ಅಮೆರಿಕಾದ ಕನೆಕ್ಟಿಕಟ್ನಲ್ಲಿ ಆಗಮಿಸಿದ ವಸಂತ
ಕೊನೆಗೂ
ಕಾಡಿಸಿ
ಓಡಿಹೋದ
ಚಳಿರಾಯ
ಹಿಂದಿನ
ದಿನ
ಸಣ್ಣಗೆ
ಸುರಿದು
ಹೋಗಿದ್ದ
ಮಳೆರಾಯ,
ನಾ
ಬಂದಿರುವೆ
ಎಂದು
ಎಲ್ಲೆಡೆ
ಸಾರುತ್ತಿದ್ದ
ವಸಂತರಾಯ...
ಹೊರಗಡೆ ಎಲ್ಲೆಡೆ ಗಿಡಮರಗಳ ಮೇಲೆ ಎಲೆಗಳು ಚಿಗುರಿ, ಬಣ್ಣ ಬಣ್ಣದ ಹೂವುಗಳು ಅರಳುವುದನ್ನೇ ಕಾಯುತ್ತಿರುವ ಧುಂಬಿಗಳ ಝೇಂಕಾರ, ಪಕ್ಷಿಗಳ ಚಿಲಿಪಿಲಿ ಇಂಚರ... ಇವೆಲ್ಲದರ ಮಧ್ಯೆ ಒಳಗಡೆ.. ನಮ್ಮ ಕನ್ನಡ ಹೀರೋ ರಾಂಬೊ, ಅಣ್ಣಾಬಾಂಡ್ ಪವರ್ ಸ್ಟಾರ್ ಪುನೀತ್, ಒಳಗೆ ಸೇರಿದರೆ ಗುಂಡು-ಹುಡುಗಿ ಆಗುವಳು ಗಂಡು ಪ್ರಖ್ಯಾತಿಯ ಮಾಲಾಶ್ರೀ, ಕರಾಟೆಕಿಂಗ್ - ಆಟೋರಾಜ ಶಂಕರ್ ನಾಗ್ ಎಲ್ಲಾ ಒಮ್ಮೆಲೇ ಸ್ಟೇಜ್ ಮೇಲೆ ಬಂದು ವಸಂತನ (ಯುಗಾದಿ) ಸ್ವಾಗತ ಮಾಡಿದಾಗ ಹೇಗಾಗಿರಬೇಡ? ದೂರದ ಅಮೆರಿಕಾದ ಕನೆಕ್ಟಿಕಟ್ನಲ್ಲಿರುವ ನಮ್ಮ ಕನ್ನಡದ ಅಭಿಮಾನಿಗಳಿಗೆ!
ಏಪ್ರಿಲ್ 27, ಶನಿವಾರದಂದು ಕನೆಕ್ಟಿಕಟ್ನ Newingtonನಲ್ಲಿರುವ ಶ್ರೀ ವಲ್ಲಬ್ಧಂ ಆಡಿಟೋರಿಯಮ್ನಲ್ಲಿ ಹೊಯ್ಸಳ ಕನ್ನಡ ಕೂಟ ಯಶಸ್ವಿಯಾಗಿ ನಡೆಸಿಕೊಟ್ಟ ಯುಗಾದಿ-2013 ಕಾರ್ಯಕ್ರಮಕ್ಕೆ, ಗಿಡ-ಮರ, ಹಕ್ಕಿ-ಪಕ್ಷಿಗಳಂತೆ ವಸಂತನ ಆಗಮನವನ್ನೇ ಎದುರು ನೋಡುತ್ತಿದ್ದ ಹೊರನಾಡ ಕನ್ನಡಿಗರು ಸಡಗರ, ಸಂಭ್ರಮದಿಂದ ಭಾಗವಹಿಸಿದರು.
