ಲಂಡನ್ನಿನಲ್ಲಿ ಹೆಗ್ಗಡೆ, ಬಸವಣ್ಣ ಪುತ್ಥಳಿ ಸ್ಥಾಪನೆಗೆ ಶ್ಲಾಘನೆ
ಐತಿಹಾಸಿಕ ಬ್ರಿಟಿಷ್ ಪಾರ್ಲಿಮೆಂಟಿನ ಎದುರುಗಡೆ, ಥೇಮ್ಸ್ ನದಿಯ ದಡದಲ್ಲಿ ಐತಿಹಾಸಿಕ ಅಲ್ಬರ್ಟ್ ಎಂಬ್ಯಾಂಕ್ಮೆಂಟ್ ಮೇಲೆ ಮತ್ತು ಬಿಗ್ ಬೆನ್ ಬಳಿಯಲ್ಲಿ ಕಂಚಿನಿಂದ ತಯಾರಿಸಲಾಗಿರುವ ಬಸವಣ್ಣನ ಬೃಹತ್ ಪುತ್ಥಳಿಯನ್ನು ಸ್ಥಾಪಿಸಲು, ಗ್ರಾನೈಟ್ ಅಡಿಪೀಠ ನಿರ್ಮಿಸಲು ಲ್ಯಾಂಬೆತ್ ಪುರಸಭೆ ಅನುಮತಿ ನೀಡಿದೆ. ಮೂರ್ತಿ ಸ್ಥಾಪನೆಗೆ ಸಂಸತ್ತಿನಿಂದ ಅನುಮತಿ ಸಿಗಬೇಕಾಗಿದೆ.
ಯುನೈಟೆಡ್ ಕಿಂಗ್ಡಂನಲ್ಲಿ ಬ್ರಿಟಿಷ್ ಮತ್ತು ಭಾರತ ಸಮುದಾಯವನ್ನು ಉದ್ದೇಶಿಸಿ ಮಾತನಾಡಿದ ವೀರೇಂದ್ರ ಹೆಗ್ಗಡೆಯವರು, "ಜಾತಿರಹಿತ ಸಮಾಜಕ್ಕಾಗಿ ಸಾಕಷ್ಟು ಹೋರಾಟ ನಡೆಸಿದ ಬಸವೇಶ್ವರ, ವೈಚಾರಿಕತೆಯಲ್ಲಿ ಯಾವಾಗಲೂ ಎಲ್ಲರಿಗಿಂತ ಮುಂದಿದ್ದರು. ವಚನಗಳ ಮುಖಾಂತರ ಅವರು ಮಾಡಿರುವ ಬೋಧನೆಗಳು ಜಾಗತಿಕ ಮಹತ್ವ ಪಡೆದಿವೆ ಮತ್ತು ಅತ್ಯಾಧುನಿಕ ಯುಗದಲ್ಲಿಯೂ ಅವರು ಪ್ರಸ್ತುತ" ಎಂದರು.
ಲಂಡನ್ನಿನಲ್ಲಿ ಬಸವಣ್ಣನವರ ಮೂರ್ತಿಯನ್ನು ಸ್ಥಾಪಿಸಲು ಇಲ್ಲಿನ ಕನ್ನಡಿಗರು ಶ್ರಮಿಸುತ್ತಿರುವುದಕ್ಕೆ ಶ್ಲಾಘನೆ ವ್ಯಕ್ತಪಡಿಸಿದ ಅವರು, ಥೇಮ್ಸ್ ನದಿಯ ದಡದಲ್ಲಿ, ಪಾರ್ಲಿಮೆಂಟಿನ ಎದಿರು ಇರುವ ತಾಣದಲ್ಲಿ ಸ್ಥಾಪಿಸುತ್ತಿರುವುದರಿಂದ ಈ ತಾಣದ ಸೌಂದರ್ಯ ಇನ್ನೂ ಹೆಚ್ಚಲಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಲ್ಯಾಂಬೆತ್ನ ನಿಕಟಪೂರ್ವ ಮೇಯರ್ ಡಾ. ನೀರಜ್ ಪಾಟೀಲ್ ಅವರು ಉಪಸ್ಥಿತರಿದ್ದರು.
ಮಾರ್ಚ್ 13ರಂದು ಸಭೆ ಸೇರಿದ 5 ಸದಸ್ಯರ ಸಮಿತಿ, ಹಿಂದಿನ ಲ್ಯಾಂಬೆತ್ ಮೇಯರ್ ಆಗಿದ್ದ ಕನ್ನಡಿಗ ಡಾ. ನೀರಜ್ ಪಾಟೀಲ್ ಅವರ ಅರ್ಜಿಯ ವಿಚಾರಣೆ ಮಾಡಿ, 12ನೇ ಶತಮಾನದಲ್ಲಿಯೇ ಜಾತಿ ತಾರತಮ್ಯ ಮತ್ತು ಗುಲಾಮಗಿರಿಯನ್ನು ತೊಡೆಯಲು ಹೋರಾಟ ಮಾಡಿದ್ದ ಬಸವಣ್ಣನ ಮೂರ್ತಿ ಸ್ಥಾಪನೆಗೆ ಅಂಗೀಕಾರ ನೀಡಿತ್ತು.