ಗಿರಿಜಾ ಲೋಕೇಶ್ ಅವರಿಗೆ ಪ್ರತಿಷ್ಠಿತ 'ಧ್ವನಿ' ಪ್ರಶಸ್ತಿ
ದುಬೈ, ಜನವರಿ 26 : ಮುಂಬೈನಲ್ಲಿ ಜನ್ಮತಾಳಿ ಅಂತಾರಾಷ್ಟ್ರೀಯ ಖ್ಯಾತಿಯ ಕನ್ನಡ ಸಾಹಿತ್ಯ, ಸಾಂಸ್ಕೃತಿಕ ಹಾಗು ಹವ್ಯಾಸಿ ರಂಗ ತಂಡ ಧ್ವನಿ ಪ್ರತಿಷ್ಠಾನಕ್ಕೆ ಈಗ 32ರ ಹರೆಯ. ಇತ್ತೀಚಿಗೆ ಧ್ವನಿ ಪ್ರತಿಷ್ಠಾನ ತನ್ನ ವಾರ್ಷಿಕೋತ್ಸವವನ್ನು ದುಬೈನ ಎಮಿರೇಟ್ಸ್ ಥಿಯೇಟರ್ ನಲ್ಲಿ ಆಚರಿಸಿಕೊಂಡಿತು.
ಧ್ವನಿ ಪ್ರತಿಷ್ಠಾನ ಪ್ರತಿವರ್ಷ ನೀಡುವ "ಧ್ವನಿ ಶ್ರೀರಂಗ" ರಂಗ ಪ್ರಶಸ್ತಿಯನ್ನು ಖ್ಯಾತ ರಂಗಭೂಮಿ ಕಲಾವಿದೆ, ಚಲನಚಿತ್ರ ನಟಿ ಗಿರಿಜಾ ಲೋಕೇಶ್ ಅವರಿಗೆ ಪ್ರದಾನ ಮಾಡಲಾಯಿತು. "ಧ್ವನಿ ಪುರಸ್ಕಾರ" ಪ್ರಶಸ್ತಿಯನ್ನು ಯುಎಈಯಲ್ಲಿ ಕನ್ನಡದ ಭಾಷೆ, ಕಲೆ, ಸಂಸ್ಕೃತಿಯ ಉಳಿವು ಉನ್ನತಿಗಾಗಿ ಶ್ರಮಿಸಿದ ಗಣೇಶ್ ರೈ ಇವರಿಗೆ ನೀಡಲಾಯಿತು.
ಧ್ವನಿ 'ಶ್ರೀರಂಗ' ರಂಗ ಪ್ರಶಸ್ತಿಗೆ ಗಿರಿಜಾ ಲೋಕೇಶ್ ಆಯ್ಕೆ
ಅತಿಥಿಗಳನ್ನು ಪೂರ್ಣಕುಂಭ, ಕಲಶಗಳಿಂದ ಸುಮಂಗಲೆಯರು ಸ್ವಾಗತಿಸಿ, ಧ್ವನಿ ಪ್ರತಿಷ್ಠಾನದ ಅಧ್ಯಕ್ಷರು ಹಾಗು ಸದಸ್ಯರು ವೇದಿಕೆಗೆ ಬರಮಾಡಿಕೊಂಡರು. ಸಾಯಿ ಮಲ್ಲಿಕಾರ ಹಚ್ಚೇವು ಕನ್ನಡದ ದೀಪದೊಂದಿಗೆ ವೇದಿಕೆಯಲ್ಲಿದ್ದ ಅತಿಥಿಗಳು ದೀಪ ಬೆಳಗುವ ಮುಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಧ್ವನಿ ಪ್ರತಿಸ್ಥಾನದ ಅಧ್ಯಕ್ಷ ಪ್ರಕಾಶ್ ರಾವ್ ಪಯ್ಯಾರ್ ಅವರು ಎಲ್ಲರನ್ನು ಸ್ವಾಗತಿಸಿ ವೇದಿಕೆಯಲ್ಲಿದ್ದ ಗಣ್ಯರನ್ನು ಪರಿಚಯಿಸಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಗಿರಿಜಾ ಲೋಕೇಶ್ ಅವರು, 'ಧ್ವನಿ ಶ್ರೀರಂಗ' ಪ್ರಶಸ್ತಿ ಸ್ವೀಕರಿಸಿ, ಅಂತಾರಾಷ್ಟ್ರೀಯ ಮಟ್ಟದಲ್ಲಿ ನನ್ನನ್ನು ಗುರುತಿಸಿ ಪ್ರಶಸ್ತಿ ಪಡೆದ ಘಳಿಗೆ ಹೆಮ್ಮೆಯೆನಿಸುತ್ತಿದೆ. ಈ ನೆಲದಲ್ಲಿ ಕನ್ನಡ ಕಂಪು ಪಸರಿಸುತ್ತಿರುವುದು ನಿಜಕ್ಕೂ ಶ್ಲಾಘನೀಯ ಎಂದು ಧ್ವನಿ ಪ್ರತಿಷ್ಠಾನದ ಈ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.
