ಭರಣ ದಂಪತಿಗಳಿಂದ ಆಸೀಸ್ ಮಕ್ಕಳಿಗೆ ತರಬೇತಿ
ಜುಲೈ 11ರಿಂದ 13ರವರೆಗೆ ಆಸ್ಟ್ರೇಲಿಯಾದ ಮಕ್ಕಳಿಗೆ ಹಾಗು ಅನಿವಾಸಿ ಭಾರತೀಯರಿಗೆ ಟಿ.ಎಸ್.ನಾಗಾಭರಣ ಅವರು ಕಥೆ ಕಟ್ಟುವಿಕೆ, ಕಥೆಯನ್ನು ಅಭಿವ್ಯಕ್ತಗೊಳಿಸುವಿಕೆ, ಮಿರರ್ ಗೇಮ್, ಇಮಿಟೆಷನ್ ಗೇಮ್, ಏಕಪಾತ್ರಾಭಿನಯ, ಥೇಟರ್ ಗೇಮ್ ಹಾಗು ಸಿನೆಮಾ ನಿರ್ಮಾಕ್ಕೆ ಸಂಬಂಧಿಸಿದ ಇತರೆ ವಿಷಯಗಳ ಬಗ್ಗೆ ಉಪನ್ಯಾಸ ಹಾಗು ತರಬೇತಿ ನೀಡಿದರು. 14ರಂದು ನಾಗಾಭರಣ ಹಾಗು ನಾಗಿಣಿ ಭರಣ ಅವರು ಅಭಿನಯ, ಸಂಕಲನ, ಚಿತ್ರಕಥೆ, ನೃತ್ಯ ಹಾಗು ಮೆಕಪ್ ಮುಂತಾದ ವಿಷಯಗಳನ್ನು ಕುರಿತು ಉಪನ್ಯಾಸ, ತರಬೇತಿ, ಪ್ರಾತ್ಯಕ್ಷಿಕೆ ನೀಡಿದರು.
ಜುಲೈ 15ರಂದು ಐರಿಶ್ ಹಾಗು ಬಾಲಿವುಡ್ ಸಂಗೀತ ಕಾರ್ಯಕ್ರಮಕ್ಕೆ ನಾಗಾಭರಣ ಹಾಗು ನಾಗಿಣಿಭರಣ ಅತಿಥಿಗಳಾಗಿ ಭಾಗವಹಿಸಿದರು. ಕಲಾವಿದರು ಬಾಲಿವುಡ್ ತಾಳಕ್ಕೆ "ಹುಟ್ಟಿದರೆ ಕನ್ನಡ ನಾಡಿನಲ್ಲಿ ಹುಟ್ಟಬೇಕು" ಎಂಬ ಹಾಡಿಗೆ ಬ್ಯಾಲೆ ಮಾಡಿದ್ದು ವಿಶೇಷ. ಬಿ.ವಿ.ಕಾರಂತ್ ಅವರ ರಂಗ ಗೀತೆಗಳನ್ನು ಆಧರಿಸಿ ಅನಿವಾಸಿ ಭಾರತೀಯ ಆಸ್ಟ್ರೇಲಿಯಾದ ಪ್ರಜೆಗಳೋಂದಿಗೆ ಸೇರಿ ನೃತ್ಯ ರೂಪಕವನ್ನು ಸಾದರಪಡಿಸಿದರು.
5 ದಿನಗಳ ಕಾಲ ನಡೆದ ಶಿಬಿರದಲ್ಲಿ ಅನಿವಾಸಿ ಭಾರತೀಯ ಮಕ್ಕಳಿಗೆ ಮಾತೃಭೂಮಿಯ ಕಲೆ, ಸಂಸ್ಕೃತಿ, ಆಚಾರ ವಿಚಾರಗಳನ್ನು ಹಾಗು ಭಾರತೀಯ ಸಿನೆಮಾ ಹಾಗು ಹಾಲಿವುಡ್ ಸಿನೆಮಾಗಳಿಗೆ ಇರುವ ವ್ಯತ್ಯಾಸವನ್ನು ನಾಗಾಭರಣ ಹಾಗು ನಾಗಿಣಿಭರಣ ಮನವರಿಕೆ ಮಾಡಿಕೊಟ್ಟರು. ಎರಡು ದೇಶಗಳ ಸಂಸ್ಕೃತಿ ಸೇತುವೆ ಆಗಿ ಈ ಶಿಬಿರ ಕಾರ್ಯ ನಿರ್ವಹಿಸಿತು. ಸಿಡ್ನಿಯಲ್ಲಿ ಆಯೋಜಿಸಲಾಗಿದ್ದ ಈ ಶಿಬಿರವನ್ನು ಸಿಡ್ನಿ ಮೇಯರ್ ಲೋರಿ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ವಿರೋಧ ಪಕ್ಷದ ನಾಯಕ ಲೇಬರ್ ಪಾರ್ಟಿಯ ನೇತನ ರಿಚ್ ಉಪಸ್ಥಿತರಿದ್ದರು.