ವ್ರಂದ ಐತ್ಹಲ್ ಮತ್ತು ಶ್ರುತಿ ನಾಗರಾಜ್ ಅವರು ಹಾಡಿದ ಶ್ರೀಗಣೇಶ ಸ್ತುತಿಯೊಂದಿಗೆ ಈ ಯುಗಾದಿ ಕಾರ್ಯಕ್ರಮ ಸರಿಯಾಗಿ ಮಧ್ಯಾನ್ಹ 3.30ಕ್ಕೆ ಪ್ರಾರಂಭವಾದ ಮೇಲೆ, ಕನ್ನಡ ಕೂಟದ ಹೊಸ ಅಧ್ಯಕ್ಷರಾದ ದಿನೇಶ್ ಹರ್ಯಾಡಿ ಎಲ್ಲರನ್ನು ಸ್ವಾಗತಿಸಿದರು. ಯಶವಂತ್ ಗಡ್ಡಿ, ರಘು ಸೋಸಲೆ, ಸುಂದರೇಶ್ ರವರು ಹಾಡಿದ ಕನ್ನಡ ನಾಡ ಗೀತೆ "ಜೈ ಭಾರತ ಜನನಿಯ ತನುಜಾತೆ ಜಯಹೇ ಕರ್ನಾಟಕ ಮಾತೆ" ಕೇಳಿಬಂದ ಕೂಡಲೇ ಸಭಿಕರೆಲ್ಲ ಎದ್ದು ನಿಂತು ತಾವೂ ಹಾಡತೊಡಗಿದರು.
ನಂತರ P.G ಬೆಂಗಳೂರವರ ನಿರೂಪಣೆಯಲ್ಲಿ ನಡೆದ "ಸ್ಯಾಂಡಲ್ ವುಡ್ ಸ್ಟಾರ್ - ಮಕ್ಕಳ ಫ್ಯಾಷನ್ ಶೋ" ನಲ್ಲಿ 7 ತಿಂಗಳ ಪುಟಾಣಿ ಆರುಶ್ ನಾಗರಾಜ್ "ರಾಂಬೊ ರಾಂಬೊ" ಅಂತಾ ಸ್ಟೈಲ್ ನಲ್ಲಿ, ಪ್ರಿಥ್ವಿ ಸೋಸಲೆ "ಅಣ್ಣಾ ಬಾಂಡ್ ಅಣ್ಣಾ ಬಾಂಡ್" ಅಂತಾ ಸೂಪರ್ ಬೈಕಲ್ಲಿ, ಸಚಿತ್ ಹುಲಿಕೆರೆ "ಶಂಕರ್ ನಾಗ್" ಆಗಿ, ಮತ್ತೆ ಕೆಲವರು ಪುರಂದರ ದಾಸರಾಗಿ, ಕಣ್ಣು ಕಾಣದ ತಂದೆತಾಯಿಯರನ್ನು ತನ್ನ ಹೆಗಲು ಮೇಲೆ ಹೊತ್ತ ಶ್ರವಣ ಕುಮಾರನಾಗಿ...ವಿಧ ವಿಧದ ಬಟ್ಟೆಗಳನ್ನು ಧರಿಸಿ ಸೊಗಸಾಗಿ ಸ್ಟೇಜ್ ಮೇಲೆ ಸಂಗೀತಕ್ಕೆ ಸರಿಯಾಗಿ ಹೆಜ್ಜೆ ಹಾಕಿದ್ದು ಎಲ್ಲರ ಮನ ಸೆಳೆಯಿತು.
ರಂಜಿಸಿದ ಸಾಂಸ್ಕೃತಿಕ ಕಾರ್ಯಕ್ರಮಗಳು
* ಶ್ರೀ ವಿಘ್ನರಾಜಂ ಭಜೆ - ಶಾರದಾ ನೋರಿ ನಿರೂಪಣೆಯಲ್ಲಿ ಮಕ್ಕಳಿಂದ ಕುಚುಪುಡಿ ನೃತ್ಯ.