'ಧ್ವನಿ ಪುರಸ್ಕಾರ' ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಗಣೇಶ್ ರೈ ಅವರು, ತಾವು ಯುಎಈಯಲ್ಲಿ ಬೆಳೆದು ಬಂದ ಹಾದಿ, ಧ್ವನಿಯೊಂದಿಗಿನ ಬಾಂಧವ್ಯ ನೆನೆದು, ಆತ್ಮಿಯ ಗೆಳೆಯನಿಂದ ಪ್ರಶಸ್ತಿ ಪಡೆದುದು ಹೆಮ್ಮೆಯಿದೆ. ಇದು ತಮ್ಮ ಕೆಲಸಕ್ಕೆ ಸಂದ ಗೌರವವೆಂದು ಹೇಳಿದರು.
ಗೌರವಾನ್ವಿತ ಅಥಿತಿಗಳಾಗಿ ಆಗಮಿಸಿದ ಜೋಸೆಫ್ ಮತಾಯಿಸ್, ಶ್ರೀರಾಮಚಂದ್ರ ಹೆಗಡೆ , ಹರೀಶ್ ಶೇರಿಗಾರ್ ಇವರನ್ನು ಗೌರವಿಸಲಾಯಿತು. ಕಾರ್ಯಕ್ರಮಕ್ಕೆ ಪ್ರಾಯೋಜಕತ್ವ ವಹಿಸಿದ ಗಣ್ಯರನ್ನು ಸ್ಮರಣಿಕೆ ನೀಡಿ ಗೌರವಿಸಲಾಯಿತು.
ತದನಂತರ ಎಲ್ಲರು ನಿರೀಕ್ಷೆಯಿಂದ ಕಾದಿದ್ದ ನಾಟಕ "ಸ್ವಪ್ನ ವಾಸವದತ್ತೆ" ಪ್ರದರ್ಶನಗೊಂಡಿತು. ಖ್ಯಾತ ಸಂಸ್ಕೃತ ಕವಿ ಭಾಸ ವಿರಚಿತ ನಾಟಕವನ್ನು ಡಾ. ಕೀರ್ತಿನಾಥ್ ಕುರ್ತುಕೋಟಿ ಕನ್ನಡಕ್ಕೆ ಭಾಷಾಂತರಿಸಿದ್ದು, ಪ್ರಕಾಶ್ ರಾವ್ ಪಯ್ಯಾರರು ಅವರ ನಿರ್ದೇಶನದಲ್ಲಿ ಉತ್ತಮ ಪ್ರದರ್ಶನ ಕಂಡು, ಮೆಚ್ಚುಗೆ ಗಳಿಸಿತು.
