ಸಿಂಗಪುರ ಬೆಳಗಿದ ಮಂಗಳೂರಿನ ಓಷನ್ ಕಿಡ್ಸ್
ಕರ್ನಾಟಕದಲ್ಲಿ ಮಾತ್ರವಲ್ಲದೆ ಇಡೀ ಭಾರತದ ವಿವಿಧ ದೂರದರ್ಶನದ ಪ್ರತಿಭಾ ಪ್ರದರ್ಶನಗಳಲ್ಲಿ ಮತ್ತು ಸಾಂಸ್ಕೃತಿಕ ಸಮ್ಮೇಳನಗಳಲ್ಲಿ ಪಾಲ್ಗೊಂಡು, ವಿಜೇತರಾಗಿರುವ ಯುವ ನೃತ್ಯಪಟುಗಳು ಅವರ ವರ್ಚಸ್ಸು ಮತ್ತು ನೃತ್ಯದಲ್ಲಿನ ಶ್ರದ್ದೆಯನ್ನು ತೋರಿ ನೆರೆದಿದ್ದಂತಹ ಸಭಿಕರನ್ನು ಮನರಂಜಿಸಿದರು. ಮೊಟ್ಟ ಮೊದಲ ಸಲ ಈ ತರಹದ ಅಮೋಘ ಕಾರ್ಯಕ್ರಮವನ್ನು ಪ್ರಸ್ತುತ ಪಡಿಸಿದ ಕನ್ನಡ ಸಂಘದ ಪ್ರಯತ್ನವನ್ನು ನೆರೆದಿದ್ದ ಗಣ್ಯರು, ಮುಖ್ಯ ಅತಿಥಿಗಳು ಮತ್ತು ಸಭಿಕರು ಶ್ಲಾಘಿಸಿದರು.
ಭರತನಾಟ್ಯ, ಯಕ್ಷಗಾನ ಮತ್ತು ಇತರ ನೃತ್ಯಗಳ ಸಂಯುಕ್ತ ಸಂಗಮದಲ್ಲಿ "ಗಣೇಶ ಸ್ತುತಿ"ಯೊಂದಿಗೆ ಕಾರ್ಯಕ್ರಮ ಆರಂಭವಾಯಿತು. ಕನ್ನಡ ಸಂಘ(ಸಿಂಗಪುರ)ದ ಅಧ್ಯಕ್ಷರಾದ ಡಾ. ವಿಜಯ್ ಕುಮಾರ್ ಅವರು ಮುಖ್ಯ ಅತಿಥಿಗಳಾಗಿ ಬಂದಿದ್ದ ಕನ್ನಡ ಚಿತ್ರರಂಗದ ಖ್ಯಾತ ನಿರ್ಮಾಪಕ, ನಿರ್ದೇಶಕ ರಾಜೇಂದ್ರ ಸಿಂಗ್ ಬಾಬು, ಗಣ್ಯರಿಗೆ ಮತ್ತು ಸಭಿಕರಿಗೆ ಸ್ವಾಗತ ಕೋರಿದರು. OCEAN KIDSನ್ನು ಸಂಪರ್ಕಿಸಿದ ರೀತಿ ಮತ್ತು ಅವರನ್ನು ಸಿಂಗಪುರಕ್ಕೆ ಕರೆತಂದು ಯುವ ಕಲಾವಿದರನ್ನು ಪ್ರೋತ್ಸಾಹಿಸುವ ಕನ್ನಡ ಸಂಘದ ಸದುದ್ಧೇಶದ ಆಶಯವನ್ನು ತಿಳಿಸಿಕೊಟ್ಟು ನೃತ್ಯತಂಡದ ಕಿರುಪರಿಚಯ ಮಾಡಿಕೊಟ್ಟರು.
