ಕನ್ನಡಿಗರೆಲ್ಲರೂ ಓದಲೇಬೇಕಾದ ಅಪೂರ್ವ ಕಾದಂಬರಿ
ಸಾಮ್ರಾಜ್ಯದಲ್ಲಿ ಶಾಂತಿ ನೆಲೆಸಿದ್ದಾಗ ತನ್ನಷ್ಟಕ್ಕೆ ತಾನು ಮರವೊಂದರ ಮೇಲೆ ವಿರಾಜಮಾನವಾಗಿರುವ ಗರುಡ, ಆಡಳಿತಕ್ಕೆ ಯಾವುದೇ ವಿಪತ್ತು ಬಂದೆರಗಲಿರುವುದನ್ನು ಮುಂದಾಗಿ ಗ್ರಹಿಸಿ ತಲ್ಲಣಗೊಳ್ಳುತ್ತಾ, ಆಕ್ರಮಣಕಾರಿ ವರ್ತನೆಯನ್ನು ತೋರುತ್ತಾ ರಾಜಧಾನಿಯಲ್ಲಾಗುವ ಪರಿವರ್ತನೆಯ ಭವಿಷ್ಯ ಸೂಚಿಯಾಗಿ ಕಾಣಿಸಿಕೊಳ್ಳುವ ತಂತ್ರವನ್ನು ಲೇಖಕರು ಕಾದಂಬರಿಯುದ್ದಕ್ಕೂ ಅನುಸರಿಸಿದ್ದಾರೆ. ಶಾಂತಿಪ್ರಿಯ ರಾಜನಾದ ಅಮೋಘವರ್ಷನು ರಾಷ್ಟ್ರಕೂಟ ಸಾಮ್ರಾಜ್ಯದ ಸಾರ್ವಭೌಮತೆಗೆ ಧಕ್ಕೆಯೊದಗುವ ಸಂದರ್ಭದಲ್ಲಿ ಅನಿವಾರ್ಯವಾಗಿ ಕದನಗಳನ್ನು ಕೈಗೊಳ್ಳಬೇಕಾಗುತ್ತದೆ. ಆ ಯುದ್ಧಗಳಲ್ಲಿ ಅವನು ಅನುಸರಿಸಿರುವ ಯುದ್ಧತಂತ್ರಗಳ ಬಗೆಗಿನ ವಿವರಣೆ ಕಾದಂಬರಿಯಲ್ಲಿ ಸೊಗಸಾಗಿ ಮೂಡಿಬಂದಿದೆ.
ಕರ್ನಾಟಕದ ಪ್ರಸಿದ್ಧ ಇತಿಹಾಸಕಾರರಾಗಿರುವ ಸೂರ್ಯನಾಥ್ ಕಾಮತ್ ಅವರು ಈ ಕಾದಂಬರಿಗೆ ಮುನ್ನುಡಿ ಬರೆದಿದ್ದಾರೆ. ಕಾದಂಬರಿಯಲ್ಲಿ ಉಲ್ಲೇಖಿಸಿರುವ ಕೆಲವು ಐತಿಹಾಸಿಕ ವಿವರಗಳ ಬಗೆಗೆ ತಮಗಿರುವ ಭಿನ್ನಾಭಿಪ್ರಾಯವನ್ನು ನಯವಾಗಿ ತೋರಿಸಿಕೊಟ್ಟಿರುವ ಕಾಮತ್, "ವೃತ್ತಿಯಲ್ಲಿ ಇಂಜಿನಿಯರ್ ಆಗಿರುವ ಪ್ರಕಾಶ್ ಹೇಮಾವತಿಯವರು, ಇತಿಹಾಸ ಅಧ್ಯಾಪಕರಿಗೂ ತಿಳಿದಿರದ ಹೊಸ ಅಂಶಗಳನ್ನು ಲೇಖಕರು ಇಲ್ಲಿ ಹೇಳಿದ್ದು ಮೆಚ್ಚಿಗೆಯ ವಿಷಯ. ಅರವತ್ತನಾಲ್ಕು ವರ್ಷ ಆಳಿದ ವೀರನೂ, ವಿದ್ವಾಂಸನೂ, ಧಾರ್ಮಿಕನೂ, ಪಂಡಿತಾಶ್ರಯನೂ, ಜನಪರ ರಾಜನೂ ಆದ ಚಕ್ರವರ್ತಿಯ ಸಾಧನೆಯನ್ನು ಈ ಕೃತಿಯಲ್ಲಿ ಸೆರೆಹಿಡಿವ ಯತ್ನ ಬಹುಮಟ್ಟಿಗೆ ಯಶಸ್ವಿಯಾಗಿದೆ. ಲೇಖಕರು ವಿದೇಶದಲ್ಲಿ ಇದ್ದು ಮಾಡಿದ ಸಾಧನೆ ಇದು!" ಎಂದು ತುಂಬು ಹೃದಯದಿಂದ ಶ್ಲಾಘಿಸಿದ್ದಾರೆ.
