ಬೋಲ್ಟನ್ನಿನಲ್ಲಿ ಕನ್ನಡ ಬಳಗ ಯುಕೆ ದೀಪಾವಳಿ
ಈ ಸಂಭ್ರಮಕ್ಕೆ ಮುಖ್ಯ ಅತಿಥಿಗಳಾಗಿ ಕರ್ನಾಟಕದ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಡಾ. ಮುಖ್ಯಮಂತ್ರಿ ಚಂದ್ರು, ಖ್ಯಾತ ನಟ, ನಿರ್ದೇಶಕ ರಮೇಶ್ ಅರವಿಂದ್ ಮತ್ತು "ಕಗ್ಗ ಮ್ಯಾಜಿಕ್"ನ ಮುರಳಿ ಕೌಶಿಕ್ ಅವರು ಆಗಮಿಸಿದ್ದರು. ಮು.ಮಂ. ಚಂದ್ರು ಅವರು ಕನ್ನಡ ಭಾಷೆಗೆ ಬರಬಹುದಾದ ಆಪತ್ತುಗಳು ಮತ್ತು ಅದರ ಪರಿಹಾರಕ್ಕೆ ಪ್ರಾಧಿಕಾರ ಹಮ್ಮಿಕೊಂಡ ಕಾರ್ಯಗಳನ್ನು ವಿವರಿಸಿ, ಕನ್ನಡ ಬಳಗ ಇತ್ತೀಚೆಗೆ ಆರಂಭಿಸಿರುವ "ಕನ್ನಡ ಕಲಿ" ಯೋಜನೆಗೆ, ಕರ್ನಾಟಕ ಸರ್ಕಾರದ ವತಿಯಿಂದ ನಾಲ್ಕು ಲಕ್ಷ ರೂಪಾಯಿಗಳ ಚೆಕ್ಕನ್ನು ಕಟ್ಟಿದ್ದಲ್ಲದೆ ತಮ್ಮ ವಾಗ್ಝ್ರರಿಯಿಂದ ಸಭಿಕರ ಮನ ಸೂರೆಗೊಂಡರು.
ಇಪ್ಪತ್ತೈದು ವರ್ಷ ಕನ್ನಡ ಚಿತ್ರರಂಗದಲ್ಲಿ ಕೆಲಸ ಮಾಡಿ "Gentleman Star' ಎನಿಸಿರುವ ರಮೇಶ್ ಅರವಿಂದ್ ಅವರು, ಕನ್ನಡ ಸಿನೀಮ ನಡೆದು (ಬೆಳಗಿ)ಬಂದ 75 ವರ್ಷದ ಚರಿತ್ರೆಯನ್ನು ತಾವು ತಂದ ವಿಡಿಯೋವನ್ನು ಪ್ರದರ್ಶಿಸಿ ಎಲ್ಲರ ಮನ ಗೆದ್ದರು. ಅವರು ಎಲ್ಲರೊಂದಿಗೆ ಆತ್ಮೀಯವಾಗಿ ಬೆರೆತು ಓಡಾಡಿ ಫೋಟೋ ಕ್ಲಿಕ್ಕಿಸಿಕೊಂಡು ಯುವಕ-ಯುವತಿಯರ ಮನಹೃದಯದ ಕ್ಯಾಮರಾದೊಳಗೆ ಮನೆ ಮಾಡಿಬಿಟ್ಟರು!
ಜಾದೂಗಾರ ಮುರಳಿ ಕೌಶಿಕರದೋ ಇನ್ನೊಂದು ತರಹದ ವಶೀಕರಣ. "ಡಿವಿಜಿ"ಯವರ (ಸ್ವಲ್ಪ ಮಟ್ಟಿಗೆ ಕೆಲವರಿಗೆ) ಗಂಟಿನ ಭಾಷೆಯ "ಮಂಕು ತಿಮ್ಮನ ಕಗ್ಗ"ವನ್ನೂ ಸಹ ತಾವು ಕಟ್ಟಿದ ಗಂಟನ್ನು ಬಿಡಿಸಿದಂತೆ ತಮ್ಮ ಮ್ಯಾಜಿಕ್ಕಿನಿಂದ ಬಿಡಿಸಿ ಜನರನ್ನು ನಿಜವಾಗಿಯೂ "ಮಂತ್ರಮಗ್ಧ"ರನ್ನಾಗಿ ಮಾಡಿಬಿಟ್ಟರು.
