ಆಕ್ಲೆಂಡಿನಲ್ಲಿ ಪಿಬಿ 'ಶ್ರೀನಿವಾಸಯತೇ ನಮಹಃ'
ನಮ್ಮ ನ್ಯೂಜಿಲೆಂಡ್ ಕನ್ನಡ ಕೂಟದ ಯಾವುದೇ ಕಾರ್ಯಕ್ರಮವಿರಲಿ ಅದರಲ್ಲಿ ಪಿ.ಬಿ.ಶ್ರೀನಿವಾಸ್ ಅವರು ಹಾಡಿದ ಹಾಡುಗಳು ಬಲು ಜನಪ್ರಿಯ. ಡಾ.ರಾಜ್ ಅವರ ಹಳೆಯ ಪ್ರಸಿದ್ಧ ಚಿತ್ರಗಳ ಹಾಡುಗಳಿಗೆ ದನಿ ನೀಡಿದ್ದ ಪಿಬಿಎಸ್ ಅವರಿಗೆ ಶ್ರದ್ಧಾಂಜಲಿಯನ್ನರ್ಪಿಸಲು ಆರಿಸಿಕೊಂಡಿದ್ದು "ಬೆಟ್ಟದ ಹೂವು" ಚಿತ್ರದ ಹಾಡು.
"ತಾಯಿ ಶಾರದೆ ಲೋಕ ಪೂಜಿತೆ ಜ್ಞಾನದಾತೆ ನಮೋಸ್ತುತೆ" ಎಂದು ನಮ್ಮ ಕನ್ನಡ ಶಾಲೆಯ ಮಕ್ಕಳು ಮತ್ತು ಶಿಕ್ಷಕ ವೃಂದ ಕೈಜೋಡಿಸಿ ಕಣ್ಣು ಮುಚ್ಚಿ ಹಾಡುತ್ತಿದ್ದಾಗ ಸಭಿಕರ ಮನ ತುಂಬಿ ಬಂದಿತ್ತು. ಈ ಹಾಡು ಮುಗಿದ ನಂತರ ಎಲ್ಲರೂ ದಿವಂಗತ ಪಿ.ಬಿ.ಶ್ರೀನಿವಾಸ್ ಅವರ ಸ್ಮರಣಾರ್ಥ ಎರಡು ನಿಮಿಷ ಮೌನವಾಚರಿಸಿ ಗೌರವ ಸಲ್ಲಿಸಿದೆವು.
ದಿನಾಂಕ 5ನೇ ಮೇ 2013, ಭಾನುವಾರ ಆಕ್ಲೆಂಡಿನ ಮೌಂಟ್ ಈಡನ್ ಯುದ್ಧ ಸ್ಮಾರಕ ಭವನದಲ್ಲಿ ನಡೆದ ಯುಗಾದಿ ಕಾರ್ಯಕ್ರಮದಲ್ಲಿ ಪಿಬಿಎಸ್ ಅವರು ಹಾಡಿದ ಅನೇಕ ಇತರ ಹಾಡುಗಳನ್ನು ಕೇಳಿ ಸಂತಸಪಟ್ಟೆವು. ಉಮೇಶ್ ಪ್ರಸಾದ್ ಅವರಿಂದ ಸಾಂಪ್ರದಾಯಿಕವಾಗಿ ಪೂಜೆ ಮತ್ತು ಹಿರಿಯ ಸದಸ್ಯ ಸತ್ಯನಾರಾಯಣ ಅವರಿಂದ ಹಿತವಚನದ ಮೂಲಕ ಕಾರ್ಯಕ್ರಮ ಪ್ರಾರಂಭಿಸಲಾಯಿತು.
ಶ್ವೇತವಸ್ತ್ರಧಾರಿ ಚಿಣ್ಣರು ಇಡೀ ವೇದಿಕೆಯನ್ನಾವರಿಸಿಕೊಂಡು ಪ್ರಾರ್ಥನೆ ಹಾಡಿದ ನಂತರ ಪಿಬಿಎಸ್ ಮತ್ತು ಡಾ.ರಾಜ್ ಅವರು ಜನಪ್ರಿಯಗೊಳಿಸಿದ ಬಬ್ರುವಾಹನ ಚಿತ್ರದ "ಯಾರು ತಿಳಿಯರು ನಿನ್ನ ಭುಜಬಲದ ಪರಾಕ್ರಮ" ಗೀತೆಯನ್ನು ಹಾಡಿ ನರ್ತಿಸಿದವರು ಸತ್ಯಕುಮಾರ್ ಕಟ್ಟೆ ಮತ್ತು ಬಾಲ ಕಲಾವಿದ ಸುಮಂತ ಮೀನಾಕ್ಷಿ. ಈ ನೃತ್ಯ ಮುಗಿಯುವ ಮುನ್ನ ಅರ್ಧದಷ್ಟು ಸಭಿಕರೂ ಎದ್ದು ನರ್ತಿಸಿ ಕಲಾವಿದರಿಗೆ ವಿಶಿಷ್ಟವಾಗಿ ಮೆಚ್ಚುಗೆ ವ್ಯಕ್ತಪಡಿಸಿದರು. ಜಾನಪದ ಸೊಗಡಿನ "ಮೊದಲು ನೆನೆದೆವು ಸೋಮೇಶ ಲಿಂಗನ" ಸಮೂಹ ಗೀತೆಯನ್ನು ಸುಶ್ರಾವ್ಯವಾಗಿ ಹಾಡಿದವರು ಶ್ವೇತಾ ಪ್ರವೀಣ್, ಸತ್ಯ ಕುಮಾರ್, ಮಂಜುಳಾ ಶಿಮೊಗ್ಗ ಮತ್ತು ಮಲಕಪ್ಪ ಅವರುಗಳು.
