ಅರಿಜೋನ ಕನ್ನಡ ಸಂಘದ 25ನೇ ವಾರ್ಷಿಕೋತ್ಸವ
ನವೆಂಬರ್ 29 ಹಾಗೂ 30, ಶುಕ್ರವಾರ ಮತ್ತು ಶನಿವಾರದಂದು, ಅಮೆರಿಕದ ಅರಿಜೋನ ಕನ್ನಡ ಸಂಘದ 25ನೇ ವಾರ್ಷಿಕೋತ್ಸವ "ಬೆಳ್ಳಿ ಹಬ್ಬ" ಸಮಾರಂಭವನ್ನು ಅರಿಜೋನದ ಫೀನಿಕ್ಸ್ ಸಮೀಪದ ಗಿಲ್ಬರ್ಟ್ ನಗರದಲ್ಲಿ ಆಯೋಜಿಸಲಾಗಿದೆ.
ಸ್ಥಳೀಯ ಕನ್ನಡಿಗರು ಹಿಗ್ಲಿ ಕಲಾಮಂದಿರದ ಸುಸಜ್ಜಿತ ಸಭಾಂಗಣದಲ್ಲಿ ಏರ್ಪಡಿಸಿರುವ ಈ ಎರಡು ದಿನಗಳ ಕಾರ್ಯಕ್ರಮದಲ್ಲಿ ಭಾಗವಹಿಸಲು ಕರ್ನಾಟಕದಿಂದ ಮತ್ತು ಅಮೆರಿಕಾದ ಇತರ ಪ್ರಾಂತ್ಯಗಳಿಂದ ಕನ್ನಡ ಸಾಹಿತ್ಯ, ಸಂಸ್ಕೃತಿಯ ವಿದ್ವಾಂಸರು, ಹೆಸರಾಂತ ಕಲಾವಿದರು, ಕನ್ನಡ ಅಭಿಮಾನಿಗಳು ಅರಿಜೋನಾಗೆ ಬರುತ್ತಿದ್ದಾರೆ.
ಜೊತೆಗೆ, ಸರ್ಕಾರದ ಮತ್ತು ಇತರ ಸಂಸ್ಥೆಗಳ ಹಲವಾರು ಗಣ್ಯರು ಅರಿಜೋನ ಕನ್ನಡ ಸಂಘದ ಬೆಳ್ಳಿ ಹಬ್ಬದಲ್ಲಿ ಭಾಗವಹಿಸುತ್ತಿದ್ದಾರೆ. ಕೊನೆಯಲ್ಲಿ, ನವೆಂಬರ್ 30ರಂದು ಸಂಜೆ ಫೀನಿಕ್ಸ್ ನಲ್ಲಿರುವ "ಇಂಡೋ-ಅಮೆರಿಕನ್ ಸಾಂಸ್ಕೃತಿಕ ಕೇಂದ್ರ"ದಲ್ಲಿ ಸತ್ಕಾರ ಸಮಾರಂಭವನ್ನು ಏರ್ಪಡಿಸಲಾಗಿದೆ.
ಅರಿಜೋನ ಕನ್ನಡ ಸಂಘದ ಬೆಳ್ಳಿ ಹಬ್ಬಕ್ಕೆ ವಿದ್ಯಾವಾಚಸ್ಪತಿ ಡಾ. ಅರಳುಮಲ್ಲಿಗೆ ಪಾರ್ಥಸಾರಥಿಯವರು ಮುಖ್ಯ ಅತಿಥಿಗಳಾಗಿ ಬರುತ್ತಿದ್ದಾರೆ. ಕನ್ನಡ ಭಾಷೆ, ಕರ್ನಾಟಕದ ಸಂಸ್ಕೃತಿಯನ್ನು ಕೊಂಡಾಡುವ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.
ಡಾ. ಸಂಜಯ್ ಶಾಂತಾರಾಮ್ ಮತ್ತು ಕಲಾಶ್ರೀ ಆಶಾ ಗೋಪಾಲ್ ಅವರು ರೂಪಿಸಿರುವ "ವಿಜಯನಗರ ವೈಭವ" ನೃತ್ಯ ನಾಟಕ, ಪ್ರಖ್ಯಾತ ಜಾದೂಗಾರ ಎಂ.ಡಿ. ಕೌಶಿಕ್ ರವರ "ಸಾಹಿತ್ಯ-ಚಮತ್ಕಾರ", ಸುಪ್ರಸಿದ್ಧ ಗಾಯಕಿ ಬಿ.ಆರ್. ಛಾಯಾ ಅವರೊಡನೆ "ಸಂಗೀತ ಸಂಜೆ", ಲಾಸ್ ಏಂಜಲಿಸ್ ನಿಂದ ಬರುವ "ಅಸೀಮ" ತಂಡದ "ಚಿತ್ರಪಟ - ಜಾನಪದ ರಾಮಾಯಣ" ಪ್ರಮುಖ ಕಾರ್ಯಕ್ರಮಗಳಲ್ಲಿ ಕೆಲವು.
ಜೊತೆಗೆ ಸ್ಥಳೀಯ ಕನ್ನಡಿಗರ ಸಾಂಪ್ರದಾಯಕ ಸಂಗೀತ, ನೃತ್ಯಗಳು, ಹಾಸ್ಯ ನಾಟಕಗಳು, ಸಾಮಾಜಿಕ ರೂಪಕಗಳು, ಎಪ್ಪತ್ತಕ್ಕೂ ಹೆಚ್ಚು ಮಕ್ಕಳು ಭಾಗವಹಿಸಲಿರುವ "ಕರ್ನಾಟಕ - ಮೆರವಣಿಗೆ", ಯುವ ಪೀಳಿಗೆಯಿಂದ "ಫ್ಯಾಶನ್ ಷೋ" ಇತ್ಯಾದಿ ಮನೋರಂಜಕ ಕಾರ್ಯಕ್ರಮಗಳಿಗೆ, ಜೊತೆಗೆ ಬೊಂಬಾಟ್ ಊಟ, ತಿಂಡಿ, ಬೆಳ್ಳಿ ಹಬ್ಬದ ಔತಣಗಳಿಗೆ ಸಿದ್ಧತೆ ನಡೆಯುತ್ತಿದೆ. ವಿವರಗಳಿಗೆ ಇಲ್ಲಿ ಭೇಟಿ ಮಾಡಿ.
ಈ ಬೆಳ್ಳಿ ಹಬ್ಬವು ಕರ್ನಾಟಕಕ್ಕೆ, ಕನ್ನಡಿಗರಿಗೆ ಹೆಮ್ಮೆಯುಂಟುಮಾಡಿ ಸಫಲವಾಗಲೆಂದು ನೀವೆಲ್ಲರೂ ಹಾರೈಸಬೇಕೆಂದು ಕೇಳಿಕೊಳ್ಳುತ್ತಾರೆ ಕೃಷ್ ಕೃಷ್ಣಮೂರ್ತಿ, ಅರಿಜೋನಾ ಕನ್ನಡ ಸಂಘದ ಬೆಳ್ಳಿಹಬ್ಬ ಸಮಿತಿಯ ಅಧ್ಯಕ್ಷ.