* ಶ್ರಮದ ಬೆಲೆ - ರಘು ಸೋಸಲೆಯವರ ನಿರೂಪಣೆಯಲ್ಲಿ ಅಮೆರಿಕನ್ನಡ ಶಾಲೆಯ ಮಕ್ಕಳಿಂದ ಕಿರುನಾಟಕ.
* ಮಾಮವತು ಶ್ರೀ ಸರಸ್ವತಿ - ಶಾರದಾ ನೋರಿ ನಿರೂಪಣೆಯಲ್ಲಿ ಮಕ್ಕಳಿಂದ ಕುಚುಪುಡಿ ನೃತ್ಯ.
* ಕು.ಮೇಘ ರಾವ್ ನೃತ್ಯ ನಿರ್ದೇಶನದಲ್ಲಿ ಸುಂದರವಾಗಿ ಮೂಡಿಬಂದ ಮಕ್ಕಳ ಕೋಲಾಟ ನೃತ್ಯ.
* "123 ವಿಷ್ಣುವರ್ಧನ" ಅಂತಾ ನಮ್ಮನ್ನೆಲ್ಲ ಅಗಲಿದರೂ ಕನ್ನಡಿಗರ ಮನದಲ್ಲಿ ಶಾಶ್ವತವಾಗಿ ನೆಲೆಯೂರಿರುವ ಸಾಹಸಸಿಂಹ ಡಾ|ವಿಷ್ಣುವರ್ಧನ್ ನೆನಪಿಗಾಗಿ "ವಿಷ್ಣು ದಾದ - ಒಂದು ಕಿರುನೋಟ". ಸರಿತಾ ಸದಾನಂದ್ ಮತ್ತು ಅನು ಗೌಡ ಅವರ ನಿರೂಪಣೆಯಲ್ಲಿ ಮೂಡಿಬಂದ ಈ ಸುಂದರ ಮಕ್ಕಳ ನೃತ್ಯ ಕಾರ್ಯಕ್ರಮ ಭರ್ಜರಿ ಕರತಾಡನಗಳಿಸಿತ್ತು.
* ಮಿಮಿಕ್ರಿ ಕಾರ್ಯಕ್ರಮ - ಪ್ರಶಾಂತ್ ರವರಿಂದ.
* ವರಪ್ರದ ನಮನ - ರಶ್ಮಿ ವಿಶ್ವನಾಥ್ ನಿರೂಪಣೆಯಲ್ಲಿ ಮಕ್ಕಳಿಂದ ಯೋಗ ನೃತ್ಯ.
* "ತೆನಾಲಿ ರಾಮ ಮತ್ತು ಚಿನ್ನದ ಮಾವಿನ ಹಣ್ಣು" - ಅಂಜು ಸೋಮನಾಥ್ ನಿರೂಪಣೆಯಲ್ಲಿ ಮಕ್ಕಳಿಂದ ನಾಟಕ.
* ಇತ್ತೀಚೆಗೆ ಅಗಲಿತ ಚೇತನ ಪಿಬಿಎಸ್ ಅವರ ನೆನಪಿಗಾಗಿ "ಪಿಬಿಎಸ್ - ಒಂದು ಸವಿ ನೆನಪು" ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟವರು ಇಂದು ದೊಡ್ಡಮನೆ, ಯಶವಂತ್ ಗಡ್ಡಿ, ಪ್ರದೀಪ್ ಹಾಗು ರಘು ಸೋಸಲೆ.
* ಅರ್ಜುನನ ಅವಾಂತರ - ರಘು ಸೋಸಲೆ ಮತ್ತು ಸಂಗಡಿಗರಿಂದ ಒಂದು ಕಿರು ನಗೆ ಪ್ರಹಸನ.
