ಕುವೈತ್ ಕನ್ನಡ ಕೂಟದಲ್ಲಿ ಅರಳಿದ ಮರಳ ಮಲ್ಲಿಗೆ
ಕೂಟದ ಸದಸ್ಯರಿಗೆ ರಂಗೋಲಿ, ಹಣ್ಣು ಮತ್ತು ತರಕಾರಿ ಕೆತ್ತನೆ, ಅನಿರೀಕ್ಷಿತ ಪರೀಕ್ಷೆ, ಕನ್ನಡ ಚರ್ಚಾ ಸ್ಪರ್ಧೆ, ಜನಪದ ಹಾಡು ಮತ್ತು ನೃತ್ಯ, ಪ್ರಹಸನ, ಚಿಕ್ಕ ಮಕ್ಕಳಿಗಾಗಿ ಭಾವಚಿತ್ರ, ಬಣ್ಣತುಂಬುವುದು, ಕಸದಿಂದ ರಸ, ಕನ್ನಡ ಕಥೆ ಹೇಳಿ, ಕನ್ನಡ ಸರಳ ಪರೀಕ್ಷೆ, ಪದಬಂಧ, ಮುಂತಾದ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು. ಕಾರ್ಯಕ್ರಮದ ಮುಖ್ಯ ಆಕರ್ಷಣೆಯಾಗಿ ಬೆಂಗಳೂರಿನಿಂದ ರಾಘವೇಂದ್ರ ಹೆಗ್ಡೆಯವರು ಸಿರಿಗನ್ನಡ ಯಕ್ಷಪ್ರಶ್ನೆಯನ್ನು ನಡೆಸಿಕೊಟ್ಟರು.
ಮರಳ ಮಲ್ಲಿಗೆ ಸೃಜನ ಸಂಚಿಕೆಯನ್ನು ಮುಖ್ಯ ಅತಿಥಿ ಸುರೇಶ್ ನುಗ್ಗೇಹಳ್ಳಿ ಮತ್ತು ಮಂತ್ರಿ ಬಿಲ್ಡರ್ಸ್ನ ಅತಿಥಿಗಳು, ಕಾರ್ಯಕಾರಿ ಸಮಿತಿ ಹಾಗೂ ಮರಳಮಲ್ಲಿಗೆ ಸಮಿತಿ ಸದಸ್ಯರು ಬಿಡುಗಡೆ ಮಾಡಿದರು. ಕೂಟದ ಮಾಜಿ ಅಧ್ಯಕ್ಷ ಹರ್ಷರಾವ್ ಹಾಗೂ ಪ್ರಸಕ್ತ ವರ್ಷದ ಖಜಾಂಚಿ ರಾಮಚಂದ್ರ ಭಟ್ ರವರನ್ನು ಬೀಳ್ಕೊಡುವ ಸಮಾರಂಭದೊಂದಿಗೆ ಶುಭವಿದಾಯ ಹೇಳಲಾಯಿತು.
ಮರಳಮಲ್ಲಿಗೆ ಸಮಿತಿಯ ಸಂಚಾಲಕರಾದ ಸುರೇಶ್ ಶ್ಯಾಮರಾವ್ ನೇರಂಬಳ್ಳಿ ಹಾಗೂ ಮಿಥಾಲಿ ರಾಮಕುಮಾರ್ ಕಾರ್ಯಕ್ರಮ ನಿರೂಪಿಸಿದರು. ಡಾ. ನಾಗೇಶ್ ಬಾಬು, ಡಾ. ನಾರಾಯಣ, ಸುರೇಶ್ ಬಿ.ಎಸ್., ಪ್ರಕಾಶ್ ಪೈ, ಸುಮಾರಾವ್, ಡಾ.ಯೋಗೇಶ್, ಗಣೇಶನ್, ರಾಜೇಶ್ ವಿಠ್ಠಲ್, ಮಲ್ಲಿಕಾ ರವಿ, ಅಕ್ಷತಾ ಶೆಣೈ, ರಮೇಶ್, ಅಮೃತ್ರಾಜ್ ಅಕ್ಕೋಣೆ, ಮಹೇಶ್, ಡಾ.ಅಜಾದ್, ಸುಗುಣ ಮಹೇಶ್, ಅನಿಲ್ ಪ್ರಭು, ಸುದೀರ್ ಶೆಣೈ ಮತ್ತಿತರು ವಿವಿಧ ವಿಭಾಗಗಳ ಜವಾಬ್ದಾರಿ ವಹಿಸಿಕೊಂಡು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು. ಸ್ವಾದಿಷ್ಟವಾದ ಭೋಜನದ ವ್ಯವಸ್ಥೆ ಮಾಡಲಾಗಿತ್ತು. ಕಾರ್ಯದರ್ಶಿ ರಾಮಕುಮಾರ್ ಎನ್. ವಂದಿಸಿದರು.