ಬೋಸ್ಟನ್ಗೆ ಉರುಳಿ ಬಂದ ಸರದೇಶಪಾಂಡೆ 'ರಾಶಿ ಚಕ್ರ'
ಅಬ್ಬಾ, ರಾಶಿಗಳ ಬಗ್ಗೆ ಹಲವಾರು ವಿಷಯಗಳನ್ನು ತಿಳಿಯೋ ಅಪೂರ್ವ ಅವಕಾಶ ನ್ಯೂ ಇಂಗ್ಲೆಂಡ್ ಕನ್ನಡಿಗರಿಗೆ ಒದಗಿ ಬಂತು. ಸಾಮಾನ್ಯವಾಗಿ, ನಮ್ಮೆಲರಿಗೂ ಜ್ಯೋತಿಷ್ಯ ಶಾಸ್ತ್ರದಲ್ಲಿ ಏನೋ ಕುತೂಹಲ ಮತ್ತು ನಂಬಿಕೆ. ನಮ್ಮ ನಮ್ಮ ರಾಶಿ ಅಲ್ಲದೆ ನಮ್ಮ ಮನೆಯವರ ಮತ್ತು ಸ್ನೇಹಿತರ ರಾಶಿಯ ಬಗ್ಗೆ ತಿಳಿಯಬೇಕು ಅಂತ ಅನ್ನಿಸುತ್ತೆ. ಆ 12 ರಾಶಿಗಳ ಪ್ರಭಾವ ಮತ್ತು ಆಯಾ ರಾಶಿಯಲ್ಲಿ ಹುಟ್ಟಿದ ವ್ಯಕ್ತಿಗಳ ನಡವಳಿಕೆ ಮತ್ತು ಗುಣ ಸ್ವಭಾವ - ಇವೆಲ್ಲದರ ಬಗ್ಗೆ ಆಸಕ್ತಿ ಇರೋದೇ. ಇದೇನು, ಅಲ್ಲಿನ ಕನ್ನಡ ಕೂಟದವರು ವಾರ ಭವಿಷ್ಯ ಹೇಳೋ ಯಾರನ್ನಾದರೂ ಕರೆಸಿಕೊಂಡರಾ ಅಂತ ಕೇಳಿದ್ರಾ?
ಹಾಗೇನಿಲ್ಲ, ಯಾವುದೇ ಜ್ಯೋತಿಷಿ ಇಲ್ಲಿಗೆ ಬಂದಿರಲಿಲ್ಲ. ಇಲ್ಲಿಗೆ ಬಂದವರು ಕರ್ನಾಟಕದ ಹೆಸರಾಂತ ಕಲಾವಿದ, ಯಶವಂತ ಸರದೇಶಪಾಂಡೆ ಅವರು. ಆದರೆ ಅವರು ಜ್ಯೋತಿಷಿ ಅಲ್ಲದಿದ್ದರೂ, ಈ ರಾಶಿಗಳ ಬಗ್ಗೆ 2 ಗಂಟೆಗಳ ಕಾಲ ಮಾತನಾಡಿ, ನೆರೆದ ಸಭಿಕರನ್ನ ಹೊಟ್ಟೆ ಹುಣ್ಣಾಗುವಂತೆ ನಗಿಸಿದರು! ಬೋಸ್ಟನ್ ನಲ್ಲಿ 'ನಾವು ವಿಶ್ವ ಕನ್ನಡಿಗರು' (ನಾವಿಕ) ಸಂಸ್ಥೆಯ ಆಶ್ರಯದಲ್ಲಿ, ಹುಬ್ಬಳಿಯ ಗುರು ಸಂಸ್ಥೆಯ ಹಾಸ್ಯಗಾರ ಯಶವಂತ ಸರದೇಶಪಾಂಡೆ ಅವರ ಏಕವ್ಯಕ್ತಿ ಹಾಸ್ಯ ರಂಗಪ್ರಯೋಗ "ರಾಶಿ ಚಕ್ರ" ಕಾರ್ಯಕ್ರಮವನ್ನು ಇಲ್ಲಿನ ಚಿನ್ಮಯ ಮಿಷನ್ ಸಭಾಂಗಣದಲ್ಲಿ ಆಗಸ್ಟ್ 25ರಂದು ಆಯೋಜಿಸಲಾಗಿತ್ತು.
