2ನೇ ನಾವಿಕ ವಿಶ್ವ ಕನ್ನಡ ಸಮ್ಮೇಳನಕ್ಕೆ ಭರದ ಸಿದ್ಧತೆ
40 ವರ್ಷಕ್ಕಿಂತಲೂ ಅಧಿಕ ಸಮಯದಿಂದ ಬಾಸ್ಟನ್ನಲ್ಲಿ ಬಂದು ನೆಲೆಸಿರುವ ಕನ್ನಡಿಗರು ಹಾಗೂ ಕನೆಕ್ಟಿಕಟ್ ಹೊಯ್ಸಳ ಕನ್ನಡ ಕೂಟ ಸದಸ್ಯರ ಸಹಯೋಗದಲ್ಲಿ ನಾವಿಕ ವಿಶ್ವ ಸಮ್ಮೇಳನ ನಡೆಯಲಿದ್ದು, ಸಮಾಜದ ವಿವಿಧ ವರ್ಗಗಳ ಜನರು ಒಂದೆಡೆ ಕಲೆಯುವ ಅವಕಾಶವನ್ನು ದೊರಕಿಸಿಕೊಡಲಿದೆ ಎನ್ನುತ್ತಾರೆ ನಾವಿಕ ಎರಡನೆಯ ವಿಶ್ವ ಕನ್ನಡ ಸಮ್ಮೇಳನ 2013ರ ಸಂಚಾಲಕರಾದ ಡಾ.ಶರಣಬಸವ ರಾಜೂರ.
ನಾವಿಕ ಸಮ್ಮೇಳನದ ಸಿದ್ಧತೆ ಮತ್ತು ರೂಪುರೇಷೆಗಳನ್ನು ಮಾಧ್ಯಮದವರಿಗೆ ತಿಳಿಸಿಕೊಡುವ ಉದ್ದೇಶದಿಂದ ಸಂಚಾಲಕ ಶರಣಬಸವ ರಾಜೂರ, ಸಂಸ್ಥೆಯ ಅಧ್ಯಕ್ಷ ಡಾ. ಕೇಶವ ಬಾಬು, ಎಂ. ಕೃಷ್ಣಮೂರ್ತಿ ಮುಂತಾದವರು ಬೆಂಗಳೂರಿನ ಪ್ರೆಸ್ ಕ್ಲಬ್ನಲ್ಲಿ ಮಂಗಳವಾರ ಪತ್ರಿಕಾಗೋಷ್ಠಿ ನಡೆಸಿದರು.
ಈ ಸಮ್ಮೇಳನದಲ್ಲಿ ಜಗತ್ತಿನ ಮೂಲೆ ಮೂಲೆಗಳಿಂದ ಕನ್ನಡ ಮೂಲದ ಕಲಾವಿದರು, ಸಾಹಿತಿಗಳು, ಗಣ್ಯರು, ಉದ್ಯಮಿಗಳು, ಚಿತ್ರ ತಾರೆಯರು ಪಾಲ್ಗೊಳ್ಳಲಿದ್ದಾರೆ. ಕನ್ನಡಿಗರ ನಡುವೆ ಮಾತ್ರವಲ್ಲ, ಜಗತ್ತಿನ ನಾನಾ ಭಾಗಗಳಲ್ಲಿ ಕನ್ನಡಿಗರ ಉದ್ಯಮ ವ್ಯವಹಾರ ವೃದ್ಧಿಸುವುದಕ್ಕೆ ಮತ್ತು ಪರಸ್ಪರ ಕೊಡು ಕೊಳ್ಳುವಿಕೆಗೆ ಇದು ಅತ್ಯುತ್ತಮ ವೇದಿಕೆಯಾಗಿ ಪರಿಣಮಿಸಲಿದೆ. ಈ ಮೂರು ದಿನಗಳ ಸಮ್ಮೇಳನವು ಕನ್ನಡಿಗರ ಕಲೆ, ಸಾಹಿತ್ಯ, ಸಂಸ್ಕೃತಿ ಮತ್ತು ಸಂಪ್ರದಾಯವನ್ನು ವಿಶ್ವಕ್ಕೆ ಪರಿಚಯಿಸಲಿದೆ. ಸುಮಾರು 3 ಸಾವಿರಕ್ಕೂ ಹೆಚ್ಚು ಮಂದಿ ಈ ಸಮ್ಮೇಳನದಲ್ಲಿ ಪಾಲ್ಗೊಳ್ಳುವ ನಿರೀಕ್ಷೆಯಿದೆ ಎಂದು ಶರಣಬಸವ ಅವರು ನುಡಿದರು.
