ದುಬೈನಲ್ಲಿ 'ಆಷಾಡದ ಒಂದು ದಿನ' ಕನ್ನಡ ನಾಟಕ
ಈ ನಾಟಕವನ್ನು ದುಬೈ ಕನ್ನಡಿಗರಿಗಾಗಿ 2010ರ ಸಾಲಿನ ಕರ್ನಾಟಕ ನಾಟಕ ಆಕಾಡೆಮಿ ಪ್ರಶಸ್ತಿ ಪುರಸ್ಕ್ರತ ಪ್ರಕಾಶ್ ರಾವ್ ಪಯ್ಯಾರ್ ಅವರು ನಿರ್ದೇಶಿಸಲಿದ್ದಾರೆ. ’ಧ್ವನಿ’ ಈ ಹಿಂದೆ ಗಿರೀಶ್ ಕಾರ್ನಡರ ’ನಾಗ ಮಂಡಲ’, ’ಹಯವದನ’, ’ಒಡಕಲು ಬಿಂಬ’ ನಾಟಕಗಳನ್ನು ದುಬೈಯಲ್ಲಿ ಪ್ರದರ್ಶಿಸಿದೆ. ’ಧ್ವನಿ’ ನಿರ್ಮಿಸಿದ ಇಪ್ಪತ್ತೈದಕ್ಕೂ ಹೆಚ್ಚು ನಾಟಕಗಳು ಭಾರತದ ವಿವಿಧೆಡೆ ಹಲವಾರು ಪ್ರದರ್ಶನಗೊಂಡಿವೆ. ನಾಟಕಗಾರ ಪ್ರೊ. ಮೋಹನ್ ರಾಕೇಶ್ ಅವರ ಈ "ಆಷಾಡ್ ಕಾ ಏಕ್ ದಿನ್" ನಾಟಕವನ್ನು ಪ್ರೊ. ಸಿದ್ಧಲಿಂಗ ಪಟ್ಟಣಶೆಟ್ಟಿಯವರು ಕನ್ನಡಕ್ಕೆ ರೂಪಾಂತರಿಸಿದ್ದಾರೆ.
ಮೋಹನ್ ರಾಕೇಶ್ ಬಗ್ಗೆ : ಹಿಂದಿಯ ಸುಪ್ರಸಿದ್ಧ ನಾಟಕಕಾರ ಮೋಹನ್ ರಾಕೇಶ್ ಅವರ ಪ್ರಪ್ರಥಮ ಈ ನಾಟಕ 1958ರಲ್ಲಿ ರಚಿಸಲ್ಪಟ್ಟು ಹಿಂದಿಯ ಪ್ರಥಮ ಆಧುನಿಕ ನಾಟಕ ಎಂಬ ಹೆಗ್ಗಳಿಕೆಯೊಂದಿಗೆ 1959ರ ಅತ್ಯುತ್ತಮ ನಾಟಕ ಪ್ರಶಸ್ತಿಯನ್ನು ಸಂಗೀತ ನಾಟಕ ಆಕಾಡೆಮಿಯಿಂದ ಪಡೆದುಕೊಂಡಿತು. ಹಿಂದಿ ರಂಗಭೂಮಿಯ ದಿಕ್ಕು ದೆಸೆ ಬದಲಾಯಿಸಿದ ಈ ನಾಟಕ ಭಾರತದ ಪ್ರಖ್ಯಾತ ರಂಗ ನಿರ್ದೇಶಕರಿಂದ ದೇಶದ ವಿವಿಧೆಡೆ ಪ್ರದರ್ಶಿಸಲ್ಪಟ್ಟಿದೆ.
1972ರಲ್ಲಿ ಮೋಹನ್ ರಾಕೇಶ್ ಅವರು ದೈವಾಧೀನರಾದಾಗ ಅವರ ಮೂರು ನಾಟಕಗಳು ಪ್ರಕಟಗೊಂಡಿದ್ದವು; ನಾಲ್ಕನೇ ನಾಟಕ ಅಪೂರ್ಣವಾಗಿತ್ತು. ಮೋಹನ್ ರಾಕೇಶ್ ಅವರು ಏಳು ಕಾದಂಬರಿ ಏಳು ಕಥಾ ಸಂಕಲನ ಹಾಗೂ ನೂರಾರು ಇತರ ಪ್ರಕಾರದ ಸಾಹಿತ್ಯ ಲೇಖನಗಳನ್ನು ರಚಿಸಿದ್ದಾರೆ.