ವಿಶ್ವ ಕನ್ನಡ ಸಮ್ಮೇಳನ : ಮುಂದಿನ ವರ್ಷ ಆಗಸ್ಟ್ 30 - ಸೆಪ್ಟೆಂಬರ್ 1ರಂದು, ಬೋಸ್ಟನ್ ನಲ್ಲಿ ಎರಡನೇ ನಾವಿಕ ವಿಶ್ವ ಕನ್ನಡ ಸಮಾವೇಶವನ್ನು ಮಂದಾರ, ನ್ಯೂ ಇಂಗ್ಲೆಂಡ್ ಕನ್ನಡ ಕೂಟ ಮತ್ತು ಹೊಯ್ಸಳ ಕನ್ನಡ ಕೂಟಗಳ ಸಹಕಾರದೊಂದಿಗೆ ನಡೆಸುವ ಸಂಬಂಧವಾಗಿ ಹಲವಾರು ಪೂರ್ವಭಾವಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಆ ಕಾರ್ಯಕ್ರಮ ಸರಣಿಯ ಮೊದಲ ಕಲಾಪವೇ ಈ ಹಾಸ್ಯ ಸಂಜೆ. ಶರದ್ ಉಪಾಧ್ಯೆ ಅವರ ಮರಾಠಿ ಮೂಲದ 'ರಾಶಿ ಚಕ್ರ' ವಸ್ತುವನ್ನು ವಿವೇಕ್ ಕಾತರಕಿ ಅವರು ಕನ್ನಡಕ್ಕೆ ಅನುವಾದಿಸಿದ್ದಾರೆ. ಯಶವಂತ ಅವರ ನಿರ್ದೇಶನದಲ್ಲಿ, ಅವರೇ ಪ್ರಸ್ತುತ ಪಡಿಸಿದ ಈ ಹಾಸ್ಯ ಸಂಜೆ ಕಾರ್ಯಕ್ರಮವನ್ನು ನೆರೆದ್ದಿದ್ದ ಸುಮಾರು 200 ಜನರು ಆನಂದಿಸಿದರು. ಪ್ರತಿಯೊಂದು ರಾಶಿಯಲ್ಲಿ ಜನಿಸಿದ ಪ್ರಖ್ಯಾತ ವ್ಯಕ್ತಿಗಳ ಭಾವಚಿತ್ರ/ವ್ಯಂಗ್ಯಚಿತ್ರದೊಂದಿಗೆ, ಆ ರಾಶಿಯವರ ಗುಣ-ನಡವಳಿಕೆ ಪರಿಚಯಿಸಿ, ಯಶವಂತ ಅವರು ಹಾಸ್ಯಭರಿತ ನಿರೂಪಣೆಯಿಂದ ಪ್ರೇಕ್ಷಕರನ್ನು ಗೆದ್ದರು. ಹಾಸ್ಯದ ಹೊನಲು ಹರಿಸಿದ ಈ ಕಾರ್ಯಕ್ರಮ, ಮುಂಬರುವ ನಾವಿಕ ಸಮಾವೇಶದ ಒಂದು ಸುಂದರ ಮುನ್ನುಡಿಯಾಗಿ ರೂಪುಗೊಂಡಿತು. ಒಂದರ ನಂತರ ಒಂದು ರಾಶಿಯ ಬಗ್ಗೆ ತಿಳಿಯುತ್ತ ಹೋದಂತೆ, ಎಲ್ಲರೂ ತಮ್ಮ ಮನೆಯವರ ರಾಶಿಯ ಬಗ್ಗೆ ಮೆಲುಕು ಹಾಕುತ್ತಾ ಯಶವಂತ ಅವರ ವಿವರಣೆಯನ್ನು ಹೋಲಿಸುತ್ತಿದರು.