ಸಮ್ಮೇಳನದಲ್ಲಿ ನಾಟಕ, ನೃತ್ಯ, ಸಂಗೀತ, ಹಾಸ್ಯ, ಸಾಹಿತ್ಯ ಗೋಷ್ಠಿ, ಉದ್ಯಮ ವೇದಿಕೆ, ಸಿಎಂಇ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು. ಈ ಕ್ಷೇತ್ರಗಳಲ್ಲಿ ನುರಿತ ವ್ಯಕ್ತಿಗಳಿಂದಲೇ ಕಾರ್ಯಕ್ರಮ ನಡೆಸಿಕೊಡಲಾಗುವುದು. ಈ ಮೂಲಕ ನಾವಿಕ ಸಮ್ಮೇಳನದಲ್ಲಿ ಕಂಡ ದೃಶ್ಯಗಳು, ಪಡೆದ ಮನರಂಜನೆಗಳು ಸದಾ ಕಾಲ ನೆನಪಲ್ಲಿ ಉಳಿಯುವಂತಾಗಬೇಕು ಎಂಬುದು ಸಂಘಟಕರ ಉದ್ದೇಶವಾಗಿದೆ.
ನಾವಿಕ ಈಗಾಗಲೇ ಜಾಗತಿಕ ಮಟ್ಟದ ಎರಡು ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ನಡೆಸಿದೆ. ನಾವಿಕದ ಪ್ರಥಮ ವಿಶ್ವ ಕನ್ನಡ ಸಮ್ಮೇಳನ ಕ್ಯಾಲಿಫೋರ್ನಿಯಾದ ಲಾಸ್ ಎಂಜಲೀಸ್ನಲ್ಲಿ 2010ರ ಜುಲೈನಲ್ಲಿ ನಡೆದಿತ್ತು. 2011ರಲ್ಲಿ ಬೆಂಗಳೂರಿನಲ್ಲಿ ಅಮೆರಿಕನ್ನಡೋತ್ಸವ ನಡೆದಿತ್ತು ಎಂದರು ನಾವಿಕ ಸಂಸ್ಥೆಯ ಅಧ್ಯಕ್ಷರಾದ ಡಾ. ಕೇಶವ ಬಾಬು.
ಭರದ ಸಿದ್ಧತೆ : ವಿಶ್ವ ಕನ್ನಡ ಸಮ್ಮೇಳನದಲ್ಲಿ ಕನ್ನಡ ನುಡಿ, ಕಲೆ, ಸಂಸ್ಕೃತಿಯನ್ನು ಜಗತ್ತಿಗೆ ಪರಿಚಯಿಸಲಾಗುತ್ತದೆ. ಈಗಾಗಲೇ ಕನ್ನಡ ಅಮೆರಿಕದ ಜನರ ಹೃದಯ ಗೆದ್ದಿದೆ. ನಮ್ಮ ಸಾಂಸ್ಕೃತಿಕ ತಂಡಗಳು ನೀಡಿದ ಕಾರ್ಯಕ್ರಮಗಳು ಜಗತ್ತಿನ ಹಲವೆಡೆ ಜನರ ಗಮನ ಸೆಳೆದಿವೆ. ಬಾಸ್ಟನ್ನಲ್ಲಿ ನಡೆಯುವ ವಿಶ್ವ ಕನ್ನಡ ಸಮ್ಮೇಳನದಲ್ಲಿ ಮಿನಿ ಕರ್ನಾಟಕವೇ ತಲೆ ಎತ್ತಿ ನಿಂತಂತಹ ಸನ್ನಿವೇಶವನ್ನು ಸೃಷ್ಟಿಸಲಾಗುವುದು ಎಂದು ರಾಜೂರ ಅವರು ವಿವರಿಸಿದರು.
