ಅಬುಧಾಬಿಯಲ್ಲಿ ವಿಜೃಂಭಿಸಿದ ಕನ್ನಡ ರಾಜ್ಯೋತ್ಸವ
ಅಬುಧಾಬಿ, ನವೆಂಬರ್ 10 : ಪ್ರತಿವರುಷದಂತೆ ಈ ವರುಷವೂ ಕರ್ನಾಟಕ ಸಂಘ ಅಬುಧಾಬಿ 62ನೆಯ ಕರ್ನಾಟಕ ರಾಜ್ಯೋತ್ಸವವನ್ನು ಬಹಳ ಅದ್ದೂರಿಯಾಗಿ ಇಂಡಿಯನ್ ಸೋಶಿಯಲ್ ಸೆಂಟರ್ ಸಭಾಂಗಣದಲ್ಲಿಆಚರಿಸಿತು.
ಕುವೈತ್ ಕನ್ನಡ ಸಂಘದಿಂದ ರಾಜ್ಯೋತ್ಸವಕ್ಕೆ ವಿಡಿಯೋ ಆಹ್ವಾನ
ಶುಕ್ರವಾರ, 03 ನವೆಂಬರ್ 2017ರ ಬೆಳಿಗ್ಗೆ 10.30ಕ್ಕೆ ದೀಪ ಬೆಳಗುವ ಮೂಲಕ ಕಾರ್ಯಕ್ರಮವನ್ನು ಡಾ. ಬಿ.ಆರ್. ಶೆಟ್ಟಿ ದಂಪತಿಗಳು ಉದ್ಘಾಟಿಸಿದರು. ಅತಿಥಿ ಭಾರತದಿಂದ ಆಗಮಿಸಿದ್ದ ಶಾಯರಿ ಸಾಮ್ರಾಟ್ ಅಸದುಲ್ಲಾ ಬೇಗ್, ಕರ್ನಾಟಕ ಸಂಘದ ಅಧ್ಯಕ್ಷರು ಸರ್ವೋತ್ತಮ ಶೆಟ್ಟಿ, ಇಂಡಿಯನ್ ಸೋಶಿಯಲ್ ಸೆಂಟರ್ ನ ಅಧ್ಯಕ್ಷರು ಜಯಚಂದ್ರ, ಕಾರ್ಯಾದರ್ಶಿ ಸಲಾಂ ಅವರು ಹಾಗು ಸಂಘದ ಪದಾಧಿಕಾರಿಗಳು ಜತೆಗೂಡಿದರು.
ಮನೋಹರ್ ತೋನ್ಸೆಯವರು ಸರ್ವರನ್ನು ಸ್ವಾಗತಿಸಿ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ವಿಧ್ಯುಕ್ತವಾಗಿ ಚಾಲನೆ ನೀಡಿದರು.
ಪ್ರಾರ್ಥನೆಯ ಬಳಿಕ ಸಮೂಹ ಗಾಯನ ನೃತ್ಯಗಳು ಪ್ರೇಕ್ಷಕರನ್ನು ಗಂಧರ್ವ ಲೋಕಕ್ಕೆ ಕರೆದೊಯ್ದವು. ಹುಲಿವೇಷ, ವೀರಗಾಸೆಗಳು ಊರಿನ ನೆನಪನ್ನು ಬಡಿದೆಬ್ಬಿಸಿದವು. ಕನ್ನಡ ಗಾನಸುಧೆಗಳು ಕನ್ನಡಮ್ಮನ ಹಿರಿಮೆಯನ್ನು ಇನ್ನೂ ಹೆಚ್ಚಿಸಿದವು. ಹಾಸ್ಯದ ಹೊನಲನ್ನು ಹರಿಸಿದ ಅಸಾದುಲ್ಲಾ ಬೇಗ್ ಅವರ ಶಾಯರಿಗಳಿಗೆ ಸೇರಿದವರೆಲ್ಲ ವ್ಹಾವ್ಹಾ ವ್ಹಾವ್ಹಾ ಎಂದು ಕೈ ಚಪ್ಪಾಳೆ ಶಿಳ್ಳೆಯ ಸುರಿಮಳೆಗೈದೆವು.
ರಾಜ್ಯೋತ್ಸವ ವಿಶೇಷ: ಸ್ವಾಗತಿಸಿ ಕುವೈತ್ ಕನ್ನಡ ಸಂಘ
ಪ್ರತಿ ವರುಷ ಈ ಸಂಘ ನೀಡುವ ಪ್ರತಿಷ್ಠಿತ ದ.ರಾ. ಬೆಂದ್ರೆ ಪ್ರಶಸ್ತಿಯನ್ನು ಈ ವರುಷ ಖ್ಯಾತ ಯಕ್ಷಗಾನ ಕಲಾವಿದರಾದ ಶೇಖರ್ ಶೆಟ್ಟಿಗಾರ್ ಕಿನ್ನಿಗೋಳಿ ಅವರಿಗೆ ಪ್ರದಾನ ಮಾಡಲಾಯಿತು. ಯು.ಎ.ಇ.ಯಲ್ಲಿ ಉದ್ಯೋಗದಲ್ಲಿದ್ದುಕೊಂಡು ಈ ಮರುಭೂಮಿಯಲ್ಲಿ ಯಕ್ಷಗಾನಕ್ಕೆ ತನ್ನದೇ ಆದ ಗಣನೀಯ ಸೇವೆ ಸಲ್ಲಿಸುತ್ತಿರುವುದಕ್ಕಾಗಿ ಇವರಿಗೆ ಈ ಪ್ರಶಸ್ತಿ ಒಲಿದಿದೆ.
