ಅಮೆರಿಕದ ಕನ್ನಡ ಮಕ್ಕಳು ಬೆಳಗಿದ ದೀಪಾವಳಿ
ರಂಗು ರಂಗಾದ ವೇಷತೊಟ್ಟ ಮಕ್ಕಳ ಕಂಸಾಳೆ ಒಂದು ಕಡೆಯಾದರೆ, ಬಣ್ಣದ ಕೋಲಾಟ ಮತ್ತೊಂದೆಡೆ ಸಾಗಿತ್ತು. ನೀಲಿ ಸೀರೆಯುಟ್ಟ ಕಾವೇರಿ ತನ್ನ ಕೊಡದಿಂದ ಚಿಮ್ಮಿದ ಅನುರಾಗ ಧಾರೆಯಲ್ಲಿ ಇನ್ನೂ ನಾಲ್ಕು ನದಿಗಳನ್ನು ಜೊತೆಗೂಡಿಸಿಕೊಂಡು McLean ಹೈಸ್ಕೂಲಿನ ವೇದಿಕೆಯನ್ನೇರಿದ್ದಳು. ಪುಟಾಣಿ ಶರಣ ಶರಣೆಯರು ಹಾಗೂ ಹರಿದಾಸರ ತಂಡ, ತಂಬೂರಿ ಮಿಡಿಯುತ್ತಾ ಕಾವೇರಿಯನ್ನು ಹಿ೦ಬಾಲಿಸಿದರು. ತಾಳಕ್ಕೆ ತಕ್ಕ ಲಯಬದ್ದವಾದ “ಲೆಜಿ೦" (Lezim) ನೃತ್ಯ ಪ್ರೇಕ್ಷಕರ ಮನಸೆಳೆದಿತ್ತು. ಜ್ಞಾನಪೀಠ ವಿಜೇತ ಸಾಹಿತಿಗಳ ತಂಡ ಹಚ್ಚಿದ ದೀವಳಿಗೆಯ ದೀಪ, ಭುವನೇಶ್ವರಿಯ ಅಲಂಕೃತ ಪಲ್ಲಕ್ಕಿಗೆ ಬೆಳಕು ನೀಡಿತ್ತು. ಈ ಎಲ್ಲಾ ವಿಸ್ಮಯಗಳನ್ನು ಆನಂದಿಸುತ್ತ ಕುಳಿತ ಭುವನೇಶ್ವರಿ, ಕನ್ನಡ ಕಲಿಯೋಣ ಶಾಲೆಯ ಗುರುಗಳಿಗೆ ಮತ್ತು ಯುವ ನಿರೂಪಕರಾದ ವಿಭ, ಇಶಿಕ, ಮೇಧಿನಿಯವರಿಗೆ ಅಭಯ ಹಸ್ತ ನೀಡಿ ಹೆಮ್ಮೆಯಿಂದ ನಸುನಕ್ಕಳು.
ವಾಣಿ ರಮೇಶ್ ರವರ ನಿರ್ದೇಶನದಲ್ಲಿ ತಯಾರಾದ ಕೋಲಾಟದಿಂದ ಪ್ರಾರಂಭವಾದ ಕಾರ್ಯಕ್ರಮಗಳು ಒಂದಕ್ಕಿಂತ ಮತ್ತೊಂದು ಚೆನ್ನ ಎನ್ನುವಂತಿದ್ದವು. “ಕನ್ನಡ ಭಾಷೆಯಲ್ಲಿ ಧರ್ಮಚಿಂತನ" ಎಂಬ ಶೀರ್ಷಿಕೆಯಂತೂ ಎಲ್ಲಾ ಮನರಂಜನಾ ಕಾರ್ಯಕ್ರಮಗಳನ್ನೂ ಮೀರಿಸಿತ್ತು. ಸಂಧ್ಯಾ ದಾಮೋದರ್ ರವರ ನೇತೃತ್ವದಲ್ಲಿ ರೂಪುಗೊಂಡ ದಾಸರ ಪದಗಳನ್ನೊಳಗೊಂಡ ನೃತ್ಯ ರೂಪಕ ಅಮೋಘವಾಗಿತ್ತು. ಉಮಾ ಇಟ್ಟಿಗಿ ಅವರ ತಂಡದವರು ನಿರೂಪಿಸಿದ ನೃತ್ಯ ರೂಪಕ “ಅನುಭವ ಮಂಟಪ" ಮನ ಸೆಳೆಯಿತು. ಶ್ರೀ ತರಳಬಾಳು ಜಗದ್ಗುರುಗಳ ನೇತೃತ್ವದಲ್ಲಿ ನಿರ್ಮಾಣಿತ ಧ್ವನಿ ಸುರುಳಿಗೆ ಜೋಡಿಸಿದ ನೃತ್ಯ ಕಲ್ಪನಾತೀತವಾಗಿತ್ತು. ಅವರೊಂದಿಗೆ ಬಿಜ್ಜಳ, ಬಸವಣ್ಣ, ಅಲ್ಲಮಪ್ರಭು, ಮಂತ್ರಿ ಇನ್ನಿತರ ಪಾತ್ರಗಳಲ್ಲಿ ಅಭಿನಯ ನೀಡಿದ ಸ್ಥಳೀಯ ಕಲಾವಿದರು ಮತ್ತು ಅವರ ವೇಷಭೂಷಣಗಳು ಮತ್ತಷ್ಟು ಶೋಭೆ ತಂದವು.