ಕತಾರ್ ವಸಂತೋತ್ಸವದಲ್ಲಿ ನಾ ಸೋಮೇಶ್ವರ್ ರಸಪ್ರಶ್ನೆ
ಅರಬ್ ರಾಷ್ಟ್ರ ಕತಾರಿನಲ್ಲಿರುವ, ಕರ್ನಾಟಕ ಸಂಘ, ಕತಾರ್ ಮೇ 13ರಂದು ವಿಜೃಂಭಣೆಯಿಂದ ವಸಂತೋತ್ಸವವನ್ನು ಆಚರಿಸಿತು. ಸಂಜೆ 5ಕ್ಕೆ, ಸಂಘದ ಅಧ್ಯಕ್ಷರಾದ ಎಚ್.ಕೆ. ಮಧು ಅವರ ಪ್ರಾಸ್ತಾವಿಕ ಭಾಷಣದೊಂದಿಗೆ ಆರಂಭವಾದ ಸಮಾರಂಭ, ರಾತ್ರಿ 11 ಗಂಟೆಯವರೆಗೂ ಯಶಸ್ವಿಯಾಗಿ ನಡೆಯಿತು. ಜ್ಞಾನೋತ್ಸವ, ಹಾಸ್ಯೋತ್ಸವ ಹಾಗು ಸಂಗೀತೋತ್ಸವಗಳ ಸಮ್ಮಿಳನ ಈ ಬಾರಿಯ ವಸಂತೋತ್ಸವದ ವಿಶೇಷವಾಗಿತ್ತು.
ಗೌರವಾನ್ವಿತ ಅತಿಥಿಗಳಾದ, "ಥಟ್ ಅಂತ ಹೇಳಿ" ಖ್ಯಾತಿಯ ನಾ. ಸೋಮೇಶ್ವರ ಅವರು ನಡೆಸಿಕೊಟ್ಟ ರಸಪ್ರಶ್ನೆ ಕಾರ್ಯಕ್ರಮದೊಂದಿಗೆ ಸಮಾರಂಭ ಆರಂಭವಾಯಿತು. ಸೋಮೇಶ್ವರ ಅವರುತಮ್ಮ ಅಪಾರ ಜ್ಞಾನವನ್ನು ಕತಾರಿನ ಕನ್ನಡ ಜನತೆಯೊಂದಿಗೆ ಹಂಚಿಕೊಂಡರು. ಭಾಗವಹಿಸಿದ ನಾಲ್ಕು ತಂಡಗಳು ತಮ್ಮ ಜಾಣ್ಮೆಯನ್ನು ಉಪಯೋಗಿಸಿ ಹಲವಾರು ಪುಸ್ತಕಗಳನ್ನು ಬಹುಮಾನವಾಗಿ ಪಡೆಯುವಲ್ಲಿ ಯಶಸ್ವಿಯಾದವು. ನಡು ನಡುವೆ ಪ್ರೇಕ್ಷಕರಿಗೂ ಉತ್ತರಿಸುವ ಅವಕಾಶವಿದ್ದು, ಅವರಿಗೂ ಪುಸ್ತಕಗಳನ್ನು ಬಹುಮಾನವಾಗಿ ನೀಡಲಾಯಿತು. [ಥಟ್ ಅಂತ ಹೇಳಿ ರಸಪ್ರಶ್ನೆ ಶೋಗೆ ಮತ್ತೊಂದು ಗರಿ]
ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಆಗಮಿಸಿದ್ದ, ಭಾರತೀಯ ಸಾಂಸ್ಕೃತಿಕ ಕೇಂದ್ರದ ಅಧ್ಯಕ್ಷರಾದ, ಗಿರೀಶ್ ಕುಮಾರ್ ಅವರು ಸಂಘದ ಅಧ್ಯಕ್ಷರು ಹಾಗು ಆಮಂತ್ರಿತ ಕಲಾವಿದರುಗಳೊಂದಿಗೆ ಕೂಡಿ, ನಮ್ಮ ಭಾರತೀಯ ಸಂಪ್ರದಾಯದಂತೆ ಜ್ಯೋತಿಯನ್ನು ಬೆಳಗಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಸಂಘದ ಮಹಿಳಾ ಸದಸ್ಯರು ಹಾಗು ಮಕ್ಕಳು, ಎಚ್. ಕೆ ಮಧು ಅವರು ವಸಂತೋತ್ಸವ ಕುರಿತಾಗಿ ರಚಿಸಿದ, ಅಶ್ವಿನ್ ಅವರು ಸಂಯೋಜಿಸಿದ, ಹೆಸರಾಂತ ಗಾಯಕಿ ಸಂಗೀತಾ ಕಟ್ಟಿಯವರು ಹಾಡಿದ ಹಾಡಿಗೆ ಅಮೋಘವಾದ ನೃತ್ಯರೂಪಕವನ್ನು ಪ್ರದರ್ಶಿಸಿದರು. ಅಕ್ಷಯ ಪ್ರದೀಪ್ ಅವರು ನೃತ್ಯವನ್ನು ನಿರ್ದೇಶಿಸಿದ್ದರು.
