ಆಸ್ಟ್ರೇಲಿಯಾದ ಶ್ರೀನಿವಾಸ ಗುಡಿಗೆ ಟ್ರೆಕ್ಕಿಂಗ್
ಸೆಪ್ಟೆಂಬರ್ 29ರಂದು ಶನಿವಾರ ಬೆಳಿಗ್ಗೆ ಶ್ರೀ ಮುರುಗನ ದೇವಸ್ಥಾನದಲ್ಲಿ ಎಲ್ಲಾ ಸೇರಿದೆವು. ವ್ಯವಸ್ಥಾಪಕರಿಂದ ಪೂರ್ತಿ 75 ಕಿ.ಮೀ ನಡೆಯುವ ಪಾದಚಾರಿಗಳಿಗೆ ಅವರವರ ನಂಬರಿನ ಜಾಕೆಟ್ ಕೊಟ್ಟರು ಮತ್ತು ಆ ದಿವಸ ರಾತ್ರಿ ಸದೆರ್ಲಾನ್ಡ್ ಮೋಟೆಲಿನಲ್ಲಿ ಇಳಿದುಕೊಳ್ಳುವ ಅನುಕೂಲವೂ ಮಾಡಿದ್ದರು.
ನನಗೆ 23 ನಂಬರು ಬಂದ ತಕ್ಷಣ ಶ್ರೀ ಸತ್ಯ ಸಾಯಿಬಾಬಾರವರ ಜನ್ಮದಿನ ಕೂಡ 23 (ನವೆಂಬರ್ 23, 1926) ಎಂಬುದು ನೆನಪಿಗೆ ಬಂದತಕ್ಷಣ 'ಹಾ' ಎಂಬ ಉದ್ಘಾರ ಹೊರಟಿತು. ಅರ್ಚಕರಿಂದ ದೇವರ ಮಂಗಳಾರತಿ, ಆಶೀರ್ವಾದ ಪಡೆದು ಸುಮಾರು 53 ಜನ ಪಾದಯಾತ್ರೆಗೆ ಹೊರಟೆವು. ಮುರುಗನ ದೇವಸ್ಥಾನದಿಂದ ದಾರಿ ಮಾರ್ಗದಲ್ಲಿ ಸಿಕ್ಕುವ ದೇವಸ್ಥಾನಗಳನ್ನು ಭೇಟಿ ಮಾಡಿಕೊಂಡು ಶ್ರೀ ಶಿರಡಿ ಸಾಯಿ ಮಂದಿರಕ್ಕೆ ಬರುವುದಾಗಿತ್ತು.
ದಾರಿ ಮಾರ್ಗದಲ್ಲಿ ಮೊದಲು ಸಿಕ್ಕುವ ಬಾಪ್ಸ್ ಸ್ವಾಮಿ ನಾರಾಯಣ ದೇವಸ್ಥಾನ (ರೋಸ್ ಹಿಲ್ಲ್)ಕ್ಕೆ ಬಂದು ಅಲ್ಲಿ ಆರತಿ ಸ್ವೀಕರಿಸಿ ನಮಗಾಗಿಟ್ಟಿದ್ದ ಹಣ್ಣು, ನೀರು, ಜ್ಯೂಸ್ ಸ್ವೀಕರಿಸಿದೆವು. ನಂತರ ಶ್ರೀ ಮಂದಿರ್ ದೇವಸ್ಥಾನ (ಆಬರ್ನ್)ದಲ್ಲಿ ದೇವರ ದರ್ಶನ ಪಡೆದು, ಟೀ, ಕಾಫೀ, ಬಿಸ್ಕತ್ ತೆಗೆದುಕೊಂಡು ಮುಂದಿನ ತಾಣ ಶಿರಡಿ ಸಾಯಿ ಮಂದಿರ(ಸೌತ್ ಸ್ಟ್ರಾತ್ ಫೀಲ್ಡ್)ದತ್ತ ಹೆಜ್ಜೆ ಹಾಕಿದೆವು.
