'ಮುಖ್ಯಮಂತ್ರಿ' ಚಂದ್ರುಗೆ-ಶ್ರೀರಂಗ ರಂಗ ಪ್ರಶಸ್ತಿ
1970ರಿಂದ ನಾಟಕ ರಂಗದಲ್ಲಿ ಸಕ್ರಿಯರಾಗಿರುವ ಚಂದ್ರು ಅವರು ನಟನಾಗಿ, ನಿರ್ದೇಶಕನಾಗಿ, ತಂತ್ರಜ್ಞರಾಗಿ, ಸಂಘಟಕನಾಗಿ ರಂಗಭೂಮಿಯ ಸೇವೆಗೈದಿದ್ದಾರೆ. ನೂರಕ್ಕೂ ಹೆಚ್ಚು ನಾಟಕಗಳ ಮೂರು ಸಾವಿರಕ್ಕೂ ಮಿಕ್ಕಿ ಪ್ರದರ್ಶನಗಳಲ್ಲಿ ಅಭಿನಯಿಸಿದ ಕೀರ್ತಿ ಇವರದು. ಇವರಿಗೆ ಅತಿ ಹೆಚ್ಚು ಖ್ಯಾತಿ ತಂದುಕೊಟ್ಟ ’ಮುಖ್ಯಮಂತ್ರಿ’ ನಾಟಕದಲ್ಲಿ ಮುನ್ನೂರಕ್ಕೂ ಹೆಚ್ಚು ಸಲ ರಂಗವೇರಿದ್ದಾರೆ. ಹೆಸರಾಂತ ರಂಗ ನಿರ್ದೇಶಕರಾದ ಬಿ.ವಿ.ಕಾರಂತ, ಪ್ರೇಮಾ ಕಾರಂತ, ಬಿ. ಜಯಶ್ರೀ, ಟಿ.ಎನ್. ಸೀತಾರಾಮ್, ಬಿ.ವಿ.ರಾಜಾರಾಮ್, ಪ್ರಸನ್ನ ಮುಂತಾದವರ ನಿರ್ದೇಶನದಲ್ಲಿ ಅಭಿನಯಿಸಿದ ಕೀರ್ತಿ ಇವರದ್ದು.
ಮುಖ್ಯಮಂತ್ರಿ, ಗರ್ಭಗುಡಿ, ಭರತಪ್ಪನ ಸೊಂಟಕ್ಕೆ ಗಂಟೆ,ಕತ್ತಲ ದಾರಿ, ತಾಯಿ, ಕೇಳು ಜನಮೇಜಯ, ನಮ್ಮೊಳಗೊಬ್ಬ ನಾಜೂಕಯ್ಯ ಮುಂತಾದವು ಇವರು ನಟಿಸಿದ ಪ್ರಮುಖ ನಾಟಕಗಳು. ಸುಮಾರು ನಾಲ್ಕುನೂರ ಐವತ್ತಕ್ಕೂ ಹೆಚ್ಚು ಚಲನಚಿತ್ರಗಳಲ್ಲಿ ಅಭಿನಯಿಸಿ ಕನ್ನಡಿಗರ ಮನೆ ಮಾತಾಗಿರುವವರು ಮುಖ್ಯಮಂತ್ರಿ ಚಂದ್ರು.
ಮಾರ್ಚ್ 30 ಶುಕ್ರವಾರ ಸಂಜೆ 5.30ಕ್ಕೆ ಎಮೆರೇಟ್ಸ್ ಥಿಯೇಟೆರ್, ದುಬೈನಲ್ಲಿ ಧ್ವನಿ ಪ್ರತಿಷ್ಠಾನದ 27ನೇ ವಾರ್ಷಿಕೋತ್ಸವ ’ಧ್ವನಿ ರಂಗ ಸಿರಿ-2012’ರಲ್ಲಿ ಪ್ರಶಸ್ತಿ ಪ್ರದಾನವನ್ನು ನೆರವೇರಿಸಲಾಗುವುದು. ಸಮಾರಂಭದ ಅಂಗವಾಗಿ ಪ್ರಕಾಶ್ ರಾವ್ ಪಯ್ಯಾರ್ ಅವರ ನಿರ್ದೇಶನದಲ್ಲಿ ’ಆಷಾಡದ ಒಂದು ದಿನ" (ಪಟ್ಟಣ ಶೆಟ್ಟಿಯವರು ಅನುವಾದಿಸಿರುವ ಕನ್ನಡ ನಾಟಕ)ವನ್ನು ಪ್ರದರ್ಶಿಸಲಾಗುವುದು. ನಾಟಕದ ಪ್ರಮುಖ ಭೂಮಿಕೆಯಲ್ಲಿ ಆಶಾ ಕೊರಿಯ, ಪ್ರತಿಮಾ ಶೆಟ್ಟಿ, ಡೊನಾಲ್ಡ್ ಕೊರಿಯ, ಪ್ರಭಾಕರ್ ಕಾಮತ್, ಸುದರ್ಶನ ಹೆಗ್ಡೆ, ಲವೀನಾ ಫ಼ೆರ್ನಾಡಿಸ್, ಅಶೋಕ್ ಅಂಚನ್, ಸಂತೋಷ ಪೂಜಾರಿ, ಸಂಪತ್ ಶೆಟ್ಟಿ, ರೇಶ್ಮಾ ಪಿರೇರಾ, ದೀಪಾ ರೋಹಿತ್, ಜಗನ್ನಾಥ್ ಬೆಳ್ಳಾರೆ, ಚಾರ್ಲ್ಸ್, ಐಶ್ವರ್ಯಾ ಮುಂತಾದವರು ಇರುವರು. ನಾಟಕಕ್ಕೆ ಪ್ರವೇಶ ಉಚಿತ.