ಕೆಕೆಎನ್ ಸಿಯಿಂದ ಮಕ್ಕಳಿಗಾಗಿ 'ಪ್ರೇರಣ' ನಿಧಿ ಸಂಗ್ರಹ
ಈ ಕಾರ್ಯಕ್ರಮದಿಂದ ಬರುವ ಸಂಪೂರ್ಣ ಹಣವನ್ನು ಬೇ ಏರಿಯಾದಲ್ಲಿರುವ, ಈ ದೇಶದ ದೊಡ್ಡ ಹಾಗು ವಿಶೇಷವಾಗಿ ಉಚಿತ ಚಿಕಿತ್ಸೆ ಮಾಡುವ ಈ ಆಸ್ಪತ್ರೆಗೆ ನೀಡುವ ನಿರ್ಧಾರ ಮಾಡಲಾಗಿದೆ. ದೇಶ ವಿದೇಶದಿಂದ ಹಲವಾರು ಕಾರಣದಿಂದ ಚಿಕಿತ್ಸೆಗೆ ಬರುವ ಮಕ್ಕಳಿಗೆ ಈ ಆಸ್ಪತ್ರೆಯಲ್ಲಿ ವಿಶೇಷ ಹಾಗು ಅತಿ ಸೂಕ್ಷ್ಮ ಚಿಕಿತ್ಸೆ ಮತ್ತೆ ಪರಿಹಾರ ನೀಡಲಾಗುತ್ತದೆ. ದೇಶದ ಆರ್ಥಿಕ ಹಿನ್ನೆಡೆಯಿಂದ ಆಸ್ಪತ್ರೆಗೆ ವಿಶೇಷ ನೆರವಿನ ಅವಶ್ಯಕತೆ ಇದ್ದಿದರಿಂದ ಈ ಒಂದು ಕಾರ್ಯಕ್ರಮದಿಂದ ಚಿಕ್ಕ ಸಹಾಯ ಮಾಡುವ ಪ್ರಯತ್ನ ಕೆ.ಕೆ.ಎನ್.ಸಿ ಯದಾಗಿದೆ.
ಪ್ರೇರಣ ಕಾರ್ಯಕ್ರಮ ಬೇ ಏರಿಯಾದ ಸಂಗೀತ ರಸಿಕರ ದೃಷ್ಟಿಯಿಂದಲೂ ವಿಶೇಷವಾಗಲಿದೆ. ಈ ಕಾರ್ಯಕ್ರಮದಲ್ಲಿ ಅಂತಾರಾಷ್ಟ್ರೀಯ ಖ್ಯಾತಿಯ ಕಲಾವಿದರಾದ ಪಂಡಿತ್ ಹಬಿಬ್ ಖಾನ್, ಮಾಥಿವ್ ಮೊಂಟ್ಫೋರ್ಟ್, ಜಾರ್ಜ ಬ್ರೂಕ್ಸ್, ಸತೀಶ್ ತಾರೆ ಹಾಗು ರಮೇಶ್ ಶ್ರೀನಿವಾಸನ್ ಇವರಿಂದ ಪೂರ್ವ ಹಾಗು ಪಾಶ್ಚಾತ್ಯ ಸಂಗೀತದ ಭರ್ಜರಿ ವಾದ್ಯಗೋಷ್ಠಿಯನ್ನು ನಿರೀಕ್ಷಿಸಬಹುದು. ಅಂತಾರಾಷ್ಟ್ರೀಯ ಖ್ಯಾತಿಯ ಕಲಾವಿದ ಹಾಗು ಕನ್ನಡಿಗ ಡಾ.ಸಂಜಯ್ ಶಾಂತಾರಾಮ್ ಹಾಗು ಸುಪ್ರಿಯ ದೇಸಾಯಿ ನಿರ್ದೇಶನದ ಪ್ರಸಿದ್ಧ "ಅಲಾದ್ದೀನ್" ನೃತ್ಯರೂಪಕ ಕೂಡ ಆಯೋಜಿಸಲಾಗಿದೆ. ಈ ಕಾರ್ಯಕ್ರಮದಲ್ಲಿ ಸ್ಥಳೀಯ ನೃತ್ಯಗಾರರು ಭಾಗವಹಿಸುತ್ತಿದ್ದಾರೆ.
"ಈ ವಿಶೇಷ ಕಾರ್ಯಕ್ರಮಕ್ಕೆ ದೇಶದ ನಾನಾ ಭಾಗದಿಂದ ಜನರು ಬಂದು ಪಾಲ್ಗೊಳ್ಳಲಿದ್ದಾರೆ. ಹಯ್ವರ್ಡಿನ ಚಬೋತ್ ಕಾಲೇಜ್ ನಲ್ಲಿ ನಡೆಯುವ ಈ ಕಾರ್ಯಕ್ರಮ ವೀಕ್ಷಿಸಲು ಸುಮಾರು 1500 ಜನರಿಗೆ ಅವಕಾಶವಿದೆ. ಈ ಕಾರ್ಯಕ್ರಮದ ಪ್ರಚಾರ, ಟಿಕೆಟ್ ಮಾರಾಟ ಭರ್ಜರಿಯಾಗಿ ಸಾಗಿದೆ. "ಥ್ಯಾಂಕ್ಸ್ ಗಿವಿಂಗ್" ನಿಮಿತ್ತ ಪ್ರೇರಣ ಕಾರ್ಯಕ್ರಮದ ಸಂಗೀತ ಕಾರ್ಯಕ್ರಮದ ನಿಯೋಜನೆ ಹಾಗು ಮಕ್ಕಳ ಆಸ್ಪತ್ರೆಗೆ ದಾನ - ನವೆಂಬರ್ ನ ಈ ತಿಂಗಳಲ್ಲಿ ಕನ್ನಡಿಗರಾಗಿ ನಾವು ಮಾಡುತ್ತಿರುವುದು ಅಭಿಮಾನದ ಸಂಗತಿ.
ನೀವು ಟಿಕೆಟ್ ಕೊಳ್ಳಬೇಕಿದ್ದಲ್ಲಿ ಅಥವಾ ದಾನ ಮಾಡಬೇಕಿದ್ದಲ್ಲಿ ಜಾಲತಾಣ www.kknc.org ವೀಕ್ಷಿಸಲು ಮರೆಯದಿರಿ. ಹೆಚ್ಚಿನ ಮಾಹಿತಿಗೆ 510-586-3378ಗೆ ಕರೆ ನೀಡಿ" ಎಂದು ಕೆ.ಕೆ.ಎನ್.ಸಿ ಕಾರ್ಯಕಾರಿಣಿ ಸಮಿತಿ ಸದಸ್ಯರಾದ ಅಭಿಜೀತ್ ಪ್ರಹ್ಲಾದ್ ತಿಳಿಸಿದ್ದಾರೆ.