ಸಮಾರಂಭದಲ್ಲಿ ಅಬ್ದುಲ್ ಸಲಾಂ ದೇರಳೆ ಕಟ್ಟೆಯವರ ಕನ್ನಡ ಪುಸ್ತಕ 'ವಿದ್ಯಾರ್ಥಿ ಮತ್ತು ವ್ಯಕ್ತಿತ್ವ ವಿಕಸನ' ಬಿಡುಗಡೆಗೊಳಿಸಲಾಯಿತು. ಶೇಖರ್ ಶೆಟ್ಟಿಗಾರ್ ಕಿನ್ನಿಗೋಳಿ ಇವರ ನಿರ್ದೇಶನದಲ್ಲಿ ಮೂಡಿಬಂದ ಯಕ್ಷಮಿತ್ರರು ದುಬೈನ ಬಾಲಕಲಾವಿದರಿಂದ 'ಶರಸೇತು ಬಂಧನ' ಎಂಬ ಪೌರಾಣಿಕ ಯಕ್ಷಗಾನ ಎಲ್ಲರ ಮನಸೂರೆಗೊಂಡಿತು.
ಈ ಸಂದರ್ಭದಲ್ಲಿ ವಿದ್ಯಾಕ್ಷೇತ್ರದಲ್ಲಿ, ಕ್ರೀಡಾ ಕ್ಷೇತ್ರದಲ್ಲಿ ಹಾಗು ಇನ್ನಿತರ ವಿಭಾಗಗಳಲ್ಲಿ ಉತ್ತಮ ಸಾಧನೆ ಮಾಡಿದ ಮಕ್ಕಳನ್ನು ಗೌರವಿಸಲಾಯಿತು. ಈ ಸಮಾರಂಭಕ್ಕೆ ತನ್ನದೇ ವಿನ್ಯಾಸವನ್ನು ರೂಪಿಸಿಕೊಟ್ಟ ವಿನ್ಯಾಸಗಾರರಾದ ಗಣೇಶ್ ರೈ ಇವರನ್ನು ಕೂಡ ಆತ್ಮೀಯವಾಗಿ ಸನ್ಮಾನಿಸಲಾಯಿತು. ಕಾರ್ಯಕ್ರಮವನ್ನು ರಜನಿ ಭಟ್ ಹಾಗು ಊರಿನಿಂದ ಆಗಮಿಸಿದ್ದ ಸಾಹಿಲ್ ರೈ ಅವರು ಅಚ್ಚುಕಟ್ಟಾಗಿ ನಿರೂಪಿಸಿದರು.
ಈ ಸಮಾರಂಭಕ್ಕೆ ಸಹಾಯ ಪ್ರೋತ್ಸಾಹ ಸಹಕಾರ ನೀಡಿದವರು ಹಾಗು ಪ್ರಾಯೋಜಕತ್ವ ವಹಿಸಿದ್ದವರನ್ನು ಗೌರವಿಸಲಾಯಿತು. ತದನಂತರ ಆದರ್ಶ ದಂಪತಿಗಳು ಕಾರ್ಯಕ್ರಮ ಸೊಗಸಾಗಿ ಮೂಡಿಬಂತು. ವಂದನಾರ್ಪಣೆಯನ್ನು ಮನೋಹರ ತೋನ್ಸೆ ಹಾಗು ಸರ್ವೋತ್ತಮ ಶೆಟ್ಟಿ ಮಾಡುವ ಮೂಲಕ ಕಾರ್ಯಕ್ರಮಕ್ಕೆ ಮಂಗಳ ಹಾಡಿದರು.
ಬೆಳಿಗ್ಗೆ 10:30ರಿಂದ ಪ್ರಾರಂಭವಾಗಿ ಸಂಧ್ಯಾಕಾಲ 07:30ರವರೆಗೆ ಜರುಗಿದ ನಿರಂತರ ಕಾರ್ಯಕ್ರಮಕ್ಕೆ ತುಂಬಿ ತುಳುಕುತಿದ್ದ ಸಭಾಂಗಣ ಒಂದು ಅದ್ದೂರಿ, ಯಶಸ್ವೀ, ಮನೋರಂಜನಾ ಸಮಾರಂಭ ಸಾಕ್ಷಿಯಾಯಿತು ಎನ್ನುವುದರಲ್ಲಿ ಸಂಶಯವಿಲ್ಲ.