ನಾವು 'ಹೈ ಟೆಕ್' 'ಗೂಗಲ್ ಮಹಾಶಯ'ನ ಮಾರ್ಗ ಅನುಸರಿಸಿ ಸುಮಾರು 6 ಕಿ.ಮೀ ಹೆಚ್ಚಾಗಿ ನಡೆದು ಶಿರಡಿ ಸಾಯಿ ಮಂದಿರಕ್ಕೆ ಬಂದೆವು. ಕಾರಿನಲ್ಲಿ ಸರಿಯಾದ ಮಾರ್ಗದಲ್ಲಿ ಶ್ರೀ ಮಂದಿರಕ್ಕೆ ಎಷ್ಟುಸಲ ಹೋಗಿ ಬರುತ್ತಿದ್ದೆವೋ? ಎಲ್ಲಾ ತರಹದ ಅನುಭವವೂ ನಮಗಾದವು. ನಮ್ಮನ್ನೆಲ್ಲಾ ಪ್ರೀತಿ, ಆದರದಿಂದ ಸ್ವಾಗತಿಸಿ ಉಪ್ಪಿಟ್ಟು, ನೀರು, ಜ್ಯೂಸ್ ಕೊಟ್ಟು ಸತ್ಕರಿಸಿದರು. ಇಲ್ಲಿಗೆ ಬರುವುದಕ್ಕೆ ಸುಮಾರು 25 ಕಿ.ಮೀ ನಡೆದು ಬಂದಿದ್ದೆವು. ಸ್ವಲ್ಪ ಭಕ್ತಾದಿಗಳೂ ಕಡಿಮೆಯಾಗಿ 40 ಜನ ಮಾತ್ರ ಮುಂದಿನ ಪ್ರಯಾಣಕ್ಕೆ ಕಾಲಿಟ್ಟೆವು.
ಮುಂದಿನ ಜಾಗ ಸದೆರ್ಲಾನ್ಡ್. ಕಿಂಗ್ ಜಾರ್ಜೆಸ್ ರಸ್ತೆಯಂತೂ ಮಟ್ಟಸ, ಏರುಪೇರುನಿಂದಾಗಿ ಎರಡು ಮೂರುಕಡೆ 'ರೋಲರ್ ಕೋಸ್ಟರ್' ತರಹ ದಾರಿ ಕಂಡುಬಂದಿತು. ಮಧ್ಯದಲ್ಲಿ ಸಿಕ್ಕಿದ 'ಮೆಕ್ ಡೊನಲ್ಡ್ಸ್' ನಲ್ಲಿ ಕಾಫೀ ಕುಡಿದು ಮುಂದೆ ಸಾಗಿದೆವು. ಹವಾ ಚೆನ್ನಾಗಿದ್ದು ತುಂಬಾ ಬಿಸಿಲು ಇಲ್ಲದೆ ತಣ್ಣನೆಯ ಗಾಳಿಯಿಂದ ಕೂಡಿದ್ದರಿಂದ ಪಾದಯಾತ್ರಿಗಳು ಸಾಯಂಕಾಲ 5.30ಕ್ಕೆ ಒಬ್ಬಬ್ಬರಾಗಿ ವ್ಯವಸ್ಥೆ ಮಾಡಿದ್ದ 'ಮೊಟೆಲ್'ಗೆ ಬಂದು ತಂಗಿದೆವು. ಸಾಕಷ್ಟು ಸುಸ್ತಾಗಿದ್ದರಿಂದ ರಾತ್ರಿಯ ಊಟ 6.30ಕ್ಕೆ ಬಂದ ತಕ್ಷಣ ಎಲ್ಲಾ ಊಟ ಮಾಡಿ ಅವರವರ ಕೊಠಡಿಗೆ ಹೊರಟುಬಿಟ್ಟೆವು.
