ಕರ್ನಾಟಕದ ಇತರ ನಗರಗಳಲ್ಲಿ ಎಂಟಿಆರ್ ತೆರೆಯುವುದೆ?
(ಸಂದರ್ಶನ ಮುಂದುವರಿದಿದೆ...)
ಪ್ರಶ್ನೆ : ನೀವು ಈ ಮೊದಲೇ ಹೇಳಿದಂತೆ ಕರ್ನಾಟಕದ ಇತರ ನಗರಗಳಲ್ಲಿ ಎಂಟಿಆರ್ ತೆರೆಯುವ ಯೋಚನೆ, ಯೋಜನೆ ಇದೆಯೇ?
ಹೇಮಮಾಲಿನಿ : ಈ ಯೋಚನೆ ಯಾವಾಗಲೂ ಇತ್ತು, ಇದೆ. ಆದರೆ ನಾವೇ ನಡೆಸುವುದೇ ಇಲ್ಲವೇ ಫ್ರಾಂಚೈಸ್ ಕೊಡುವುದೇ ಎಂಬ ಮುಖ್ಯವಾದ ನಿರ್ಧಾರ ತೆಗೆದುಕೊಳ್ಳಬೇಕಿದೆ.
ಪ್ರಶ್ನೆ : 1924ರಲ್ಲಿ ಬೆಂಗಳೂರಿನಲ್ಲಿ ಪ್ರಾರಂಭವಾದ "ಬ್ರಾಹ್ಮಣರ ಕಾಫಿ ಕ್ಲಬ್", ನಂತರ "ಮಾವಳ್ಳಿ ಟಿಫಿನ್ ರೂಮ್ಸ್; 2013ರಲ್ಲಿ ಹೊರದೇಶದಲ್ಲಿ ಎಂಟಿಆರ್, ಇನ್ನು 11 ವರ್ಷಗಳಲ್ಲಿ ನೂರು ವರ್ಷಗಳು ತುಂಬಲಿವೆ. ಮುಂದೇನು?
ಹೇಮಮಾಲಿನಿ : ಎಲ್ಲ ಕಡೆ ಎಂಟಿಆರನ್ನು ಕೊಂಡೊಯ್ಯಬೇಕೆಂಬ ಆಕಾಂಕ್ಷೆಯಿದೆ. ಇನ್ನು ಹತ್ತು ವರ್ಷದಲ್ಲಿ ಏನಾಗುತ್ತದೋ ಹೇಳುವುದು ಕಷ್ಟ. ನಮ್ಮ ತಂದೆಯವರು ಯಾವಾಗಲೂ ಒಂದೇ ಎಂಟಿಆರ್ ಸಾಕು ಎನ್ನುತ್ತಿದ್ದರು. ಆದರೆ ಈಗ ಬೆಂಗಳೂರು ಊಹಿಸಲಸಾಧ್ಯವಾದಷ್ಟು ಬೆಳೆದಿದೆ, ಸಂಚಾರ ಮೊದಲಿನಂತೆ ಸುಲಭವಲ್ಲ. ಎಲ್ಲ ಗ್ರಾಹಕರೂ ನಮ್ಮನ್ನು ಹುಡುಕಿಕೊಂಡು ಬರಲು ಸಾಧ್ಯವಿಲ್ಲ. ನಾವು ಹೆಚ್ಚು ಹೆಚ್ಚು ಜಾಗಗಳಲ್ಲಿ ರೆಸ್ಟೋರಂಟ್ ತೆಗೆಯಬೇಕು.
ಇನ್ನು ಹತ್ತು ವರ್ಷಗಳಲ್ಲಿ ನಾವು ಎಷ್ಟು ಕಡೆ, ಎಷ್ಟು ದೇಶಗಳಲ್ಲಿ, ಎಷ್ಟು ಹೋಟೆಲ್ಗಳನ್ನು ತೆಗೆಯುತ್ತೇವೆಂಬುದು ಮುಖ್ಯವಲ್ಲ, ತೆಗೆದ ಕಡೆಯಲ್ಲಿ ಎಂಟಿಆರ್ನ ಅಡುಗೆಯ ಮೂಲರುಚಿಗೆ ಎಷ್ಟು ಹತ್ತಿರ ತಂದಿದ್ದೇವೆ ಎಂಬುವುದು ಮುಖ್ಯ. ಹೊರದೇಶದಲ್ಲಿದ್ದಾಗ ಅಡುಗೆಗೆ ಬಳಸುವ ಪದಾರ್ಥಗಳಲ್ಲಿ, ಅದರ ಸರಬರಾಜಿನಲ್ಲಿ ಸ್ವಲ್ಪ ವ್ಯತ್ಯಾಸವಾದರೂ ಅದನ್ನು ದೂರದಿಂದ ಸರಿಪಡಿಸುವುದು ಕಷ್ಟದ ಕೆಲಸ.