ಒಟ್ಟಿನಲ್ಲಿ, ಐತಿಹಾಸಿಕ ಕಾದಂಬರಿಗಳು ಅಪರೂಪವಾಗುತ್ತಿರುವ ಈ ಹೊತ್ತಿನಲ್ಲಿ, ಇತಿಹಾಸದಲ್ಲಿ ತನ್ನ ಹೆಜ್ಜೆಗುರುತುಗಳನ್ನು ಶಾಶ್ವತವಾಗಿ ಉಳಿಸಿಹೋಗಿರುವ ಕನ್ನಡದ ಹೆಮ್ಮೆಯ ದೊರೆ ಅಮೋಘವರ್ಷನ ಕುರಿತು ಈ ಕಾದಂಬರಿ ಹೊರಬಂದಿರುವುದು ಕನ್ನಡಿಗರೆಲ್ಲರಿಗೂ ಸಂತೋಷದ ವಿಷಯವೇ ಸರಿ. "ಅಂಗ, ವಂಗ, ಮಗಧ, ಮಾಳವ ಮತ್ತು ವೆಂಗಿ ಅರಸರಿಂದ ಅತಿಶಯಧವಳ ಎನ್ನುವ ಬಿರುದಾಂಕಿತನಾಗಿ ಪೂಜಿಸಲ್ಪಡುತ್ತಿದ್ದು, ಕನ್ನಡನಾಡು, ನುಡಿ, ಸಾಹಿತ್ಯ ಮೇರು ಶೃಂಗದಲ್ಲಿ ರಾರಾಜಿಸುವುದಕ್ಕೆ ಭದ್ರಬುನಾದಿ ರೂಪಿಸಿದ ಕನ್ನಡ ಕುಲ ಚಕ್ರವರ್ತಿ, ರಟ್ಟ ಮಾರ್ತಾಂಡ ಅಮೋಘವರ್ಷ ನೃಪತುಂಗ ದೇವನಿಗೆ" ಅರ್ಪಣೆಯಾಗಿರುವ ಈ ಕಾದಂಬರಿಯನ್ನು, ಕನ್ನಡಿಗರೆಲ್ಲರೂ ಓದಿ ಆನಂದಿಸಿ, ತಮ್ಮ ದಿವ್ಯ, ಭವ್ಯ ಪರಂಪರೆಯ ಬಗ್ಗೆ ಹೆಮ್ಮೆಪಡುವಂತಾಗಲಿ ಎಂದು ಹಾರೈಸುತ್ತೇನೆ.
ಕಾದಂಬರಿ
:
ಅಮೋಘವರ್ಷ
ಲೇಖಕರು
:
ಪ್ರಕಾಶ್
ಹೇಮಾವತಿ
ಪ್ರಕಾಶನ
:
ಐಬಿಎಚ್
ಪ್ರಕಾಶನ
ಬೆಲೆ
:
ನೂರು
ರೂಪಾಯಿಗಳು