ಭಾನುವಾರ ಸೂರ್ಯೋದಯಕ್ಕೆ ಮುಂಚೆಯೇ ಅಂದರೆ ಸುಮಾರು ಜನ 4.30ರಿಂದಲೇ ಮುಂದಿನ ಪಾದಯಾತ್ರೆ 'ಹೆಲೆನ್ಸ್ ಬರ್ಗ್' ಕಡೆಗೆ ಪ್ರಿನ್ಸೆಸ್ಸ್ ಹೈವೆ ಮಾರ್ಗ ಹೊರಟೆವು. ಪಾದಚಾರಿಗಳಿಗೆ ಮತ್ತು ಸೈಕಲ್ ಸವಾರರಿಗೆ ಇದ್ದ ಮಾರ್ಗದಲ್ಲೇ ನಡೆದುಕೊಂಡು, ಸಿಕ್ಕುವ ಸವಾರರಿಗೆ 'ಹಾಯ್' 'ಗುಡ್ ಮಾರ್ನಿಂಗ್' ಹೇಳಿಕೊಂಡು ಆಗಾಗ್ಗೆ ನೀರು ಸೇವಿಸಿಕೊಂಡು ಸಾಗುತ್ತಿದ್ದೆವು. ಹಾಗೆ ನಡೆಯುವಾಗ ಹಿಂದೆ ನಾವು ಬದರಿ ನಾರಾಯಾಯಣನ ದರ್ಶನಕ್ಕೆ ಕಾರಿನಲ್ಲಿ ಹೋಗುತ್ತಿದ್ದಾಗ ಕಾವಿ ಬಟ್ಟೆ ಧರಿಸಿ, ಕೈಯಲ್ಲಿ ಕಮಂಡಲವಿಟ್ಟುಕೊಂಡು ಕಾಲು ದಾರಿಯಲ್ಲಿ ಪಾದಯಾತ್ರೆ ಮಾಡುತ್ತಿದ್ದ ಯೋಗಿಗಳದ್ದು ನೆನಪಾಯಿತು. ಸುಮಾರು 11.30ಕ್ಕೆ ನಾನು ನನ್ನ ಯಜಮಾನರು ಶ್ರೀನಿವಾಸನ ದೇವಸ್ಥಾನಕ್ಕೆ ಬಂದು, ಪಾದರಕ್ಷೆ ಬಿಚ್ಚಿಟ್ಟು ಕಾಲು ತೊಳೆದು ದೇವರ ಮುಂದೆ ನಿಂತಾಗ ಆದ ಅನುಭವ ವರ್ಣಿಸುವುದು ತುಂಬಾ ಕಷ್ಟ. 75 ಕಿ.ಮೀ ನಡೆದು ಬಂದೆವಾ ಎನ್ನಿಸಿಬಿಟ್ಟಿತು.
ಪಾದಯಾತ್ರೆಯಲ್ಲಿ ಹಿಂದಿನಿಂದ ಕೆಲವರು ಸುಮಾರು ಸಲ ಅವರವರ ಪಾಡಿಗೆ ಹೋಗಿ ಬಂದಿರುವವರುಗಳೇ ಇದನ್ನು ಏರ್ಪಡಿಸಿದ್ದು. ಹೆಲೆನ್ಸ್ ಬರ್ಗ್ 1985ರಲ್ಲೇ ಸ್ಥಾಪಿತವಾಗಿದೆ. ಆದರೆ ಈ ವರ್ಷ ಇದನ್ನು ತುಂಬಾ ಮುತುವರ್ಜಿಯಿಂದ ನಾನಾ ಪಂಗಡಗಳು ಒಟ್ಟುಗೂಡಿ ಏರ್ಪಡಿಸಿ ಇನ್ನು ಮುಂದೆ ಪ್ರತಿವರ್ಷ ಹೋಗುವಹಾಗೆ ಮಾಡಬೇಕೆಂಬ ಯೋಜನೆ ಹೊತ್ತಿದೆ.
ಏಳು ಮಲೈ ವಾಸ, ಸಪ್ತಗಿರಿವಾಸನ ಬೆಟ್ಟ ಹತ್ತಿ ದರ್ಶನ ಪಡೆದಿದ್ದೆವು. ಈಗ ಸಿಡ್ನಿಯ ಶ್ರೀನಿವಾಸನಿಗೂ ಇಷ್ಟು ವರ್ಷಗಳನಂತರ ಮೊದಲಬಾರಿಗೆ ಪಾದಯಾತ್ರೆಯನ್ನು ಏರ್ಪಡಿಸಿ ನಮಗೂ ಪಾದಯಾತ್ರೆಯ ಮೂಲಕವೂ ಹೋಗಿ ಶ್ರೀನಿವಾಸನ ದರ್ಶನ ಪಡೆಯುವ ಭಾಗ್ಯ ಲಭಿಸಿದ್ದು ಮನಸ್ಸಿಗೆ ತುಂಬಾ ತೃಪ್ತಿ, ಹೆಮ್ಮೆ ಕೊಟ್ಟಿರುವುದು.