ಕನ್ನಡಕ್ಕೆ ಶ್ರಮದಾನ ಮಾಡಿದವರಿಗೆ ಸನ್ಮಾನ
ಕನ್ನಡ ಕಲಿಯೋಣ ಶಾಲೆಯ ಗುರುಗಳ ಸ್ವಯಂಸೇವೆ ಮತ್ತು ವಿದ್ಯಾದಾನ ಶ್ರಮ ಗುರುತಿಸಿ ಕಾವೇರಿ ಸಮಿತಿಯವರು ಗೌರವ ಪತ್ರ ನೀಡಿ ಆವರಿಗೆ ಮೆಚ್ಚುಗೆ ಸಲ್ಲಿಸಿದರು. ಗಾಲ್ಫ್ ಕ್ರೀಡೆಗೆ ಪ್ರತೀ ವರ್ಷವೂ ಧನ ಸಹಾಯ ಮಾಡಿ ಪೋಷಿಸಿದ ಭಾರತಿ ಹಾಗೂ ಬೋಗಾರಮ್ ಶೆಟ್ಟಿಯವರು, ಮತ್ತು ಆ ಕ್ರೀಡೆಯನ್ನು ಶ್ರದ್ಧೆಯಿಂದ ನಡೆಸಿಕೊಟ್ಟ ಶಿವು ಭಟ್, ಡಾ. ರಮೇಶ್ ರಾವ್ ಹಾಗೂ ಮೋಹನ್ ರಾವ್ ರವರಿಗೆ ಮೆಚ್ಚುಗೆ ಫಲಕ ನೀಡಿ ಗೌರವಿಸಲಾಯಿತು. ಅಂತೆಯೇ ಬ್ಯಾಡ್ಮಿಂಟನ್ ಗೆ ಧನ ಸಹಾಯ ಸಲ್ಲಿಸಿದ ಮಾದೇಶ್ ಬಸವರಾಜು ಮತ್ತು ಮುತುವರ್ಜಿವಹಿಸಿ ನಡೆಸಿಕೊಟ್ಟ ಅನಂತ ಕಲಾಲೆ, ಟೆನ್ನಿಸ್ ನಡೆಸಿಕೊಟ್ಟ ರಾಮಮೂರ್ತಿ ಅವರನ್ನೂ ಕೂಡ ಗೌರವಿಸಲಾಯಿತು. ಕ್ರಿಕೆಟ್ ಕ್ರೀಡೆಗೆ ಸತತವಾಗಿ ಧನ ಸಹಾಯ ಮಾಡುತ್ತಿರುವ ನರ್ಮದ ಹಾಗೂ ರವೀಂದ್ರ ದಂಕನಿಕೋಟೆಯವರನ್ನೂ ಮತ್ತು ಎಲ್ಲಾ ಕ್ರೀಡೆಗಳನ್ನೂ ಅಚ್ಚುಕಟ್ಟಾಗಿ ನಡೆಸಿಕೊಟ್ಟ ಗಿರೀಶ್ ವಾಸುದೇವ ಅವರನ್ನು ಗೌರವಿಸುವ ಕಾರ್ಯಕ್ರಮವನ್ನು ಅಂದು ಕಾವೇರಿಯವರು ಹಮ್ಮಿಕೊಂಡಿದ್ದರು.
ಈ ಸಮಾರ೦ಭದಲ್ಲಿ "ಪರಿ" ಚಿತ್ರದ ಧ್ವನಿ ಸುರುಳಿಯನ್ನು ಬಿಡುಗಡೆ ಮಾಡಲಾಯಿತು. ಭಾರದ್ವಾಜ ಅವರ ಕಾದ೦ಬರಿ ಆಧಾರಿತ ಚಿತ್ರ "ಪರಿ" ಕಳೆದ "ಅಕ್ಕ" (AKKA) ಸಮ್ಮೇಳನದಲ್ಲಿ ಪ್ರಶಸ್ತಿಯನ್ನು ಪಡೆದಿತ್ತು. ಈ ಚಿತ್ರದ ನಿರ್ದೇಶಕರಲ್ಲೊಬ್ಬರು ರಮೇಶ್ ಭಟ್ ರವರು ನಮ್ಮ ಕಾವೇರಿಯ ಸದಸ್ಯರೆ೦ದರೆ ಹೆಮ್ಮೆಯ ವಿಷಯ.
ಎಲ್ಲಾ ಕಾರ್ಯಕ್ರಮ ಮುಗಿಸಿ, ಊಟದ ಮನೆಗೆ ಸಾಗಿದಾಗ, ಭರ್ಜರಿ ಹಬ್ಬದೂಟ ಕಾದಿತ್ತು. ಸಾಲು ಸಾಲಾದ ಟ್ರೇಗಳಲ್ಲಿ ತುಂಬಿದ ಹೋಳಿಗೆ, ಬಾದೂಷಾ, ಬಿಸಿಬೇಳೆ ಭಾತ್, ಚಪಾತಿ ಪಲ್ಯ, ಖಾರಾ ಬೂಂದಿ ಹಬ್ಬದ ವಾತಾವರಣಕ್ಕೆ ಕಳಶವಿಟ್ಟಿತ್ತು. “ಮದುವೆಮನೆಯ ಕಳೆ ತಂದಿತ್ತು, ಕನ್ನಡದ ಕೆಂಪು, ಹಳದಿ ಬಣ್ಣ. ಅದನ್ನು ನೂರ್ಮಡಿಸಿತ್ತು ಬಾದೂಷಾ ಜೊತೆ ಹೋಳಿಗೆಯ ಹೂರಣ" ಎಂದ ಒಬ್ಬ ನವ್ಯ ಕವಿ. ಜಯಶ್ರೀ ಜಗದೀಶ್ ರವರ ನೇತೃತ್ವದಲ್ಲಿ 2011ನೇ ತ೦ಡ ದೀಪಾವಳಿ ಮತ್ತು ರಾಜ್ಯೋತ್ಸವವನ್ನು ಬಹಳ ವಿಜೃ೦ಭಣೆಯಿ೦ದ ನಡೆಸಿ ಎಲ್ಲರ ಮನಗೆದ್ದರು.