ಅತ್ಯುತ್ತಮ ನಟನೆ, ಪರಿಧಿ ಮೀರದ ಸಂಭಾಷಣೆ, ಹಿತವಾದ ಸಂಗೀತದ ಅಳವಡಿಕೆ, ರಂಗದ ನಡೆ, ಉತ್ತಮವಾದ ಹಾಡುಗಳ ಜೋಡಣೆ, ಕಣ್ಣಿಗೆ ತಂಪಾಗಿಸುವ ಸೌಮ್ಯ ಬಣ್ಣಗಳ ಧಿರಿಸುಗಳು, ಎಲ್ಲವೂ ಒಂದಕ್ಕೊ೦ದು ಮಿಗಿಲಾಗಿದ್ದು ನಾಟಕದ ಯಶಸ್ಸಿಗೆ ಕಾರಣವಾದವು. ನಡು ನಡುವೆ ಸೇರಿಸಿದ ಯಕ್ಷಗಾನದ ನಡೆ ನಾಟಕಕ್ಕೆ ಅಂದವನ್ನು ಹೆಚ್ಚಿಸಿತು.
ಈ ಯಶಸ್ವಿ ನಾಟಕದ ಹಿಂದೆ ವಿಧುಷಿ ಸಪ್ನಾ ಕಿರಣ್, ಪ್ರಭಾಕರ ಕಾಮತ್, ಆರತಿ ಅಡಿಗ, ವಾಸು ಬಾಯರ್, ಗುರುರಾಜ್ ಪುತ್ತೂರು, ಅಶೋಕ್ ಅಂಚನ್, ಶ್ವೇತಾ ನಾಡಿಗ್ ಶರ್ಮ, ಸಂತೋಷ್ ಹೆಗ್ಡೆ, ಸಂತ್ಸ್ ಪೂಜಾರಿ, ಜನೆಟ್ ಸಿಕ್ವೆರಾ, ಶೋಭಿತ ಪ್ರೇಂಜಿತ್, ಶ್ರೀಲೇಖಾ ಅನಂತ್, ನಾಗಭೂಷಣ್ ಕಶ್ಯಪ್, ಸಂಧ್ಯಾ ರವಿಕುಮಾರ್, ಜಯಂತ್ ಶೆಟ್ಟಿ, ಸಂದೀಪ್ ದೇವಾಡಿಗ, ಜೇಶ್ ಬಾಯರ್ ಮುಂತಾದ ಕಲಾವಿದರಿದ್ದಾರೆ.
ಯಕ್ಷಗಾನದ ಹೆಜ್ಜೆಯಲ್ಲಿ ವಿನಾಯಕ ಹೆಗ್ಡೆ, ನಿರೀತ್ಯದಲ್ಲಿ ದನಿಯಾದವರು ದೀಪ ಮಾರಿಯ, ಸಂಧ್ಯಾ ರವಿಕುಮಾರ್, ಗಾಯನದಲ್ಲಿ ಉದಯ್ ನಂಜಪ್ಪ, ಸಾಯಿಮಲ್ಲಿಕ ಸಹಕರಿಸಿದರು. ತಬಲಾ ಸಾಥ್ ನೀಡಿದವರು ರಾಜೇಶ್ ಕುತ್ತಾರ್. ವಿಷ್ಣು ಅಡಿಗ, ರಾಜೇಶ್ ಶರ್ಮ, ಸ್ಮಿತಾ ಕಾಮತ್ ಸಹಯೋಗ ನೀಡಿದರು. ಪದ್ಮರಾಜ ಎಕ್ಕಾರು, ಅಶೋಕ್ ಬೈಲೂರ್, ಅರುಣ್ ಕುಮಾರ್, ಚಂದ್ರಿಕಾ ಪೂಜಾರಿ ಹಾಗು ಇನ್ನಿತರರು ಪರದೆಯ ಹಿಂದೆ ಸಹಕಾರ ನೀಡಿ ಯಶಸ್ಸಿಗೆ ಕಾರಣರಾದರು.
ಕಾರ್ಯಕ್ರಮದಲ್ಲಿ ಶ್ರೀಮತಿ ಲತಾ ಹೆಗಡೆ ವಂದಿಸಿದರು ರಜನಿ ಭಟ್ ಕಾರ್ಯಕ್ರಮ ನಿರೂಪಿಸಿದರು.