ಯಶವಂತ ಸರದೇಶಪಾಂಡೆ ಅವರು ಈ ವಾರ ಬೋಸ್ತೋನ್ ನಲ್ಲಿ ಒಂದು ನಾಟಕ ವರ್ಕ್ ಶಾಪ್ ಕೂಡ ನಡೆಸಿಕೊಟ್ಟರು. ಆಸಕ್ತ ಸ್ಥಳೀಯರು ಅವರ ಬಳಿ ಅಭ್ಯಾಸ ಮಾಡಿ, ಈ ಹಾಸ್ಯ ಸಂಜೆಯ ಆರಂಭದಲ್ಲಿ "ಫಾರ್ ರೆಂಟ್" ಎಂಬ ನಗೆಭರಿತ ನಾಟಕ ಪ್ರದರ್ಶನ ನೀಡಿದರು. ವಿಶೇಷ ಅಂದರೆ ಈ ನಾಟಕವನ್ನ ಕೇವಲ 2-3 ಸಂಜೆಯ ಅವಧಿಯಲ್ಲಿ ಯಶವಂತ ಅವರು ನಾಟಕ ರಚಿಸಿ, ಆ ಗುಂಪಿಗೆ ತರಬೇತಿ ನೀಡಿದ್ದು! ಈ ನಾಟಕದಲ್ಲಿ ಭಾಗವಹಿಸಿದವರ ಪರವಾಗಿ ಸುಧಾಕರ ರಾವ್ ಮತ್ತು ಮಧು ಮತ್ತಿಹಳ್ಳಿ ಅವರು ಮಾತನಾಡಿ, ಯಶವಂತ್ ಅವರ ಬಳಿ ನಟನೆಯ ಬಗ್ಗೆ ಕಲಿತ ಅನುಭವದ ಬಗ್ಗೆ ಹೇಳಿಕೊಂಡರು. ನಾವಿಕ ಬೋಸ್ಟನ್ ನ ಸಂಚಾಲಕರಾದ ಶರಣಬಸವ ರಾಜೂರ್ ಅವರು, ನಾವಿಕ ಸಮಾವೇಶದ ಸಂಬಂಧವಾಗಿ ನಡೆಯುತ್ತಿರುವ ಸಿದ್ಧತೆಗಳ ಬಗ್ಗೆ ಸಂಕ್ಷಿಪ್ತವಾಗಿ ವಿವರಣೆ ನೀಡಿದರು. ಕಾರ್ಯಕ್ರಮವನ್ನು ಕಾವ್ಯಶ್ರೀ ಮಲ್ಲಣ್ಣ ಅವರು ನಿರೂಪಣೆ ಮಾಡಿದರು. ಕೊನೆಯಲ್ಲಿ ನಾವಿಕ ಸಮಾವೇಶದ ಸಾಂಸ್ಕೃತಿಕ ಸಮಿತಿಯ ಮುಖ್ಯಸ್ಥರಾದ ಪೂರ್ಣಿಮಾ ರಿಸ್ಬುದ್ ಅವರು ವಂದನಾರ್ಪಣೆ ಮಾಡಿದರು.
ಇನ್ನು ಒಂದು ವರ್ಷಕ್ಕೆ ಬೋಸ್ಟನ್ ನಲ್ಲಿ ನಡೆಯುವ ನಾವಿಕ ಸಮಾವೇಶದ ಸಂಭ್ರಮ ಈಗಲೇ ಆರಂಭವಾದಂತಿದೆ. ಮೊತ್ತ ಮೊದಲ ಬಾರಿಗೆ ಇಲ್ಲಿ ನಡೆಯೋ ವಿಶ್ವ ಕನ್ನಡ ಸಮಾವೇಶವನ್ನು ಇಲ್ಲಿನ ಕನ್ನಡಿಗರು ಬಹು ಉತ್ಸುತಕೆಯಿಂದ ಎದುರು ನೋಡುತ್ತಿದ್ದಾರೆ. ಇಂತಹ ಸುಂದರ ಹಾಸ್ಯ ಸಂಜೆಯ ಸವಿ ಆನಂದಿಸಿ ಲಘು ಉಪಹಾರ ಸೇವಿಸುತ್ತಿದ್ದಾಗ, ನೆರೆದ ಕೆಲವು ಮಂದಿ ತಮ್ಮ ಪಕ್ಕದವರನ್ನು ಕೇಳಿಯೇಬಿಟ್ಟರು - ಅಲ್ಲ, ನಿಮ್ಮ ರಾಶಿ ಯಾವುದು?