ಕತಾರ್: ಸೇವೆಗಾಗಿ ಆರ್ಯಭಟ ಪ್ರಶಸ್ತಿ ಪಡೆದ ಬೆಂಗಳೂರಿನ ಸತೀಶ್
ದೋಹಾ (ಕತಾರ್) ಜೂನ್ 14 : ಸಮಾಜ ಸೇವೆಗಾಗಿ ಬೆಂಗಳೂರು ಮೂಲದವರಾದ ಬಿ.ಆರ್. ಸತೀಶ್ ಅವರಿಗೆ ಕತಾರ್ ನಲ್ಲಿ ''ಆರ್ಯಭಟ ಇಂಟರ್ ನ್ಯಾಷನಲ್ ಅವಾರ್ಡ್' ನೀಡಿ ಗೌರವಿಸಲಾಗಿದೆ.
ತಾಯ್ನಾಡಿನಿಂದ ದೂರವಿದ್ದರೂ, ಅಲ್ಲಿದ್ದುಕೊಂಡೇ ಸಮಾಜಮುಖಿ ಕಾರ್ಯದಲ್ಲಿ ತೊಡಗಿಸಿಕೊಂಡಿರುವ ಬಿ. ಅರ್ ಸತೀಶ್ ರವರ ಸೇವೆಗಾಗಿ ಈ ಪ್ರಶಸ್ತಿಯನ್ನು ಅವರಿಗೆ ನೀಡಲಾಗಿದೆ.
ಮೂಲತಃ ಬೆಂಗಳೂರಿನವರಾದ ಬಿ. ಆರ್ ಸತೀಶ್, ಕಳೆದ ಹಲವಾರು ವರ್ಷಗಳಿಂದ ಕತಾರ್ ನಲ್ಲಿ ವಾಸಿಸುತ್ತಿದ್ದು, ಅಲ್ಲಿನ ಕ್ರೀಡೆ ಹಾಗೂ ಸಂಸ್ಕೃತಿಕ ಸಂಘಗಳಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಸಾಮಾಜಮುಖಿ ಕಾರ್ಯಕ್ರಮಗಳಲ್ಲಿ ಮುಂಚೂಣಿಯಲ್ಲಿರುವ ಬಿ. ಆರ್. ಸತೀಶ್ ಅಲ್ಲಿನ ಅನಿವಾಸಿ ಭಾರತೀಯರ ಅಚ್ಚು ಮೆಚ್ಚಿನ ವ್ಯಕ್ತಿ.
'ಬದುಕು ಹಾಗೂ ಬದುಕಲು ಬಿಡು' ಎಂಬುವುದನ್ನು ತನ್ನ ಜೀವನದಲ್ಲಿ ಅಳವಡಿಸಿಕೊಂಡು ಬದುಕುತ್ತಿರುವ ಬಿ. ಆರ್. ಸತೀಶ್ ರವರ ಸೇವೆಯನ್ನು ಗುರುತಿಸಿ ಹಲವಾರು ಸಂಘ ಸಂಸ್ಥೆಗಳು ಸನ್ಮಾನಿಸಿವೆ. ಅದರಲ್ಲೂ ವಿಶೇಷವಾಗಿ ಸಂಘಟಕರನ್ನು ಪ್ರೋತ್ಸಾಹಿಸುವುದರೊಂದಿಗೆ ತನ್ನಿಂದಾಗುವ ಸಹಾಯ ಮಾಡುತ್ತಾರೆ. ಅನಿವಾಸಿ ಭಾರತೀಯರ ಪ್ರತಿಭೆ ಗುರುತಿಸಿ ಅವರನ್ನು ಬೆಂಬಲಿಸಿ ಮುಂದೊಯ್ಯುವುದು ಅವರ ವಿಶೇಷತೆ. ಸತೀಶ್ ಅವರಿಗೆ ಒನ್ಇಂಡಿಯಾ ಕನ್ನಡದ ಪರವಾಗಿಯೂ ಶುಭಾಶಯಗಳು.