ಸಖತ್ ಮಜಾ ಕೊಟ್ಟ ಸಿಂಗಾರ ಗುಂಡಿನ ಆಟ!
ಕನ್ನಡ ಸಂಘ (ಸಿಂಗಪುರ) ಪ್ರತಿ ವರ್ಷ ಆಯೋಜಿಸುತ್ತಿರುವ 'ಬೋಲಿಂಗ್' ಸ್ಪರ್ಧೆಯು ಸದಸ್ಯರನ್ನು ತನ್ನೆಡೆಗೆ ಸೆಳೆಯುವಲ್ಲಿ ಯಶಸ್ವಿಯಾಗಿದೆ ಎಂಬುದಕ್ಕೆ ಈ ಬಾರಿ ಬಹು ಉತ್ಸುಕತೆಯಿಂದ ಪಾಲ್ಗೊಂಡ ಸದಸ್ಯರ ಸಂಖ್ಯೆಯೇ ಸಾಕ್ಷಿ!
'ಸಿಂಗಾರ ಬೋಲಿಂಗ್ -2013' ಸ್ಪರ್ಧೆಯನ್ನು ಸೆಪ್ಟೆಂಬರ್ 1, 2013ರಂದು ಟೆಸ್ಸೆನ್ಸನ್ ರೋಡ್ನಲ್ಲಿರುವ ಸಿವಿಲ್ ಸರ್ವಿಸ್ ಕ್ಲಬ್ಬಿನಲ್ಲಿ ಆಯೋಜಿಸಲಾಗಿತ್ತು. ಆಸಕ್ತರು ವಯೋಮಿತಿಯಿಲ್ಲದೆ ಬಂದು ಸ್ಪರ್ಧಾನ್ಮುಖ ಭಾವನೆಯಲ್ಲಿ ಆಡಿದ್ದು, ಒಂದು ಕುಟುಂಬದವರೆಲ್ಲ ಸೇರಿ ಆಚರಿಸಿದ ಕಾರ್ಯಕ್ರಮವೆನ್ನುವಂತಿತ್ತು. ಇದರಲ್ಲಿ ಅನೇಕರು ಹೊಸದಾಗಿ ಸಂಘದ ಸದಸ್ಯತ್ವವನ್ನು ಪಡೆದು ಭಾಗಿಯಾಗಿದ್ದು ವಿಶೇಷವಾಗಿತ್ತು.
ಕನಕೇಶ್, ರಾಮಪ್ರಸಾದ ಹಾಗೂ ವೆಂಕಟೇಶ್ ಗದ್ದೆಮನೆ ಅವರ ನೇತೃತ್ವದಲ್ಲಿ ನಡೆದ ಈ ಬೋಲಿಂಗ್ ಸ್ಪರ್ಧೆಯಲ್ಲಿ ನೋಂದಾಯಿಸಿದ ಸದಸ್ಯರನ್ನು ಯಾದೃಚ್ಛಿಕವಾಗಿ ವಿಂಗಡಿಸಿ ಪ್ರತಿ ಗುಂಪಿಗೆ 4 ಜನರನ್ನೊಳಗೊಂಡ, 15 ತಂಡಗಳಾಗಿ ವಿಂಗಡಿಸಲಾಗಿತ್ತು.
ಸ್ಪರ್ಧೆ ಪ್ರಾರಂಭಗೊಳ್ಳುವುದ್ದಕ್ಕೆ ಮುಂಚಿತವಾಗಿ ಅಭ್ಯಾಸಕ್ಕೆಂದು 5 ನಿಮಿಷಗಳ ಕಾಲವನ್ನು ಮೀಸಲಿಡಲಾಗಿತ್ತು. ಇದರಲ್ಲಿ ಅವಸರವಾಗಿ ಇದ್ದ-ಬಿದ್ದ ಗುಂಡುಗಳನ್ನೆಲ್ಲಾ ಎತ್ತಿ-ಎತ್ತಿ ಹಿಡಿದು ಭಾರ, ಗಾತ್ರ, ಬಣ್ಣಗಳನ್ನೆಲ್ಲಾ ಪರೀಕ್ಷಿಸಿ ಕೊನೆಗೂ ಆಯ್ದ ಗುಂಡನ್ನು ಉರುಳಿಸಿ, ಅದು ಗುರಿಯೋ.. ಮೋರಿಯೋ ತಲುಪುವವರೆಗೆ ಪಟುಗಳೂ ಸಹ ವಾಲಿ, ಕಾಲೂರಿ, ದಿಕ್ಕು ತಪ್ಪುತ್ತಿರುವ ಗುಂಡುಗಳ ದಿಕ್ಕನ್ನೇ ಬದಲಾಯಿಸುವ ವಿಫಲ ಪ್ರಯತ್ನಕ್ಕೆ ಮೊರೆಹೋಗುತ್ತದ್ದ ದೃಶ್ಯ ಸಾಮಾನ್ಯವಾಗಿತ್ತು.