"ಬೀಚಿ" ಶತಮಾನೋತ್ಸವದ ಅಂಗವಾಗಿ ಅವರ ಸಾಹಿತ್ಯ ಪರಿಚಯ ಮತ್ತು ಅವರ "ತಿಂಮನ ತಲೆ" ಕಾದಂಬರಿಯಿಂದಾಯ್ದ ಎರಡು ಹಾಸ್ಯ ತುಣುಕುಗಳ ಕಿರು ನಾಟಕಗಳನ್ನು ಪ್ರದರ್ಶಿಸಲಾಯಿತು. "ತಿಂಮನ ತಲೆ" ಮಕ್ಕಳ ನಾಟಕದಲ್ಲಿ ಭಾಗವಹಿಸಿದವರು ಸಂಜನಾ ಕಟ್ಟೆ, ಸುಮಂತ ಮೀನಾಕ್ಷಿ, ಸುಮುಖ ತಿಪ್ಪೇಸ್ವಾಮಿ ಮತ್ತು ನಿಧಿ ವಿಜಯ್. ಗಂಡಹೆಂಡತಿ ಜಗಳದ ಕಾರಣ ಮಾತು ನಿಂತಾಗ ಸಂಪರ್ಕ ಹೇಗೆ? "ಮನೆಗೊಂದು ರಾಮು" ನಾಟಕದಲ್ಲಿ ಇದನ್ನು ಹಾಸ್ಯಮಯವಾಗಿ ಅಭಿನಯಿಸಿದವರು ಸುಹಾಸ್ ಶಾನುಭೋಗ್ ಮತ್ತು ಸಿಂಧು ಸುಹಾಸ್ ದಂಪತಿಗಳು.
ಗಂಡ ಹೆಂಡತಿ ಮನಸ್ತಾಪದ ವಸ್ತುವಿನ ಮತ್ತೊಂದು ಹಾಸ್ಯ ನಾಟಕ "ಐ ಲವ್ ಯೂ" ಕೌಟುಂಬಿಕ ಸಲಹೆಗಾರ್ತಿಯ ಮಾತು ಕೇಳಿ ನಾಲ್ವರು ಸ್ನೇಹಿತರು ತಮ್ಮ ಹೆಂಡತಿಗೆ "ಐ ಲವ್ ಯೂ" ಎಂದು ಮೆಸೇಜ್ ಕಳಿಸಿದಾಗ ಆದ ಪರಿಣಾಮ ಪ್ರೇಕ್ಷಕರಿಗೆ ಮನರಂಜನೆ ನೀಡಿತು.
ಪ್ರವೀಣ್ ಮಂದೆರ್ವಾಡ್ ಅವರು ಅತಿಥಿಗಳಾಗಿ ಆಗಮಿಸಿದ್ದ ಇನ್ಪೋಸಿಸ್ ಸಂಸ್ಠೆಯ ಕೆ. ದಿನೇಶ್ ಅವರ ಕಿರು ಪರಿಚಯವನ್ನು ಮಾಡಿಕೊಟ್ಟರು. ದಿನೇಶ್ ಅವರು ಇನ್ಪೋಸಿಸ್ ಯಶಸ್ವಿಯಾದದ್ದು ಹೇಗೆ ಎಂದು ವಿವರಿಸಿದರು. ನ್ಯೂಜಿಲೆಂಡ್ ಕನ್ನಡ ಕೂಟದ ಅಧ್ಯಕ್ಷ ಗೋವಿಂದ ಮರಾಠೆ ಅವರು ಅತಿಥಿಗಳಿಗೆ ಹೂಗುಚ್ಛ ನೀಡಿ ಸನ್ಮಾನಿಸಿದರು. ಕನ್ನಡ ಶಾಲೆಯ ಎಲ್ಲಾ ಮಕ್ಕಳನ್ನು ಬಹುಮಾನ ನೀಡಿ ಸನ್ಮಾನಿಸಲಾಯಿತು. ಕಾರ್ಯದರ್ಶಿ ವಿಜಯ್ ನಾರಸಿಂಹ ಅವರು ವಂದನಾರ್ಪಣೆ ಮಾಡಿದರು. ಪ್ರವೀಣ್ ಮಂದೆರ್ವಾಡ ಮತ್ತು ಉಷಾ ರವಿಶಂಕರ್ ಅವರು ಕಾರ್ಯಕ್ರಮ ನಿರೂಪಿಸಿದರು.
ಕರ್ನಾಟಕ ನಾಡಗೀತೆ, ಭಾರತ ಮತ್ತು ನ್ಯೂಜಿಲೆಂಡ್ ರಾಷ್ಟ್ರಗೀತೆಗಳನ್ನು ಹಾಡಿ ನಂತರ "ಬೇವು ಬೆಲ್ಲ ಮತ್ತು ಹಬ್ಬದೂಟ" ಸವಿದು ಕಾರ್ಯಕ್ರಮವನ್ನು ಮುಕ್ತಾಯಗೊಳಿಸಲಾಯಿತು.