ಎಂಪ್ಟಿ ಯುವರ್ ಮೈಂಡ್ ಅಂದ ರಿಯಲ್ ಸ್ಟಾರ್
ವೈಶಾಲಿ : ನಿಜ, ಈ ಕ್ಷಣ ನೀವಿಲ್ಲಿ ನಂಜೊತೆ ನಿಂತು ಮಾತಾಡ್ತಿರೋದೆ ನಮ್ಮೆಲ್ಲರ ಈ ಕ್ಷಣದ ಆನಂದ. ನೀವು ಎಷ್ಟೊಂದು ಸಿನಿಮಾಗಳಲ್ಲಿ ಎಷ್ಟೆಲ್ಲಾ ಬಗೆಯ ಡೈಲಾಗ್ ಹೇಳಿದೀರ, ಇನ್ನೊಮ್ಮೆ ನನ್ನ ಫೆವರಿಟ್ ಡೈಲಾಗ್ "ರಕ್ತ ಕಣ್ಣೀರು" ಸಿನಿಮಾದ ಐ ಲೈಕ್ ಇಟ್ ಕಾಂತಾ.. ಹೇಳ್ತೀರಾ ಆ ನಂತರ ಜನರಿಂದ ಪ್ರಶೆಗಳನ್ನು ತಗೊಳೋಣ.
ಉಪ್ಪಿ ಹೇಳಿದ ಈ ಡೈಲಾಗ್ ನಾನೇನು ಬರೆಯೋದು? ಅದು ಉಪ್ಪಿಯವರ ಬಾಯಲ್ಲೇ ಅವ್ರ ಸ್ಟೈಲ್ನಲ್ಲೇ ಕೇಳಬೇಕು. ಅದರ ವಿಶಿಷ್ಟತೇನೆ ಬೇರೆ. ಚಪ್ಪಾಳೆ ಶಿಳ್ಳೆಯ ಸುರಿಮಳೆಯ ನಡುವೆ ಲೈವ್ ಆಗಿ ಅವರ ಬಾಯಲ್ಲಿ ಮತ್ತೊಮ್ಮೆ ಆ ಡೈಲಾಗ್ ಕೇಳಿ ನಾನೂ "ಐ ಲೈಕ್ ಇಟ್ ಐ ಲೈಕ್ ಇಟ್" ಎಂದೆ.
ಅದಾದಮೇಲೆ ಉಪೇಂದ್ರ ಅವರು ಸುಮಾರು ಒಂದು ಗಂಟೆ ಕಾಲ ಜನರಿಂದ ಎಲ್ಲ ಬಗೆಯ ಪ್ರಶ್ನೆಗಳಿಗೂ ಸರಳ ಸಹಜ ಉತ್ಸುಕತೆಯಲ್ಲಿ ಉತ್ತರಿಸುತ್ತ, ಉಪ್ಪಿ 2 ವಿನ ಡೈಲಾಗ್, ಸೂಪರ್ ಸಿನಿಮಾದ ಡೈಲಾಗ್ ಹೀಗೆ ಬಗೆಯ ಮಾತಿನ ಪಟಾಕಿ ಹಾರಿಸುತ್ತ, ಡಬ್ಬಿಂಗ್ ವಿವಾದ, ರೈತರ ಸಾವು, ದೇಶದ ಸಮಸ್ಯೆ ಇತ್ಯಾದಿಗಳ ಬಗೆಗಿನ ತಮ್ಮ ಅಭಿಪ್ರಾಯದ ಜೊತೆಯಲ್ಲೇ, ತಾವು ಹೇಗೆ ಇಂದಿಗೂ ತಮ್ಮ ಸಿನಿಮಾಗಳಲ್ಲಿ ಹೇಳುವ ವಿಚಾರಗಳನ್ನೇ ಅಳವಡಿಸಿಕೊಂಡು ನಡೆಯುವುದಾಗಿ ತಿಳಿಸಿದರು.
ಶಂಕರ್ ನಾಗ್ ಬಗ್ಗೆ ತಮ್ಮ ಆಪ್ತ ವಿಚಾರಗಳನ್ನು ಹಂಚಿಕೊಂಡರು. ಯುವಜನತೆಗಾಗಿ ಉಪ್ಪಿ ಸ್ಟೈಲ್ನಲ್ಲಿ ಖುಷಿಯಾಗಿರೋದು ಹೇಗೆ ಅಂತನೂ ಹೇಳಿದ್ರು. ಜೀವನ ಅಂದ್ರೆ ಪ್ಲಸ್ಸು ಮೈನಸ್ಸು ಎರಡೂ ಇರುತ್ತೆ. ಒಬ್ಬ ಬಡತನದಲ್ಲಿ ಹುಟ್ಟಿದ ಮಗು ಹೆಚ್ಚು ಸಂತೋಷವಾಗಿರುತ್ತಾ ಅಥವಾ ಶ್ರೀಮಂತಿಕೆಯಲ್ಲಿ ಹುಟ್ಟಿದ ಮಗೂನಾ? ಬಡತನದಲ್ಲಿ ಹುಟ್ಟಿದ ಮಗುಗೆ ಹಾಗೆ ನೋಡಿದ್ರೆ ಜೀವನದಲ್ಲಿ ಎಲ್ಲವೂ ಖುಷೀನೆ. ಯಾರಾದ್ರೂ ಒಬ್ರು ಒಂದು ಹೊಸ ಚಡ್ಡಿ ಕೊಡಿಸಲಿ ಅದಕ್ಕೆಷ್ಟು ಖುಷ್ಯಾಗುತ್ತೆ, ಹೊಸ ಪ್ಯಾಂಟ್ ಕೊಡಿಸಲಿ ಇನ್ನೂ ಖುಷಿ, ಸೈಕಲ್ ಕೊಡ್ಸಿದ್ರೆ? ಅದೇ ಮೊದಲ್ನೆ ಸಾರಿ ಕಾರ್ನಲ್ಲಿ ಕೂತಾಗ? ಎಲ್ಲವೋ ಖುಷಿನೇ, ಎಷ್ಟೊಂದು ಖುಶಿಗಳಲ್ವ ಆ ಮಗು ಬದುಕಿನಲ್ಲಿ? ಎಷ್ಟೆಲ್ಲಾ ಪ್ಲಸ್ ಇದೆ.
