ದೊಡ್ಡ ಗುಂಡುರುಳಿಸುವ ಸ್ಪರ್ಧೆಯಲ್ಲಿ ಗೆದ್ದವರಾರು?
ಇಷ್ಟೆಲ್ಲ ಬರೆಯುವುದರ ಪೀಠಿಕೆ ಏನೆಂದರೆ ಕನ್ನಡ ಸಂಘ(ಸಿಂಗಪುರ)ವು ಪ್ರಪ್ರಥಮ ಬಾರಿಗೆ ತಮ್ಮ ಸದಸ್ಯರಿಗೆಂದು ಬೌಲಿಂಗ್ "BOWLING" ಸ್ಪರ್ಧೆಯನ್ನು ಏರ್ಪಡಿಸಿತ್ತು. ಕಾರ್ಯಕ್ರಮದ ರೂವಾರಿ ಜಯಶಂಕರ್ ಗೌಡ. ಮೊದಲಿಗೆ ಸದಸ್ಯರಿಂದ ಯಾವ ತರಹದ ಪ್ರತಿಕ್ರಿಯೆ ಬರಬಹುದು, ಸದಸ್ಯರು ಈ ತರಹದ ಸ್ಪರ್ಧೆಗಳಿಗೆ ಬಂದು ಭಾಗವಹಿಸುವರೆ? ಎಂಬ ಸಣ್ಣ ಸಂಶಯದಿಂದಲೆ ಶುರುವಾದ ಸಿದ್ಧತೆಗಳು, ಕೊನೆಯಲ್ಲಿ ಇಷ್ಟೊಂದು ಅದ್ಭುತ ಯಶಸ್ಸಿನಲ್ಲಿ ಕೊನೆಗೊಳ್ಳುತ್ತವೆ ಎಂದು ಎಣಿಸಿರಲಿಲ್ಲ.
ಆದಿತ್ಯವಾರದ ಮಧ್ಯಾಹ್ನದ ಊಟವನ್ನು ಮುಗಿಸಿ - ನಿದ್ದೆಯನ್ನು ತಪ್ಪಿಸಿ ಆಟದಲ್ಲಿ ತಮ್ಮನ್ನು ತೊಡಗಿಸಿಕೊಳ್ಳಲು Clementi West Coast Recreation Centre, West Bowl ತಾಣವನ್ನು ಸೇರಿದ ಸದಸ್ಯರು, ನೋಡು ನೋಡುತ್ತಲೆ ಜನಗುಂಗುಳಿಯಾಗಿ ಮಾರ್ಪಟ್ಟು ಒಬ್ಬರಿಗೊಬ್ಬರು ಪರಿಚಯಿಸಿಕೊಳ್ಳುತ್ತ ಅಲ್ಲಿಯೇ ಇದ್ದ ಭಾರದ ಚೆಂಡುಗಳನ್ನು ಎತ್ತಿಕೊಂಡು ತೂಕವನ್ನು ನೋಡಿಕೊಳ್ಳುತ್ತ ಇದನ್ನಾ ನಾವು ಎಸೆಯಬೇಕು? ಎಂದು ಮಾತನಾಡಿಕೊಳ್ಳುವಂತಿತ್ತು. ಇನ್ನೊಂದಡೆ ಮಹಿಳೆಯರು ತಮ್ಮದೇ ಆದ ಒಂದು ಗುಂಪನ್ನು ಸೃಷ್ಟಿಸಿಕೊಂಡು ಯಥಾಪ್ರಕಾರ ಆಟದಲ್ಲಿ ತೊಡಗಿಸಿಕೊಳ್ಳುವುದಕ್ಕೆ ಮುಂಚಿತವಾಗಿ ತಮ್ಮ ಎಲ್ಲಾ ಶಕ್ತಿಯನ್ನು ಮಾತಿನಲ್ಲಿ ಮುಳುಗಿಸಿ ಉಳಿದ ಸ್ವಲ್ಪ ಭಾಗವನ್ನು ನಗುವಿನ ಕಡಲಲ್ಲಿ ಜೋರಾಗಿ ತೇಲಿಸಿಬಿಟ್ಟಿದ್ದರು.
ಕನ್ನಡ ಸಂಘದ ಕಾರ್ಯಕಾರಿ ಸಮಿತಿಯ ಸದಸ್ಯರು ಸ್ಪರ್ಧಿಗಳನ್ನು ಸಮ ಗುಂಪುಗಳಾಗಿ ವಿಂಗಡಿಸಿ 10 ಬೌಲಿಂಗ್ ಸಾಲುಗಳಲ್ಲಿ ಆಡಲು ನಿರ್ಧರಿಸಿದರು. ಎಲ್ಲರೂ ತಮಗೆ ಸರಿಹೊಂದುವ ಚೆಂಡುಗಳನ್ನು ಪರಿಕ್ಷೀಸುವಲ್ಲಿ ನಿರತರಾದರು. ಕನ್ನಡ ಸಂಘದ ಅಧ್ಯಕ್ಷರಾದ ವಿಜಯ ಕುಮಾರ್ ಆಟ ಶುರುವಾಗುವುದಕ್ಕೆ ಮುಂಚಿತವಾಗಿ ಭಾಗವಹಿಸಿದ ಎಲ್ಲ ಸದಸ್ಯರ ಸ್ವಾಗತಕೋರಿ ಇದೇ ರೀತಿಯಲ್ಲಿ ಮುಂಬರುವ ಕನ್ನಡ ಸಂಘದ ಸ್ಪರ್ಧೆಗಳಲ್ಲಿ ಇನ್ನೂ ಹೆಚ್ಚಿನ ರೀತಿಯಲ್ಲಿ ಭಾಗವಹಿಸಬೇಕೆಂದು ಕೇಳಿಕೊಂಡರು. ಕೆಲವು ಘಟಾನುಘಟಿಗಳು ತಮ್ಮ ಕೈಚಳಕವನ್ನು ತೋರಿಸುತ್ತಿದ್ದರೆ ನನ್ನಂತಹ ಕೆಲವು ಬಡಪಾಯಿಗಳು ದಾರಿ ತಪ್ಪಿ ನಡೆಯುತ್ತಿದ್ದ ಚೆಂಡುಗಳನ್ನು ಶಪಿಸುತ್ತ ಬೇರೆಯವರ ಅಂಕಗಳ ಸ್ಥಾನಗಳನ್ನು ನೋಡಿ ಸಂತಸಪಡುತ್ತಿದ್ದರು.
