ಲಂಡನ್ನಲ್ಲಿ ಬಸವಣ್ಣ ಪುತ್ಥಳಿ ಸ್ಥಾಪನೆಗೆ ಕೌನ್ಸಿಲ್ ಒಪ್ಪಿಗೆ
ಮಾರ್ಚ್ 13ರಂದು ಸಭೆ ಸೇರಿದ 5 ಸದಸ್ಯರ ಸಮಿತಿ, ಹಿಂದಿನ ಲ್ಯಾಂಬೆತ್ ಮೇಯರ್ ಆಗಿದ್ದ ಕನ್ನಡಿಗ ಡಾ. ನೀರಜ್ ಪಾಟೀಲ್ ಅವರ ಅರ್ಜಿಯ ವಿಚಾರಣೆ ಮಾಡಿ, 12ನೇ ಶತಮಾನದಲ್ಲಿಯೇ ಜಾತಿ ತಾರತಮ್ಯ ಮತ್ತು ಗುಲಾಮಗಿರಿಯನ್ನು ತೊಡೆಯಲು ಹೋರಾಟ ಮಾಡಿದ್ದ ಬಸವಣ್ಣನ ಮೂರ್ತಿ ಸ್ಥಾಪನೆಗೆ ಅಂಗೀಕಾರ ನೀಡಿತು.
ಬಸವಣ್ಣನ ಪುತ್ಥಳಿ ಸ್ಥಾಪನೆ, ಭಾರತ ಮತ್ತು ಬ್ರಿಟನ್ ನಡುವಿನ ಸಾಂಸ್ಕೃತಿಕ ಸಂಬಂಧವನ್ನು ಇನ್ನಷ್ಟು ಗಟ್ಟಿಮಾಡಲು ಸಹಕಾರಿ ಎಂದು ನೀರಜ್ ಪಾಟೀಲ್ ಒನ್ಇಂಡಿಯಾ ಕನ್ನಡಕ್ಕೆ ಹೇಳಿದ್ದಾರೆ. ಇದು ಲಂಡನ್ ಕನ್ನಡಿಗರು ಮಾತ್ರವಲ್ಲ ಇಡೀ ಜಗತ್ತಿನಲ್ಲಿರುವ ಕನ್ನಡಿಗರೆಲ್ಲರು ಹರ್ಷಿಸುವ ಸಂಗತಿ ಎಂದು ಅವರು ನುಡಿದರು. ಲಂಡನ್ನಲ್ಲಿರುವ ಪಾಕಿಸ್ತಾನಿ ನಾಗರಿಕರು ಮತ್ತು ಲ್ಯಾಂಬೆತ್ ಏಷ್ಯಾ ಫೋರಂ ಪುತ್ಥಳಿಗಾಗಿ ಸಲ್ಲಿಸಿದ್ದ ಅರ್ಜಿಯನ್ನು ಬೆಂಬಲಿಸಿದ್ದವು.
ಥೇಮ್ಸ್ ನಡಿದ ದಡದಲ್ಲಿ, ಐತಿಹಾಸಿಕ ಅಲ್ಬರ್ಟ್ ಎಂಬ್ಯಾಂಕ್ಮೆಂಟ್ ಮೇಲೆ ಪುತ್ಥಳಿಗಾಗಿ ಚೌಕದ ಗ್ರಾನೈಟ್ ಅಡಿಪೀಠ ನಿರ್ಮಿಸಲು ಯೋಜನಾ ಸಮಿತಿ ಅನುಮತಿ ನೀಡಿದೆ. ಆದರೆ, ಬ್ರಿಟನ್ನಿನ ಸಾರ್ವಜನಿಕ ಪುತ್ಥಳಿ ಕಾಯ್ದೆಯ ಪ್ರಕಾರ, ಅಡಿಪೀಠ ನಿರ್ಮಾಣಕ್ಕೆ ಸಂಸ್ಕೃತಿ, ಮಾಧ್ಯಮ ಮತ್ತು ಕ್ರೀಡಾ ಸಚಿವರಿಂದ ಕೂಡ ಅನುಮೋದನೆ ಪಡೆಯಬೇಕಾಗುತ್ತದೆ.