ಫಿಲಡೆಲ್ಫಿಯಾದ ಕನ್ನಡ ಮನಸು ಡಾ.ಎಚ್.ವೈ.ರಾಜಗೋಪಾಲ್
ಅಮೆರಿಕದ ಫಿಲಿಡೆಲ್ಫಿಯಾದಲ್ಲಿ ಡಾ.ಎಚ್.ವೈ.ರಾಜಗೋಪಾಲ್ ಕಳೆದ ಸೋಮವಾರ ನಿಧನರಾಗಿದ್ದಾರೆ. ಅವರಿಗೆ ಎಂಬತ್ತೆರಡು ವರ್ಷ ವಯಸ್ಸಾಗಿತ್ತು. ಬೆಂಗಳೂರಿನಲ್ಲಿ, 1935ರಲ್ಲಿ ಜನಿಸಿದ ರಾಜಗೋಪಾಲ್, ತಮ್ಮ ಬದುಕಿನುದ್ದಕ್ಕೂ ಕನ್ನಡವನ್ನೇ ಧೇನಿಸಿದವರು. ಬಿ.ಇ., ಹಾಗೂ ಎಂ.ಇ., ಶಿಕ್ಷಣ ಪಡೆದಿದ್ದ ಅವರು ಮಾಡಿದ್ದು ಕನ್ನಡ ಕಟ್ಟುವ ಕೆಲಸವನ್ನೇ.
1966ರಲ್ಲಿ ಅಮೆರಿಕಕ್ಕೆ ತೆರಳಿದ ರಾಜ್ ಗೋಪಾಲ್ ಅವರು ಪೆನ್ಸಿಲ್ವೇನಿಯಾ ವಿ.ವಿ.ಯಲ್ಲಿ ಸಿವಿಲ್ ಎಂಜಿನಿಯರಿಂಗ್ ನಲ್ಲಿ ಡಾಕ್ಟರೇಟ್ ಪಡೆದಿದ್ದರು. ಫಿಲಿಡೆಲ್ಫಿಯಾದಲ್ಲಿ ವಾಸವಿದ್ದ ಅವರು ಕನ್ಸಲ್ಟಿಂಗ್ ಎಂಜಿನಿಯರ್ ಆಗಿ, ಫ್ಲುಯಿಡ್ ಮೆಕಾನಿಕ್ಸ್ ಪಾಠ ಮಾಡುವ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದ್ದರು.
ಮಾನವೀಯತೆಯ ಸಾಕಾರಮೂರ್ತಿ ಎಚ್ವೈಆರ್ ಇನ್ನಿಲ್ಲ
ಇಂದಿರಾಗಾಂಧಿ ಅವರ ಆಪ್ತ ಕಾರ್ಯದರ್ಶಿಯಾಗಿದ್ದ ಎಚ್.ವೈ.ಶಾರದಾಪ್ರಸಾದ್ ಅವರು ಇದೇ ರಾಜಗೋಪಾಲ್ ರ ಸಹೋದರ. ಇನ್ನು ರಾಜಗೋಪಾಲ್ ಅವರ ಸಾಹಿತ್ಯ ಪ್ರಿತಿ ಬಗ್ಗೆ ನೆನಪಿಸಿಕೊಂಡರೆ ಒಂದು ಪುಸ್ತಕದಂತಾಗುತ್ತದೆ. 'ಶ್ರುತಿ' ಎಂಬುದು ಸೇರಿದಂತೆ ಹಲ ಸಾಂಸ್ಕೃತಿಕ ಸಂಘಟನೆಗಳ ಜತೆಗೆ ರಾಜಗೋಪಾಲ್ ಅವರಿಗೆ ಕರುಳುಬಳ್ಳಿ ನಂಟಿತ್ತು. ಶಾಸ್ತ್ರೀಯ ಸಂಗೀತ ಹಾಗೂ ನೃತ್ಯ ಸೊಸೈಟಿ 'ಪ್ರಸ್ತಾಪ'ವನ್ನು ಫಿಲಿಡೆಲ್ಫಿಯಾದಲ್ಲಿ ಆರಂಭಿಸಿದವರು ಅವರು. ಕನಡ ಸಾಹಿತ್ಯ ರಂಗವನ್ನು ಆರಂಭಿಸಿದ್ದರು.
1970ರ ದಶಕದಲ್ಲಿ ತಮ್ಮ ಪತ್ನಿ ವಿಮಲಾ ಅವರ ಜತೆಗೂಡಿ ಇಂಡೋ-ಯುಎಸ್ ಚಿಲ್ಡ್ರನ್ಸ್ ಅಸೋಸಿಯೇಷನ್ ಆರಂಭಿಸಿದ್ದರು. ರಾಜಗೋಪಾಲ್ ಅವರ ಮಕ್ಕಳಾದ ಮಾಧವಿ, ಚೇತನ ಹಾಗೂ ಶ್ರೀರಾಮ್ ಕೊಡುಗೆ ಈ ಸಂಸ್ಥೆಯ ಬೆಳವಣಿಗೆಯಲ್ಲಿ ಬಹಳ ಇದೆ.
ಅಂದಹಾಗೆ, ರಾಜಗೋಪಾಲ್ ಅವರು ಲೇಖಕರಾಗಿಯೂ ಗುರುತಿಸಿಕೊಂಡವರು. ಕನ್ನಡ ಹಾಗೂ ಇಂಗ್ಲಿಷ್ ಎರಡೂ ಭಾಷೆಯಲ್ಲಿ ಬರೆಯುತ್ತಿದ್ದರು. ಗಾಂಧಿಯುಗಕ್ಕೆ ಕನ್ನಡಿ, ಸೃಷ್ಟಿ- ನಾಲ್ಕು ಜಗತ್ತುಗಳು, ಹಲವು ಮಕ್ಕಳ ತಾಯಿ ಒಳಗೊಂಡಂತೆ ಹಲವು ಪುಸ್ತಕಗಳು ಅವರ ಕೆಲಸವನ್ನು ನೆನಪಿಸುತ್ತವೆ.
ಹೊರನಾಡು ಕನ್ನಡಿಗ ರಾಜ್ಯೋತ್ಸವ ಪ್ರಶಸ್ತಿ, ಆಳ್ವಾಸ್ ವಿಶ್ವ ನುಡಿಸಿರಿ ವಿರಾಸತ್ ಪ್ರಶಸ್ತಿಯಂಥ ಗೌರವಗಳು ರಾಜಗೋಪಾಲ್ ರಿಗೆ ಸಂದಿದ್ದವು. ನೆನಪಿಸಿಕೊಳ್ಳಲು, ಸ್ಮರಿಸಲು, ಜವಾಬ್ದಾರಿ ವಹಿಸಿಕೊಂಡು ಮುನ್ನಡೆಸಲು ರಾಜಗೋಪಾಲ್ ರ ಹಲವು ಕೆಲಸಗಳು ಇವೆ.