ದೀಪಾವಳಿಯ ಜ್ಯೋತಿ, ಕನ್ನಡದ ದೀಪ, ಜನರಲ್ಲಿ ಸಂತೃಪ್ತಿಯ ಬೆಳಕು ಝಗಮಗಿಸುತ್ತಿದ್ದವು. 800 ಜನ ಬರಲಿರುವವರೆಂದು ಎಂಟೇ ದಿನಗಳಲ್ಲಿ ಹುಡುಕಿ ಗೊತ್ತುಮಾಡಿದ ವಿಶಾಲ ಸಭಾಂಗಣದ ಎಂಟು ತೂಗುದೀಪ ಗುಚ್ಛಗಳ ಬೆಳಕು; ಅವರ ಮನ ತಲ್ಲಣಿಸಿದ ಸ್ಥಳೀಯ ಕಲಾವಿದರ ಪ್ರತಿಭಾವಳಿಯ ಝಳಕು - ಇವನ್ನೆಲ್ಲಾ ಕಂಡ ಲ್ಯಾಂಕಾಶಾಯರಿಗೆ ಬಂದ ಅತಿಥಿಗಳು, ಬೋಲ್ಟನ್ನಿಗೆ Bolt from the blue (ಮಿಂಚು-ಸಿಡಿಲು) ಬಡಿದಂತೆ ಅವಾಕ್ಕಾಗಿದ್ದರು! ಅಧ್ಯಕ್ಷಿಣಿ ಸುರೇಣು, ಮಾಜಿ ಅಧ್ಯಕ್ಷಿಣಿ ಭಾನುಮತಿ ಅವರ ಹರ್ಷಕ್ಕೆ ಪಾರವೇ ಇರಲಿಲ್ಲ.
ಕಾರ್ಯಕರಮದಲ್ಲಿ ಎಂದಿನಂತೆ ನೃತ್ಯದ ಕೋಲಾಟವಲ್ಲದೆ ಈ ಸಲ ಹೊಸದಾಗಿ KB's Got Talentಎಂಬ talent show ನಡೆಸಿ, ಬಳಗದ ಚಿಕ್ಕಮಕ್ಕಳ ಮತ್ತು ಯುವ ಕಲಾವಿದರ ಪ್ರತಿಭೆಯನ್ನು ಹೊರತಂದದು ಶ್ಲಾಘನೀಯ. Talet show ಗೆದ್ದ ಆ ಪುಟಾಣಿಯಂತೂ ಎಲ್ಲರ ಮನಸ್ಸನ್ನೂ ಗೆದ್ದುಕೊಂಡಳು. ವೈವಿಧ್ಯತೆಯ ಮನರಂಜನೆ ಕಾರ್ಯಕ್ರಮ, ಮೂರು ಅತಿಥಿಗಳೊಂದಿಗೆ ವಿಚಾರ ಸಂಕಿರಣ, ತಿಂಡಿ-ಕಾಫಿ-ಊಟ, ಇದರ ಜೊತೆಗೆ ಸ್ಥಳೀಯ ಸಮಿತಿಯವರು ಪ್ರಸ್ತುತಪಡಿಸಿದ, ಎಲ್ಲರನ್ನೂ ನಗಿಸಿ ಆನಂದಿಸಿದ "ಅಭಿನವ ರಾಮಾಯಣ" ಇವೆಲ್ಲ ಈ ಸಲದ ದೀಪಾವಳಿಯ ಸಮಾರಂಭಕ್ಕೆ ಕಳೆ ಕೊಟ್ಟಿದ್ದವು.