ಅಮೇರಿಕನ್ನಡಿಗರಿಗೆ ನಾಟಕದ ಮೇಷ್ಟ್ರಾದ ನಾಗಾಭರಣ
ಕನ್ನಡ ಚಿತ್ರರಂಗದಲ್ಲಿ ಸದಭಿರುಚಿಯ ಚಿತ್ರಗಳನ್ನ ನೀಡಿರುವ ನಿರ್ದೇಶಕ ಟಿ.ಎಸ್.ನಾಗಾಭರಣ ಈಗ ಅಮೇರಿಕದಲ್ಲಿ ಪ್ರಪ್ರಥಮ ಬಾರಿಗೆ ನಾಟಕಗಳನ್ನ ನಿರ್ದೇಶಿಸಲು ಸಜ್ಜಾಗಿದ್ದಾರೆ.
ಮೇ 29 ರಿಂದ 31 ರವರೆಗೂ ನಡೆಯಲಿರುವ ಬಹುಭಾಷಾ ನಾಟಕೋತ್ಸವಕ್ಕೆ ಟಿ.ಎಸ್.ನಾಗಾಭರಣ ನಿರ್ದೇಶನದ ಹೊಣೆ ಹೊತ್ತಿದ್ದರೆ ಸಂಗೀತ ಮತ್ತು ಉಡುಗೆ-ತೊಡುಗೆಯ ಜವಾಬ್ದಾರಿ ಅವರ ಪತ್ನಿ ನಾಗಿಣಿಭರಣರದ್ದು. [ಕ್ಯಾಲಿಫೋರ್ನಿಯಾ ನಾಟಕೋತ್ಸವದಲ್ಲಿ ಜಯಶ್ರೀ, ಭರಣ]
'ಅಲ್ಲಮ' ಚಿತ್ರದ ತಯಾರಿಯಲ್ಲಿ ತೊಡಗಿರುವ ಟಿ.ಎಸ್.ನಾಗಾಭರಣ, ನಾಟಕಾಸ್ತಕ ಅಮೇರಿಕ ಕನ್ನಡಿಗರ ಕೋರಿಕೆಗೆ ಸ್ಪಂದಿಸಿ ಬಹುಭಾಷಾ ನಾಟಕೋತ್ಸವದಲ್ಲಿ ಪಾಲ್ಗೊಳ್ಳುತ್ತಿದ್ದಾರೆ.
ಅಮೇರಿಕದ ಉತ್ತರ ಕ್ಯಾಲಿಫೋರ್ನಿಯಾದಲ್ಲಿನ ರಂಗಾಸಕ್ತ ಕನ್ನಡಿಗರು ಹುಟ್ಟು ಹಾಕಿರುವ 'ಬಣ್ಣದ ವೇಷ' ತಂಡವು ಕಳೆದ ಕೆಲವು ವರ್ಷಗಳಿಂದ ನಿರಂತರವಾಗಿ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸುತ್ತಲೇ ಇದೆ.
ಈ ವರ್ಷ ಪ್ರಪ್ರಥಮ ಬಾರಿಗೆ ಕ್ಯಾಲಿಫೋರ್ನಿಯಾದ ಸ್ಯಾನ್ ಹುಸೆ ನಗರದಲ್ಲಿ ಬಹುಭಾಷಾ ನಾಟಕೋತ್ಸವದ ತಯಾರಿಯಲ್ಲಿ ಶ್ರೀಮತಿ ಪದ್ಮ ಕಡೂರು ನೇತೃತ್ವದ 'ಬಣ್ಣದ ವೇಷ' ತಂಡ ನಿರತವಾಗಿದೆ.
ಧಾರವಾಡ ಆರ್ಯರವರ 'ಅಗಸ್ತ್ಯನಿಂದ ಐ.ಟಿ.ವರೆಗೆ' ಮೂಲಕೃತಿಯನ್ನು ಪರಿಷ್ಕರಿಸಿ ಎರಡೇ ವಾರಗಳ ಅತ್ಯಲ್ಪ ಅವಧಿಯಲ್ಲಿ ಅದಕ್ಕೆ ರಂಗರೂಪ ನೀಡುತ್ತಿದ್ದಾರೆ. 'ಮುದ್ದಣ ಟು ಮನೋರಂ' ಎಂಬ ಶೀರ್ಷಿಕೆಯೊಂದಿಗೆ ನಾಗಾಭರಣ ನಿರ್ದೇಶನದಲ್ಲಿ ರಂಗದ ಮೇಲೆ ಬರುತ್ತಿರುವ ಈ ನಾಟಕಕ್ಕೆ ಕವಿ ಮುದ್ದಣ, ದ.ರಾ.ಬೇಂದ್ರೆ, ಕೆ.ಎಸ್.ನರಸಿಂಹಸ್ವಾಮಿ, ಎಚ್.ಎಸ್.ವೆಂಕಟೇಶ್ ಮೂರ್ತಿ, ಬಿ.ಆರ್.ಲಕ್ಷ್ಮಣ ರಾವ್ ಅವರ ಹಾಡುಗಳನ್ನ ಬಳಸಿಕೊಳ್ಳಲಾಗುತ್ತಿದೆ.
ಅಮೇರಿಕ ಕನ್ನಡಿಗರಿಗೆ ನಾಟಕದ ಒಳನೋಟಗಳನ್ನು ಹೇಳಿಕೊಡುವುದರಲ್ಲಿ ಸದ್ಯಕ್ಕೆ ಬಿಜಿಯಾಗಿರುವ ಟಿ.ಎಸ್.ನಾಗಾಭರಣರ ಅಮೇರಿಕದ ರಂಗಾನುಭವವನ್ನು ತಿಳಿಯಲು ಇನ್ನೊಂದಿಷ್ಟು ದಿನ ಕಾಯಬೇಕು. (ಫಿಲ್ಮಿಬೀಟ್ ಕನ್ನಡ)