ಒಂದೇ ಸೂರಿನಡಿ ಅದನ್ನು ಮುಂದಿನ ತಲೆಮಾರಿನ ಅಮೆರಿಕ ಹಾಗೂ ವಿಶ್ವ ಕನ್ನಡಿಗರಿಗೆ ಹಾಗೂ ವಿದೇಶಿ ಪ್ಷೇಕ್ಷಕರಿಗೆ ತೋರಿಸುವ ಅವಕಾಶವನ್ನು ನಾವಿಕ ವಿಶ್ವ ಕನ್ನಡ ಸಮ್ಮೇಳನ ನೀಡಲಿದೆ. ಅದಕ್ಕಾಗಿ ಈಗಿನಿಂದಲೇ ಬಾಸ್ಟನ್ನಲ್ಲಿ ಅಮೆರಿಕನ್ನಡಿಗರ ಸ್ವಯಂಸೇವಕ ತಂಡ ಹಗಲಿರುಳು ಶ್ರಮಿಸುತ್ತಿದ್ದಾರೆ. ವಿಶೇಷವಾಗಿ ರಾಜಧಾನಿ ಬೆಂಗಳೂರಿನಲ್ಲಿ ಸಮ್ಮೇಳನದ ಯಶಸ್ಸಿಗಾಗಿ ಕನ್ನಡಿಗರನ್ನು ಗಜಲಕ್ಷ್ಮೀ ಕೃಷ್ಣಮೂರ್ತಿ ನೇತೃತ್ವದ ತಂಡ ಪೂರಕವಾಗಿ ಕಾರ್ಯನಿರ್ವಹಿಸುತ್ತಿದೆ.
ಸಮ್ಮೇಳನ ನಡೆಯುವ ಸ್ಥಳ : DCU Convention and Exhibit Center & Mechanics Hall in Boston Metro West (Worcester), Massachusetts.
ಸಮ್ಮೇಳನ ಕುರಿತು ಹೆಚ್ಚಿನ ಮಾಹಿತಿಗಾಗಿ 8197647671 ಈ ದೂರವಾಣಿಯನ್ನು ಸಂಪರ್ಕಿಸಬಹುದು. ಸಮ್ಮೇಳನ ಸಿದ್ಧತೆ ಕುರಿತು www.navika.org ವೆಬ್ಸೈಟ್ ಮೂಲಕ ಮಾಹಿತಿ ಪಡೆದುಕೊಳ್ಳಬಹುದು. ವಿಶ್ವ ಕನ್ನಡ ಸಮ್ಮೇಳನಕ್ಕೆ ಯಾವ ಕಲಾವಿದರು ಹೋಗುತ್ತಿದ್ದಾರೆ ಎಂಬ ಕುರಿತು ಒನ್ಇಂಡಿಯಾ ಕನ್ನಡದಲ್ಲಿ ಎಲ್ಲ ವಿವರಗಳು ಮುಂದಿನ ದಿನಗಳಲ್ಲಿ ಲಭ್ಯವಾಗಲಿವೆ.
ನೀವೇ ಆಗಿರಿ ಕರ್ನಾಟಕದ ಗುರು | ಮತ ಹಾಕ್ತೀನಂತ ಪ್ರಮಾಣ ಮಾಡಿ