ವೈಭವದ ಸೀತಾರಾಮ ಕಲ್ಯಾಣ, ಶ್ರೀರಾಮ ಪಟ್ಟಾಭಿಷೇಕ
ಅಮೆರಿಕಾದ ಫಿನಿಕ್ಸ್ ನಗರದಲ್ಲಿರುವ ಶ್ರೀ ವೆಂಕಟ ಕೃಷ್ಣ ಕ್ಷೇತ್ರ, ಉಡುಪಿ ಪುತ್ತಿಗೆ ಮಠಾಧೀಶರಾದ ಶ್ರೀಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದಂಗಳವರಿಂದ ಪ್ರತಿಷ್ಠಾಪಿಸಲ್ಪಟ್ಟ ಶ್ರೀನಿವಾಸನ ಸನ್ನಿಧಾನದಲ್ಲಿ ಭದ್ರಾಚಲ ಸೀತಾರಾಮ ಕಲ್ಯಾಣ ಹಾಗು ಶ್ರೀರಾಮ ಪಟ್ಟಾಭಿಷೇಕ ಮಹೋತ್ಸವವು ಶನಿವಾರ, ಮೇ 3ನೇ ತಾರೀಕಿನಂದು ಬಹಳ ವೈಭವದಿಂದ ನಡೆಯಿತು.
ಆಂಧ್ರಪ್ರದೇಶದ ಭದ್ರಾಚಲ ದೇವಸ್ಥಾನದಿಂದ ವಿಗ್ರಹದೊಂದಿಗೆ ಆಗಮಿಸಿದ್ದ ಪ್ರಧಾನ ಅರ್ಚಕ ವೃಂದದವರು ಅಮೆರಿಕಾದ 8 ನಗರಗಳಲ್ಲಿ ಸೀತಾರಾಮ ಕಲ್ಯಾಣ ಹಾಗು ಶ್ರೀರಾಮ ಪಟ್ಟಾಭಿಷೇಕವನ್ನು ನಡೆಸಿಕೊಟ್ಟರು. ವೆಂಕಟಕೃಷ್ಣ ಕ್ಷೇತ್ರದಲ್ಲಿ ಸುಪ್ರಭಾತದೊಂದಿಗೆ ಪ್ರಾರಂಭಗೊಂಡು, ವೆಂಕಟೇಶ್ವರ ಅಭಿಷೇಕ, ತೊಮಾಲ ಸೇವೆ ಹಾಗು ಮಹಾ ಮಂಗಳ ಆರತಿಯನ್ನು ಪ್ರಧಾನ ಅರ್ಚಕರಾದ ಕಿರಣ್ ರಾವ್ ಅವರು ಮಾಡಿದರು..
ಬಳಿಕ ವಿಶೇಷವಾಗಿ ಅಲಂಕೃತವಾದ ಪಲ್ಲಕಿಯಲ್ಲಿ ಲಕ್ಷ್ಮಣ ಸಮೇತ ಶ್ರೀ ರಾಮಚಂದ್ರ ಸ್ವಾಮಿ ಹಾಗು ಇನ್ನೊಂದು ಪಲ್ಲಕಿಯಲ್ಲಿ ಆಂಜನೇಯ ಸಮೇತ ಸೀತಾದೇವಿಯು ವಿರಾಜಮಾನರಾದರೆ, ನಾದಸ್ವರ - ನೃತ್ಯ ವೇದಘೋಷಗಳೊಂದಿಗೆ ವೈಭವದ ಪಲ್ಲಕಿ ಸೇವೆ ನಡೆಯಿತು.
