಸುತ್ತಿದ್ದುದು ಎಲ್ಲರ ಮನ ಸೂರೆಗೊಂಡಿತ್ತು.
ತರಂಗ ವಾದ್ಯಗೋಷ್ಠಿಗೆ ಹುಚ್ಚೆದ್ದು ಕುಣಿದ ಜನರು
ರಾತ್ರಿಯ ತರಂಗ ಫ್ಯೂಶನ್ ವಾದ್ಯಗೋಷ್ಠಿ ದೈವಿಕವಾಗಿದ್ದು ಮೈ ಮನಸುಗಳನ್ನು ಸೂರೆಗೊಂಡವು. ಸುಚೇತನ್, zee ಖ್ಯಾತಿ ಐಶ್ವರ್ಯ, ವೆಂಕಿ, ಭರತ್ ಮತ್ತು ರಾಜೀವರ ಗಾನ ಸುಧೆಗೆ ಮಕ್ಕಳು ಮುದುಕರೆನ್ನದೆ ಎಲ್ಲರೂ ವೇದಿಕೆಯ ಮುಂಭಾಗಕ್ಕೆ ಬಂದು ಕುಣಿದದ್ದು ತರಂಗದ ಯಶಸ್ಸನ್ನು ತೋರಿಸುತ್ತಿತ್ತು.
ಚಂಡಮಾರುತ ಸಂತ್ರಸ್ತರಿಗೆ ದೇಣಿಗೆ ಸಂಗ್ರಹ
ಈ ಸಂದರ್ಭದಲ್ಲಿ ಬೃಂದಾವನ ಸೇವಾ ತಂಡ ಇತ್ತೀಚಿನ ಚಂಡಮಾರುತ ಸಂತ್ರಸ್ತರಿಗೆ raffle ಮುಖಾಂತರ ದೇಣಿಗೆ ಸಂಗ್ರಹಿಸಿತು. ಅಭಿಮಾನಿ ತಂಡದ ಈ ಕಾರ್ಯಕ್ರಮಕ್ಕೆ ಹಲವಾರು ಪ್ರಾಯೋಜಕರು ನೆರವಿನ ಹಸ್ತ ಚಾಚಿ, ಯಶಸ್ವಿಯಾಗಲು ಸಹಕರಿಸಿದರು.