ಕಾರ್ಯಕ್ರಮದ ಮುಖ್ಯ ಅತಿಥಿಗಳಾದ ರಾಜೇಂದ್ರ ಸಿಂಗ್ ಬಾಬು ಮಾತನಾಡಿ, ಬೆಂಗಳೂರಿನನಲ್ಲಿ ಕನ್ನಡಿಗರೇ ಅಲ್ಪಸಂಖ್ಯಾತರಾಗುತ್ತಿದ್ದಾರೆ, ಕನ್ನಡ ಚಲನಚಿತ್ರಗಳಿಗೆ ಚಿತ್ರಮಂದಿರಗಳು ಸಿಗುವುದು ಸಹ ಕಷ್ಟವಾಗುತ್ತಿದೆ, ಇತರೆ ಬಾಷಾ ಚಿತ್ರಗಳಿಗೆ ಹೆಚ್ಚಿನ ಪ್ರಾಮುಖ್ಯತೆ ಕೊಟ್ಟು ಕನ್ನಡವನ್ನು ಮೂಲೆಗುಂಪು ಮಾಡುತ್ತಿದ್ದಾರೆಂದು ಖೇದದಿಂದ ನುಡಿದರು. ಹೊರನಾಡಿನಲ್ಲಿ ಕನ್ನಡವನ್ನು ಬೆಳೆಸುತ್ತಿರುವ ಸಂಘದ ಶ್ರಮವನ್ನು ಶ್ಲಾಘಿಸುತ್ತಾ, ಸಿಂಗಪುರ ಕನ್ನಡ ಸಂಘದ ಸಕ್ರೀಯ ಕಾರ್ಯವೈಖರಿ ಬಗ್ಗೆ ಆಸ್ಟ್ರೇಲಿಯಾದ ಕನ್ನಡ ಕೂಟದಿಂದ ತಿಳಿದುಕೊಂಡಿದ್ದನ್ನು ಜ್ಞಾಪಿಸಿಕೊಂಡರು.
ಕನ್ನಡ ಸಂಘದ ಕಾರ್ಯಕಾರಿ ಸಮಿತಿಯ ಸದಸ್ಯರಾದ ಮೋಹನ್ ಬೇಗೂರ್ ಅವರ ವೇದಿಕೆ ನಿರ್ವಹಣೆ, ಸುಧೀಂದ್ರ ಮತ್ತು ಸ್ನೇಹಿತರ "ಧ್ವನಿ ಮತ್ತು ದೀಪದ ಹತೋಟಿ"ಯಲ್ಲಿನ ನಿರ್ದೇಶನದಲ್ಲಿ ಸರಾಗವಾಗಿ ನಡೆದ ಕಾರ್ಯಕ್ರಮ ಸಭಿಕರ ಮನಗೆದ್ದಿತು. OCEAN KIDSನ ವೈವಿಧ್ಯಮಯ ನೃತ್ಯ ಪ್ರಯೋಗಗಳಡಿಯಲ್ಲಿ, "ನವದುರ್ಗ, ದಶಾವತಾರ, ರಾಮಾಯಣ, ಶಿವತಾಂಡವ ಮತ್ತು ವಿಷ್ಣು ತಾಂಡವ" ಗಳಂತಹ ಪೌರಾಣಿಕ ಪ್ರಸಂಗಗಳನ್ನು ಆಯ್ದಂತಹ ನೃತ್ಯ ಅದ್ಭುತವಾಗಿತ್ತು. ಇತ್ತೀಚಿನ ಚಲನಚಿತ್ರಗಳ ಹಾಡುಗಳ ಸಮ್ಮಿಶ್ರಣದಲ್ಲಿ "ಜೋಗಿ ಚಿತ್ರದ ಎಲ್ಲೊ ಜೋಗಪ್ಪ, ನ ಧೀಂ ಧೀಂತನ, ಹುಟ್ಟಿದರೆ ಕನ್ನಡನಾಡಲ್ಲಿ ಹುಟ್ಟಬೇಕು, ಪಂಕಜದಂತಹ ಹಾಡುಗಳಿಗೆ ಅಮೋಘವಾಗಿ ಕುಣಿದು ನೃತ್ಯ ಪ್ರದರ್ಶನ ಮಾಡಿದಾಗ ಸಭಿಕರು ಚಪ್ಪಾಳೆ ಮತ್ತು ಸಿಳ್ಳುಗಳೊಂದಿಗೆ ಪ್ರಶಂಸಿಸಿದರು. [ಸಿಂಗಾರ ಪ್ರಶಸ್ತಿ ವಿತರಣೆ]