ಐ.ಎ.ಎ.ಎಫ್.ಎ ಸಂಸ್ಥೆ : ಇಂಡಿಯನ್ ಆಸ್ಟ್ರೇಲಿಯನ್ ಆರ್ಟ್ ಅಂಡ್ ಫಿಲ್ಮ್ಸ್ ಅಸೋಸಿಯೇಶನ್(ಐ.ಎ.ಎ.ಎಫ್.ಎ) ಸಂಸ್ಥೆಯು, ಭಾರತ ಹಾಗು ಆಸ್ಟ್ರೇಲಿಯಾ ದೇಶಗಳ ಭಾಷೆ, ಸಂಸ್ಕೃತಿ, ಕಲೆಯ ವಿನಿಮಯ ಮಾಡುವ ಉದ್ದೇಶದಿಂದ ಜನ್ಮ ತಳೆದಿದೆ. ಎರಡು ದೇಶಗಳ ಸಂಸ್ಕೃತಿ ಬೇರುಗಳು ಒಂದೆ ಎಂದು ತಿಳಿಸುವ ಮೂಲ ಉದ್ದೇಶ ಈ ಸಂಸ್ಥೆಯದಾಗಿದೆ. ಈ ಸಂಸ್ಥೆ ಭಾರತೀಯ ಕಲೆಗಾರರನ್ನು ತಮ್ಮ ಸಂಸ್ಕೃತಿ, ಇತಿಹಾಸವನ್ನು ಭಾರತೀಯರಿಗೆ ಪರಿಚಯಿಸುವಲ್ಲಿ ಶ್ರಮಿಸುತ್ತಿದೆ.
ಬಾಲಾಜಿ ವೆಂಕಟರಂಗನ್ ಹಾಗು ಜಯ ಪ್ರಕಾಶ ಹೊಸೂರು ಈ ಸಂಸ್ಥೆಯ ಹಿಂದಿರುವ ಶಕ್ತಿಗಳಾಗಿದ್ದಾರೆ. ಬಾಲಾಜಿ ಅವರು ಸ್ಥಳೀಯ ಕೌನ್ಸಿಲ್ ಚುನಾವಣೆಯಲ್ಲಿ ಲೇಬರ್ ಪಾರ್ಟಿಯಿಂದ ಸ್ಫರ್ಧಿಸಿದವರು. ಈ ಗೌರವಕ್ಕೆ ಕೆಲವೇ ಕೆಲವು ಭಾರತೀಯರು ಆಯ್ಕೆ ಆಗಿದ್ದು ವಿಶೇಷ. ಜಯಪ್ರಕಾಶ ಮೂಲತ: ಬೆಂಗಳೂರಿನವರು ಆಗಿದ್ದು ಕಳೆದ ಹತ್ತು ವರ್ಷಗಳಿಂದ ಆಸ್ಟ್ರೇಲಿಯದಲ್ಲಿ ನೆಲೆಸಿ ಅಲ್ಲಿಯ ಸಿಟಿಜನ್ ಶಿಪ್ ಕೊಡುಸುವಲ್ಲಿ ಭಾರತಿಯರಿಗೆ ಸಹಾಯ ಮಾಡುತ್ತಿದ್ದಾರೆ.
ಸಂಸ್ಥೆಯ ಇತರ ಕಾರ್ಯಕ್ರಮಗಳು : ವಿಷ್ಣುವರ್ಧನ್, ಅಂಬರೀಷ್ ಪ್ರಮುಖ ಭೂಮಿಕೆಯಲ್ಲಿದ್ದ 'ಹಬ್ಬ' ಕನ್ನಡ ಚಲನಚಿತ್ರವನ್ನು ಈ ಸಂಸ್ಥೆಯ ವತಿಯಿಂದ ಬಿಡುಗಡೆಗೊಳಿಸಲಾಗಿತ್ತು. ಡಾ.ರಾಜ್ ಕುಮಾರ್ ಅವರ ನಿರ್ಮಾಣದ 'ಶಬ್ದವೇದಿ' ಚಿತ್ರವನ್ನು ಕೂಡ ಇಲ್ಲಿ ಪ್ರದರ್ಶಿಸಲಾಗಿತ್ತು. ಕನ್ನಡ ಚಿತ್ರರಂಗದ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರನ್ನು ಆಹ್ವಾನಿಸಿ ಸನ್ಮಾನಿಸಲಾಗಿತ್ತು. 2004ರ ಮಾರ್ಚ್14 ಹಾಗು 15ರಂದು ಪ್ರಖ್ಯಾತ ಸಂಗೀತ ನಿರ್ದೇಶಕ ಹಾಗು ಹಿನ್ನೆಲೆ ಗಾಯಕ ಸಿ.ಅಶ್ವತ್ ಅವರ ತಂಡದ ಸಂಗೀತ ಕಾರ್ಯಕ್ರಮವನ್ನು ನೀಡಿ, ಜನ, ಮನ ಸೆಳೆಯುವಲ್ಲಿ ಯಶಸ್ವಿಯಾಗಿದ್ದರು.