ನಾಡಿನ ಪ್ರಸಿದ್ಧ ಹಾಸ್ಯ ಕಲಾವಿದರಾದ ಮಿಮಿಕ್ರಿ ಗೋಪಿಯವರು ಎಂದಿನಂತೆ ತಮ್ಮ ಅಣುಕು ಕಲಾ ಕೌಶಲ್ಯದಿಂದ ನೆರೆದಿದ್ದ ಸಭಿಕರನ್ನು ನಗೆಗಡಲಿನಲ್ಲಿ ಮುಳುಗಿಸಿದರು. ಹೆಸರಾಂತ ನಟರ, ರಾಜಕಾರಣಿಗಳ ಅನುಕರಣೆ ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು.
ಜ್ಞಾನೋತ್ಸವ ಹಾಗು ಹಾಸ್ಯೋತ್ಸವದ ನಂತರ ಪ್ರೇಕ್ಷಕರನ್ನು ಸಂಗೀತೋತ್ಸವದಲ್ಲಿ ಮುಳುಗಿಸಿದವರು, ಸಂಗೀತ ವಾದ್ಯಗಳಲ್ಲಿ ಅಧಿದೇವತೆಯಾದ ವೀಣೆಯನ್ನು ಉಸಿರಾಗಿಸಿಕೊಂಡು, ವೀಣಾವಾದನಲ್ಲಿ ಮಹತ್ವದ ಸಾಧನೆ ಮಾಡಿರುವ ವೀಣಾ ವಾರುಣಿಯವರು.
ಮೂರು ಗಂಟೆಗಳ ಕಾಲ ಕನ್ನಡ ಹಾಗು ಹಿಂದಿ ಚಲನಚಿತ್ರ ಗೀತೆಗಳನ್ನು ನುಡಿಸಿ, ಸಭಿಕರನ್ನು ಮಂತ್ರ ಮುಗ್ಧಗೊಳಿಸಿದರು. ಇವರಿಗೆ ಜಯಚಂದ್ರ- ತಬಲದಲ್ಲಿ, ಪ್ರವೀಣ್- ರಿದಂಪ್ಯಾಡ್ ನಲ್ಲಿ, ದೀಪಕ್ ಜಯಶೀಲನ್- ಕೀಬೋರ್ಡ್ ನಲ್ಲಿ ಹಾಗು ವಿನೋದ್ ರವರು ಲಯ ವಾದ್ಯದಲ್ಲಿ ಜೊತೆಗೂಡಿದರು.