* ಕೇವಲ ನಾಲ್ಕು ವರುಷಗಳ ಹಿಂದೆ ಜನ್ಮ ತಾಳಿದ "ನಾವಿಕ(ನಾವು ವಿಶ್ವ ಕನ್ನಡಿಗರು)" ತಂಡ, ನಮ್ಮ ಕನ್ನಡ ನಾಡಿನ ಶ್ರೀಮಂತ ಕಲೆ-ಸಾಹಿತ್ಯ-ಸಂಸ್ಕೃತಿ, ಭವ್ಯ ಪರಂಪರೆಯ ದಿವ್ಯ ದರ್ಶನ ಮಾಡಿಸಲು, ವಿಶ್ವದ ಎಲ್ಲೆಡೆ ಇರುವ ಕನ್ನಡಿಗರನ್ನು ಒಗ್ಗೂಡಿಸಿ.. ಕನ್ನಡದ ಕಂಪನ್ನು ಎಲ್ಲೆಡೆ ಹರಡಲು, ಈ ಬಾರಿ ಆಗಸ್ಟ್ 30 - ಸೆಪ್ಟೆಂಬರ್ 1, 2013 ರಂದು ಅಮೆರಿಕಾದ ಬಾಸ್ಟನ್ ನಗರದಲ್ಲಿ ಆಯೋಜಿಸಿರುವ ಎರಡನೇ ವಿಶ್ವ ಕನ್ನಡ ಸಮ್ಮೇಳನದ ಬಗ್ಗೆ ಒಂದು ವರದಿ - ನಾವಿಕ ತಂಡದ ರಾಜೂರ್, ಕೃಪಾ ರಾಜುರ್, ನಾಗರಾಜ್, ಸದಾನಂದ್, ವಿಜಯ್, ಪ್ರಿಯಾ ಹರ್ಯಾಡಿ, ಚಂದ್ರ ಭಟ್, ಶೈಲೇಂದ್ರ ರಿಂದ.
ಅರುಣ್ ಪಾಲಾಕ್ಷಪ್ಪನವರ ವಂದನಾರ್ಪಣೆಯೊಂದಿಗೆ ಮುಗಿದ ಈ ಯುಗಾದಿಯ ಕಾರ್ಯಕ್ರಮದಲ್ಲಿ ಭರ್ಜರಿ ಹೋಳಿಗೆ ಊಟ ಮಾಡಿ, ಇನ್ನು ಹೆಚ್ಚು ಹೆಚ್ಚು ಕನ್ನಡ ಕಾರ್ಯಕ್ರಮಗಳು ನಡೆಯಲಿ ಎಂದು ಹೊಯ್ಸಳ ಕನ್ನಡ ಕೂಟದ ಹೊಸ ಕಮಿಟಿಯವರಿಗೆ ಧನ್ಯವಾದ ಹೇಳಿ ಮನೆಕಡೆಗೆ ಹೊರಟಾಗ ರಾತ್ರಿ ಹತ್ತಾಗಿತ್ತು.
ಹಾಗೆ ಕಾರಲ್ಲಿ ... ರಾಜ್ ಹಾಡಿದ "ವಸಂತ ಕಾಲ ಬಂದಾಗ, ಮಾವು ಚಿಗುರಲೇ ಬೇಕು...." ಅಂತ ನಾನು ಗುನುಗಿದರೆ, ಹಿಂದಿನ ಸೀಟಿನಿಂದ "ಕಂಕಣ ಕೂಡಿ ಬಂದಾಗ, ಮದುವೆ ಆಗಲೇ ಬೇಕು" ಅಂತಾ 7ರ ಮಗ ಗುನುಗಿದ್ದ ಕೇಳಿ.. "ಹೂಂ ಆಯಿತಪ್ಪ ಮಾಡೋಣಾ" ಅಂತಾ ಪಕ್ಕದಲ್ಲಿ ಕೂತಿದ್ದ ಗೊಣಗಿದ್ದು ಕೇಳಿಸಿತ್ತು!