ಅದೇ ಶ್ರೀಮಂತಿಕೆಯಲ್ಲಿ ಹುಟ್ಟಿದ ಮಗೂಗೆ ಇದ್ಯಾವ ಖುಶೀನೂ ಇಲ್ಲ, ಆದ್ರೆ ಒಂದು ಸ್ಟೇಬಲ್ ಲೈಫ್ ಇರುತ್ತೆ ಕಷ್ಟ ಅನ್ನೋದು ಗೊತ್ತಿರಲ್ಲ, ಅದೂ ಒಂತರ ಪ್ಲಸ್ಸು. ನಾವು ನೋಡೋ ದೃಷ್ಟಿಲಿದೆ ಎಲ್ಲ. ಜೀವನದಲ್ಲಿ ಏನೋ ದುಃಖ ಆಯ್ತಾ ನೋವಾಯ್ತ, ಆಗ್ಲಿ ಬಿಡಿ, ಆ ಕ್ಷಣ ದಾಟಿ ಹೋಗುತ್ತೆ, ಖುಷಿ, ಅದೂ ಕೂಡ ಪಾಸಸ್ ಬೈ. ಹಾಗಿದ್ರೆ ಯಾವ್ದು ನಂಜೊತೆ ಇರೋದು, ಆ ಪ್ರತಿ ಕ್ಷಣದಲ್ಲೂ ನಾವಿರೋ ಅನುಭವ ಒಂದೇ ನಂಜೊತೆ ಇರೋದು.
ನಾನಂತೂ ಯಾವಾಗಲೂ ಹೇಳ್ತಾ ಇರ್ತೀನಿ ಇದೇನು ಮೆಸೇಜ್ ಅಲ್ಲ, ನನ್ನ ತತ್ವ ಅಥವಾ ನಾನು ಬದುಕಲು ಪ್ರಯತ್ನಿಸುವ ರೀತಿ ಅನ್ಬಹುದು. ಮೈಂಡ್ ಎಂಪ್ಟಿ ಮಾಡ್ಕೊಬೇಕು ನಾವು. ತಲೆಲಿರೋದೆಲ್ಲ ನಾವು ಹೊರಗೆ ಹಾಕೊಬೇಕು. ಆಗಷ್ಟೇ ಹೊರಗಿನಿಂದ ಏನೋ ಜ್ಞಾನ, ಖುಷಿ ಬರಕ್ ಸಾಧ್ಯ. ಇಲ್ಲಾಂದ್ರೆ ನಮ್ ತಲೆಲಿರೋದೆ ಯಾವಾಗಲೂ ಸುತ್ತುತಾ ಇರತ್ತೆ, ಹೊಸದೆನ್ ಬರುತ್ತೆ ಹೇಳಿ. ಎಂಪ್ಟಿ ಯುವರ್ ಮೈಂಡ್.
ಅವರೊಂದಿಗಿನ ಸಂವಾದ ಮುಗಿದಾಗ ನಿಜಕ್ಕೂ ನೆರೆದವರೆಲ್ಲ ಪ್ರೆಸೆಂಟ್ ಕ್ಷಣದಲ್ಲಿದ್ದರು. ಕನ್ನಡ ಚಿತ್ರರಂಗದಲ್ಲಿ ಚಿತ್ರರಂಗದ ಪರಿಮಿತಿಯ ಹೊರಗೆ ಜೀವನದ ಬಗ್ಗೆ, ಜಗತ್ತಿನ ಬಗ್ಗೆ ಒಂದು "ಸ್ಕೂಲ್ ಆಫ್ ಥಾಟ್" ಇರುವ ವ್ಯಕಿ ಎಂದಿದ್ರೆ ಅದು ಶಂಕರ್ನಾಗ್. ಈಗ ಉಪ್ಪಿ ಆ ನಿಟ್ಟಿನಲ್ಲಿ ಇರೋದು ನೋಡಿ ಸಭಿಕರಿಗೆಲ್ಲ ಆಶ್ಚರ್ಯವೂ ಮತ್ತೊಮ್ಮೆ ಕನ್ನಡ ಚಿತ್ರನಟನೊಬ್ಬನ ಬಗ್ಗೆ ಹೆಮ್ಮೆಯೂ ಉಂಟಾಗಿತ್ತು. ಈ ಎಲ್ಲ ಕ್ಷಣಗಳ ಭಾಗವಾಗಿ ಒಂದಷ್ಟು ಹೊತ್ತು ಉಪ್ಪಿ ಜತೆ ವೇದಿಕೆಯ ಮೇಲೆ ಹರಟಿದ್ದು ನನಗಂತೂ "ಸುಮ್ಸುಮ್ನೆ ನಗ್ತಾಳೆ" ಕತೆಯಾಗಿತ್ತು.