ಕಾರ್ಯಕ್ರಮದ ಕೊನೆಯಲ್ಲಿ ಎಲ್ಲಾ ಆಮಂತ್ರಿತ ಕಲಾವಿದರುಗಳಿಗೆ ನೆನಪಿನ ಕಾಣಿಕೆಗಳನ್ನು ನೀಡಿ ಗೌರವಿಸಲಾಯಿತು. ವೀಣಾವಾರುಣಿ ಅವರಿಗೆ "ವೀಣಾ ಮುಕುಟ ಮಣಿ" ಬಿರುದನ್ನು ಹಾಗು ನಾ. ಸೋಮೇಶ್ವರ ಅವರಿಗೆ "ಸಾಧನಾ ಶ್ರೇಷ್ಠ" ಬಿರುದನ್ನು ನೀಡಿ ಸನ್ಮಾನಿಸಲಾಯಿತು. [ಬಿಹಾರದ ಪಂಚಕೋಟಿ ಮಹಾಮುನಿಗೆ ನಯಾಪೈಸೆನೂ ಕೊಡದ ಸೋನಿ ಚಾನೆಲ್]
ಇದೇ ಸಂದರ್ಭದಲ್ಲಿ, ವಸಂತೋತ್ಸವದ ಸಂಭ್ರಮಾಚರಣೆಯಲ್ಲಿ ಪಾಲ್ಗೊಂಡ, ನಾಡಿನ ಜನಪ್ರಿಯ ರಂಗಭೂಮಿ, ಯಕ್ಷಗಾನ, ಕಿರುತೆರೆ ಕ್ಷೇತ್ರಗಳ ಸಾಂಸ್ಕೃತಿಕ ಸಂಘಟನಕಾರರಾದ ರಮೇಶ್ ಬೇಗಾರ್ ಅವರನ್ನೂ ಕೂಡ ಗೌರವಾದರಗಳೊಂದಿಗೆ ಸನ್ಮಾನಿಸಲಾಯಿತು. ಈ ಕಾರ್ಯಕ್ರಮದ ನಿರೂಪಣೆಯನ್ನು ಅನು ಸುಧೇಶ್ ಅವರು ಹಾಗು ವಂದನಾರ್ಪಣೆಯನ್ನು ಸುನೀಲ್ ಕಮಲಾಕ್ಷ ಅವರುಗಳು ನಡೆಸಿಕೊಟ್ಟರು.
ಮೇ 14ರ ಸಂಜೆ ವಾರುಣಿಯವರು ಪ್ರೇಕ್ಷಕರಿಗೆ ಶಾಸ್ತ್ರೀಯ ಸಂಗೀತ ಹಾಗು ದೇವರ ನಾಮದ ರಸದೌತಣವನ್ನು ಉಣಬಡಿಸಿದರು. ಅಂದು ನಾ. ಸೋಮೇಶ್ವರ ಅವರ 60ನೇ ಜನ್ಮದಿನವಾಗಿತ್ತು. ಅವರ ಹುಟ್ಟುಹಬ್ಬವನ್ನು ಸಂಘದ ಸದಸ್ಯರೆಲ್ಲಾ ಒಟ್ಟಾಗಿ ಸೇರಿ ಆಚರಿಸಿದ್ದು ವಿಶೇಷವಾಗಿತ್ತು.
ಜ್ಞಾನೋತ್ಸವ, ಹಾಸ್ಯೋತ್ಸವ ಹಾಗು ಸಂಗೀತೋತ್ಸವ
ವಿಜೇತರಿಗೆ ಪುಸ್ತಕ ನೀಡುತ್ತಿರುವ ಡಾ. ಸೋಮೇಶ್ವರ್
ದೀಪ ಬೆಳಗಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಅತಿಥಿಗಳು
ಮಕ್ಕಳಿಂದ ಆಕರ್ಷಕ ನೃತ್ಯೋತ್ಸವ
ಕತಾರ್ ಕನ್ನಡ ಅಭಿಮಾನಿಗಳು
ಮಿಮಿಕ್ರಿ ಕಲಾವಿದ ಗೋಪಿ ಹಾಸ್ಯೋತ್ಸವ
ವೀಣಾ ವಾರುಣಿ ಅವರಿಂದ ಸಂಗೀತೋತ್ಸವ
ವೀಣಾ ವಾರುಣಿ ಅವರಿಗೆ ಸಂಘದಿಂದ ಸನ್ಮಾನ
ನಾ ಸೋಮೇಶ್ವರ್ ಅವರಿಗೆ ಹೃತ್ಪೂರ್ವಕ ಸನ್ಮಾನ
ಕತಾರ್ ವಸಂತೋತ್ಸವದಲ್ಲಿ ನಾ ಸೋಮೇಶ್ವರ್ ರಸಪ್ರಶ್ನೆ
ಕತಾರ್ ಕನ್ನಡ ಸಂಘದ ಸದಸ್ಯರು ಹಾಗು ಮಕ್ಕಳು