ಮೈಸೂರಿನಿಂದ ಕ್ವೀನ್ ಎಲಿಜಬೆತ್ ಆಸ್ಥಾನಕ್ಕೆ ರಘು
ಮೇ.13ರಂದು ನಡೆಯಲಿರುವ ಕ್ವೀನ್ ಎಲಿಜಬೆತ್ II ಅವರ Diamond Jubilee Pageant ನಲ್ಲಿ ಹಾಡಲಿರುವ ಏಕೈಕ ಭಾರತೀಯ ಸಂಗೀತಗಾರ ಎಂಬ ಹಿರಿಮೆಗೆ ರಘು ಪಾತ್ರರಾಗಿದ್ದಾರೆ.
ರಘು ದೀಕ್ಷಿತ್ ತಮ್ಮ ಸಂಗೀತದ ಮೂಲಕ ಹಾಗೂ ಪತ್ನಿ ಮಯೂರಿ ಉಪಾಧ್ಯಾಯ ಅವರ ಸಮಕಾಲೀನ ನೃತ್ಯದ ಮೂಲಕ ರಾಣಿ ಎಲಿಜಬೆತ್ ರನ್ನು ರಂಜಿಸಲು ಸಿದ್ಧರಾಗಿದ್ದಾರೆ. 'Mysore Se Aayi..' ಎನ್ನುತ್ತಾ ರಘು ಹಾಡಿ ಕುಣಿಯಲಿದ್ದಾರೆ.
'ಲಕ್ಷದಲ್ಲಿ ಒಬ್ಬರಿಗೆ ಸಿಗಬಹುದಾದ ಅವಕಾಶ ಇದು. ಯುಕೆ ನನಗೆ ಹೊಸದೇನಲ್ಲ. ಆದರೆ, ಈ ಅವಕಾಶ ತುಂಬಾ ವಿಶೇಷ' ಎಂದು ರಘು ಹೇಳುತ್ತಾರೆ.
ಒಂದು ಗಂಟೆಗಳ ಕಾಲ ನಡೆಯುವ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ 700 ಮಂದಿಯ ಆರ್ಕೆಸ್ಟ್ರಾದೊಂದಿಗೆ ರಘು ರಸಸಂಜೆ ಜೊತೆಗೆ 550 ಕುದುರೆಗಳ ವಿಶೇಷ ನಡಿಗೆ. ನೃತ್ಯ ಪ್ರದರ್ಶನವಿರುತ್ತದೆ. ವಿಶ್ವದೆಲ್ಲೆಡೆಯಿಂದ ಬಂದಿರುವ ಕಲಾವಿದರು ರಾಣಿ ಎಲಿಜಬೆತ್ ಮನ ಸಂತೋಷಪಡಿಸಲಿದ್ದಾರೆ.
ರಘು ದೀಕ್ಷಿತ್ ಅವರಿಗೆ 3-5 ನಿಮಿಷಗಳ ಕಾಲ ತಮ್ಮ ಕಲೆಯನ್ನು ಪ್ರದರ್ಶಿಸುವ ಅವಕಾಶ ಲಭ್ಯವಾಗಲಿದೆ. ಆಫ್ರಿಕಾ, ಅಮೆರಿಕ ಹಾಗೂ ಆಸ್ಟ್ರೇಲಿಯಾ ಇನ್ನಿತರ ದೇಶದ ಕಲಾವಿದರೊಂದಿಗೆ ರಘು ವೇದಿಕೆ ಹಂಚಿಕೊಳ್ಳಲಿದ್ದಾರೆ. ಅಂತಾರಾಷ್ಟ್ರೀಯ ವೇದಿಕೆಯಲ್ಲಿ ಪತ್ನಿ ಮಯೂರಿ ಜೊತೆ ಪ್ರಥಮ ಬಾರಿಗೆ ಪ್ರದರ್ಶನ ನೀಡುತ್ತಿರುವುದು ರಘು ಖುಷಿಯನ್ನು ಇನ್ನಷ್ಟು ಹೆಚ್ಚಿಸಿದೆ.
12 ಮಂದಿ ನರ್ತಕಿಯರ ತಂಡದೊಂದಿಗೆ ಬಾಲಿವುಡ್ ಗೀತೆಯೊಂದಕ್ಕೆ ನರ್ತಿಸಲು ಚಿಂತಿಸಿದ್ದ ಮಯೂರಿ ನಂತರ ಮನಸ್ಸು ಬದಲಾಯಿಸಿದ್ದಾರೆ. ನಮ್ಮ ಸಂಸ್ಕೃತಿ ಬಿಂಬಿಸುವ ದೇಸಿ ಗೀತೆಯ ನಾದಕ್ಕೆ ಮಯೂರಿ ತಂಡ ಕುಣಿಯಲಿದೆ. ಮೈಸೂರಿನಿಂದ ರಾಣಿ ಎಲಿಜಬೆತ್ ಆಸ್ಥಾನಕ್ಕೆ ಹಾರಿಯುವ ಈ ಕಲಾ ಜೋಡಿಗೆ ಯಶಸ್ಸು ಸಿಗಲಿ ಎಂದು ಒನ್ ಇಂಡಿಯಾ ಕನ್ನಡ ಹಾರೈಸುತ್ತದೆ.