ಕುವೈತ್ ಕನ್ನಡ ಕೂಟದಿಂದ ದಾಸ ಜಯಂತಿ ಆಚರಣೆ
ಈ ಸಲದ ಮುಖ್ಯ ಆಕರ್ಷಣೆಯಾಗಿ ಖ್ಯಾತ ಹಿಂದೂಸ್ತಾನಿ ಗಾಯಕ ಶಂಕರ್ ಶಾನಭಾಗ್ ಅವರ ದಾಸರ ಕೀರ್ತನೆಗಳ ಗಾಯನ ಕಾರ್ಯಕ್ರಮ ನಡೆಯಿತು. ಇವರಿಗೆ ನರೇಂದ್ರ ನಾಯಕ್ ಹಾರ್ಮೋನಿಯಂ, ತೋನ್ಸೆ ರಂಗ ಪೈ ತಬಲಾ ಹಾಗೂ ಕೆ. ಜಯಂತ್ ನಾಯಕ್ ಮತ್ತು ಕಮಲಾಕ್ಷ ಕಿಣಿ ತಾಳದಲ್ಲಿ ಸಹಕರಿಸಿದರು.
ಈ ಗಾಯನ ಕಾರ್ಯಕ್ರಮ ನೆರೆದ ಪ್ರೇಕ್ಷಕ ವೃಂದದ ಪ್ರಶಂಷೆಗೆ ಪಾತ್ರವಾಯಿತು. ಕೂಟದ ಸದಸ್ಯರು ರಾಧಾ ಕಲ್ಯಾಣವನ್ನು ಶಾಸ್ತೋಕ್ತವಾಗಿ ಕರ್ನಾಟಕ ಸಂಗೀತ ಗಾಯನದೊಂದಿಗೆ ವಧುವರರ ಮೆರವಣಿಗೆ, ನರ್ತನಗಳೊಂದಿಗೆ ನಡೆಸಿದರು. ವಿಶೇಷವಾಗಿ ಆಮಂತ್ರಿತರಾಗಿದ್ದ ಕರ್ನಾಟಕ ಸಂಗೀತ ವಿದುಷಿ ಬೆಂಗಳೂರಿನ ಸುಮಾ ವೆಂಕಟೇಶ್ ರ ಗಾಯನ ಕಾರ್ಯಕ್ರಮಕ್ಕೆ ವಿಶೇಷ ಕಳೆ ನೀಡಿತ್ತು.
ಕೂಟದ ಚಿಣ್ಣರು ರಂಗು ರಂಗಿನ ವೇಷ ಭೂಷಣಗಳಿಂದ ರಾಧಾ ಕೃಷ್ಣರಾಗಿ ಛದ್ಮ ವೇಷ ಸ್ಪರ್ಧೆಯಲ್ಲಿ ಕಾಣಿಸಿಕೊಂಡರು. ಕನ್ನಡ ಕೂಟದ ಅದ್ಯಕ್ಷ ಡಾ. ಸುರೇಂದ್ರ ನಾಯಕ್ ಕೆ. ಸ್ವಾಗತಿಸಿದರು. ಕಾರ್ಯದರ್ಶಿ ರಾಮ ಕುಮಾರ್ ವಂದಿಸಿದರು. ಪುಷ್ಕಳ ಗಣೇಶನ್, ರಾಮಚಂದ್ರ ಭಟ್, ರೇಖಾ ದಾಮೋದರ್, ಮಲ್ಲಿಕಾ ರವಿ, ಅನಿಲ್ ಪ್ರಭು, ರಮೇಶ್ ಚಿಕ್ಕಣ್ಣ, ಡಾ.ಯೋಗೇಶ್ ಸಹಕರಿಸಿದರು. ರಾಧಾ ಕಲ್ಯಾಣದ ಅಂಗವಾಗಿ ಮಂಗಳೂರು ಶೈಲಿಯ ಬಾಳೆಎಲೆ ಪ್ರಸಾದವನ್ನು ವಿತರಿಸಲಾಯಿತು.