ಪಂಡಿತ್ ಜಯತೀರ್ಥ ಮೇವುಂಡಿ ಸಂದರ್ಶನ
ಇತ್ತೀಚೆಗೆ ಸಿಂಗಪುರದ ಪ್ರಸಿದ್ಧ ಎಸ್ಪ್ಲನೇಡ್ ಸಭಾಂಗಣದಲ್ಲಿ, Engage Groupನವರು "Vocal Traditions of India" ಕಾರ್ಯಕ್ರಮದ ಸರಣಿಯ ಅಂಗವಾಗಿ ಏರ್ಪಡಿಸಿದ ಕಾರ್ಯಕ್ರಮದಲ್ಲಿ ಸಂಗೀತ ಕಚೇರಿ ನೀಡಿದ ಜಯತೀರ್ಥರನ್ನು ಕಾರ್ಯಕ್ರಮದ ನಂತರ ಸಂದರ್ಶನ ಮಾಡುವ ಅವಕಾಶ ಒದಗಿ ಬಂದಿತ್ತು.
ಪ್ರಶ್ನೆ : ನಮಸ್ಕಾರ ಜಯತೀರ್ಥ ಅವರೇ, ನಮಗೆ ನಿಮ್ಮ ಸಂಗೀತ ಜೀವನ ಯಾವಾಗ ಮತ್ತು ಹೇಗೆ ಆರಂಭವಾಯಿತು ಎಂದು ತಿಳಿಯುವ ಕುತೂಹಲ. ಅದರ ಬಗ್ಗೆ ಸ್ವಲ್ಪ ತಿಳಿಸುತ್ತೀರಾ?
ಜಯತೀರ್ಥ : ಬಹಳ ಸಣ್ಣವನಿದ್ದಾಗಿನಿಂದ ನಾನು ನಮ್ಮ ತಾಯಿ ಹಾಡುತ್ತಿದ್ದ ದಾಸರ ಪದಗಳನ್ನು ಕೇಳುತ್ತಿದ್ದೆ. ಅದರಿಂದ ನನಗೆ ಹಾಡುವದರ ಬಗ್ಗೆ ಆಸಕ್ತಿ ಬೆಳೆಯಿತು. ಅಲ್ಲದೇ ರೇಡಿಯೋದಲ್ಲಿ ಆಗಾಗ್ಗೆ ಕೇಳುತ್ತಿದ್ದ ಭೀಮಸೇನ್ ಜೋಶಿಯವರ ದಾಸರ ಪದಗಳನ್ನು ಕೇಳುತ್ತಾ, ನನಗೆ ನಾನೂ ಕೂಡ ಹಾಗೆಯೇ ಹಾಡಲು ಕಲಿಯಬೇಕು ಎಂದು ಅನ್ನಿಸತೊಡಗಿತು. ನಮ್ಮ ತಾಯಿ ನನ್ನನ್ನು ಹುಬ್ಬಳ್ಳಿಯಲ್ಲಿ ಎಲ್ಲಿಯೇ ಶಾಸ್ತ್ರೀಯ ಕಾರ್ಯಕ್ರಮ ನಡೆದರೂ ಕರೆದುಕೊಂಡು ಹೋಗುತ್ತಿದ್ದರು. ಆಗ ನನಗೆ ಏನೇನೂ ತಿಳಿಯುತ್ತಿರಲಿಲ್ಲ. ಆದರೂ ನನ್ನ ಕಿವಿಗೆ ಬೀಳಲಿ, ನನಗೆ ಅದರಲ್ಲಿ ಆಸಕ್ತಿ ಹುಟ್ಟಲಿ ಎಂಬ ಉದ್ದೇಶದಿಂದ ನನ್ನನ್ನು ಕರೆದುಕೊಂಡು ಹೋಗುತ್ತಿದ್ದರು. ಕುಂದಗೋಳದ ಸವಾಯಿ ಗಂಧರ್ವ ಸಂಗೀತ ಮಹೋತ್ಸವಕ್ಕೆ ನನ್ನನ್ನು ಯಾವಾಗಲೂ ಕರೆದೊಯ್ಯುತ್ತಿದ್ದರು. ಅಲ್ಲಿ ಅಹೋರಾತ್ರಿ ನಡೆಯುತ್ತಿದ್ದ ಎಲ್ಲ ದಿಗ್ಗಜರ ಕಚೇರಿಗಳನ್ನು ಸಮಯದ ಅರಿವಿಲ್ಲದೇ ಕುಳಿತು ಕೇಳುತ್ತಿದ್ದೆ. ಹೀಗೆಯೇ ನನಗೆ ಸಂಗೀತದ ಗೀಳು ಹುಟ್ಟಿಕೊಂಡಿತು. ಹಾಗಾಗಿ ನನ್ನ ತಾಯಿಯೇ ನನಗೆ ಸಂಗೀತದ ಮೊದಲ ಗುರು ಎನ್ನಬೇಕು.
ಪ್ರಶ್ನೆ : ನಿಮ್ಮಲ್ಲಿಯ ಪ್ರ್ರತಿಭೆಯನ್ನು ಮೊದಲು ಗುರುತಿಸಿ ನಿಮ್ಮನ್ನು ಹಾಡು ಕಲಿಯಲು ಪ್ರೇರೇಪಿಸಿದವರು ಯಾರು?
ಜಯತೀರ್ಥ : ಭೀಮಸೇನ್ ಜೊಶಿಯವರ ದಾಸರ ಪದಗಳನ್ನು ಕೇಳಿ ನಾನು ಅವುಗಳ ಅನುಕರಣೆ ಮಾಡುತ್ತಾ ಇದ್ದೆ. ಅಲ್ಲಲ್ಲಿ ನಡೆಯುತ್ತಿದ್ದ ಭಜನೆ ಕಾರ್ಯಕ್ರಮಗಳಲ್ಲಿ ಹಾಡುತ್ತಿದ್ದೆ. ಕೇಳಿದ ಅನೇಕರು "ಹುಡುಗ ಚೆನ್ನಾಗಿ ಹಾಡುತ್ತಾನೆ, ಅವನನ್ನು ಹೆಚ್ಚಿಗೆ ಕಲಿಯಲು ಕಳಿಸಿ" ಎಂದು ನನ್ನ ತಾಯಿಯವರಿಗೆ ಹೇಳುತ್ತಿದ್ದರು. ಅದರಿಂದ ಪ್ರೋತ್ಸಾಹಿತರಾದ ನನ್ನ ತಾಯಿ ನನ್ನನ್ನು ನಮ್ಮ ಮನೆ ಹತ್ತಿರ ಇರುವ ಬ್ಯಾಂಕರ್ ಮಾಸ್ತರ್ ಎಂಬ ಸಂಗೀತದ ಗುರುಗಳ ಹತ್ತಿರ ಕಲಿಯಲು ಕಳಿಸಿದರು. ಅವರ ಹತ್ತಿರ ನಾನು ಒಂದು ವರ್ಷ ಸಂಗೀತದ ಮೊದಲ ಪಾಠಗಳನ್ನು ಕಲಿತೆ. ನಂತರ ನಾನು ಪಂಡಿತ್ ಸುರೇಂದ್ರಸಾ ನಾಕೋಡ್ ಅವರ ಹತ್ತಿರ ಮೂಲ ರಾಗಗಳಾದ ದುರ್ಗಾ, ಭೈರವಿ, ಭೂಪಾಲಿ ಮುಂತಾದವುಗಳನ್ನು ಮತ್ತು "ಛೋಟಾ ಖಯಾಲ್"ಗಳನ್ನು ಕಲಿತೆ.