ಬಳೆಗಾರ ಚನ್ನಯ್ಯ, ಪುನಃ ಬಂದು ಹೋಗಣ್ಣ!
ನಿಜ, ಇವತ್ತಿನ ಮೋದಿ ಭಾಷಣವನ್ನು ಪ್ರಪಂಚದಾದ್ಯಂತ ಜನರು ಟಿವಿಯಲ್ಲಿ, ಅಂತರಜಾಲದಲ್ಲಿ ನೋಡಿ ಪುಳಕಗೊಂಡಿದ್ದಾರೆ. ಆದರೆ ಅಲ್ಲಿ ಪ್ರತ್ಯಕ್ಷವಿದ್ದ ನಮಗಾದ ಅನುಭವವಿದೆಯಲ್ಲ ಅದು ವರ್ಣನಾತೀತ. ಅಲ್ಲಿ ನೆರೆದಿದ್ದ ನಮ್ಮಲ್ಲಿ ಒಬ್ಬೊಬ್ಬರೊಡನೆಯೂ ಆಪ್ತತೆಯಿಂದ ಸೋದರಭಾವದಿಂದ ಮಾತಾಡುತ್ತಿದ್ದಾರೇನೋ ಎನ್ನುವಂತಿತ್ತು ಮೋದಿಯವರ ಮಾತುಗಳು. ನಮ್ಮ ಕನ್ನಡಕೂಟದ ಸದಸ್ಯರುಗಳಿಗಂತೂ ಖುಷಿಯೋ ಖುಷಿ. ನಾವು ವೈಯಕ್ತಿಕವಾಗಿ ಪ್ರತ್ಯೇಕವಾಗಿ ಪ್ರಯತ್ನಿಸುತ್ತಿದ್ದರೆ ನಮಗೆ ಇವತ್ತಿನ ಕಾರ್ಯಕ್ರಮದಲ್ಲಿ ಭಾಗವಹಿಸುವ ಅವಕಾಶ ಸಿಗುತ್ತಿತ್ತೋ ಇಲ್ಲವೋ. ಕನ್ನಡಕೂಟವೆಂಬ ಸಂಘಟನೆಯ ಮೂಲಕ ಪ್ರಯತ್ನಿಸಿದ್ದರಿಂದ ಇದು ಸಾಧ್ಯವಾಯ್ತು. ಇಂತಹದೊಂದು ಅವಿಸ್ಮರಣೀಯ ಅನುಭವ ಸಿಕ್ಕಿತು.
ಕಾರ್ಯಕ್ರಮದ ರೂಪುರೇಷೆಯಿಂದ ಹಿಡಿದು, ಭಾಷಣ ಮುಗಿಸಿ ಮೋದಿಯವರು ಅಲ್ಲಿಂದ ನಿರ್ಗಮಿಸುವವರೆಗೂ ಇಡೀ ಕಾರ್ಯಕ್ರಮವನ್ನು, ಅದರಲ್ಲೂ ವಿಶ್ವಾದ್ಯಂತದ ಭಾರತೀಯರು ಕಣ್ಣಲ್ಲಿ ಕಣ್ಣಿಟ್ಟು ಕುತೂಹಲದಿಂದ ನಿರೀಕ್ಷಿಸಿದ್ದನ್ನು, ಇಷ್ಟು ಚೆನ್ನಾಗಿ ಆಯೋಜಿಸಿದ ರೀತಿ ಅದ್ಭುತವಾಗಿತ್ತು. ಒಬ್ಬನೇಒಬ್ಬ ಸಭಿಕನೂ ಅಲ್ಲಿ ಕೆಟ್ಟದಾಗಿ ಅನುಚಿತವಾಗಿ ವರ್ತಿಸಲಿಲ್ಲ. ಮೋದಿಯವರ ಭಾಷಣ ಮುಗಿದು ಅವರು ಅಲ್ಲಿಂದ ಹೊರಡುವಾಗಲೂ ಜನಜಂಗುಳಿಯಾಗಬಾರದೆಂದು ಬಲೂನುಗಳನ್ನು ಹಾರಿಸಿ, ವಿಶೇಷ ವಿಡಿಯೋ ನೋಡುವಂತೆ ಸಭಿಕರಿಗೆಲ್ಲ ಸೂಚನೆ ನೀಡಿ ಆಗಲೇ ಮೋದಿಯವರನ್ನು ಸುಗಮವಾಗಿ ಬೀಳ್ಕೊಡುವಲ್ಲಿವರೆಗೆ, ಕಾರ್ಯಕ್ರಮಕ್ಕೆ ಹಾಜರಿದ್ದ ಪ್ರತಿಯೊಬ್ಬನಿಗೂ ಸಿಗುವಂತೆ ಸಿಹಿ ವಿತರಿಸುವಲ್ಲಿವರೆಗೆ ಒಂದೊಂದು ಚಿಕ್ಕ ವಿವರವನ್ನೂ ಕಡೆಗಣಿಸದೆ ತೋರಿದ ಅಚ್ಚುಕಟ್ಟು ಅಸಾಮಾನ್ಯ ಮತ್ತು ಆದರ್ಶಪ್ರಾಯ.