ಕಾರ್ಯಕ್ರಮವನ್ನು ಡಾ. ನರಸಿಂಗ ರಾವ್ ಹಾಗು ಡಾ. ಗೋವಿಂದ ಐಯರ್ ರವರು ನಿರ್ವಹಿಸಿಕೊಟ್ಟರು. ಈ ಮಹೋತ್ಸವಕ್ಕೆ ನಗರದ ಮೇಯರ್ ಆಗಮಿಸಿ ಮೇ 3ನೇ ದಿನವನ್ನು "ಭದ್ರಾಚಲ ಸೀತಾ ರಾಮ ಕಲ್ಯಾಣ ಮಹೋತ್ಸವ ದಿನ" ವೆಂದು ನಿಗದಿ ಪಡಿಸಿದ ಪತ್ರವನ್ನು ಕ್ಷೇತ್ರದ ಪ್ರಧಾನ ಅರ್ಚಕರು ಕಿರಣ್ ರಾವ್ ಅವರಿಗೆ ಹಸ್ತಾಂತರಿಸಿದರು. ಉಡುಪಿ ಪುತ್ತಿಗೆ ಮಠಾಧೀಶರಾದ ಸುಗುಣೇಂದ್ರ ತೀರ್ಥ ಶ್ರೀಪಾದಂಗಳ ಪ್ರವಚನ ಮಾಲಿಕೆ "ರಾಮಾಯಣ ರಹಸ್ಯಂ" ಪುಸ್ತಕವನ್ನು ಬಿಡುಗಡೆ ಮಾಡಲಾಯಿತು.
ಜ್ಞಾನಮೂರ್ತಿ ಭಟ್ ಹಾಗು ಶ್ರೀಪತಿ ತಂತ್ರಿ ಅರ್ಚಕರ ಸಹಾಯದೊಂದಿಗೆ ಭದ್ರಾಚಲ ಅರ್ಚಕ ವೃಂದದವರಿಂದ ಸಂಪನ್ನಗೊಂಡ ಈ ಕಲ್ಯಾಣ ಮಹೋತ್ಸವವು, ರಾಮ ಮೋಹನ ಕೊಡಂಚ ಹಾಗು ಗುಂಡು ರಾವ್ ರವರು ತಯಾರಿಸಿದ ಸವಿಯಾದ ಮಹಾ ಪ್ರಸಾದದೊಂದಿಗೆ ಕಾರ್ಯಕ್ರಮವು ಎಲ್ಲಾ ಭಕ್ತ ಜನರ ಮೆಚ್ಚುಗೆಗೆ ಪಾತ್ರವಾಯಿತು.
ಶ್ರೀರಾಮ ಪಟ್ಟಾಭಿಷೇಕ ಮಹೋತ್ಸವ
ಶ್ರೀಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದಂಗಳವರಿಂದ ಪ್ರತಿಷ್ಠಾಪಿಸಲ್ಪಟ್ಟ ಶ್ರೀನಿವಾಸನ ಸನ್ನಿಧಾನದಲ್ಲಿ ಭದ್ರಾಚಲ ಸೀತಾರಾಮ ಕಲ್ಯಾಣ ಹಾಗು ಶ್ರೀರಾಮ ಪಟ್ಟಾಭಿಷೇಕ ಮಹೋತ್ಸವ.
ಭದ್ರಾಚಲದ ಪ್ರಧಾನ ಅರ್ಚಕರಿಂದ ಪೂಜೆ
ಆಂಧ್ರಪ್ರದೇಶದ ಭದ್ರಾಚಲ ದೇವಸ್ಥಾನದಿಂದ ವಿಗ್ರಹದೊಂದಿಗೆ ಆಗಮಿಸಿದ್ದ ಪ್ರಧಾನ ಅರ್ಚಕ.
ಅಲಂಕೃತವಾದ ಪಲ್ಲಕಿಯಲ್ಲಿ ಸೀತೆ, ರಾಮ, ಲಕ್ಷ್ಮಣ
ವಿಶೇಷವಾಗಿ ಅಲಂಕೃತವಾದ ಪಲ್ಲಕಿಯಲ್ಲಿ ಲಕ್ಷ್ಮಣ ಸಮೇತ ಶ್ರೀ ರಾಮಚಂದ್ರ ಸ್ವಾಮಿ ಹಾಗು ಇನ್ನೊಂದು ಪಲ್ಲಕಿಯಲ್ಲಿ ಆಂಜನೇಯ ಸಮೇತ ಸೀತಾದೇವಿ.
ಸೀತಾರಾಮ ಕಲ್ಯಾಣ ಮತ್ತು ಶ್ರೀರಾಮ ಪಟ್ಟಾಭಿಷೇಕ
ಸೀತಾರಾಮ ಕಲ್ಯಾಣ ಮತ್ತು ಶ್ರೀರಾಮ ಪಟ್ಟಾಭಿಷೇಕಕ್ಕಾಗಿ ಅರ್ಚಕರು ನಡೆಸುತ್ತಿರುವ ತಯಾರಿ.