ಜಯಶಂಕರ್ ಮತ್ತು ರಾಮನಾಥ ಅವರ ನೇತೃತ್ವದಲ್ಲಿ ನಡೆದ ಪಂದ್ಯಗಳಲ್ಲಿ ಮೊದಲನೆಯ ಸ್ಥಾನದಲ್ಲಿ ಮಂಜುನಾಥ ಶಾಸ್ತ್ರಿ, ರಘುನಾಥ್ ಸೋಮಣ್ಣ, ಶಂಕರ್ ಮರೋಳ್ ಮತ್ತು ರಾಮಪ್ರಸಾದ್ ಅವರ ತಂಡ 1502 ಅಂಕಗಳೊಂದಿಗೆ ತಮ್ಮ ಸ್ಥಾನವನ್ನು ಭದ್ರಗೊಳಿಸಿದರೆ, ಎರಡನೆ ಸ್ಥಾನದಲ್ಲಿ ಕನಕೇಶ್, ಕೃಷ್ಣ, ಸತೀಶ್ ಅಲ್ಲಮ್ಪಲ್ಲಿ ಮತ್ತು ಸುನೀಲ್ ಕುಮಾರ್ ಅವರ ತಂಡ 1401 ಅಂಕಗಳೊಂದಿಗೆ ಎರಡನೆ ಸ್ಥಾನವನ್ನು ಗಳಿಸಿದರು. ಮೂರನೆ ಸ್ಥಾನವನ್ನು ದೀಪ್ತಿ ಹರಿಶ್, ಮೂರ್ತಿ ಬೆಳ್ಳಕ್ಕ, ಶರತ್ ಬಾಬು, ಜಯಶಂಕರ್ ಗೌಡ ಮತ್ತು ಪದ್ಮನಾಭ ನಾಗರೂರ್, ಪೂಜಾರ್, ವಿಜಯ ಕುಮಾರ್, ರಾಜೇಶ್ ಹೆಗ್ಡೆ ಅವರ ತಂಡಗಳು 1375 ಅಂಕಗಳನ್ನು ಪಡೆದು ಸಮವಾಗಿ ಹಂಚಿಕೊಂಡರು. ವೈಯಕ್ತಿಕವಾಗಿ ಅತ್ಯಧಿಕ ಅಂಶಗಳನ್ನು ಪಡೆದವರ ಪಟ್ಟಿಯಲ್ಲಿ ಮಹೇಂದ್ರ ತಂಬ್ರಳ್ಳಿ 465 ಅಂಶಗಳೊಂದಿಗೆ ಅಗ್ರಗಣ್ಯರಾದರೆ, ರಘುನಾಥ್ ಸೋಮಣ್ಣ ಅವರು 434 ಅಂಶಗಳೊಂದಿಗೆ ಎರಡನೆ ಸ್ಥಾನ ಮತ್ತು 417 ಅಂಶಗಳನ್ನು ಪಡೆದ ರಾಮಪ್ರಸಾದ್ ಅವರು ಮೂರನೆ ಸ್ಥಾನವನ್ನು ಪಡೆದರು.
ಎಲ್ಲ ವಿಜೇತರಿಗೆ ಕನ್ನಡ ಸಂಘ(ಸಿಂಗಪುರ) ನವೆಂಬರ್ 12ರಂದು ನಡೆಸುತ್ತಿರುವ "ಕನ್ನಡ ರಾಜ್ಯೋತ್ಸವ"ದ ಕಾರ್ಯಕ್ರಮದಲ್ಲಿ ಬಹುಮಾನಗಳನ್ನು ವಿತರಿಸಲಾಗುವುದು. ಹಾಗೆಯೆ ಕನ್ನಡ ಸಂಘದ ಸರ್ವ ಸದಸ್ಯರಿಗೆ " ಕನ್ನಡ ರಾಜ್ಯೋತ್ಸವದ" ಕಾರ್ಯಕ್ರಮಕ್ಕೆ ಭಾಗಿಯಾಗಿ "OCEAN KIDS" ಅವರ ಅಮೋಘ ನೃತ್ಯ ಪ್ರದರ್ಶನವನ್ನು ರಂಜಿಸಬೇಕೆಂದು ಈ ಸಮಯದಲ್ಲಿ ವಿನಂತಿಸಿಕೊಳ್ಳಲಾಯಿತು.