ಕುವೈತ್ ಕನ್ನಡ ರಾಜ್ಯೋತ್ಸವಕ್ಕೆ ಮೂರ್ತಿ ದಂಪತಿ
ಕುವೈಟ್ ಕನ್ನಡ ಸಂಘ 1984ರಿಂದ ಅಸ್ತಿತ್ವದಲ್ಲಿದ್ದು 28ನೇ ರಾಜ್ಯೋತ್ಸವ ಸಮಾರಂಭಕ್ಕೆ ಮುಖ್ಯ ಅತಿಥಿಗಳಾಗಿ ಪ್ರತಿಷ್ಠಿತ ಇನ್ಫೋಸಿಸ್ ಸಂಸ್ಥೆಯ ಸ್ಥಾಪಕ, ಅಜೀವ ಅದ್ಯಕ್ಷ, ಪದ್ಮ ವಿಭೂಷಣ ಎನ್.ಆರ್. ನಾರಾಯಣ ಮೂರ್ತಿ ಹಾಗೂ ಲೇಖಕಿ, ಸಮಾಜ ಸೇವಕಿ ಪದ್ಮಶ್ರೀ ಸುಧಾ ಮೂರ್ತಿ ಯವರು ಆಗಮಿಸಲಿದ್ದಾರೆ ಎಂದು ಕನ್ನಡ ಕೂಟದ ಅದ್ಯಕ್ಷ ಡಾ.ಸುರೇಂದ್ರ ನಾಯಕ್ ಕಾಪಾಡಿ ಅವರು ಒನ್ಇಂಡಿಯಾ ಕನ್ನಡಕ್ಕೆ ತಿಳಿಸಿದರು.
ನಾರಾಯಣ ಮೂರ್ತಿ ಹಾಗೂ ಸುಧಾ ಮೂರ್ತಿ ಅಂದು ಬೆಳಿಗ್ಗೆ 10ಕ್ಕೆ ಇಲ್ಲಿನ ಗಲ್ಫ್ ತಾಂತ್ರಿಕ ಮಹಾವಿದ್ಯಾಲಯದ ಸಭಾಂಗಣದಲ್ಲಿ ಕುವೈಟಿನಲ್ಲಿರುವ ಕನ್ನಡಿಗರು, ವಿವಿಧ ಸಂಘ ಸಂಸ್ಥೆಗಳ ಮುಖ್ಯಸ್ಥರು, ಸದಸ್ಯರು, ಇಲ್ಲಿನ ವಿಶ್ವವಿದ್ಯಾಲಯ, ಭಾರತೀಯ ಪ್ರೌಢಶಾಲೆಗಳ ಉಪನ್ಯಾಸಕರು, ವಿದ್ಯಾರ್ಥಿಗಳು ಹಾಗೂ ಕುವೈತ್ ಗಣ್ಯರನ್ನು ಉದ್ದೇಶಿಸಿ ಉಪನ್ಯಾಸವನ್ನು ನೀಡಲಿದ್ದಾರೆ.
ಅತಿಥಿ ಗಣ್ಯರಿಗೆ ಅಪರಾಹ್ನ ಕ್ರೌನ್ ಪ್ಲಾಜಾ ಪಂಚತಾರಾ ಹೋಟೆಲಿನಲ್ಲಿ ಗೌರವ ಭೋಜನ ಕೂಟವನ್ನು ಆಯೋಜಿಸಲಾಗಿದೆ. ಸಂಜೆ 5ಕ್ಕೆ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಹಾವೇರಿಯ ಕಲಾವಿದ ಅಶೋಕ್ ಬಸ್ತಿ ಹಾಗೂ ಕೂಟದ ಸದಸ್ಯರು ಮನರಂಜನಾ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದಾರೆ.
ಭಾರತಿಯ ದೂತಾವಾಸದ ರಾಯಭಾರಿ ಸತೀಶ್ ಸಿ. ಮೆಹತಾ ಎಲ್ಲಾ ಕಾರ್ಯಕ್ರಮದಲ್ಲಿ ಉಪಸ್ಥಿತರಿರುವರು ಎಂದು ಡಾ.ನಾಯಕ್ ತಿಳಿಸಿದರು. ಕೂಟದ ಮಾಜಿ ಅದ್ಯಕ್ಷ ಎನ್.ಡಿ.ವಾಸುಕಿ ಮತ್ತು ಪತ್ರಿಕಾ ಸಹಯೋಜಕ ಎಂ.ಮೋಹನದಾಸ್ ಕಾಮತ್ ಕೂಡ ಉಪಸ್ಥಿತರಿರಲಿದ್ದಾರೆ.