ಕಲ್ಯಾಣೋತ್ಸವದಲ್ಲಿ ನರ್ತಿಸುತ್ತಿರುವ ಅರ್ಚಕರು
ನಾದಸ್ವರ - ನೃತ್ಯ ವೇದಘೋಷಗಳೊಂದಿಗೆ ವೈಭವದ ಪಲ್ಲಕಿ ಸೇವೆ ನಡೆಯಿತು.
ಸಹಸ್ರೋಪಾದಿಯಲ್ಲಿ ಆಗಮಿಸಿದ್ದ ಭಕ್ತಾದಿಗಳು
ಈ ವೈಭವದ ಮಹೋತ್ಸವಕ್ಕೆ ಸಹಸ್ರೋಪಾದಿಯಲ್ಲಿ ಆಗಮಿಸಿದ ಭಕ್ತರು ಸೀತಾ ಸಮೇತ ಶ್ರೀ ರಾಮಚಂದ್ರ ಸ್ವಾಮಿಯ ವಿಶೇಷ ಅನುಗ್ರಹಕ್ಕೆ ಪಾತ್ರರಾದರು.
ಪೂಜಾ ಕೈಂಕರ್ಯದಲ್ಲಿ ತಲ್ಲೀನರಾಗಿರುವ ಅರ್ಚಕರು
ಸೀತಾರಾಮ ಕಲ್ಯಾಣೋತ್ಸವ ಮತ್ತು ಶ್ರೀರಾಮ ಪಟ್ಟಾಭಿಷೇಕದಲ್ಲಿ ತಲ್ಲೀನರಾಗಿರುವ ಅರ್ಚಕರು.
ಸೀತಾಮಾತೆಗೆ ತೊಡಿಸಲಾಗುವ ಸುಂದರ ಹಾರ
ಸೀತಾಮಾತೆಗೆ ತೊಡಿಸಲಾಗುವ ಸುಂದರ ಹಾರವನ್ನು ತೋರಿಸುತ್ತಿರುವ ಭದ್ರಾಚಲದ ಪ್ರಧಾನ ಅರ್ಚಕರು.
ಸೀತೆಗೆ ಶ್ರೀರಾಮ ತೊಡಿಸುವ ಮಂಗಳಸೂತ್ರ
ಸೀತಾರಾಮ ಕಲ್ಯಾಣಮಹೋತ್ಸವದಲ್ಲಿ ಸೀತೆಗೆ ಶ್ರೀರಾಮ ತೊಡಿಸುವ ಮಂಗಳಸೂತ್ರ ತೋರಿಸುತ್ತಿರುವ ಅರ್ಚಕರು.
ಶಾಸ್ತ್ರೀಯವಾಗಿ ಜರುಗಿದ ಕಲ್ಯಾಣ ಮಹೋತ್ಸವ
ಭವ್ಯವಾಗಿ ಅಲಂಕೃತವಾದ ಮಂಟಪದಲ್ಲಿ ಅರ್ಚಕರು ಮಹಾಸಂಕಲ್ಪ ಪುಣ್ಯಾಹ ವಾಚನ ವಾಗ್ದಾನದೊಂದಿಗೆ ಪ್ರಾರಂಭಿಸಿ ಶಾಸ್ತ್ರೀಯವಾಗಿ ಕಲ್ಯಾಣ ಮಹೋತ್ಸವವನ್ನು ನಡೆಸಿಕೊಟ್ಟರು.
ಪತ್ರವನ್ನು ಕ್ಷೇತ್ರದ ಅರ್ಚಕರಿಗೆ ಹಸ್ತಾಂತರಿಸಿದ ಮೇಯರ್
ಈ ಮಹೋತ್ಸವಕ್ಕೆ ನಗರದ ಮೇಯರ್ ಆಗಮಿಸಿ ಮೇ 3ನೇ ದಿನವನ್ನು "ಭದ್ರಾಚಲ ಸೀತಾ ರಾಮ ಕಲ್ಯಾಣ ಮಹೋತ್ಸವ ದಿನ" ವೆಂದು ನಿಗದಿ ಪಡಿಸಿದ ಪತ್ರವನ್ನು ಕ್ಷೇತ್ರದ ಪ್ರಧಾನ ಅರ್ಚಕರು ಕಿರಣ್ ರಾವ್ ಅವರಿಗೆ ಹಸ್ತಾಂತರಿಸಿದರು.