ಪ್ರಶ್ನೆ : ನಿಮಗೆ ಸಿಂಗಪುರ ಕನ್ನಡ ಸಂಘದ ಮತ್ತು ಅದರ ಚಟುವಟಿಕೆಗಳ ಬಗ್ಗೆ ತಿಳಿದಿದೆಯೇ?
ಹೇಮಮಾಲಿನಿ : ಇಲ್ಲಿ ಕನ್ನಡ ಸಂಘವಿರುವುದು ಗೊತ್ತು, ಆದರೆ ಅದರ ಗಾತ್ರ ಮತ್ತು ಕಾರ್ಯಚಟುವಟಿಕೆಗಳ ಬಗ್ಗೆ ಅಷ್ಟಾಗಿ ತಿಳಿದಿಲ್ಲ.
ಸುರೇಶ : 1960ರ ಸುಮಾರಿಗೆ ಕೆಲವು ಕನ್ನಡಿಗರು ಸಿಂಗಪುರಕ್ಕೆ ಬಂದರು. ನಂತರ ಎಂಬತ್ತರ ದಶಕದಲ್ಲಿ ಹಲವಾರು ಕನ್ನಡಿಗರು ಪ್ರಾಧ್ಯಾಪಕರಾಗಿ ಬಂದರು. ನಂತರದ ದಿನಗಳಲ್ಲಿ ಐಟಿ ಇಂಡಸ್ಟ್ರಿಯಿಂದಾಗಿ ಇನ್ನೂ ಹೆಚ್ಚು ಜನ ಬಂದರು. ಕಳೆದ ಕೆಲವು ವರ್ಷಗಳಿಂದ ನಮ್ಮ ಸಂಘವು ವರ್ಷಕ್ಕೆ 8ರಿಂದ 10 ಕಾರ್ಯಕ್ರಮಗಳನ್ನು ನಡೆಸಿಕೊಂಡು ಬರುತ್ತಿದೆ. ಸಿಂಗಪುರದಲ್ಲಿ 3000ಕ್ಕೂ ಹೆಚ್ಚು ಕನ್ನಡಿಗರಿದ್ದು, ಆಯೋಜಿಸಿದ ಕಾರ್ಯಕ್ರಮಕ್ಕನುಗುಣವಾಗಿ 300ರಿಂದ 600 ಜನ ಮತ್ತು ಮೆಗಾ ಕಾರ್ಯಕ್ರಮಗಳಿಗೆ ಸುಮಾರು ಒಂದು ಸಾವಿರ ಜನ ಬರುತ್ತಾರೆ. 2010ರಲ್ಲಿ ಆಯೋಜಿಸಲಾದ 7ನೇ ವಿಶ್ವಕನ್ನಡ ಸಂಸ್ಕೃತಿ ಸಮ್ಮೇಳನದ ಕೊನೆಯ ಭಾಗವಾದ "ತಾರಾಸಂಜೆ"ಗೆ ಸುಮಾರು ಒಂದು ಸಾವಿರ ಮಂದಿ ಕನ್ನಡಿಗರು ಬಂದಿದ್ದರು. ಬಹುತೇಕ ಕಾರ್ಯಕ್ರಮಗಳಲ್ಲಿ ಕಾರ್ಯಕ್ರಮದ ಅಂತ್ಯದಲ್ಲಿ ಊಟದ ವ್ಯವಸ್ಥೆ ಮಾಡಲಾಗುತ್ತದೆ. ಮುಂದೊಂದು ದಿನ ಸಂಘದ ಕಾರ್ಯಕ್ರಮಗಳಲ್ಲಿ ಎಂಟಿಆರ್ನ ಊಟ ಸಿಗುವಂತಾಗಲಿ. ಕಾರ್ಯಕ್ರಮದ ವಿವರಗಳನ್ನು ನಿಮ್ಮ ಸ್ಥಳೀಯ ಮಾಲೀಕರಿಗೆ ತಿಳಿಸುತ್ತೇನೆ.