ಅಭ್ಯಾಸದಲ್ಲಿ ಚೆನ್ನಾಗಿ ಉರುಳಿ ನಾಯಕರ ಮೆಚ್ಚುಗೆಗೆ ಪಾತ್ರವಾದ ಗುಂಡುಗಳು ನಿಜ ಪಂದ್ಯಾವಳಿಗಳಲ್ಲಿ ಏಕೋ ಮುನಿಸಿಕೊಂಡು ಸೊಟ್ಟ ಮೂತಿ ತಿರುವಿ ಮೋರಿಯಲ್ಲಿ ಬಿದ್ದು ಆತ್ಮಾಹುತಿ ಮಾಡಿಕೊಳ್ಳುತ್ತಿದ್ದರೆ, ನುರಿತ ಪಟುಗಳ ಗುಂಡುಗಳು ರಭಸದಿಂದ ಮುನ್ನುಗ್ಗಿ ಇದ್ದ-ಬದ್ದ ಬೋಲಿಂಗ್ ಪಿನ್ಗಳನ್ನು ಛಿದ್ರಗೊಳಿಸಿ ಕೇಕೆ, ಚಪ್ಪಾಳೆಗಳನ್ನು ಗಿಟ್ಟಿಸಿಕೊಳ್ಳುತ್ತಿದ್ದವು.
ಕೊನೆಯ ಸುತ್ತಿನಲ್ಲಿ ಆಗಲೇ ಎಲ್ಲರ ಕಣ್ಣು ಅತೀ ಹೆಚ್ಚು ಅಂಕ ಪಡೆದ ತಂಡದೆಡೆಗೆ ನಾಟಿತ್ತು. ಮೂರು ಸುತ್ತುಗಳು ಮುಗಿದ ನಂತರದ ನಿರಂಜನ್ ಕುಮಾರ್, ನವೀನ್, ವೆಂಕಟೇಶ್ ಹೆಚ್.ಆರ್. ಹಾಗೂ ಉಷಾ ಸುಬ್ರಮಣ್ಯ ಅವರ ತಂಡ 1552 ಅಂಕಗಳೊಂದಿಗೆ ಮೊದಲನೆಯ ಸ್ಥಾನಕ್ಕೆ ಲಗ್ಗೆ ಹಾಕಿದರೆ, ವೆಂಕಟೇಶ್ ಜಿ.ಎನ್., ಶಮೇಂದ್ರ ಶಿವಣ್ಣ, ಸಂಪತ್ ಮೈಸೂರ್ ಹಾಗೂ ಸಂಧ್ಯಾ ರಾಮಪ್ರಸಾದ್ ಅವರ ತಂಡ 1360 ಅಂಕಗಳೊಂದಿಗೆ ಎರಡನೆ ಸ್ಥಾನ ಗಳಿಸಿದರು.
ವೈಯಕ್ತಿಕವಾಗಿ ಅತ್ಯಧಿಕ ಅಂಕಗಳನ್ನು ಪಡೆದವರ ಪಟ್ಟಿಯಲ್ಲಿ ಪುರುಷರ ವಿಭಾಗದಲ್ಲಿ ಕನಕೇಶ್ .ಕೆ.ಎ. 428 ಅಂಕಗಳೊಂದಿಗೆ ಮತ್ತು ಮಹಿಳೆಯರ ವಿಭಾಗದಲ್ಲಿ ಉಷಾ ಸುಬ್ರಮಣ್ಯ ಅವರು 427 ಅಂಕಗಳೊಂದಿಗೆ ಅಗ್ರರೆನಿಸಿದರು. ಎಲ್ಲ ವಿಜೇತರಿಗೆ ಕನ್ನಡ ಸಂಘ (ಸಿಂಗಪುರ) ನವೆಂಬರಿನಲ್ಲಿ ಆಯೋಜಿಸಲಿರುವ 'ಕನ್ನಡ ರಾಜ್ಯೋತ್ಸವ'ದ ಕಾರ್ಯಕ್ರಮದಲ್ಲಿ ಬಹುಮಾನಗಳನ್ನು ವಿತರಿಸಲಾಗುವುದು.
ಇದೇ ರೀತಿಯಲ್ಲಿ ಕನ್ನಡ ಸಂಘದ ಮುಂಬರುವ ಸ್ಪರ್ಧೆಗಳಲ್ಲಿ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಭಾಗವಹಿಸಿ, ಸಂಘದ ಸರ್ವತೋಮುಖ ಬೆಳವಣಿಗೆಗೆ ಕಾರಣರಾಗಬೇಕೆಂದು ಸಂಘದ ಮೂಲಕ ವಿನಂತಿಸಿಕೊಳ್ಳಲಾಯಿತು.