ಎಷ್ಟೋ ಜನ ರಾಜಕಾರಣಿಗಳು, ಜನನಾಯಕರು, ಪುಢಾರಿಗಳು ಭಾರತದಿಂದ, ನಮ್ಮದೇ ಕರ್ನಾಟಕ ರಾಜ್ಯದಿಂದಲೂ ಇಲ್ಲಿಗೆ ಬೇರೆಬೇರೆ ಸಂದರ್ಭಗಳಲ್ಲಿ ಬಂದಿರುವುದನ್ನು ನೋಡಿದ್ದೇವೆ, ಅನುಭವಿಸಿದ್ದೇವೆ. ಅವರ ದರ್ಪ, ಅಹಂಕಾರದ ವರ್ತನೆ, ಭಾವಶೂನ್ಯ ನಿಸ್ತೇಜ ಮುಖಭಂಗಿಗಳೋ ಯಾಕಾದರೂ ವಕ್ಕರಿಸುತ್ತಾರೆ ಎನ್ನುವಂತಿರುತ್ತದೆ. ಅಂಥವರೆಲ್ಲ ಎಲ್ಲಿ, ತನ್ನ ವರ್ಚಸ್ಸಿನಿಂದಲೇ ಸೂಜಿಗಲ್ಲಿನಂತೆ ಆಕರ್ಷಿಸಬಲ್ಲ ನರೇಂದ್ರ ಮೋದಿಯವರೆಲ್ಲಿ! ವಿಶ್ವದಲ್ಲೇ ಅತಿದೊಡ್ಡ ಪ್ರಜಾಪ್ರಭುತ್ವ ವ್ಯವಸ್ಥೆಯ ಪ್ರಧಾನಿಯಾಗಿ ಅಂಥ ದೊಡ್ಡ ಜವಾಬ್ದಾರಿಯ ಹುದ್ದೆಯಲ್ಲಿದ್ದು ಸಹ ಶ್ರೀಸಾಮಾನ್ಯನ ಆತ್ಮಸಾಕ್ಷಿಯನ್ನು ಆಪ್ತವಾಗಿ ಮೀಟಬಲ್ಲ ಆ ಮೇರು ವ್ಯಕ್ತಿತ್ವವೆಲ್ಲಿ!
ಅದೇ ಹೇಳಿದ್ನಲ್ಲ, ಪಂಚಮಿಹಬ್ಬಕ್ಕೆ ತೌರೂರಿಗೆ ಕರೆಯಲು ಬಂದ ಅಣ್ಣ ಬೇರೆಯಲ್ಲ, ನರೇಂದ್ರ ಮೋದಿ ಬೇರೆ ಅಲ್ಲ. ಧನ್ಯತೆ ಎಂಬ ಪದಕ್ಕೆ ನಾನು ಅರ್ಥ ಕಂಡುಕೊಂಡೆನಾದರೆ ಅದು ಇವತ್ತೇ!